ಶನಿವಾರ, ಫೆಬ್ರವರಿ 26, 2011

ವರಕವಿ ಬೇಂದ್ರೆಯವರ ನಾಕುತಂತಿ ಕವನ - ಉಪನ್ಯಾಸ

ಗೆಳೆಯರೆ,

ಆಕೃತಿ ಪುಸ್ತಕ ಮಳಿಗೆ ರಾಜಾಜಿನಗರದಲ್ಲಿ, ಡಾ| ಜಿ. ಕೃಷ್ಣಪ್ಪ ಅವರಿಂದ
ವರಕವಿ ಬೇಂದ್ರೆಯವರ ನಾಕುತಂತಿ ಕವನದ ಮೇಲೆ ಒಂದು ಉಪನ್ಯಾಸ
ಹಾಗೂ ಬೇಂದ್ರೆಯವರ ಇತರ ಕವನಗಳ ಮೇಲೆ ಚರ್ಚೆ

ದಿನ: 27/ 02/ 2011 ಭಾನುವಾರ
ಸಮಯ: 10:30 ರಿಂದ 12:30

ವಿಳಾಸ : ಆಕೃತಿ ಪುಸ್ತಕ ಮಳಿಗೆ
ನಂ: 31/1, 12 ನೇ ಮುಖ್ಯರಸ್ತೆ,
3 ನೇ ಬ್ಲಾಕ್, ರಾಜಾಜಿನಗರ,
ಬೆಂಗಳೂರು - 560010

ಹತ್ತಿರದ ಗುರುತು: ಇ ಎಸ್ ಐ ಆಸ್ಪತ್ರೆ ಹತ್ತಿರ

ದಾರಿ ತಪ್ಪಿದರೆ ಕರೆ ಮಾಡಿ: 9886694580

ಬನ್ನಿ ಭಾಗವಹಿಸಿ..ಚರ್ಚಿಸಿ... ನಿಮ್ಮ ಗೆಳೆಯರನ್ನೂ ಕರೆತನ್ನಿ...

ಶುಕ್ರವಾರ, ಫೆಬ್ರವರಿ 04, 2011

ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ಹಂಚಿಕೆಯಲ್ಲಿ ಅಕ್ರಮ

೨ಜಿ ತರಂಗಾಂರಗಳ ಹಂಚಿಕೆಯಲ್ಲಿ ಅಕ್ರಮ, ಕರ್ನಾಟಕದ ಮುಖ್ಯಮಂತ್ರಿ, ಮಂತ್ರಿಗಳ ಭೂಹಗರಣಗಳಷ್ಟು ಈ ಹಗರಣ ದೊಡ್ಡದಲ್ಲದಿದ್ದರೂ, ರಾಜಕಾರಣಿಗಳನ್ನು ತಿದ್ದಬೇಕಾಗಿರುವ ಈ ಅಕ್ಷರಲೋಕದ ಕೆಲವು ಗಣ್ಯರ ನೈತಿಕ ದೀವಾಳಿತನವನ್ನು ತೋರಿಸುತ್ತದೆ.,

ವಿಷಯ ಇಂತಿಷ್ಟು. ಬೆಂಗಳೂರಿನಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ ಮತ್ತು ಮಾರಟಕ್ಕೆ ಪುಸ್ತಕ ಮಾರಾಟಗಾರರಿಗೆ ಆಹ್ವಾನಿಸಿ ಕನ್ನಡ ಸಾಹಿತ್ಯ ಪರಿಷತ್ತು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ, ಒಬ್ಬರಿಗೇ ಒಂದೇ ಮಳಿಗೆ ಎಂದು ಪ್ರಕಟಿಸಲಾಗಿತ್ತು. ನಾನು ಮಳಿಗೆಗೆ ೨೦೦೦/- ದುಡ್ಡನ್ನು ನೀಡಿ ಹೆಚ್ಚುವರಿ ಒಂದು ಮಳಿಗೆ ಬೇಡಿಕೆಯಿತ್ತಾಗಲೂ ಅವರು ಹೊಡೆಸಿದ್ದ ನಿಯಮಗಳ ಸುತ್ತೋಲೆಯನ್ನು ನೀಡಿ ಹೆಚ್ಚುವರಿ ಮಳಿಗೆಯನ್ನು ನಿರಾಕರಿಸಿದ್ದರು.

ಇಂದು ಸಮ್ಮೇಳನದ ಜಾಗಕ್ಕೆ ತಲುಪಿದಾಗ ಅಲ್ಲಿನ ಚಿತ್ರಣವೇ ಬೇರೆ.
೧) ೨ ಮಳಿಗೆ, ಮೂರು ಮಳಿಗೆ, ಆರು ಮಳಿಗೆ ತೆರೆದಿದ್ದಾರೆ, ಕೆಲವು ಪುಸ್ತಕ ಮಾರಾಟಗಾರರು/ಪ್ರಕಾಶಕರು!
೨) ಈ ಒಂದಕ್ಕಿಂದ ಹೆಚ್ಚಿರುವ ಎಲ್ಲಾ ಮಳಿಗೆಗಳು ಮೂಲೆಯಿಂದಲೇ ಪ್ರಾರಂಭವಾಗುತ್ತವೆ!

ಸಾರ್ವಜನಿಕರು ಆಸ್ಥೆಯಿಂದ ನೋಡುತ್ತಿರುವ ಸಮ್ಮೇಳನದ ಒಂದು ಪ್ರಮುಖ ಅಂಗವಾದ ಪುಸ್ತಕ ಪ್ರದರ್ಶನವನ್ನು ಪಾರದರ್ಶಕವಾಗಿ ಅಯೋಜಿಸುವುದು ಅಷ್ಟೋಂದು ಕಷ್ಟವೇ? ದೊಡ್ಡ ಮಟ್ಟದಲ್ಲಿ ಬೆಳೆದಿರುವ ಪ್ರಕಾಶಕರ/ ಪುಸ್ತಕ ಮಾರಾಟಗಾರರ ಸ್ವತ್ತೇ ಈಗ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶನ?

ಶುಕ್ರವಾರ, ಅಕ್ಟೋಬರ್ 29, 2010

’ನುಡಿ’ದರೆ...

