Kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ನವೆಂಬರ್ 26, 2008

ತೀ ನಂ ಶ್ರೀ ಜಯಂತಿ

"ಯಾರು ನಂಟರು?

ಇದು ಎಂಥ ಪ್ರಶ್ನೆ! ಎಳೆಯ ಮಕ್ಕಳಿಗೆ ಕೂಡ ಯಾರು ನಂಟರು ಎಂದು ಗೊತ್ತಿದೆಯಲ್ಲಾ! ಎಂದು ಹಾಸ್ಯ ಮಾಡಬೇಡಿ. ಇದು ಎಷ್ಟು ತೊಡಕಾದ ಸಮಸ್ಯೆ ಎನ್ನುವುದು ಒಂದು ಕ್ಷಣದಲ್ಲಿ ಮನದಟ್ಟಾಗುತ್ತದೆ.

ಮಾವ, ಭಾವ, ಅತ್ತೆ, ಮೈದುನ - ಇವರೆಲ್ಲರೂ ನಂಟರೆಂದು ನೀವು ಬೇಗ ಹೇಳಿಬಿಡಬಹುದು. ರಕ್ತಸಂಬಂಧಿಗಳೆಲ್ಲರೂ ನಂಟರೆಂದು ಶಾಸ್ತ್ರ ಪರಿಷ್ಕೃತವಾದ ಬುದ್ಧಿಯುಳ್ಳವರು ಲಕ್ಷಣವನ್ನೂ ಕಲ್ಪಿಸಬಹುದು. ಆದರೆ ಬಾಂಧವ್ಯದ ರಹಸ್ಯಗಳನ್ನೆಲ್ಲಾ ಒಂದು ಸೂತ್ರದಿಂದ ಕಟ್ಟಿ ಹಾಕುವುದು ಸಾಧ್ಯವಿಲ್ಲ. ತಂದೆತಾಯಿಗಳ ರಕ್ತವೇ ನಮ್ಮ ದೇಹದಲ್ಲೆಲ್ಲಾ ಹರಿಯುತ್ತಿದೆಯಷ್ಟೆ. ಇವರು ನಂಟರೆ? ಈಗಿನ ವಿದ್ಯಾವಂತರಾದ ನೀವು ನಿಮ್ಮ ಮುಪ್ಪಿನ ತಂದೆಯೊಡನೆ ಬೆಂಗಳೂರಿನಲ್ಲಿ ಪೇಟೆಯ ಕಡೆಗೆ ಹೊರಟಿರಿ ಎನ್ನಿ. ಆಗ ನಿಮ್ಮ ಮಿತ್ರರೊಬ್ಬರು ಎದುರಿಗೆ ಬಂದು ಕಂಡು "ಇವರು ಯಾರು?" ಎಂದು ನಿಮ್ಮ ತಂದೆಯ ಕಡೆಗೆ ತೋರಿಸಿ ಕೇಳಿದಾಗ, ನೀವು "ನಮ್ಮ ನಂಟರು" ಎಂದು ಹೇಳಿಬಿಟ್ಟರೆ ಆಗುವ ಅನರ್ಥವನ್ನು ಊಹಿಸುವುದಾದರೂ ಸಾಧ್ಯವೆ? ಕೆಲವು ಮಂದಿ ಸತ್ಪುತ್ರರು ಇಂಥ ಉತ್ತರಗಳನ್ನು ಕೊಟ್ಟ ಮಾತ್ರದಿಂದಲೇ ಎಷ್ಟೋ ಸಂಸಾರಗಳು ಒಡೆದು ಹೋಗಿಲ್ಲವೇ?"

