ಬುಧವಾರ, ನವೆಂಬರ್ 11, 2009

ಗಾಳಿಗೇ ಗುದ್ದಿದ ಎಂ.ಎನ್.ಎಸ್ ಕಾರ್ಯಕರ್ತರು!

ಇಂದು ಚಂಡಮಾರುತ ಮುಂಬೈ ನಗರಕ್ಕೆ ಬಂದಪ್ಪಳಿಸಿದ್ದೇ ಒಂದು ವಿಶೇಷ ಸುದ್ದಿ ಎಂದು ಬಿಂಬಿಸುತ್ತಿರುವ ಸತ್ವಹೀನ ಟೀವಿ ಮಾಧ್ಯಮಗಳ ಮಧ್ಯೆ ವಿಭಿನ್ನವಾಗಿ ನಿಲ್ಲಿವ ಸಮರಸ ಟೀವಿ ನಿಮಗೆ ಹೊಸ, ರೋಚಕ, ಸ್ಪೋಠಕ, ಭಯಾನಕ ಸುದ್ದಿಯನ್ನು ಹೊತ್ತು ತಂದಿದೆ. ಮುಂದೆ ಓದಿ.

chanda-maaruta

ಫ್ಯಾನ್ ಚಂಡಮಾರುತ ಮುಂಬೈಗೆ ಅಪ್ಪಳಿಸಿದ ಸುದ್ದಿಯನ್ನು ಮರಾಠಿ ಸಮರಸ ವಾಹಿನಿಯಲ್ಲಿ ಕೇಳಿ ತಿಳಿದ ಕೆಲವು ಎಂ ಎನ್ ಎಸ್ ಕಾರ್ಯಕರ್ತರು ನಮ್ಮ ಕಛೇರಿಗೆ ಕರೆ ಮಾಡಿ ತೀವ್ರ ಆಕ್ಷೇಪಣೆಯನ್ನು ವ್ಯಕ್ತ ಪಡಿಸಿದ್ದಲ್ಲದೆ, ಶೀಘ್ರದಲ್ಲೇ ಮುಂಬೈಗೆ ಅಪ್ಪಳಿಸಿದ ಚಂಡಮಾರುತವನ್ನು ಮರಾಠಿ ಹೆಸರಿನಲ್ಲಿ ನಾಮಕರಣ ಮಾಡಿ ಸುದ್ದಿಯನ್ನು ಮರು ಪ್ರಸಾರ ಮಾಡದೆ ಹೋದರೆ, ನಿಮ್ಮ ಕಛೇರಿಯಲ್ಲಿ ದಾಂಧಲೆ ಎಬ್ಬಿಸುವೆವು ಎಂಬ ಬೆದರಿಕೆಯನ್ನು ಹಾಕಿರುತ್ತಾರೆ. ಪುಂಡಾಟಿಕೆಗೆ ಹೆದರದ ಸಮರಸ ಟೀವಿ ಸುದ್ದಿ ಸಂಪಾದಕರು, ಚಂಡಮಾರುತಕ್ಕೆ ಹೆಸರಿಟ್ಟಿರುವವರು ಹವಾಮಾನ ಇಲಾಖೆಯ ಅಧಿಕಾರಿಗಳು, ತಾವು ತಮ್ಮ ಧೀರತೆಯನ್ನೂ ಅವರಲ್ಲೇ ಪ್ರದರ್ಶಿಸಬೇಕು ಎಂದು ನಯವಾಗಿ ಹೇಳಿದ್ದಲ್ಲದೆ, ದೂರವಾಣಿ ಕರೆಯನ್ನೂ ಕೂಡ ಖಂಡ ತುಂಡಾಗಿ ಕತ್ತರಿಸಿ ಹಾಕಿದ್ದಾರೆ!



ಹವಾಮಾನ ಇಲಾಖೆಗೆ ತ್ವರಿತದಲ್ಲೇ ದೂರವಾಣಿ ಕರೆ ಮಾಡಿದ ಎಂ ಎನ್ ಎಸ್ ಕಾರ್ಯಕರ್ತರು, ಇಲಾಖೆಯಿಂದ "Phyan Cyclone is leaving Bombay" ಎಂಬ ಉತ್ತರವನ್ನು ಕೇಳಿ ವ್ಯಘ್ರರಾಗಿ, ಜೋರು ಮಳೆಯಲ್ಲಿ ಹವಾಮಾನ ಇಲಾಖೆಗೆ ದೌಡಾಯಿಸಲಾಗದೆ, ತಮ್ಮ ಅಸಹಾಕತೆಯನ್ನೂ ಪ್ರದರ್ಶಿಸಲಾಗದೆ ತಮ್ಮ ಕಛೇರಿಯಿಯ ಕಿಟಕಿಯಿಂದಲೇ ಕೈಯನ್ನು ಹೊರಹಾಕಿ ಮುಂಬೈನಿಂದ ತೆರಳುತ್ತಿದ್ದ ಚಂಡಮಾರುತ/ಗಾಳಿಗೇ ಗುದ್ದಿ ತಮ್ಮ ಧೀರತೆಯನ್ನು ಪ್ರದರ್ಶಿಸಿದ್ದಾರೆ.ಅಲ್ಲದೆ ಚಂಡಮಾರುತಕ್ಕೆ ಮರಾಠಿ ಭಾಷೆಯ ಹೆಸರಿನಲ್ಲಿ ನಾಮಕರಣ ಮಾಡಿ ಮತ್ತೆ ಮುಂಬೈಗೆ ಬರುವಂತೆ ಮಾಡಬೇಕೆಂದು ಹವಾಮಾನ ಇಲಾಖೆಗೆ ಆಗ್ರಹಿಸಿದ್ದಾರೆ.ಇಂತಹ ಧೀರತೆಯನ್ನು ಮೆರೆದ ಎಂ ಎನ್ ಎಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಿ ಅನ್ಯಪಕ್ಷಗಳ ಜೊತೆ ಗುದ್ದಾಡುವ ಅವಕಾಶವನ್ನು ಕೊಡುವುದಾಗಿ ರಾಜ್ ಠಾಕ್ರೆಯವರು ಮರಾಠಿಯಲ್ಲೇ ಘೋಷಿಸಿದ್ದಾರೆ. ಚಂಡಮಾರುತ ಮುಂದೊಂದು ಬಾರಿ ಅಪ್ಪಳಿಸಿದರೆ, ಚಂಡಮಾರುತದ ವಿರುದ್ಧ ಭಾರಿ ಹೋರಾಟ ನಡೆಸುವುದಾಗಿಯೂ ಹೇಳಿಕೊಂಡಿದ್ದಾರೆ.