ಇಂದು ಬೆಳಗ್ಗೆ ಅಳ್ವಾಸ್ ’ನುಡಿಸಿರಿ’ಗ ಇಂದು ಬೆಳಗ್ಗೆ ಕರ್ನಾಟಕದ ವಿವಿಧ ಕಲಾವಿದರ ತಂಡದಿಂದ ಲಯ ವಾದ್ಯಗಳ ಮೇಳಗಳ ಪ್ರದರ್ಶನದೊಂದಿಗೆ ವಿದ್ಯುಕ್ತವಾಗಿ ಚಾಲನೆಗೊಂಡಿತು. ಲಯ ವಾದ್ಯಗಳ ಪ್ರದರ್ಶನ ಅದ್ಭುತವಾಗಿತ್ತು. ಕೇಳಲು, ನೋಡಲು ಆನಂದ. ವೈದೇಹಿಯವರನ್ನು ಪಲ್ಲಕ್ಕಿಯ ಮೇಲೆ ಕೂರಿಸಿ, ವೇದಿಕೆಗೆ ಕರೆತರುವುದನ್ನೂ ನೋಡುವುದೇ ಚಂದ. ಈ ಉನ್ಮಾದದಲ್ಲಿ ನೆನ್ನೆಯ ಕಹಿಯನ್ನು ಮರೆತಿದ್ದೆ.



ನಂತರದ ಘಟನೆಗಳು ಮತ್ತೆ ಮನಸ್ಸಿಗೆ ಬೇಸರವನ್ನು ತಂದವು. ನೆನ್ನೆಯ ಬ್ಲಾಗ್‌ನಲ್ಲಿ ಹೆಸರಿಸಿದ ವ್ಯಕ್ತಿಗೆ ವಿಷಯ ತಿಳಿದು ನಮ್ಮ ಮಳಿಗೆಗೆ ಬಂದು ಕಿರುಚಾಡಲು ಪ್ರಾರಂಬಿಸಿದ. ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದರಿಂದ ನಾನೂ ಆ ಶಬ್ದಗಳನ್ನು ಅವರಿಗೆ ತಿರುಗಿಸಬೇಕಾಯಿತು! ನೀವು ಕೃತಘ್ನರು. ಮುಂದಿನ ವರ್ಷದಿಂದ ಬರಲೇಬೇಡಿ. ಊಟ ಹಾಕ್ತೀವಿ! ನಿಮಗೆ ವಸತಿ ಕೊಡಲು ಅನುಕೂಲ ಮಾಡಿಕೊಟ್ಟಿದ್ದೇವೆ. ಆದರೂ ಬ್ಲಾಗ್‌ನಲ್ಲಿ ಬರೆದಿದ್ದೀರಿ, ___________ (ಅವಾಚ್ಯ ಶಬ್ದಗಳು)..

ಸ್ವಲ್ಪ ಸಮಯದ ನಂತರ ಕೆಲ ಸಹೃದಯ ಗೆಳೆಯರು, ಈ ತಪ್ಪಿನ ವಿರುದ್ಧ ಧ್ವನಿ ಎತ್ತಿದ್ದರಿಂದ ಕಿರುಚಾಡಿದ ವ್ಯಕ್ತಿ ಮತ್ತು ಸಂಘಟನೆಯ ಕೆಲ ಸದಸ್ಯರೂ ಬಂದು ನನ್ನ ಕ್ಷಮೆ ಕೇಳಿದರು. ಆದ್ದರಿಂದ ಈ ಸಮಸ್ಯೆಯನ್ನು ಬೆಳಸದೆ ಇತಿಶ್ರೀ ಹಾಡಲು ನಿರ್ಧರಿಸಿದ್ದೇನೆ. ಆದರೆ ಕೆಲವು ಸ್ಪಷ್ಟೀಕರಣಗಳೊಂದಿಗೆ!

ನಾನು ಅವರ ವಸತಿಯನ್ನೂ ನಿರಾಕರಿಸಿದ್ದೇನೆ. ಅವರ ಊಟವನ್ನೂ ಕೂಡ. ನಾವು ಕೊಟ್ಟ ೨೦೦೦/- ರೂಪಾಯಿ ಅವುಗಳನ್ನು ಒಳಗೊಂಡಿವೆ ಎಂದು ತಿಳಿದು ಒಪ್ಪಿಕೊಂಡಿದ್ದೆನೇ ಹೊರತು ಅವರ ಮರ್ಜಿಗೆ ಬಿದ್ದಲ್ಲ. ಅಕ್ಕ ಪಕ್ಕದ ಮಳಿಗೆಗಳ ವಾರಸುದಾರರು ಹೇಳುವಂತೆ ಅವೆಲ್ಲವೂ ನಾವು ಪಾವತಿಸಿರುವ ಹಣದಲ್ಲಿಯೇ ಕೊಡವೇಕಾದ ಅನುಕೂಲಗಳು. ಇಲ್ಲೂ ಪಾರದರ್ಶಕತೆಯಿಲ್ಲ. ನನಗೆ ಅವರ ಫೇವರ್‌ಗಳು ಅನವಶ್ಯಕ!

ಅಳ್ವಾಸ್ ನುಡಿಸಿರಿ ಕಾರ್ಯಕ್ರಮ ಸಂಘಟನೆ ಹೆಸರುವಾಸಿ. ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸುವ ಉದ್ದೇಶ ಸಂಘಟನೆ ತನ್ನ ನ್ಯೂನ್ಯತೆಗಳನ್ನು ತಿದ್ದಿಕೊಂಡು ಹೆಚ್ಚು ಬೆಳೆಯಲಿ ಎಂಬ ಉದ್ದೇಶದಿಂದಷ್ಟೇ! ಅಲ್ವಾಸ್ ನುಡಿಸಿರಿಯ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವುದರಿಂದ ನನಗೆ ಯಾವುದೇ ರೀತಿಯ ವ್ಯಯಕ್ತಿಕ ಲಾಭಗಳಿಲ್ಲ.

ಯಾವುದೇ ಸಾಹಿತ್ಯ ಸಮ್ಮೇಳನದ ಅತ್ಯಂತ ದೊಡ್ಡ ಆಕರ್ಷಣೆ ಮತ್ತು ಅಗತ್ಯ ಪುಸ್ತಕ ಮೇಳ. ನೀವು ಕರೆಸುವ ಸಾಹಿತಿಗಳಿಗೆ ಅತ್ಯುತ್ತಮ ಸೌಕರ್ಯಗಳನ್ನೇ ಒದಗಿಸಿ. ಅವರ ಪುಸ್ತಕಗಳನ್ನು ಮಾರಾಟ ಮಾಡುವ ಪುಸ್ತಕ ಮಾರಾಟಗಾರರಿಗೆ ಕನಿಷ್ಟ ಸೌಕರ್ಯಗಳನ್ನಾದರೂ ಒದಗಿಸಿ! ನಮಗೂ ಕನ್ನಡದ ಕಳಕಳಿಯಿದೆ.