ನೀವು ನಿಮ್ಮ ಪ್ರೌಢಶಾಲೆಯಲ್ಲಿ (೯ ನೆಯ ಅಥವಾ ೧೦ ನೆಯ ತರಗತಿ ಇರಬಹುದು) ಪ್ರಥಮ ಭಾಷಾ ವಿಷಯವಾಗಿ ಕನ್ನಡವನ್ನು ಆಯ್ಕೆ ಮಾಡಿದ್ದರೆ (ಸಾಮಾನ್ಯವಾಗಿ ಸರ್ಕಾರಿ ಪಠ್ಯ ಪುಸ್ತಕಗಳು ೮ - ೧೦ ವರ್ಷಗಳಲ್ಲಿ ಬದಲಾಗುವುದಿಲ್ಲ), ನೀವು ಮೇಲಿನ ಸಾಲುಗಳನ್ನು ನಂಟರು ಎಂಬ ಗದ್ಯ/ಪಾಠದಲ್ಲಿ ಓದಿರಬಹುದು. ಆ ವಯಸ್ಸಿನಲ್ಲಿ ನಾನು ಭಾಷಾ ವಿಷಯಗಳನ್ನು ಅಷ್ಟೇನೂ ವಿಷೇಶಾಸಕ್ತಿಗಳಿಂದ ಓದದೇ ಇದ್ದಾಗ್ಯೂ, ಅದೇನೋ ಒಂದು ತರಹ ಆಸಕ್ತಿ ಮೂಡಿಸಿದ್ದ ಪಾಠವಿದು. ಇಂದು ಇದರ ಕರ್‍ತೃ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರ ಜನ್ಮ ದಿನ. (೨೬/೧೧/೧೯೦೬ - ೦೭/೦೯/೧೯೬೬).
(ನಂಟರು ಎಂಬ ಲಲಿತ ಪ್ರಬಂಧ ಓದುವ ಆಸಕ್ತಿಯುಳ್ಳವರು, ತೀ ನಂ ಶ್ರೀ ಯವರ ನಂಟರು ಎಂಬ ಪುಸ್ತಕವನ್ನು ಓದಬಹುದು. ಇದು ಇನ್ನೂ ಹಲವಾರು ಪ್ರಬಂಧಗಳು/ಹರಟೆಗಳನ್ನು ಒಳಗೊಂಡಿದೆ).