ಮುಂದೆ ಓದಿ

ಮಂಗಳವಾರ, ನವೆಂಬರ್ 10, 2009

ಮುತ್ತಯ್ಯ ಭಾಗವತರ ಕೀರ್ತನೆಗಳ ಪುಸ್ತಕ ಬಿಡುಗಡೆ, ಪುಸ್ತಕ ಪರಿಚಯ

ಶಾರದಾ ಸಂಗೀತ ಶಾಲೆ ಮತ್ತು ಪ್ರಿಸಮ್ ಬುಕ್ಸ್ ಪ್ರೈ ಲಿ ವತಿಯಿಂದ, ವಿದುಷಿ ಸುಧಾ ವಿ ಮೂರ್ತಿ ಯವರು ಸಂಗ್ರಹಿಸಿರುವ ಮುತ್ತಯ್ಯ ಭಾಗವತರ "ಶಿವಾಷ್ಟೋತ್ತರ ಮತ್ತು ನವಗ್ರಹ ಕೀರ್ತನೆಗಳು" ಪುಸ್ತಕ ಶನಿವಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಯಾಯಿತು. ಇದರ ಜೊತೆಗೆ ಮುತ್ತಯ್ಯ ಭಾಗವಾತರ ಕೀರ್ತನೆಗಳ ಎರಡು ಸಿಡಿ ಗಳು ಕೂಡ ಬಿಡುಗಡೆಯಾದವು.


bidugade


ವೇದಿಕೆ ಮೇಲೆ ನೆರೆದಿದ್ದ ಗಣ್ಯರು,

*ಡಾ| ರಂಗನಾಥ್ : ಸಂಸ್ಕೃತ ಪಂಡಿತರು, ಪುಸ್ತಕದ ಶಿವಾಷ್ಟೋತ್ತರದ ಸಂಸ್ಕೃತ ಶ್ಲೋಕಗಳಿಗೆ ಕನ್ನಡ ವಿವರಣೆಯನ್ನು ನೀಡಿದ್ದಾರೆ. ವಿಶ್ವದ ಪ್ರಮುಖರು ಸಂಗೀತದ ಮಹತ್ವದ ಬಗ್ಗೆ ಉಲ್ಲೇಖಿಸಿರುವ ಮಾತುಗಳನ್ನು ನೆನೆದರು.

*ಕೆರೋಡಿ ಅಮರನಾಥ್: ಅಧ್ಯಕ್ಷತೆಯನ್ನು ವಹಿಸಿದ್ದರು. ತಮ್ಮ ಸಣ್ಣ ಅಧ್ಯಕ್ಷೀಯ ಭಾಷಣದಲ್ಲಿ ಇನ್ನೂ ಹೆಚ್ಚು ಹೆಚ್ಚು ಸಂಗೀತ ಗ್ರಂಥಗಳು ರಚನೆಯಾಗಬೇಕಾದ ಅವಶ್ಯಕತೆಯಿದೆ ಎಂದರು.

*ವಿದ್ವಾನ್ ಎಸ್. ಕೃಷ್ಣಮೂರ್ತಿ : ಅತಿಥಿಗಳು, ತಮ್ಮ ಭಾಷಣದಲ್ಲಿ, ತಮ್ಮ ತಾತನವರಾದ ಮೈಸೂರು ವಾಸುದೇವಾಚಾರ್ಯ ಮತ್ತು ಮುತ್ತಯ್ಯ ಭಾಗವತರ ಒಡನಾಟದ ಕೆಲವು ರೋಚಕ ಘಟನೆಗಳನ್ನು ತಿಳಿಸಿದರು. ಮುತ್ತಯ್ಯ ಭಾಗವತರು ಮತ್ತು ತಮ್ಮ ತಾತನವರು ಒಮ್ಮೆ ಕಾಂಬೋಧಿ ರಾಗವನ್ನು ಒಟ್ಟಿಗೆ ಹಾಡಿದ ಬಗೆಯನ್ನು ಮೆಲುಕು ಹಾಕಿದರು. ತಮ್ಮ ತಾತನವರು ಶಂಕರಾಭರಣದಲ್ಲಿ ರಚಿಸಿದ್ದ ಹರಿಭಜನೆ ಎಂಬ ಕೀರ್ತನೆಯನ್ನು ತಾತನವರಲ್ಲೇ ಒಂದು ವಾರವೆಲ್ಲಾ ಕೇಳಿ, ಮುತ್ತಯ ಭಾಗವತರು ಶಂಕರಾಭರಣದಲ್ಲಿ ಸಹಜ ಗುಣ ರಾಮ ಕೀರ್ತನೆಯನ್ನು ರಚಿಸಿದ್ದು, ಅದನ್ನು ಕೇಳಿ ತಮ್ಮ ತಾತನವರ ಕಣ್ಣಲ್ಲಿ ನೀರು ಹರಿದು ತಲೆದೂಗಿದ ಘಟನೆ, ಒಮ್ಮೆ ಮುತ್ತಯ್ಯ ಭಾಗವತರ ವರ್ಣಚಿತ್ರ ಬರೆದುದ್ದಕ್ಕೆ ಕೃಷ್ಣಮೂರ್ತಿಯವರಿಗೆ ೩೦ ರೂಗಳ ಬಹುಮಾನವನ್ನು ಮುತ್ತಯ್ಯಭಾಗವತರು ನೀಡಿದ ಘಟನೆಯನ್ನೂ ನೆನೆಸಿಕೊಂಡರು.
ಮುಂದೆ ಓದಿ

