ಭಾನುವಾರ, ಅಕ್ಟೋಬರ್ 29, 2006

ಎದೆ ತುಂಬಿ ನೋಡಿದೆವು.....

ಎದೆ ತುಂಬಿ ನೋಡಿದೆವು.....

ಈ ಶೀರ್ಶಿಕೆ ನೋಡಿದಾಕ್ಷಣ ನಿಮಗೆ ಹೊಳೆದಿರಬಹುದು ಈ ಬರವಣಿಗೆಯ ವಿಷಯ.. ಸುಮಾರು ತಿಂಗಳು,ವರ್ಷಗಳಿಂದ ಪ್ರತಿ ಭಾನುವಾರ ರಾತಿ ೯-೦೦ ಕ್ಕೆ ಈ-ಟಿವಿ ಕನ್ನಡ ವಾಹಿನಿಯವರು ಪ್ರಸಾರ ಮಾಡುತ್ತಿರುವ ಕಾರ್ಯಕ್ರಮ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಒಂದು ನಮನ ಸಲ್ಲಿಸೋಣವೆ??? ಟಿವಿ ಅಂದ್ರೆ ಒಂದು ಮಹಾ ಬೇಜಾರಿನ ಪೆಟ್ಟಿಗೆ ( ಮೂರ್ಖರ ಪೆಟ್ಟಿಗೆ ಅನ್ನೋದ್ಕಿಂತ ಸೂಕ್ತವಾದ ಹೆಸರು ಅನ್ಸುತ್ತೆ!!!. ಬೇಜಾರ್ ಪೆಟ್ಟಿಗೆ ಅಂದ್ರೆ ಬೇಜಾರ್ ಕಳ್ಯೋದು ಅಂತಲ್ಲ ನೆನಪಿರಲಿ..) ಆಗಿರೋ ಸಂದರ್ಭದಲ್ಲಿ,ಕನ್ನಡ ಜನರನ್ನು ಹಿಡಿದು ಟಿವಿ ಮುಂದೆ ಒಂದೂ ವರೆ ಘಂಟೆ ಕೂರಿಸುವಲ್ಲಿ ಸಫಲರಾಗಿದ್ದಾರೆ ಎಂದರೆ ಅತಿಶಯವಾಗಲಾರದು!!!!

ಅದ್ರಲ್ಲೂ ಕೆಲವು ತಿಂಗಳುಗಳಿಂದ ಪ್ರಸಾರವಾಗುತ್ತಿರುವ ಮಕ್ಕಳ ವಿಶೇಷ ಕಾರ್ಯಕ್ರಮಾನ ಹೊಗಳಲು ಮಾತುಗಳೆ ಇಲ್ಲ.. ಎಲ್ಲ ಪುಟಾಣಿ ಮಕ್ಕಳು.. ಅವ್ರ ಪ್ರತಿಭೆ ನೋಡಿದ್ರೆ ನಂಗೆ ಕೆಲವು ಅಸೂಯೆ ಆಗ್ತಾ ಇತ್ತು.. ನಾನು ಇದ್ದೀನಿ ಕೆಲ್ಸಕ್ಕೆ ಬಾರದವನು/ಅನಾವಶ್ಯಕ ಅನ್ನಿಸ್ತಾ ಇತ್ತು... ಈ ಚಿಕ್ಕ ವಯಸ್ಸಿಗೆ ಎಷ್ಟು ಚೆನ್ನಾಗಿ ಹಾಡ್ತಾರೆ.. ನಿಜ್ವಾಗ್ಲೂ ಎದೆ ತುಂಬಿ ಬಂತು!!!

ಈ ಸಂದರ್ಭದಲ್ಲಿ ಕೊನೆಯ ಹಂತಕ್ಕೆ ತಲುಪಿರುವ ಒಬ್ಬ ಸ್ಪರ್ಧಿಯನ್ನು ನೆನೆಸಿಕೊಳ್ಳಬೇಕು ಅನ್ನಿಸ್ತಾ ಇದೆ.. ಇವಳು ಪ್ರಾರ್ಥನಾ ಶಾಲೆಯಲ್ಲಿ ೩ ನೆ ತರಗತಿಯಲ್ಲಿ ಒದ್ತಾ ಇರೋ ಚಿಕ್ಕ ಹುಡುಗಿ.. ಚಿಕ್ಕ ಹುಡುಗಿ ಅನ್ನೋದ್ಕಿಂತ ಪಾಪು ಅನ್ನಬಹುದು.. ಪ್ರಾಯಶಃ ಎಲ್ಲಾ ಸ್ಪರ್ಧಿಗಳಲ್ಲೂ ಚಿಕ್ಕವಳು ಎನ್ನಬಹುದು. ಆದ್ರೆ ವಯಸ್ಸಿಗೆ ಮೀರಿದ ಪ್ರತಿಭೆ!!!! ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಇವಳಿಗೆ ಹೇಳಿ ಮಾಡಿಸಿದ ಹಾಗಿದೆ!!!! ಎಲ್ಲಾ ಸುತ್ತುಗಳಲ್ಲೂ ಒಳ್ಳೊಳ್ಳೆ ಗೀತೆಗಳನ್ನು ಆಯ್ಕೆ ಮಾಡಿ ಅವುಗಳನ್ನು ಅದ್ಭುತವಾಗಿ ಹಾಡಿ ತೀರ್ಪುಗಾರರ, ವೀಕ್ಷಕರ , ಕಾರ್ಯಕ್ರಮ ಸಂಚಾಲಕ/ನಿರೂಪಕ ಬಾಲ ಸುಬ್ರಮಣ್ಯ ರವರ ಮನ ಸೂರೆಗೊಂಡಿದ್ದಾಳೆ ಎಂದರೆ ತಪ್ಪಾಗಲಾರದು...