ಇನ್ನು, ನುಡಿಸಿರಿ ಎಂಬ ಹೆಸರಿಟ್ಟಿದ್ದೀರಿ. ನಿಮ್ಮ ಕಾರ್ಯಕ್ರಮ ಸಂಘಟಕರಿಗೆ ಒಂದು ಕಿವಿಮಾತು ಅವಶ್ಯಕ! "ನುಡಿದರೆ........ " ಇದನ್ನು ಪೂರ್ಣಗೊಳಿಸುವ ಅಗತ್ಯವಿಲ್ಲ. ನಿಮ್ಮಲ್ಲಿ ಬಹುತೇಕ ಜನಕ್ಕೆ ಗೊತ್ತಿರಬೇಕು.
_____________________________________________________________________________________
ನಂತರದ ಪುಸ್ತಕ ಮಾರಾಟ ಅತ್ಯಂತ ಖುಷಿ ಕೊಟ್ಟಿತು. ಸಾಮಾನ್ಯ ಸಮಯದಲ್ಲಿ ಮಾರಾಟವೇ ಕಾಣದಂತಹ ಎಷ್ಟೋ ಪುಸ್ತಕಗಳನ್ನು ಕನ್ನಡ ಸಾಹಿತ್ಯಾಸಕ್ತರು ಹುಡುಕಿ ಕೊಂಡು ಹೋದರು. ಆಕೃತಿ ಪುಸ್ತಕ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ರಾಜೇಶ್ ತೊಳ್ಪಾಡಿ, ಕೇಶವ ಕುಡ್ಲ, ನಾ ಮೊಗಸಾಲೆ ಮುಂತಾದ ಸಾಹಿತಿಗಳ ಭೇಟಿ ಸಂತಸವನ್ನುಂಟುಮಾಡಿತು.
_____________________________________________________________________________________
ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಭರಾಟೆಯಲ್ಲಿ, ಘೋಷ್ಠಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲವೆಲ್ಲ ಎಂಬುದೇ ಸಂಕಟ!

ಗುರುವಾರ, ಅಕ್ಟೋಬರ್ 28, 2010

ಅಲ್ವಾಸ್ ನುಡಿಸಿರಿಯ ಲಿಫ್ಟ್ ಗಣ್ಯರಿಗೆ ಮಾತ್ರವೇ?

ನೆನ್ನೆ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳದಲ್ಲಿ ಭಾಗವಹಿಸಲು ಹೊರಟಾಗ ಎಷ್ಟು ಉತ್ಸಾಹ ಇತ್ತೋ, ಅದರ ದುಪ್ಪಟ್ಟು ನಿರಾಸೆ ಇಂದು. ಹಿನ್ನಲೆಯನ್ನು ಸಂಕ್ಷಿಪ್ತವಾಗಿ ತಿಳಿಸಿಬಿಡುತ್ತೇನೆ. ೨೦೦೦/- ರೂಗಳ ಡಿಡಿ ಯನ್ನು ಕಳುಹಿಸಿ ಆಲ್ವಾಸ್ ನುಡಿಸಿರಿಯ ಪುಸ್ತಕ ಮೇಳಕ್ಕೆ ಮಳಿಗೆಯನ್ನು ಕಾದಿರಿಸಿದ್ದೆ. ಇಂದಿನವರೆಗೂ ರಶೀದಿ ನನಗೆ ದೊರೆತಿಲ್ಲ. ಅದು ಅಷ್ಟು ಪ್ರಮುಖ ಅಲ್ಲ ಬಿಡಿ. ಇಲ್ಲಿಗೆ ಬರುವುದಕ್ಕೆ ಮೊದಲು ಯಾವಾಗ ಕರೆ ಮಾಡಿದರೂ ಒಂದು ಮಾತು ಆಡಿದ ಕ್ಷಣ ಕರೆಯನ್ನು ಸ್ಥಗಿತಗೊಳಿಸುತ್ತಿದ್ದರು.

ಹೀಗಿರುತ್ತಿತ್ತು ಸಂಭಾಷಣೆ,
ನಾನು: ಸಾರ್, ನಾನು ಆಕೃತಿಯಿಂದ ಕರೆ ಮಾಡುತ್ತಿದ್ದೇನೆ, ಡಿ.ಡಿ ಕಳುಹಿಸಿದ್ದೆ, ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಕರೆ ಸ್ವೀಕರಿಸಿದವರು: ಸರಿ, ಅಂದು ಬನ್ನಿ.
ನಾನು: ಸಾರ್, ಅಲ್ಲಿನ ವ್ಯವಸ್ಥೆ ಏನು?
ಫೋನ್ ಕಟ್!

ಸರಿ ಇದಕ್ಕೆಲ್ಲಾ ಹೆಚ್ಚಿನ ಪ್ರಾಮುಖ್ಯತೆ ಕೊಡಬಾರದೆಂದು ನಾನು ಉತ್ಸಾಹದಿಂದ ನೆನ್ನೆ ಬಸ್ ಹತ್ತಿ, ಪುಸ್ತಕಗಳನ್ನು ಸುಗಮ ಟ್ರಾನ್ಸ್‌ಪೋರ್ಟ್ ನಲ್ಲಿ ಸಾಗಿಸಿ ಬಂದಿಳಿದೆ. ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸನ ಪುಸ್ತಕಗಳು. ಎಲ್ಲವೂ ಸುಮಾರು ೪೦ ಕೆ ಜಿ ತೂಗುತ್ತವೆ ಎಂದು ಅಂದಾಜಿಸಬಹುದು.