ಸೋಮವಾರ, ನವೆಂಬರ್ 09, 2009

ಅರ್ಥ -- ಸೂಕ್ಷ್ಮತೆಯ ಕೊರತೆಯುಳ್ಳ ಅರ್ಥಭರಿತ ಚಿತ್ರ

ಬಿ ಸುರೇಶ್ ನಿರ್ದೇಶನದ ಅರ್ಥ ಚಲನಚಿತ್ರವನ್ನು ಕೈಲಾಶ್ ಚಿತ್ರಮಂದಿರದಲ್ಲಿ ಜರುಗುತ್ತಿರುವ ಸಮುದಾಯ ಚಿತ್ರೋತ್ಸವದಲ್ಲಿ ನೋಡುವ ಅವಕಾಶ ಒದಗಿ ಬಂತು. ಹೇಳಬೇಕೆಂದಿರುವ ಸಂದೇಶಕ್ಕೆ ಪೂರಕ ಕಥೆಯನ್ನು ಹೆಣೆದಿದ್ದಾರಾದರೂ, ಚಿತ್ರವನ್ನು ನಿರೂಪಿಸುವಲ್ಲಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣಿಸುತ್ತದೆ. ಸಂದೇಶ ಉತ್ತಮವಾದದ್ದಾದರೂ, ಯಾವುದೋ ಒಂದು ಕೋಮು ಅಥವಾ ಒಂದು ಸಂಸ್ಥೆಯ ಬಗ್ಗೆ ಪೂರ್ವಾಗ್ರಪೀಡಿತ ಮನಸ್ಸಿನಿಂದ, ಒಂದು ಕೋಮನ್ನು ಅಥವಾ ಒಂದು ರಾಜಕೀಯ ಪಕ್ಷವನ್ನು ಸಂತುಷ್ಟಿಸಲು ಚಿತ್ರವನ್ನು ಮಾಡಿಬಿಟ್ಟಿದ್ದಾರೆಯೇ ಎಂಬ ಸಂದೇಹ ಉಳಿದುಬಿಡುತ್ತದೆ.

[caption id="attachment_627" align="aligncenter" width="215" caption="http://www.viggy.com/news/images/Artha_Suresh.jpg"]http://www.viggy.com/news/images/Artha_Suresh.jpg[/caption]

ಚಿತ್ರಕಥೆಗೆ ಬಂದರೆ, ಚಲನಚಿತ್ರದಲ್ಲಿ ಬಡತನ, ಜಾಗತೀಕರಣ, ವಿದೇಶಿ ವ್ಯಾಮೋಹ, ಅನಕ್ಷರಸ್ಥತೆ, ಕೋಮುದಳ್ಳುರಿ, ಕೌಟುಂಬಿಕ ಕಲಹ, ಉಳ್ಳವರ ದಬ್ಬಾಳಿಕೆ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು ಪ್ರಾಮಾಣಿಕ ಪ್ರಯತ್ನವಾಗಿದೆ. ಸೀನಪ್ಪ(ರಂಗಾಯಣ ರಘು) ಆಟೋ (ತ್ರಿಚಕ್ರ ವಾಹನ) ಚಾಲಕ. ಆಟೋ ಮಾಲೀಕನಿಗೆ ದಿನಕ್ಕೆ ೧೫೦/- ರುಪಾಯಿಗಳನ್ನು ಕೂಡ ಸಂಪಾದಿಸಿ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ಅವನಿಗೆ. ಮುಂದೆ ಓದಿ