ತೀ ನಂ ಶ್ರೀ ಯವರು ನವೋದಯ ಕನ್ನಡ ಸಾಹಿತ್ಯ ಸಂದರ್ಭದ ಪ್ರಮುಖ ಸಾಹಿತಿ/ ಕವಿಗಳೊಲ್ಲೊಬ್ಬರು. (ಇತ್ತೀಚೆಗೆ ಬಹಳ ಉಪಯೋಗಿಸಲ್ಪಡುವ ಈ ನವೋದಯ ಸಾಹಿತ್ಯ ಕಾಲ ಯಾವುದು ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ಕಿರು ಸೂಚನೆ ಓದಿ).
ಕವಿ, ವಿಮರ್ಶಕ, ಪ್ರಬಂಧಕಾರ ಪ್ರೊ. ತೀ ನಂ ಶ್ರೀ ಕರ್ನಾಟಕ, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಬೋಧನೆ, ಗ್ರಂಥ ಸಂಪಾದನೆ ಇವರಿಗೆ ಪ್ರಿಯವಾದುದು. ೧೯೩೨ ರಲ್ಲಿ ಪ್ರಕಟವಾದ ’ಒಲುಮೆ’ ಹೊಸಗನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ. ’ನಂಬಿಯಣ್ಣನ ರಗಳೆ’ ಮತ್ತು ’ರನ್ನನ ಗಧಾಯುದ್ಧ ಸಂಗ್ರಹ’ - ಇವರು ಸಂಪಾದಿಸಿರುವ ಮಹತ್ವದ ಗ್ರಂಥಗಳು. ’ಭಾರತೀಯ ಕಾವ್ಯ ಮೀಮಾಂಸೆ’ ತೀ ನಂ ಶ್ರೀ ಯವರ ದೀರ್ಘಕಾಲದ ಅಧ್ಯಯನ,ಪರಿಶ್ರಮಗಳ ಫಲ.ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆಂದು ಬರೆದ ’ಕನ್ನಡ ಮಧ್ಯಮ ವ್ಯಾಕರಣ’ ಸರಳವಾದ ಗ್ರಂಥ. ಸಂಸ್ಕೃತ ಮೂಲಗಳನ್ನು ಆಧರಿಸಿ ಬರೆದ ಮುಕ್ತಕಗಳಲ್ಲಿ ತೀ ನಂ ಶ್ರೀ ಯವರ ಕಾವ್ಯಶಕ್ತಿಯ ವಿಶೇಷ ಗುಣವಿದೆ. ’ವಿಶಾಖದತ್ತ’ನ ’ಮುದ್ರಾರಾಕ್ಷಸ’ದ ಕನ್ನಡ ಅನುವಾದ ’ರಾಕ್ಷಸನ ಮುದ್ರಿಕೆ’ ನಾಟಕ ಅವರ ಅಪೂರ್ವ ಸಾಹಿತ್ಯ ಕೃತಿ. ’ನಂಟರು’ ಪ್ರಭಂದ ಸಂಕಲನದಲ್ಲಿ ತೀ ನಂ ಶ್ರೀಯವರ ಆಳವಾದ ಪಾಂಡಿತ್ಯ ಲೋಕಾನುಭವದ ಪರಿಚಯವಾಗುತ್ತದೆ. ’ಸಮಾಲೋಕನ’ ತೀ ನಂ ಶ್ರೀ ಯವರ ಅಸಾಧಾರಣ ವಿದ್ವತ್ತಿಗೆ ಸಾಕ್ಷಿಯಾಗಿದೆ.
(ತೀ ನಂ ಶ್ರೀ ಯವರ ಕೃತಿಗಳನ್ನು ಪರಿಚಯಿಸುವ ಈ ಮೇಲಿನ ಪಂಕ್ತಿಯನ್ನು ’ತೀ ನಂ ಶ್ರೀ ಯವರ ಸಮಗ್ರ ಕವಿತೆಗಳು’ ಪುಸ್ತಕದ ’ಪ್ರಕಾಶಕರ ಮಾತು’ - ನಾಗರತ್ನರಾವ್ ರವರ ಬರಹದಿಂದ ಆಯ್ದು ಪ್ರಕಟಿಸಲಾಗಿದೆ)

ಕೊನೆಗೆ ತೀ ನಂ ಶ್ರೀ ಯವರ ಒಂದು ಕವನ,

ಸುಳಿಸು ಕಣ್ಣಿನಲೊಮ್ಮೆ

ಸುಳಿಸು ಕಣ್ಣಿನಲೊಮ್ಮೆ
ನಗೆಮಿಂಚ ನಲ್ಲೆ!
ಒಲುಮೆ ಒಳಗಿರಲೇನು;
ತುಳಕದಿರೆ ನೋಟದಲಿ
ಬಗೆ ನೆಚ್ಚದಲ್ಲೆ!

ಮೊಗದ ಬಿಂಕದ ಮುಸುಕ -
ನೆರೆ ನಿಮಿಷ ಸರಿಸು;
ಬಿಗಿದ ತುಟಿಯನು ಬಿಚ್ಚಿ
ಕಿರುನಗೆಯ ಹರಿಸು;

ಕೆನ್ನೆ ನಸುಗೆಂಪೇರಿ
ಕಣ್ಣಿನಾಳದೊಳೊಮ್ಮೆ
ಒಲವಿಕ್ಕಿ ಬರಲಿ;
ನನ್ನ ದುಗುಡದ ಮನಕೆ
ನಲವನದು ತರಲಿ!

ಈ ಕವನ ಎಷ್ಟು ಸರಳವಾಗಿದ್ದು, ಮನಸ್ಸಿಗೆ ಮುದ ಕೊಡುವಂತಾಗಿದೆ ಅಲ್ಲವೆ?