ಇಂದು ಬೆಳಗ್ಗೆ ಅಲ್ಲಿಗೆ ಹೋದಾಗ ದೊಡ್ಡ ಶಾಕ್ ಕಾದಿತ್ತು.
೧) ಮಳಿಗೆಗಳನ್ನು ಅಲಾಟ್ ಮಾಡುವುದರಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಪುಸ್ತಕೋದ್ಯಮದಲ್ಲಿ ಹಿಂದಿನಿಂದ ಚಾಲ್ತಿಯಲ್ಲಿರುವ ಕೆಲವು ಪ್ರಮುಖ ಮಾರಾಟಗಾರರಿಗೆ ಮೊದಲು ೨ ನೇ ಮಹಡಿಯಲ್ಲಿ ಮಳಿಗೆ ಅಲಾಟ್ ಆಗಿ ನಂತರ ಕೆಳ ಮಹಡಿಗೆ ಸ್ಥಳಾಂತರಿಸಿರುವುದು ಮಳಿಗೆಗಳ ಕಾರ್ಯವನ್ನು ನಿರ್ವಹಿಸುತ್ತಿರುವ ಹರೀಶ್ ಎಂಬುವವರ ದಾಖಲೆಯೇ ತೋರಿಸಿತ್ತು! ನಮಗೂ ಕೆಳಗಿನ ಮಳಿಗೆಯ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಾಗ, ಅದು ಛೇರ್ಮನ್ ಅವರಿಂದ ಹೇಳಿಸಿದವರಿಗೆ ಮಾತ್ರ ಎಂಬ ಪ್ರಾಮಾಣಿಕ ಉತ್ತರ!

೨) ಹರೀಶ್ ಎಂಬುವವರಿಗೆ ಮತ್ತೆ ಮನವಿ ಮಾಡಿಕೊಂಡೆವು, ಸಾರ್ ನಮ್ಮಲ್ಲಿ ೩೨ ಕಾರ್ಟನ್ ಬಾಕ್ಸ್ ಗಳಿವೆ. ಎರಡನೇ ಮಹಡಿಗೆ ಕೊಂಡೊಯ್ಯಲು ಕಷ್ಟ. ಸಣ್ಣ ಸಣ್ಣ ಮಳಿಗೆಯವರಿಗೆ ಮೇಲೆ ಅಲಾಟ್ ಮಾಡಿ. ೨೦೦೦/ ರೂ ಪಾವತಿಸಿ ಪೂರ್ಣ ಕೋಣೆ ಕಾಯ್ದಿರಿಸಿದ್ದವರಿಗೆ ಕೆಳಗೆ ಕೊಡಿ ಎಂದು. (ಕೆಳಗಿನ ಕೆಲವು ಕೋಣೆಗಳಲ್ಲಿ ನಾಲ್ಕು ಪ್ರತ್ಯೇಕ ಪುಸ್ತಕ ಮಾರಾಟಗಾರರಿಗೆ ಒಂದೇ ಮಳಿಗೆಯಲ್ಲಿ ವ್ಯವಸ್ಥೆ ಮಾಡಿದ್ದಾರೆ). ಅದಕ್ಕೆ ಹರೀಶ್ ಅಂದದ್ದು. ನೀವೇನೂ ಚಿಂತಿಸಬೇಡಿ. ಲಿಫ್ಟ್ ಇದೆ. ನಿಮ್ಮ ಸಹಾಯಕ್ಕೆ ಕೆಲವು ಹುಡುಗರನ್ನೂ ಕಳುಹಿಸುತ್ತೇನೆ. ೨ ನೇ ಮಹಡಿಯ ನಿಮ್ಮ ಮಳಿಗೆಗೆ ಸಾಗಿಸುವುದಕ್ಕಾಗಲೀ, ಮತ್ತೆ ವಾಪಸ್ ಸಾಗಿಸುವುದಕ್ಕಾಗಲೀ ಯಾವುದೇ ತೊಂದರೆಯಿಲ್ಲ. ನೀವು ಅಲ್ಲಿ ಲಿಫ್ಟ್ ಸೆಕ್ಯುರಿಟಿಗೆ ೨೦/- ರೂ ಕೊಟ್ಟಿಬಿಡಿ ಎಂದರು. ಒಪ್ಪಿಕೊಂಡೆವು.

೩) ಸರಿ ಪುಸ್ತಕಗಳನ್ನು ಸುಗಮ ಟ್ರಾನ್ಸ್ ಪೋರ್ಟ್ ನಿಂದ ತರಲು ಹೋದಾಗ ಮತ್ತೊಂದು ದೊಡ್ಡ ಶಾಕ್ ಕಾದಿತ್ತು. ಅದರಲ್ಲಿ ನಾಲ್ಕು ಬಾಕ್ಸ್ ಗಳು ಒಡೆದು, ನೆನೆದು ಕೆಲ ಪುಸ್ತಕಗಳು ಹೊರಗೆ ಬಿದ್ದಿದ್ದವು. ಕೇಳಿದ್ದಕ್ಕೆ, ಪುಸ್ತಕದ ಡಬ್ಬಗಳು ಹಾಗೇ ಸಾರ್ ಅಂದ!

೪) ಪುಸ್ತಕಗಳನ್ನು ಸಾಗಿಸಿ ತಂದು, ಲಿಫ್ಟ್ ನಲ್ಲಿ ಹಾಕಲು ಹೋದಾಗ, ಸೆಕ್ಯುರಿಟಿ ನಿರಾಕರಿಸಿದ. ಕೊನೆಗೂ ಮನವೊಲಿಸಿ ಇನ್ನೇನು ಲಿಫ್ಟ್ ಮೇಲರಬೇಕು ಎನ್ನುವಷ್ಟರಲ್ಲಿ, ಎಲ್ಲಿಂದಲೋ ಶ್ರ‍ೀವತ್ಸನೋ, ಶ್ರೀವಾತ್ಸವನೋ ಎಂಬ ಹೆಸರಿನ ಮನುಶ್ಯ (ಇವರು ಆ ಕಟ್ಟಡದ ಮೇಲ್ವಿಚಾರಕರಂತೆ!) ಬಂದು ಇಲ್ಲಾ, ಸಾರ್ ಪುಸ್ತಕಗಳನ್ನು ಮೇಲೆ ಸಾಗಿಸುವುದಕ್ಕೆ ಲಿಫ್ಟ್ ಉಪಯೋಗಿಸುವ ಹಾಗಿಲ್ಲ ಎಂದ. ಕಳಕಳಿಯಿಂದ ಮನವಿ ಮಾಡಿ ನಮ್ಮ ತೊಂದರೆಯನ್ನು ಮನವರಿಗೆ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ, ಮಾತೇ ಆಡಲು ನಿರಾಕರಿಸಿ ನಡೆದೇಬಿಟ್ಟ.