ಗುರುವಾರ, ನವೆಂಬರ್ 05, 2009

ದಾಸದಾಸರ ಮನೆಯ ದಾಸಿಯರ ಮಗ ನಾನು

ದಾಸದಾಸರ ಮನೆಯ ದಾಸಿಯರ ಮಗ ನಾನು

ಸಾಸಿರ ನಾಮದೊಡೆಯ ರಂಗಯ್ಯನ ಮನೆಯ


ಶಂಕುದಾಸರ ಮನೆಯ ಮಂಕುದಾಸನು ನಾನು

ಮಂಕುದಾಸನು ನಾನು ಮರಳುದಾಸ|

ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ

ಬಿಂಕದಿ ಬಾಗಿಲ ಕಾಯ್ವ ಬಡದಾಸ ನಾನಯ್ಯ


ಕಾಳಿದಾಸರ ಮನೆಯ ಕೀಳುದಾಸನು ನಾನು

ಆಳು ದಾಸನು ನಾನು ಮೂಳ ದಾಸ|

ಫಾಲಾಕ್ಷಸಖ ನಿನ್ನ ಭಜಿಪ ಭಕ್ತರ ಮನೆಯ

ಆಳಿನಾಳಿನ ದಾಸನಡಿದಾಸ ನಾನಯ್ಯ


ಹಲವು ದಾಸರ ಮನೆಯ ಹೊಲೆಯ ದಾಸನು ನಾನು

ಕುಲವಿಲ್ಲದ ದಾಸ ಕುರುಬದಾಸ|

ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗ ದಾಸ

ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ


ಹೀಗೆ ತಾವು ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದಿದ್ದರೂ, ತಾನು ಇನ್ನೂ ಸಣ್ಣವರೆಂದು ಹಾಡಿಕೊಂಡ, "ಎನಗಿಂತ ಕಿರಿಯರಿಲ್ಲ" ಎಂಬ ವಚನವಾಣಿಯನ್ನು ನೆನಪಿಗೆ ತರುವ ಈ ಪದ್ಯದ ರಚನಕಾರ ಕನಕದಾಸರ ಜಯಂತಿ ಇಂದು.

kanakadasa

ಇನ್ನು, ಕರ್ನಾಟಕ ಸಂಗೀತ ಪಿತಾಮಹರೆನಿಸಿಕೊಂಡ ಪುರಂದರದಾಸರು, ಕನಕದಾಸರನ್ನು ಹಾಡಿ ಹೊಗಳಿದ ಈ ದೇವರನಾಮವನ್ನೋದಿ.


ಮುಂದೆ ಓದಿ

ಬುಧವಾರ, ನವೆಂಬರ್ 04, 2009

ನಡವಳಾತ್ಮಕ ಜಾಹೀರಾತು -- ಒಂದು ನೋಟ

ಇಂದಿನ ಅಂತರ್ಜಾಲ ಯುಗದಲ್ಲಿ, ಅಂತರ್ಜಾಲ ಮುದ್ರಣ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ, ಜಾಹೀರಾತುಗಳು ಕಾಗದ ಮುದ್ರಣದಿಂದ ಅಂತರ್ಜಾಲ ಮುದ್ರಣಕ್ಕೆ ರೂಪಾಂತರಗೊಳ್ಳುತ್ತಿರುವುದು ಇಂದಿಗೆ ಸ್ವಲ್ಪ ಹಳೆಯ ಮಾತೇ ಎನ್ನಬಹುದು. ನಾವು ಕೆಲವು ಅಂತರ್ಜಾಲ ತಾಣಗಳನ್ನು ಜಾಲಾಡುವಾಗ, ಬೇಕಾದ ಮಾಹಿತಿಗಿಂದ ಬೇಡವಾದ ಜಾಹೀರಾತುಗಳನ್ನು ಬೇಕಾಬಿಟ್ಟಿ ಪ್ರಕಟವಾಗಿರುವುದನ್ನು ಕಾಣುತ್ತೇವೆ. ಆ ಅಂತರ್ಜಾಲದ ತಾಣದ ಕದವನ್ನು ದಿನಕ್ಕೆ ಎಷ್ಟು ಜನ ತಟ್ಟುತ್ತಾರೆ ಎಂಬ ವೀಕ್ಷಕ ದಟ್ಟಣೆಯ ಆಧಾರದ ಮೇಲೆ ಆ ತಾಣದ ಜನಪ್ರಿಯತೆ, ಮತ್ತು ಆ ತಾಣ ಗಳಿಸುವ ಜಾಹೀರಾತುಗಳ ಸಂಖ್ಯೆಗಳು ಅವಲಂಬಿಸಿರುತ್ತದೆ. ಈ ಜಾಹೀರಾತುಗಳನ್ನು ಸಾಮಾನ್ಯವಾಗಿ, ಭೌಗೋಳಿಕ ಗುಣಲಕ್ಷಣಗಳ ಅಧ್ಯಯನ (Geographical) ಅಥವಾ ಜನಸಂಖ್ಯೆಯ ಲಕ್ಷಣಗಳ ಅಧ್ಯಯನದ (Demographical) ಅಧಾರಿತವಾಗಿ ಪ್ರಕಟಿಸಿರುತ್ತಾರೆ. ಈ ಮಾದರಿಯ ಜಾಹೀರಾತಿನ ಅತಿ ದೊಡ್ಡ ಹಿನ್ನಡೆಯೆಂದರೆ, ಬಹಳಷ್ಟು ಸಮಯದಲ್ಲಿ ಜನರ ರುಚಿಯನ್ನು ಅರಿತು ಜಾಹೀರಾತು ಪ್ರಕಟಿಸುವುದು ಕಷ್ಟವಾಗುತ್ತದೆ. ಆಗ ಆ ಜಾಹೀರಾತಿನ ಕೊಂಡಿಯನ್ನು ಒತ್ತಿ ಬಳಸಿ ಮುನ್ನಡೆಯುವವರೂ ಕಡಿಮೆ!

advertising

ಈ ಹಿನ್ನಡೆಯನ್ನು ಮೆಟ್ಟಲು, ಕೆಲ ವರ್ಷಗಳಿಂದ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ತಂತ್ರಜ್ಞಾನ ಆಧಾರಿತ ಮಾದರಿಯೇ ನಡವಳಾತ್ಮಕ ಜಾಹೀರಾತು (Bihavioural Advertising). ಒಬ್ಬ ಅಂತರ್ಜಾಲ ವೀಕ್ಷಕನ ನಡತೆಯ (ಅಂತರ್ಜಾಲವನ್ನು ಜಾಲಾಡುವ ರೀತಿ/ನಡತೆ ಎಂದು ಓದಿಕೊಳ್ಳಬೇಕು) ಅಧ್ಯಯನದಿಂದ ಅದೇ ಕ್ಷಣದಲ್ಲಿ, ಅವನ ರುಚಿಗೆ ತಕ್ಕಂತೆ ಜಾಹೀರಾತನ್ನು ಪ್ರಕಟಿಸುವುದೇ ಈ ಮಾದರಿ ತಂತ್ರಜ್ಞಾನದ ಸವಾಲು ಮತ್ತು ಹಿರಿಮೆ. ಮುಂದೆ ಓದಿ