(ಡಾ ಜಿ ಎಸ್ ಶಿವರುದ್ರಪ್ಪನವರು "ತೀ ನಂ ಶ್ರೀ ಯವರ ಸಮಗ್ರ ಗದ್ಯ" ಪುಸ್ತಕಕ್ಕೆ ಬರೆದಿರುವ ಮುನ್ನುಡಿಯ ಮಾತುಗಳಿಂದ : ತೀ ನಂ ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪ್ರವೇಶಿಸಿದ್ದೇ ಒಬ್ಬ ಕವಿಯಾಗಿ, ೧೯೩೨ ರಲ್ಲಿ ಅವರು ಪ್ರಕಟಿಸಿದ ’ಒಲುಮೆ’ ಎಂಬ ಕವನ ಸಂಗ್ರಹದ ಮೂಲಕ. ಹೊಸಗನ್ನಡದಲ್ಲಿ ಪ್ರೇಮವನ್ನು ಒಂದು ಘನವಾದ ಹಾಗೂ ಜನಪ್ರಿಯವಾದ ರೀತಿಯಲ್ಲಿ ವರ್ಣಿಸಿ ವಿಖ್ಯಾತರಾದ ಕನ್ನಡದ ಒಲವಿನ ಕವಿ ಕೆ ಎಸ್ ನರಸಿಂಹಸ್ವಾಮಿಯವರಿಗಿಂತ ಮೊದಲೆ, ಈ ವಸ್ತುವನ್ನು ಕುರಿತು ಮೊದಲು ಬರೆದವರು ತೀ ನಂ ಶ್ರೀ. ಈ ದೃಷ್ಟಿಯಿಂದ ಚಾರಿತ್ರಿಕವಾಗಿ ತೀ ನಂ ಶ್ರೀ ಅವರ ಒಲುಮೆ ಕವನ ಸಂಗ್ರಹವೆ ಹೊಸಗನ್ನಡ ಸಾಹಿತ್ಯ ಸಂದರ್ಭದ ಮೊದಲ ಪ್ರೇಮಕಾವ್ಯ ಸಂಕಲನ.)

ಕಿರು ಸೂಚನೆ : ನವೋಹಯ ಸಾಹಿತ್ಯ ಸಂದರ್ಭದ ಬಗ್ಗೆ ಡಾ ಜಿ ಎಸ್ ಶಿವರುದ್ರಪ್ಪನವರು "ತೀ ನಂ ಶ್ರೀ ಯವರ ಸಮಗ್ರ ಗದ್ಯ" ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಿಂದ: "ಹತ್ತೊಂಬತ್ತನೆಯ ಶತಮಾನದ ಕೊನೆಯ ಮೂರು ದಶಕಗಳು ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಒಂದು ದಶಕ - ಈ ನಾಲ್ಕು ದಶಕಗಳು (೧೮೭೦ - ೧೯೧೦), ಹೊಸಗನ್ನಡ ಸಾಹಿತ್ಯ ದೃಷ್ಟಿಯಿಂದ, ಅನೇಕ ಮಹತ್ವದ ಸಾಹಿತಿಗಳು ಹುಟ್ಟಿಕೊಂಡ ಕಾಲವಾಗಿದೆ. ಪಂಜೆ, ಪೈ, ಬಿ ಎಂ ಶ್ರೀ, ಕೈಲಾಸಂ, ಡಿ ವಿ ಜಿ, ಎ ಆರ್ ಕೃ, ಮಾಸ್ತಿ, ಬೇಂದ್ರೆ, ಕುವೆಂಪು, ವಿ ಸೀ, ಕಾರಂತ, ಶ್ರೀರಂಗ, ಪು ತಿ ನ, ಡಿ ಎಲ್ ನ, ಅ ನ ಕೃ, ಗೊರೂರು, ತೀ ನಂ ಶ್ರೀ ಮತ್ತು ಇನ್ನೂ ಹಲವಾರು ಹುಟ್ಟಿದ್ದು ಈ ದಶಕಗಳಲ್ಲಿ. ಈ ಮಹಾ ಸಾಹಿತಿಗಳ ಸಾಧನೆಯಿಂದಾಗಿ, ನವೋದಯ ಸಾಹಿತ್ಯ ಸಂದರ್ಭ ಎಂದು ಹೆಸರಿಸುವ ಕಾಲಮಾನವು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಏಕಕಾಲಕ್ಕೆ ಅತ್ಯಂತ ಎತ್ತರದ ಬಹಿಸಂಖ್ಯೆಯ ಸಾಹಿತಿಗಳು ಸಂಭವಿಸಿದ ಹಾಗೂ ಕನ್ನಡ ಸಾಹಿತ್ಯಕ್ಕೆ ಅತ್ಯಂತ ವೈವಿಧ್ಯ, ವಿಸ್ತಾರ ಮತ್ತು ಚಲನಶೀಲತೆಗಳನ್ನು ತಂದ ಕಾಲವಾಗಿದೆ."