೫) ಈಗ ಹರೀಶ್ ವರಿಗೆ ಕರೆ ಮಾಡಿ ಬೇಡಿಕೊಂಡರೆ, (ಇಷ್ಟರಲ್ಲಿ ಹರೀಶ್ ಅವರು ಮನೆಗೆ ಹೋಗಿಬಿಟ್ಟಿದ್ದರು) ಅವರಿಂದ ಒಂದೇ ವಾಕ್ಯದ ಉತ್ತರ. ನಿಮ್ಮ ೨೦೦೦/- ವಾಪಸ್ ಕೊಡ್ತೀವಿ, ನೀವು ವಾಪಸ್ ಹೋಗಿಬಿಡಿ! ಲಿಫ್ಟ್ ಆನ್ ಮಾಡೋ ಹಾಗಿಲ್ಲ ಎಂದು ಛೇರ್ಮನ್ ಹೇಳಿದ ಮೇಲೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂಬ ಉತ್ತರ!

೬) ಕೊನೆಗೆ ಅಲ್ಲಿಯ ಇಬ್ಬರು ವಿದ್ಯಾರ್ಥಿಗಳ ಸಹಾಯದೊಂದಿಗೆ, ೩೨ ಬಾಕ್ಸ್ ಗಳನ್ನೂ ಮೇಲೆ ಸಾಗಿಸಿದ್ದಾಯಿತು!

ನನಗೆ ಕೊನೆಗೆ ಉಳಿದ ಪ್ರಶ್ನೆ ಒಂದೇ! ನಿಮ್ಮಲ್ಲಿ ಪಾರದರ್ಶಕತೆ ಇಲ್ಲ. ಎರಡನೇ ಮಹಡಿಯಲ್ಲಿ ಪುಸ್ತಕ ಮೇಳಕ್ಕೆ ಕೊಠಡಿ ಕೊಟ್ಟಿದ್ದೀರಿ! ಅಲ್ಲಿಗೆ ಪುಸ್ತಕಗಳ ಡಬ್ಬಗಳನ್ನು ಸಾಗಿಸಲು ಲಿಫ್ಟ್ ನ ಸೌಕರ್ಯವನ್ನು ನಿರಾಕರಿಸಿದ್ದೀರಿ! ಲಿಫ್ಟ್ ಬರೀ ಛೇರ್ಮನ್ ಸಾಹೇಬರಿಗೆ ಮಾತ್ರವೇ?

ಶನಿವಾರ, ಆಗಸ್ಟ್ 21, 2010

ಸಚಿವನ ಕಾರಿಗೆ ಅಡ್ಡ ಬಂದ ಹಸುವಿಗೆ ಚಿತ್ರಹಿಂಸೆ, ಸಾವು! ’ಗೋಹತ್ಯಾ ನಿಷೇಧ ಕಾಯಿದೆ’ಗೆ ತಿದ್ದುಪಡಿ ಚಿಂತನೆ!

ನೆಲಮಂಗಲದ ಬೈಪಾಸ ರಸ್ತೆಯ ಬಳಿ ಧಾವಿಸುತ್ತಿದ್ದ ಮಾನ್ಯ ಸಚಿವ ಬಚ್ಚಾ ಗೌಡನ ಕಾರಿಗೆ ಅಡ್ಡ ಬಂದದ್ದರಿಂದ, ಚಿತ್ರ ಹಿಂಸೆ ಅನುಭವಿಸಿ ಸಾವಿಗೀಡಾದ ದನದ ದಾರುಣ ಕಥೆ, ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ನೆಲಮಂಗಲ ಬ್ಯೂರೋ ಇಂದ ಸಮರಸ ಠೀವಿಯ ಭಾತ್ಮೀದಾರ, ಹೈಬ್ರಿ ಜೆರ್ಸಿ ವರದಿ ಕೊಟ್ಟಿದ್ದಾರೆ. ಮುಂದೆ ಓದಿ.

ನಡೆದದ್ದು ಹೀಗೆ, ತುಮಕೂರು ಸಮೀಪದ ಪ್ರಸಿದ್ಧ ಮಠದಲ್ಲಿ ಗೋಹತ್ಯಾ ನಿಷೇಧದ ಬಗ್ಗೆ ಭಾಷಣ ಮಾಡಲು ತೆರಳುತ್ತಿದ್ದಾಗ, ನೆಲಮಂಗಲದ ಬೈಪಾಸ್ ಬಳಿ ಒಂದು ಸೀಮೆ ಹಸು ಮಾನ್ಯ ಸಚಿವ ಬಚ್ಚಾ ಗೌಡರ ಕಾರಿಗೆ ಅಡ್ಡ ಹಾದು ಹೋದದ್ದರಿಂದ ಕಾರು ಚಲನೆಯಲ್ಲಿ ನಿದಾನವಾಗಿ, ನಿಲ್ಲಿಸಬೇಕಾದ ಸಂದರ್ಭ ಒದಗಿತು. ತಕ್ಷಣ ಕೆಳಗಿಳಿದ ಕಾರಿನ ಚಾಲಕ, ಈ ಹಿಂದಿನಂತೆ ಕೆಟ್ಟದಾಗಿ ವರ್ತಿಸದೆ, ರಸ್ತೆ ದಾಟಿ ನಿಂತಿದ್ದ ದನಕ್ಕೆ ನಯವಾಗಿ “ಏಯ್ ದನ ಕಣ್ಣ ಕಾಣಕ್ಕಿಲ್ವ, ಮಿನಿಸ್ಟ್ರು ಕಾರ್ ಬತ್ತಾ ಐತೆ ಅಂತ” ಕೇಳಿದ್ದಾಗ್ಯೋ, ಉತ್ತರಿಸದೆ ತನ್ನ ಪಾಡಿಗೆ ತಾನು ಮೆಲುಕು ಹಾಕಿಕೊಂಡು ಶಾಂತವಾಗಿ ನಿಂತಿದ್ದ ದನದವನ್ನು ಕಂಡು ಕೆರಳಿದ ಮಾನ್ಯ ಸಚಿವ ಬಚ್ಚಾ ಗೌಡರು ಕೆರಳಿ, ದನದ ಮೂಗು ದಾರವನ್ನು ಜಗ್ಗಿಸಿದ್ದಲ್ಲದೆ, ದನದ ಬಾಲವನ್ನು ಹಿಡಿದು ಜಗ್ಗಿಸಿ, ಬಾರುಗೋಲಿನಿಂದ ಹಿಗ್ಗಾ ಮುಗ್ಗ ಥಳಿಸಿದರೆಂದು ’ಪ್ರತ್ಯಕ್ಷ-ದನಗಳಿಂದ’ ತಿಳಿದು ಬಂದಿದೆ. ಅಲ್ಲದೆ ’ದನ ಕಾಯವ್ನೆ’ ಎಂದು ಮಾನವನ ಜಾತಿಗೆ ಹೋಲಿಸಿ ಆ ದನಕ್ಕೆ ಅವಾಚ್ಯವಾಗಿ ಬೈದರೆಂದೂ ಸುದ್ದಿ ಬಂದಿದೆ. ಥಳಿತದಿಂದ ಗಾಯಗೊಂಡ ದನ ಸ್ವಲ್ಪ ಸಮಯದ ನಂತರ ಅಸು ನೀಗಿತೆಂದೂ ತಿಳಿದು ಬಂದಿದೆ.
ಮುಂದೆ ಓದಿ