ಮಂಗಳವಾರ, ನವೆಂಬರ್ 03, 2009

ಕಂಟಿನ್ಯೂಯಸ್ ಕಂಪ್ಯೂಟಿಂಗ್ ಸಂಸ್ಥೆಯಿಂದ ನೇರ ನೆರೆ ಪರಿಹಾರ

ನಮ್ಮ ಸಂಸ್ಥೆಯ (ಕಂಟಿನ್ಯೂಯಸ್ ಕಂಪ್ಯೂಟಿಂಗ್) ನೌಕರರ ಪರವಾಗಿ ಸಂಗ್ರಹಿಸಲಾಗಿದ್ದ ಪ್ರವಾಹ ಪರಿಹಾರ ನಿಧಿಯ ಪ್ರತಿ ಪೈಸೆಯೂ ಸದ್ಬಳಕೆಯಾಗಬೇಕೆಂಬ ಉದ್ದೇಶದಿಂದ, ನವೆಂಬರ್ ೧ ಕನ್ನಡ ರಾಜ್ಯೋತ್ಸವ ದಿನದಂದು, ಪ್ರವಾಹ ಪೀಡಿತ ಒಂದು ಹಳ್ಳಿಯಾದ ಬಗ್ಗೂರಿಗೆ ಭೇಟಿಯಿತ್ತು ಪರಿಹಾರ ನಿಧಿಯಿಂದ ಕೊಂಡ ಆಹಾರ ಸಾಮಗ್ರಿಗಳನ್ನು ಬಗ್ಗೂರಿನ (ಸಿರಗುಪ್ಪ ತಾಲ್ಲೂಕು, ಬಳ್ಳಾರಿ ಜಿಲ್ಲೆ) ೭೫ ಕುಟುಂಬಗಳಿಗೆ ಹಂಚಿದೆವು. ಈ ನಿಟ್ಟಿನಲ್ಲಿ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುವುದಲ್ಲದೇ, ಈ ಅಳಿಲು ಸೇವೆಯ ಹಾದಿಯಲ್ಲಿ ನಮಗೆ ದೊರೆತ ಪ್ರೋತ್ಸಾಹ ಮತ್ತು ನಿರುತ್ಸಾಹದ ಬಗ್ಗೆ ಒಂದೆರಡು ಮಾತುಗಳನ್ನು ಬರೆದರೆ ಮುಂದೆ ಪರಿಹಾರವನ್ನು ನೇರವಾಗಿ ಜನರಿಗೆ ತಲುಪಿಸಲು ಇಚ್ಛಿಸುವವರಿಗೆ ನೆರವಾಗಬಲ್ಲದೇನೋ!

[caption id="attachment_604" align="aligncenter" width="448" caption="ನೆರೆಯಿಂದ ಸಂಪೂರ್ಣ ನಾಶವಾದ ಒಂದು ಗುಡಿಸಲು"]ನೆರೆಯಿಂದ ಸಂಪೂರ್ಣ ನಾಶವಾದ ಒಂದು ಗುಡಿಸಲು[/caption]

* ನಾವು ನೆರೆ ಪರಿಹಾರಕ್ಕೆ ಹಣ ಸಂಗ್ರಹವನ್ನು ಸ್ವಲ್ಪ ತಡವಾಗಿ ಪ್ರಾರಂಭಿಸಿದರೂ, ನಮ್ಮ ಸಂಸ್ಥೆಯಲ್ಲಿನ ನೌಕರರು ಸ್ವಇಚ್ಛೆಯಿಂದ ಉದಾರವಾಗಿ ದೇಣಿಗೆ ನೀಡಿ ಮಾನವೀಯತೆಯನ್ನು ಮೆರೆದರು. ಇದಕ್ಕೆ ಅಮೇರಿಕಾದಲ್ಲಿ ಓದುತ್ತಿರುವ ನಮ್ಮ ಗೆಳೆಯನೊಬ್ಬ ಕೂಡ ಕೈಜೋಡಿಸಿದ್ದ.


* ಸಂಸ್ಥೆಯ ಗಾತ್ರ ಚಿಕ್ಕದಾದದ್ದರಿಂದ ಸಂಗ್ರಹಗೊಂಡ ಮೊತ್ತ, ಬೆಂಗಳೂರಿನ ಬೇರೆ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಹೋಲಿಸಿದರೆ, ಅಷ್ಟೇನು ಹೆಚ್ಚಿರಲಿಲ್ಲ. ಆದುದರಿಂದ ಅದನ್ನು ಸರ್ಕಾರಕ್ಕೋ ಅಥವಾ ಬೇರೆ ಯಾವುದೋ ಸಂಸ್ಥೆಗೋ ದೇಣಿಗೆ ನೀಡುವುದೇ ಸರಿ ಎಂಬ ಒತ್ತಡ ಹೆಚ್ಚಿತ್ತು.