ಅಷ್ಟೇನು ಸ್ವಂತ ಬರಹವಲ್ಲದ, ಈ ಸಂಗ್ರಹ ಲೇಖನದ ಬಗ್ಗೆ ಮತ್ತು ತೀ ನಂ ಶ್ರೀ ಯವರ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಕೆಳಗೆ ಪ್ರತಿಕ್ರಿಯಿಸಿ.

ಮಂಗಳವಾರ, ನವೆಂಬರ್ 18, 2008

ನಿನ್ನೆಯ ಪ್ರಮುಖ ಸುದ್ದಿಗೆ ಕನ್ನಡ ದಿನಪತ್ರಿಕೆಗಳು ಸ್ಪಂದಿಸಿದ ಪರಿ...





ಕನ್ನಡದ ಪ್ರಮುಖ ೩ ಪತ್ರಿಕೆಗಳು ಎನ್ನಬಹುದಾದ ಮೇಲಿನ ಪತ್ರಿಕೆಗಳ, ಮೊದಲ ಪುಟದ, ಪ್ರಮುಖ ಸುದ್ದಿಯನ್ನು ( ಮೊದಲನೆ ಪುಟದಲ್ಲಿ ,ಮೇಲ್ಭಾಗದಲ್ಲಿ ಬರುವ ಸುದ್ದಿ ಯಾವಾಗಲೂ ಪ್ರಮುಖ/ವಿಶೇಷ ವಾಗಿರುತ್ತದೆ ಎಂದರೆ ತಪ್ಪಾಗಲಾರದು)ಒಮ್ಮೆ ವಿಶ್ಲೇಷಿಸಿ. ಪತ್ರಿಕೆಗಳು ಜನರಿಗೆ ಸುದ್ದಿ ತಲುಪಿಸುವದರ ಜೊತೆಗೆ, ಜನರ ನೋವು ನಲಿವಿಗೆ ಸ್ಪಂದಿಸಬೇಕಲ್ಲವೆ? ಜನರ ನೋವಿಗೆ ಸ್ಪಂದಿಸುವ ಸುದ್ದಿ ಪತ್ರಿಕೆಯ ಮುಖ್ಯ ಭೂಮಿಕೆಯಲ್ಲಿ ಪ್ರಕಟವಾಗಬೇಕು ಎಂದೆನಿಸುದಿಲ್ಲವೆ ನಿಮಗೆ? ನೆನ್ನೆ ನಡೆದ ಜೆ. ಡಿ . ಎಸ್ ಸಮಾವೇಶದಿಂದ ನಗರದ ಬಹುತೇಕ ಮಂದಿ ತೊಂದರೆ/ಯಾತನೆಗಳನ್ನು ಅನುಭವಿಸಿದ್ದಾರೆ. ಶಿಶುವಿಹಾರ/ಪ್ರಾಥಮಿಕಾ ಶಾಲ ಮಕ್ಕಳು, ಜೆ ಡಿ ಎಸ್ ಸೃಷ್ಟಿಸಿದ ವಾಹನ ದಟ್ಟಣೆಯಿಂದ ಶಾಲ ವಾಹನಗಳಲ್ಲಿ ೩-೭ ಗಂಟೆಗಳ ಕಾಲ ಹಿಂಸೆ ಅನುಭವಿಸಿದ್ದಾರೆ. ಕೆಲವು ಮಕ್ಕಳಂತೂ ವಾಹನದಲ್ಲಿ ಅಳುತ್ತಾ ಕೂತಿದ್ದರು ಎಂಬ ವರದಿಗಳಿವೆ! ಪಾಲಕರ, ಪೋಷಕರ ಆತಂಕ ಒಮ್ಮೆ ನೆನೆಸಿಕೊಳ್ಳಿ. ಇವುಗಳನ್ನು ಖಂಡಿಸುವ ಸುದ್ದಿ ಪತ್ರಿಕೆಯ ಮುಖ್ಯಾಂಶವಾಗಬೇಕಲ್ಲವೆ??