ಈ ಪಾಪು ನಂಗೆ ಇಷ್ಟ ಆದ್ದರಿಂದ ವಿಶೆಷವಾಗಿ ಒಂದೆರಡು ಮಾತುಗಳನ್ನು ಬರೆದೆ!! ಆದರೆ ಒಟ್ಟಾಗಿ ಎಲ್ಲಾ ಮಕ್ಕಳೂ ಅದ್ಭುತ... ಒಂದೂ ವರೆ ಘಂಟೆ ನನ್ನಂತೂ ಟಿ ವಿ ಮುಂದೆ ಬೇರೆ ಏನೂ ಕೆಲ್ಸಾನ ಸಮಾನಾಂತರವಾಗಿ (paralelly ಅನ್ನೋದ್ನ ಯಥಾವತ್ತಾಗಿ ಕನ್ನಡಕ್ಕೆ ತಂದಿದ್ದೀನಿ.. ಎಷ್ಟು ಸಮಂಜಸವೋ ಗೊತ್ತಿಲ್ಲ.. ನೀವೆ ವಿಚಾರ ಮಾಡಿ) ಮಾಡೋಕ್ ಬಿಡದೆ ಗಮನ ಇಟ್ಟು ನೋಡೊ ಹಾಗೆ ಮಾಡಿದ ಕಾರ್ಯಕ್ರಮ!!!

ಒಂದೆರಡು ಬಾರಿ ಎಸ್ ಪಿ ಬಿ ಮಕ್ಕಳನ್ನು ಅನುಕರಿಸಲು ಪ್ರಯತ್ನಿಸಿದಾಗ, ಕನ್ನಡವನ್ನು ಅನರ್ಥಗೊಳಿಸಿ ಮಾತಾಡಿದಾಗ ( ಅವರು ಇಷ್ಟು ಕನ್ನಡ ಕಲ್ತಿರೋದ್ಕೆ ನನ್ನ ಪ್ರಣಾಮ.. ನಿಜವಾಗ್ಲೂ ಹೆಮ್ಮೆ ಆಗುತ್ತೆ),ಕೆಲವು ಬೇಡವಾದ ಹಿತವಚನಗಳನ್ನು ಕೊಟ್ಟಾಗ, ಹಂಸಲೇಖ ರವರ ಸಾಹಿತ್ಯವನ್ನು ಅತಿಶಯವಾಗಿ ಹೊಗಳಿದಾಗ ( ವಿಶೇಷವಾಗಿ ಆ ಕಾರಂಜಿ ಕೆರೆ ಹಾಡು ಬಂದಾಗ... ) ಮನಸ್ಸಿನಲ್ಲಿ ಬೇಜಾರು ಸುಳೀತಾ ಇತ್ತು.. ಆದ್ರೆ ಅದು ಕ್ಷಣಿಕ!!! ಮತ್ತೆ ಮಕ್ಕಳು ಹಾಡೋಕ್ಕೆ ಶುರು ಮಾಡ್ಬಿಡ್ತಿದ್ರು!!!!

ಈ ವಾರದ ಕೊನೆ ಹಂತದ ಕಾರ್ಯಕ್ರಮ ಕೂಡ ಬಹಳ ಚೆನ್ನಾಗಿತ್ತು!!! ಈ ಕೊನೆ ಹಂತ ಮುಂದಿನ ವಾರ ಮುಂದುವರೆಯುತ್ತದೆ ಅಂದಾಗ, ಮುಂದಿನ ವಾರವೂ ಸಿಗುವ ರಸದೌತಣವನ್ನು ನೆನೆದು ಅತೀವ ಆನಂದವಾಯ್ತು!!!

ಕನ್ನಡ ಇ-ಟಿವಿ ವಾಹಿನಿಗೂ, ಕಾರ್ಯಕ್ರಮ ಪ್ರಸ್ತುತ ಪಡಿಸುತ್ತಿರುವ ಕೆನರಾ ಬ್ಯಾಂಕಿಗೂ, ನಡೆಸಿಕೊಡುತ್ತಿರುವ ಎಸ್ ಪಿ ಬಿ ರವರಿಗೂ, ಕಾರ್ಯಕ್ರಮದ ಸ್ಪರ್ಧಿಗಳಿಗೂ, ವಾದ್ಯ ವೃಂದದವರಿಗೂ, ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿರುವ ವೀಕ್ಷಕ ವರ್ಗಕ್ಕೂ ಜಾಹೀರಾತುದಾರರಿಗೂ, ತೀರ್ಪುಗಾರರಾಗಿ ಆಗಮಿಸುತ್ತಿರುವ ಖ್ಯಾತ ಸಂಗೀತಗಾರರಿಗೂ, ಮತ್ತು ತೆರೆಯ ಮರೆಯಲ್ಲಿ ದುಡಿದ ಇತರ ಕಲಾವಿದ/ಜನರಿಗೂ ನನ್ನ ತುಂಬು ಎದೆಯ ಧನ್ಯವಾದಗಳು... ವಂದನೆಗಳು...

ನಿಮ್ಮ ಕಾರ್ಯಕ್ರಮವನ್ನು ಎದೆ ತುಂಬಿ ನೋಡಿದೆನು!!!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