* ಪರಿಹಾರ ನಿಧಿ ಸರ್ಕಾರದ ಮೂಲಕ ಹೋದರೆ ಅದು ಅಲ್ಲಿ ಇಲ್ಲಿ ಸೋರಿ ಹೋಗುವುದೆಂಬ ಆತಂಕದಿಂದ, ನಾನು ಮತ್ತು ಸಹೋದ್ಯೋಗಿಗಳಾದ ಪ್ರತಾಪ್, ಶ್ರೀನಿವಾಸ್, ರಾಮ್ ಬಾಬು ಒಂದು ವಾರಾಂತ್ಯ, ಪ್ರವಾಹ ಪೀಡಿತ ಹಳ್ಳಿಗೆ ಪ್ರಯಾಣ ಮಾಡಿ ಪರಿಹಾರವನ್ನು ಜನರಿಗೆ ನೇರವಾಗಿ ತಲುಪಿಸಬೇಕೆಂದು ನಿಶ್ಚಯಿಸಿಕೊಂಡೆವು. ನೆರೆ ಹಾವಳಿಯಿಂದ ಉಂಟಾಗಿರುವ ದುಸ್ಥಿತಿಯನ್ನು ನಮ್ಮ ಕಣ್ಣಾರೆ ನೋಡಿ, ನಮ್ಮ ಕೈಲಾದ ಸಣ್ಣ ಸಹಾಯವನ್ನು ಮಾಡಬೇಕೆಂಬುದು ಎಲ್ಲರ ಮನಸಿನಲ್ಲೂ ಇತ್ತು.

ಮುಂದೆ ಓದಿ

ಮಂಗಳವಾರ, ಅಕ್ಟೋಬರ್ 27, 2009

ದ ಡಿಫಿಕಲ್ಟಿ ಆಫ್ ಬಿಯಿಂಗ್ ಗುಡ್ -- ಪುಸ್ತಕ ಪರಿಚಯ

diifficulty-of-being-good

ಟೈಮ್ಸ್ ಆಫ್ ಇಂಡಿಯಾ ಆಂಗ್ಲ ನಿಯತಕಾಲಿಕೆಯಲ್ಲಿ ಅಂಕಣಕಾರರಾಗಿ ಪ್ರಖ್ಯಾತರಾಗಿರುವ, ಪ್ರಾಕ್ಟರ್ ಅಂಡ್ ಗ್ಯಾಂಬಲ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ’ಗುರುಚರಣ ದಾಸ್’ ರವರ ಹೊಸ ಪುಸ್ತಕ "The Diffuculty Of Being Good" ಭಾರತದ ಪ್ರಾಚೀನ ಗ್ರಂಥ ’ಮಹಾಭಾರತ’ದ ಆಳವಾದ ಅಧ್ಯಯನದದಿಂದ ಕೂಡಿದ ವಿಮರ್ಶಾತ್ಮಕ ಶೈಲಿಯಲ್ಲಿ ಹೊರಹೊಮ್ಮಿರುವ ಪುಸ್ತಕ ಎನ್ನಬಹುದು. ಮಹಾಭಾರತದ ಪ್ರಮುಖ ಪಾತ್ರಗಳು ವಿವಿಧ ಸನ್ನಿವೇಶಗಳಲ್ಲಿ ತೋರುವ ಮನೋಭಾವದ, ನಡತೆಯ ಸುತ್ತ ಪುಸ್ತಕವನ್ನು ಹೆಣೆದಿದ್ದು ಇಂದಿನ ದಿನಕ್ಕೆ ಆ ಸನ್ನಿವೇಶಗಳು, ಆ ಪಾತ್ರಗಳಲ್ಲಿದ್ದ ಸಂದಿಗ್ಧತೆ, ಹೇಗೆ ಅನ್ವಯವಾಗುತ್ತವೆ? ಈ ದಿನಗಳಲ್ಲಿನ ಪ್ರಪಂಚದ ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಉಂಟಾಗಿರುವ ತಲ್ಲಣಗಳಿಗೂ, ಮಹಾಭಾರತಕ್ಕೂ ತಳುಕು ಹಾಕಿ ನೋಡುತ್ತಾರೆ. ನಮ್ಮ ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮಹಾಭಾರತದ ಪ್ರಸಂಗಗಳು, ಪಾತ್ರಗಳು ಯಾವ ರೀತಿಯಲ್ಲಾದರೂ ಸಹಾಯ ಮಾಡುತ್ತವೆಯೇ ಎಂಬುದರ ಅಧ್ಯಯನವಿದೆ ಈ ಪುಸ್ತಕದಲ್ಲಿ.


ಮುಂದೆ ಓದಿ

ಬುಧವಾರ, ಅಕ್ಟೋಬರ್ 21, 2009

ಒಗಟು ಬಿಡಿಸೋ ಜಾಣ,

2eggs

ನನ್ನ ಹತ್ತಿರ ೧೦೦ ಅಂತಸ್ತಿನ ಮನೆಯಿದೆ (ದಯವಿಟ್ಟು ಸಂತೋಷ್ ಹೆಗಡೆಯವರಿಗೆ ಹೇಳಬೇಡಿ!), ಒಂದು ಅಂತಸ್ತಿನ ಮಹಡಿ, ತನ್ನ ಮೇಲಿನ ಅಥವಾ ಕೆಳಗಿನ ಮಹಡಿಯಿಂದ ಸಮ ದೂರದಲ್ಲಿರುತ್ತದೆ. (ಇದು ಒಗಟು ಬಿಡಿಸಲು ಬೇಕಾದ ಪೂರ್ವ ಮಾಹಿತಿ ಅಷ್ಟೆ! ಇದಕ್ಕೂ ಬಿಡಿಎ ನಿಯಮಗಳಿಗೂ ಸಂಬಂಧವೇನಿಲ್ಲ!). ನಿಮಗೆ ಯಾವುದೇ ಅಂತಸ್ತಿಗೆ ತೆರಳಲು ಸ್ವಾತಂತ್ರವಿದೆ. ಮೆಟ್ಟಿಲು ಹತ್ತಬೇಕಷ್ಟೆ.