ಬುಧವಾರ, ಜುಲೈ 28, 2010

ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….

ಸಮರಸದಲ್ಲಿ ಗೋಪಾಲರು ಬರೆದಿರುವ ಈ ಹಾಸ್ಯ ಲೇಖನ ಓದಿ...
“ಕಟ್… ಕಟ್ …” ಸ್ವಲ್ಪ ಸಮಯದ ನಂತರ ಮತ್ತೆ ಅದೇ “ಕಟ್ ಕಟ್”. ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ “ಕಟ್… ಕಟ್…. ” ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. “ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ”. ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ. ಮುಂದೆ ಓದಿ

ಮಂಗಳವಾರ, ಜುಲೈ 27, 2010

ಇಂದಿನ ರಾಜಕೀಯ ಪಕ್ಷಗಳ ದೊಂಬರಾಟ, ಮತ್ತು ಅವಕ್ಕೆ ಕೆಲವು ಸಲಹೆಗಳು

ಸಮರಸ ಸಂಪಾದಕೀಯಕ್ಕೆ ವಿವೇಕ್ ಬರೆದ ಈ ಲೇಖನ ಓದಿ!

ಪ್ರಸ್ಥುತ ಕರ್ನಾಟಕದ ರಾಜಕೀಯ ಪುನ: ರಂಗೇರಿದೆ. ಕಾಂಗ್ರೇಸ್, ಬಿಜೆಪಿ, ಜನತಾದಳಗಳು ತಮ್ಮದೇ ಆದ ನಡವಳಿಕೆಯಿಂದ ಜನರಲ್ಲಿ ಚರ್ಚೆಗೊಳಪಡುತ್ತಿರುವುದು. ಈ ಸಂದರ್ಭದಲ್ಲಿ ರಾಜ್ಯದ ಜನರಲ್ಲಿ ರಾಜಕೀಯದ ಬಗ್ಗೆ ತಾತ್ಸಾರ ಉಂಟಾಗಿ ಎಲ್ಲರೂ ಕೊನೆಯಲ್ಲಿ ರಾಜಕೀಯವನ್ನು ಒಂದು ಮನರಂಜನೆಯನ್ನಾಗಿ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಮೌಲ್ಯಯುತ ರಾಜಕೀಯದ ಕೊಡುಗೆಯನ್ನು ನೀಡಿದ ಕರ್ನಾಟಕದ ಇಂದಿನ ರಾಜಕೀಯ ಸ್ಥಿತಿಯನ್ನು ಗಮನಿಸಿದರೇ ನಮ್ಮ ಸಮಾಜದ ಅಧ:ಪತನದ ಕುರುಹುಗಳು ಅಲ್ಲಿಂದಲ್ಲೇ ಕಂಡು ಬರುತ್ತಿವೆ. ಹಿಂದೆ ಬೇರೆ ರಾಜ್ಯದ ರಾಜಕೀಯದ ಸುದ್ದಿಯನ್ನು ಕಥೆಯಂತೆ ಕೇಳುತ್ತಿದ್ದ ಕರ್ನಾಟಕದ ಜನತೆ ಇಂದು ನಮ್ಮ ಎದುರಿಗೆ ರಾಜಕೀಯ ದೊಂಬರಾಟವನ್ನು ನೋಡುವ ಸ್ಥಿತಿ ಬಂದಿರುವುದು. ಈ ಸಂದರ್ಭದಲ್ಲಿ ಯಾರು ನಮ್ಮ ರಾಜ್ಯದಲ್ಲಿ ಹಿತವರು? ಎಂಬ ಪ್ರಶ್ನೇ ನಾವೇ ಹಾಕಿಕೊಂಡರೆ ಉತ್ತರ ಮತಹಾಕಿದ ನಾವೇ ಮೂರ್ಖರು ಎಂಬಂತೆ ಆಗಿರುವುದು. ಈ ಹಿನ್ನಲೆಯಲ್ಲಿ ಪ್ರಸ್ಥುತ ರಾಜಕೀಯ ಪಕ್ಷದ ಸ್ಥಿತಿಯನ್ನು ಈ ಕೆಳಗಿನಂತೆ ವಿಶ್ಲೇಷಿಸಲಾಗಿದೆ.

