ಇಂದು ಚಂಡಮಾರುತ ಮುಂಬೈ ನಗರಕ್ಕೆ ಬಂದಪ್ಪಳಿಸಿದ್ದೇ ಒಂದು ವಿಶೇಷ ಸುದ್ದಿ ಎಂದು ಬಿಂಬಿಸುತ್ತಿರುವ ಸತ್ವಹೀನ ಟೀವಿ ಮಾಧ್ಯಮಗಳ ಮಧ್ಯೆ ವಿಭಿನ್ನವಾಗಿ ನಿಲ್ಲಿವ ಸಮರಸ ಟೀವಿ ನಿಮಗೆ ಹೊಸ, ರೋಚಕ, ಸ್ಪೋಠಕ, ಭಯಾನಕ ಸುದ್ದಿಯನ್ನು ಹೊತ್ತು ತಂದಿದೆ. ಮುಂದೆ ಓದಿ.
ಫ್ಯಾನ್ ಚಂಡಮಾರುತ ಮುಂಬೈಗೆ ಅಪ್ಪಳಿಸಿದ ಸುದ್ದಿಯನ್ನು ಮರಾಠಿ ಸಮರಸ ವಾಹಿನಿಯಲ್ಲಿ ಕೇಳಿ ತಿಳಿದ ಕೆಲವು ಎಂ ಎನ್ ಎಸ್ ಕಾರ್ಯಕರ್ತರು ನಮ್ಮ ಕಛೇರಿಗೆ ಕರೆ ಮಾಡಿ ತೀವ್ರ ಆಕ್ಷೇಪಣೆಯನ್ನು ವ್ಯಕ್ತ ಪಡಿಸಿದ್ದಲ್ಲದೆ, ಶೀಘ್ರದಲ್ಲೇ ಮುಂಬೈಗೆ ಅಪ್ಪಳಿಸಿದ ಚಂಡಮಾರುತವನ್ನು ಮರಾಠಿ ಹೆಸರಿನಲ್ಲಿ ನಾಮಕರಣ ಮಾಡಿ ಸುದ್ದಿಯನ್ನು ಮರು ಪ್ರಸಾರ ಮಾಡದೆ ಹೋದರೆ, ನಿಮ್ಮ ಕಛೇರಿಯಲ್ಲಿ ದಾಂಧಲೆ ಎಬ್ಬಿಸುವೆವು ಎಂಬ ಬೆದರಿಕೆಯನ್ನು ಹಾಕಿರುತ್ತಾರೆ. ಪುಂಡಾಟಿಕೆಗೆ ಹೆದರದ ಸಮರಸ ಟೀವಿ ಸುದ್ದಿ ಸಂಪಾದಕರು, ಚಂಡಮಾರುತಕ್ಕೆ ಹೆಸರಿಟ್ಟಿರುವವರು ಹವಾಮಾನ ಇಲಾಖೆಯ ಅಧಿಕಾರಿಗಳು, ತಾವು ತಮ್ಮ ಧೀರತೆಯನ್ನೂ ಅವರಲ್ಲೇ ಪ್ರದರ್ಶಿಸಬೇಕು ಎಂದು ನಯವಾಗಿ ಹೇಳಿದ್ದಲ್ಲದೆ, ದೂರವಾಣಿ ಕರೆಯನ್ನೂ ಕೂಡ ಖಂಡ ತುಂಡಾಗಿ ಕತ್ತರಿಸಿ ಹಾಕಿದ್ದಾರೆ!
ಹವಾಮಾನ ಇಲಾಖೆಗೆ ತ್ವರಿತದಲ್ಲೇ ದೂರವಾಣಿ ಕರೆ ಮಾಡಿದ ಎಂ ಎನ್ ಎಸ್ ಕಾರ್ಯಕರ್ತರು, ಇಲಾಖೆಯಿಂದ "Phyan Cyclone is leaving Bombay" ಎಂಬ ಉತ್ತರವನ್ನು ಕೇಳಿ ವ್ಯಘ್ರರಾಗಿ, ಜೋರು ಮಳೆಯಲ್ಲಿ ಹವಾಮಾನ ಇಲಾಖೆಗೆ ದೌಡಾಯಿಸಲಾಗದೆ, ತಮ್ಮ ಅಸಹಾಕತೆಯನ್ನೂ ಪ್ರದರ್ಶಿಸಲಾಗದೆ ತಮ್ಮ ಕಛೇರಿಯಿಯ ಕಿಟಕಿಯಿಂದಲೇ ಕೈಯನ್ನು ಹೊರಹಾಕಿ ಮುಂಬೈನಿಂದ ತೆರಳುತ್ತಿದ್ದ ಚಂಡಮಾರುತ/ಗಾಳಿಗೇ ಗುದ್ದಿ ತಮ್ಮ ಧೀರತೆಯನ್ನು ಪ್ರದರ್ಶಿಸಿದ್ದಾರೆ.ಅಲ್ಲದೆ ಚಂಡಮಾರುತಕ್ಕೆ ಮರಾಠಿ ಭಾಷೆಯ ಹೆಸರಿನಲ್ಲಿ ನಾಮಕರಣ ಮಾಡಿ ಮತ್ತೆ ಮುಂಬೈಗೆ ಬರುವಂತೆ ಮಾಡಬೇಕೆಂದು ಹವಾಮಾನ ಇಲಾಖೆಗೆ ಆಗ್ರಹಿಸಿದ್ದಾರೆ.ಇಂತಹ ಧೀರತೆಯನ್ನು ಮೆರೆದ ಎಂ ಎನ್ ಎಸ್ ಕಾರ್ಯಕರ್ತರಿಗೆ ಮುಂದಿನ ಚುನಾವಣೆಯಲ್ಲಿ ಅನ್ಯಪಕ್ಷಗಳ ಜೊತೆ ಗುದ್ದಾಡುವ ಅವಕಾಶವನ್ನು ಕೊಡುವುದಾಗಿ ರಾಜ್ ಠಾಕ್ರೆಯವರು ಮರಾಠಿಯಲ್ಲೇ ಘೋಷಿಸಿದ್ದಾರೆ. ಚಂಡಮಾರುತ ಮುಂದೊಂದು ಬಾರಿ ಅಪ್ಪಳಿಸಿದರೆ, ಚಂಡಮಾರುತದ ವಿರುದ್ಧ ಭಾರಿ ಹೋರಾಟ ನಡೆಸುವುದಾಗಿಯೂ ಹೇಳಿಕೊಂಡಿದ್ದಾರೆ.
ಮುಂದೆ ಓದಿ