ಮತ್ತು ನನ್ನಲ್ಲಿ ೨ ಮೊಟ್ಟೆಗಳಿವೆ (ಇತ್ತೀಚಿನ ದಿನಗಳಲ್ಲಿ ಮೊಟ್ಟೆ ಸಸ್ಯಾಹಾರವಂತೆ!) ಮುಂದೆ ನೋಡಿ

ಶುಕ್ರವಾರ, ಅಕ್ಟೋಬರ್ 09, 2009

ವೈಚಾರಿಕ ಮನಸ್ಸಿನ ಹತ್ತು ಹಲವು ಮುಖಗಳು

ಪ್ರಸಿದ್ಧ ಕಾದಂಬರಿಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ, ಪತ್ರಕರ್ತ, ಕವಿ, ವಿಜ್ಞಾನ ಬರಹಗಾರ, ನಾಟಕಕಾರ, ರಾಜಕಾರಣಿ, ಸಂಗೀತಕಾರ, ಚಿತ್ರಕಾರ, ವ್ಯಂಗ್ಯಚಿತ್ರಕಾರ, ಶಿಶು ಸಾಹಿತಿ, ಪ್ರವಾಸ ಸಾಹಿತಿ, ಪುಸ್ತಕ ಪ್ರಕಾಶಕ, ಚಲನಚಿತ್ರಗಾರ, ನೇರ ದಿಟ್ಟ ಸತ್ಯವಂತ ವಿಚಾರವಂತ ಹೀಗೆ ಬಹುಮುಖ ಪ್ರತಿಭೆ. "ಆಡು ಮುಟ್ಟದ ಸೊಪ್ಪಿಲ್ಲ" ಎಂಬ ಗಾದೆಗೆ ಸಮಾನವಾಗಿ "ಕಾರಂತ ತೊಡಗಿಸಿಕೊಳ್ಳದ ಕ್ಷೇತ್ರವಿಲ್ಲ" ಎಂಬ ಗಾದೆ ಇಂದು ಕರ್ನಾಟಕದಲ್ಲಿ ಮನೆಮಾತಾಗಿದೆ. ಹೀಗಿದ್ದೂ ತನ್ನ ಸಾಧನೆಯನ್ನೆಲ್ಲಾ "ಹುಚ್ಚು ಮನಸ್ಸಿನ ಹತ್ತು ಮುಖಗಳು" ಎಂಬ ಅರ್ಧ ಆತ್ಮಕಥೆಯಲ್ಲಿ ಬಿಡಿ ಬಿಡಿಯಾಗಿ ದಾಖಲಿಸಿದ ವಿನಯವಂತ, ಧೀಮಂತ ವ್ಯಕ್ತಿತ್ವದ ಡಾ| ಶಿವರಾಮ ಕಾರಂತ ಕೋಟ ರವರ ಜನ್ಮ ದಿನ ಇಂದು. ಡಾ| ಶಿವರಾಮ ಕಾರಂತ .ಕೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟ ಎಂಬ ಹಳ್ಳಿಯಲ್ಲಿ ೧೯೦೨ ರ ಅಕ್ಟೋಬರ್ ೧೦ ರಂದು ಜನಿಸಿದ್ದು.

karanta

ಕಾರಂತರು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲೂ ವ್ಯವಸಾಯ ಮಾಡಿದ್ದರೂ ಹೆಚ್ಚು ಪ್ರಸಿದ್ಧಿಯಾದದ್ದು ತಮ್ಮ ವೈಚಾರಿಕ ಕಾದಂಬರಿಗಳಿಂದಲೇ ಎನ್ನಬಹುದು. ಅವರ ಕೆಲವು ಕಾದಂಬರಿಗಳನ್ನು ಹೆಸರಿಸಿದರೆ, ಅಳಿದ ಮೇಲೆ, ಆಳ ನಿರಾಳ, ಇದ್ದರೂ ಚಿಂತೆ, ಇನ್ನೊಂದೇ ದಾರಿ, ಒಡ ಹುಟ್ಟಿದವರು, ಒಂಟಿ ದನಿ, ಔದಾರ್ಯದ ಉರುಳಲ್ಲಿ, ಕನ್ಯಾಬಲಿ ಅಥವಾ ಸೂಳೆಯ ಸಂಸಾರ, ಕರುಳಿನ ಕರೆ, ಕುಡಿಯರ ಕೂಸು, ಗೊಂಡಾರಣ್ಯ, ಚಿಗುರಿದ ಕನಸು, ಚೋಮನ ದುಡಿ, ಜಗದೋದ್ಧಾರ-ನಾ, ಜಾರುವ ದಾರಿಯಲ್ಲಿ, ದೇವದೂತರು, ನಂಬಿದವರ ನಾಕ ನರಕ, ನಿರ್ಭಾಗ್ಯ ಜನ್ಮ, ಭತ್ತದ ತೊರೆ, ಬೆಟ್ಟದ ಜೀವ, ಭೂತ, ಮರಳಿ ಮಣ್ಣಿಗೆ, ಮುಗಿದ ಯುದ್ಧ, ಮೂಕಜ್ಜಿಯ ಕನಸುಗಳು, ಮೊಗಪಡೆದ ಮನ, ವಿಚಿತ್ರಕೂಟ, ಶನೀಶ್ವರನ ನೆರಳಲ್ಲಿ, ಸನ್ಯಾಸಿಯ ಬದುಕು, ಸಮೀಕ್ಷೆ, ಸರಸಮ್ಮನ ಸಮಾಧಿ, ಸ್ವಪ್ನದ ಹೊಳೆ, ಹೆತ್ತಳಾ ತಾಯಿ, ಮೈಮನಗಳ ಸುಳಿಯಲ್ಲಿ, ಗೆದ್ದ ದೊಡ್ಡಸ್ತಿಕೆ ಇತ್ಯಾದಿ. ಮುಂದೆ ಓದಿ