ಮುಂದೆ ಓದಿ

ಶನಿವಾರ, ಜುಲೈ 24, 2010

ಪುಸ್ತಕ ಪರಿಚಯ : ತುಂಗಾ

ಎಷ್ಟೋ ಮಂದಿಗೆ ತಾವು ಪಡೆದ ಶಿಕ್ಷಣದ ಬಗ್ಗೆ, ತಮ್ಮ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಅಸಮಧಾನ ಇದೆ. ಆದರೆ ಏನೂ ಮಾಡಲಾರದ ಪರಿಸ್ಥಿತಿ. ಅಬ್ಬಬ್ಬಾ ಎಂದರೆ ಪೋಷಕರು ತಮ್ಮ ಮಕ್ಕಳ್ಳನ್ನು ದುಬಾರಿ ಶಿಕ್ಷಣವನ್ನು ಪ್ರಖ್ಯಾತಗೊಳಿಸಿರುವ ಅಂತರಾಷ್ಟ್ರೀಯ/ರಾಷ್ಟ್ರೀಯ ಇತ್ಯಾದಿ ಹಣೆಪಟ್ಟಿಯುಳ್ಳ ಶಾಲೆಗಳಿಗೆ ಕಳುಹಿಸಿ ಸಮಾಧಾನ ತಂದುಕೊಳ್ಳುವುದು ಈಗ ಕೆಲವರಿಗೆ ರೂಢಿ, ಕೆಲವರಿಗೆ ಪ್ರತಿಷ್ಟೆ ಮತ್ತೂ ಕೆಲವರಿಗೆ ಅನಿವಾರ್ಯ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಲಿಸಿದಾಗ ಈ ದುಬಾರಿ ಶಾಲೆಗಳಲ್ಲಿ ಮಕ್ಕಳು ತೆತ್ತುವ ಶುಲ್ಕಕ್ಕೆ ತಕ್ಕಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆಯುವ ಅಪರಿಮಿತ ಅವಕಾಶಗಳಿದ್ದಾಗ್ಯೂ ಕೂಡ, ಮಕ್ಕಳು ಮತ್ತದೇ ಅನಗತ್ಯ ಸ್ಪರ್ಧೆಗಿಳಿದು ಓದುವ, ಕಲಿಯುವುದು ಒಂದು ಆನಂದ ತರುವ ಆಟವಾಗುವುದರ ಬದಲು ಒಂದು ಸ್ಪರ್ದೆಯಾಗಿ ಹೋಗಿಬಿಡುತ್ತದೆ. ಕಲಿಕೆಗಿಂತ, ಗಳಿಸಿವ ಅಂಕಗಳು ಮೇಲುಗೈ ಪಡೆಯುತ್ತದೆ. ಮಕ್ಕಳು ತಮ್ಮ ಮುಗ್ಧತೆಯನ್ನು ಅಗತ್ಯಕ್ಕೆ ಮೊದಲೇ ಕಳೆದುಕೊಂಡುಬಿಡುತ್ತಾರೆ. ಇದಕ್ಕೆ ಶಾಲೆಗಳನ್ನಷ್ಟೇ ದೂರಲಾಗದೆ, ಕೆಲವೊಮ್ಮೆ ಪೋಷಕರೂ ಕಾರಣರಾಗಿಬಿಡುತ್ತಾರೆ.


ಇಂತಹದ್ದಕ್ಕೆಲ್ಲ ಉತ್ತರವೆಂಬಂತೇನೋ ಇದೆ, ಮೇಫ್ಲವರ್ ಪ್ರಕಟನೆಯ ವಿ. ಗಾಯತ್ರಿಯವರ ’ತುಂಗಾ’ ಕಾದಂಬರಿ. ಪುಸ್ತಕ ಶೀರ್ಷಿಕೆಯ ಮೇಲೆ ’ಕಾಡುವ ಕಾದಂಬರಿ’ ಎಂಬ ಹಣೆಪಟ್ಟೆ ಹೊಂದಿರುವ ಈ ಪುಸ್ತಕ ನಿಜಕ್ಕೂ ಕಾಡುತ್ತದೆ. ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ. ಯೊಚಿಸಲು ಉತ್ತೇಜಿಸುತ್ತದೆ. ಜಪಾನಿನ ಟೆಲಿವಿಷನ್ ಕ್ಷೇತ್ರದ ತೆತ್ಸುಕೋ ಕುರೋಯಾನಾಗಿಯ ’ತುತ್ತೋ ಚಾನ್’ ಎಂಬ ಪುಸ್ತಕದಿಂದ ಪ್ರೇರಣೆ ಪಡೆದು ಕನ್ನಡಕ್ಕೆ ಒಗ್ಗಿಸಿ ಒಂದು ಅಪೂರ್ವ ಕೃತಿಯನ್ನು ಸೃಷ್ಟಿಸಿದ್ದಾರೆ ವಿ. ಗಾಯಿತ್ರಿ.

ಮುಂದೆ ಓದಿ

ಮಂಗಳವಾರ, ಜುಲೈ 13, 2010

ವಸುಧೇಂದ್ರರ ಆತ್ಮೀಯ ಕಾರ್ಯಕ್ರಮದ ಸಂಕ್ಷಿಪ್ತ ವಿವರ



ಆಕೃತಿ ಪುಸ್ತಕ ಮಳಿಗೆಯಲ್ಲಿ, ವಸುಧೇಂದ್ರ ತಮ್ಮ ರಕ್ಷಕ ಅನಾಥ ಪುಸ್ತಕದ ’ರಕ್ಷಕ ಅನಾಥ’ ಪ್ರಬಂಧ ಓದಿ ರಂಜಿಸಿದರು. ನೆರೆದಿದ್ದವರನ್ನೆಲ್ಲ ಪರಿಚಯಿಸಿಕೊಳ್ಳುವುದರಿಂದ ಹಿಡಿದು, ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಮೂಡಿಸುವುದು ಹೇಗೆ? ದೃಶ್ಯ ಮಾಧ್ಯಮ ಓದಿಗೆ ಪೂರಕವೋ? ಮಾರಕವೋ? ಓದಿನ ಹವ್ಯಾಸ ಹೆಚ್ಚಾಗಲು ಕನ್ನಡದಲ್ಲೂ ನಕಲಿ ಪುಸ್ತಕದ ಹಾವಳಿ ಪ್ರಾರಂಭವಾಗಬೇಕೆ? ಎಂಬಿತ್ಯಾದಿ ಚರ್ಚೆಗಳಾದವು!

ಹಿರಿಯರೊಬ್ಬರ ’ಅಥಿತಿ ಮತ್ತು ಸಂಸ್ಕೃತಿ’ ಪ್ರಬಂಧವನ್ನು ಓದಲು ಕೇಳಿಕೊಂಡಾಗ, ಅದರಲ್ಲಿರುವ ಕೆಲವು ಸಾಲುಗಳನ್ನು ಎಲ್ಲರ ಮುಂದೆ ಓದುವುದು ಸರಿ ಬರುವುದಿಲ್ಲ ಎಂದುಕೊಂಡು, ಈಗಾಗಲೇ ’ಸಮ್ಮೇಳನ’ದ ಬಗ್ಗೆ ಹಲವಾರು ಬಾರಿ ಮಾತನಾಡಿದ್ದರಿಂದ, ’ರಕ್ಷಕ ಅನಾಥ’ ಪ್ರಬಂಧವನ್ನೇ ಓದಿದರು. ರಕ್ಷಕ ಅನಾಥದ ಕಥೆಯನ್ನು ಶ್ರೋತೃಗಳು ತಮ್ಮ ಜೀವನದಲ್ಲಿ ನಡೆದ ಸಂಗತಿಗಳಿಗೆ ಹೋಲಿಸಿ, ತಮ್ಮ ಅನುಭಗಳನ್ನೂ ಹಂಚಿಕೊಂಡರು. ಕೊನೆಗೆ ವಸುಧೇಂದ್ರರ ಮನೆಯಲ್ಲಿದ್ದ ಆ ಫೋಟೋಗಳ ಗತಿ ಏನಾಯಿತು ಎಂಬ ಪ್ರಶ್ನೆಗೆ, ವಸುಧೇಂದ್ರರ ನಗುವೇ ಉತ್ತರ! ವಸುಧೇಂದ್ರರು ಬರೆಯುವುದು ಹೆಚ್ಚು ಐ.ಟಿ ಕ್ಷೇತ್ರದ ಬಗೆಗೇ ಅಲ್ಲವೇ ಅಂಬುದಕ್ಕೆ, ಹಾಗೇನಿಲ್ಲ, ನನ್ನ ಬಾಲ್ಯದ ದಿನಗಳ ಬಗ್ಗೆ ಬರೆದಿರುವುದೆಲ್ಲಾ ಐ ಟಿ ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಇನ್ನುಳಿದದ್ದರಲ್ಲಿ ಅದೇ ಹೆಚ್ಚಿರಬಹುದು, ಏಕೆಂದರೆ ನನ್ನ ಅನುಭವಕ್ಕೆ ಬಂದಿರುವುದು ಅವುಗಳೇ ಎಂದರು! ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಹಿತ್ಯವನ್ನು ರೂಪಿಸುವುದಕ್ಕೆ ಗಂಭೀರ ಚಿಂತನೆ ನಡೆಸುವುದಾಗಿ ಭರವಸೆಯಿತ್ತರು. ಮಕ್ಕಳಿಗೆ ಏನೇ ಮಾಡಿದರೂ ಬಣ್ಣ ಬಣ್ಣವಾಗಿರುತ್ತದೆ. ಕಪ್ಪು ಬಿಳುಪಿನಲ್ಲಿ ಮಾಡಿ ಅವರ ಆಸಕ್ತಿಯನ್ನು ಕುಂದಿಸುವುದಿಲ್ಲವೆಂದರು. ಯಾರೋ ವಸುಧೇಂದ್ರ ರವರನ್ನು ನಿಮ್ಮ ಪುಸ್ತಕಗಳನ್ನು ನಕಲು ಮಾಡುವ ಸಾಧ್ಯತೆಯಿದೆ ಎಚ್ಚರಿಕೆಯಿಂದಿರಿ ಎಂದಿದ್ದರಂತೆ. ಅದಕ್ಕೆ ವಸುಧೇಂದ್ರ ಆಯ್ಯೋ, ಮಾಡಲಿ ಬಿಡಿ. ನನ್ನ ಪುಸ್ತಕವನ್ನು ಹಾಗಾದರೂ ಓದಿದರೆ ನನಗೆ ಬಹಳ ಸಂತೋಷ ಎಂದರಂತೆ. ನಾವೇ ಪುಸ್ತಕದ ಬೆಲೆಯನ್ನು ಅಷ್ಟು ಕಡಿಮೆ ಇಡುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಯಿಟ್ಟು ಮಾರಾಟ ಮಾಡಲು ಪೈರೆಸಿ ಮಾಡುವವರಿಗೆ ಅಷ್ಟು ಸುಲಭವಲ್ಲ ಎಂಬುದು ವಸುಧೇಂದ್ರ ರವರ ನಂಬಿಕೆ. ಟಿ ವಿ ಯಲ್ಲಿ ಪುಸ್ತಕಗಳನ್ನು ಪರಿಚಯಿಸುವಂತ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಬೇಕೆ ಎಂದರು. ಪಾಶ್ಚಿಮಾತ್ಯ ದೇಶಗಳಲ್ಲಿ, ಟಿ ವಿ ಮಾಧ್ಯಮ ಲಗ್ಗೆಯಿಟ್ಟು ಪುಸ್ತಕಗಳನ್ನು ಓದುವರ ಸಂಖ್ಯೆ ಕುಸಿದು, ಅದು ಮತ್ತೆ ಚೇತರಿಸಿಕೊಂಡಿರುವುದನ್ನು ತಿಳಿಸಿ, ನಮ್ಮಲ್ಲೂ ಹೆಚ್ಚು ವ್ಯತ್ಯಾಸವೇನಿಲ್ಲ. ನಮ್ಮಲ್ಲೂ ಪುಸ್ತಕ ಓದುವ ಅರಿವು ಹೆಚ್ಚುತ್ತದೆ. ಎಲ್ಲದ್ದಕ್ಕೂ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು!

ವಸುಧೇಂದ್ರರ ಪರಿಚಯವೇ ಇಲ್ಲದಿದ್ದ ಮಂದಿಗೆ ವಸುಧೇಂದ್ರರ ಪರಿಚಯವಾದ ಖುಷಿ. ವಸುಧೇಂದ್ರರ ಪರಿಚಯವಿದ್ದವರಿಗೆ ಅವರ ಮಾತುಗಳನ್ನು ಕೇಳುವ, ಅವರ ಕಂಠದಲ್ಲೇ ಅವರ ಪ್ರಬಂಧವನ್ನು ಕೇಳುವ ಖುಷಿ. ಶಿವಮೊಗ್ಗದಿಂದ ತಮ್ಮ ನೆಚ್ಚಿನ ಲೇಖಕ ವಸುಧೇಂದ್ರರನ್ನು ಕಾಣಲು ಬಂದಿದ್ದ ಬೋರಣ್ಣನಿಗೆ, ಇವೆಲ್ಲದರ ಜೊತೆಗೆ ಪುಸ್ತಕಗಳಿಗೆ ವಸುಧೇಂದ್ರರ ಹಸ್ತಾಕ್ಷರಗಳನ್ನು ಹಾಕಿಸಿಕೊಂಡು ಅವರ ಜೊತೆ ಹರಟಿದ ಸಂತೋಷ!