ಮಂಗಳವಾರ, ಅಕ್ಟೋಬರ್ 06, 2009

ಹುಯಿಲಗೋಳ ನಾರಾಯಣರಾಯರ ಬಗೆಗೆ ಇನ್ನೊಂದಿಷ್ಟು ಮಾಹಿತಿಗಳು

huyolu2


ಮಹಾತ್ಮ ಗಾಂಧಿಯವರು ೧೯೨೪ ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯೆಂದು ಸ್ವೀಕರಿಸಲಾದ "ಉದಯವಾಗಲಿ" ಗೀತೆಯ ಭಾವಾರ್ಥ ಕೇಳಿ ತಿಳಿದು ನಾರಾಯಣರಾಯರನ್ನು ಮೆಚ್ಚಿಕೊಂಡು ಹೂವಿನ ಹಾರ ಹಾಕಿ ಗೌರವಿಸಿದ್ದರಂತೆ.


ಅಪರಿಮಿತ ದೇಶಭಕ್ತರಾಗಿದ್ದ ಹುಯಿಲಗೋಳ ನಾರಯಣರಾಯರು, ಕರ್ನಾಟಕ ಏಕೀಕರಣಕ್ಕೇ ಅಲ್ಲದೇ ಸ್ವಂತತ್ರ ಹೋರಾಟಕ್ಕೂ ಶ್ರಮಿಸಿದ್ದರು. ಇವರು ಕನ್ನಡ ನಾಡಿನ ಬಗೆಗಿನ ಪದ್ಯಗಳನ್ನು ರಚಿಸಿದುದ್ದಲ್ಲದೆ ದೇಶಭಕ್ತಿಯನ್ನು ಹೊಮ್ಮಿಸುವ ಪದ್ಯಗಳನ್ನೂ ರಚಿಸಿದ್ದಾರೆ. ಓದುಗರ ಪರಿಚಯಕ್ಕಾಗಿ "ಧ್ವಜಗೀತೆ"ಎಂಬ ಈ ಅತ್ಯುತ್ತಮ ದೇಶಭಕ್ತಿಗೀತೆ!


ಧ್ವಜಗೀತೆ



ಏರಿಸಿರಿ ಹಾರಿಸಿರಿ ಭಾರತದ ನಾಡಗುಡಿ|

ಮೂರು ಬಣ್ಣದ ಧ್ವಜಕೆ ಜಯವೆಂದು ಭೇರಿ ಹೊಡಿ ||ಪ||


ಹಾಸಿ ಮನೆಯಲಿ ನೇಯ್ದ ಖದ್ದರದ ಬಟ್ಟೆಯಲಿ|

ಕೇಸರಿ ಬಿಳಿ ಹಸಿರು ಬಣ್ಣಗಳ ಪಟ್ಟಿಯಲಿ|

ಸೂಸಿ ನೀಲಿಯಿಟ್ಟು, ಚಕ್ರ ನಡುವೆ ಮೆಟ್ಟಿನಲಿ|

ಬೀಸುತಿಹ ಗಾಳಿಯಲಿ ಭಾರತದ ನಿಟ್ಟೆಯಲಿ||


ಸತ್ಯ, ದಮೆ, ದಯೆ, ಶಾಂತಿ, ಪ್ರೇಮಗಳ ಗುರುತೆಂಬ|

ಸ್ತುತ್ಯ ಬಣ್ಣದ ನಡುವೆ ಧರ್ಮಚಕ್ರದ ಬಿಂಬ|

ನಿತ್ಯ ಅಭಯ ಅಹಿಂಸೆಗಳ ತೋರ್ಪಧ್ವಜ ಕಂಬ|

ಪ್ರತ್ಯಕ್ಷದಲಿ ನೋಡಿ ವಂದಿಸಿರಿ ಮನದುಂಬ||


ಖಡಖಡನೆ ಗಾಳಿಯಲಿ ಬೀಸಿ ಶಬ್ದವ ಮಾಡಿ|

ಛಡಛಡನೆ ಹಗೆಗಳೆಡೆ ಬಿರಿವಂತೆ ಹಾರಾಡಿ|

ಒಡೆಯ ಗದುಗಿನ ವೀರ ನಾರಾಯಣನ ಪಾಡಿ|

ಗುಡಿ ತನ್ನ ಮೊಗವೆತ್ತಿ ನಿಲುವಂತೆ ಮೇಲ್ಮಾಡಿ||


ಹುಯಿಲಗೋಳ ನಾರಾಯಣರಾಯರು ಏಕೀಕರಣದ ನಂತರ ರಚಿಸಿದ ಈ ಒಂದು ಸುಂದರ ಕವನವನ್ನೋದಿ ಆನಂದಿಸಿ.



ಮೂಡಿದುದು ಮೂಡಿದುದು ಕನ್ನಡದ ರವಿಬಿಂಬ

ಮುಂದೆ ಓದಿ