ವಿಜಯ ಕರ್ನಾಟಕ ಪತ್ರಿಕೆ ನೋಡಿ, " ಜೆ ಡಿ ಎಸ್ ರಣಕಹಳೆ" ಎಂಬುದು ಇವರ ಮುಖ್ಯ ಸುದ್ದಿ! ಈ ಸಮಾವೇಶದಿಂದ ಆದ ತೊಂದರೆ ಎರಡನೇ ಪುಟಕ್ಕೆ ತಳ್ಳಲ್ಪಟ್ಟಿದೆ!! ಸ್ವಲ್ಪ ದಿನದ ಹಿಂದೆ ಭೀಮ್ ಸೇನ್ ಜೋಶಿ ಯವರಿಗೆ ಭಾರತ ರತ್ನ ಲಭಿಸಿದ ಸಂದರ್ಭದಲ್ಲಿ, ಕನ್ನಡಿಗರ ನಲಿವಿಗೆ ಸ್ಪಂದಿಸಿ ಮುಖ್ಯ ಭೂಮಿಕೆಯಲ್ಲಿ ಪ್ರಕಟಿಸಿ, ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದ ಈ ಪತ್ರಿಕೆಯ ಸಂಪಾದಕರಿಗೆ ನೆನ್ನೆ ಮಂಕು ಬಡಿದಿತ್ತೆ? ಇದೇ ಮೊದಲಲ್ಲ, ದೇವೇಗೌಡರ ಸಂದರ್ಶನ ಮುಖ ಪುಟದ ಸುದ್ದಿಯೇ? ಸಂಪಾದಕೀಯದಲ್ಲಿ ಪ್ರಕಟಗೊಳ್ಳಬೇಕಾದ ಮತಾಂತರ ಕುರಿತ ಭೈರಪ್ಪನವರ ಲೇಖನ ಮೊದಲ ಪುಟದ ಮೇಲ್ಭಾಗದಲ್ಲಿ ಪ್ರಕಟವಾಗಬೇಕೆ? ಇವೆರಡೂ ಪ್ರಮುಖ ಸುದ್ದಿಗಳಾದರೂ ಮುಖ ಪುಟದಲ್ಲಿ ಪ್ರಕಟವಾಗಬೇಕಾಗಿರುವವಲ್ಲ ಎಂದೆನಿಸುವುದಿಲ್ಲವೆ?

ಮೇಲಿನ ಪತ್ರಿಕೆಗಿಂತ ಅನುಭವೀ ಪತ್ರಿಕೆ ಪ್ರಜಾವಾಣಿಯ ಮುಖ್ಯ ಸುದ್ದಿ ಪ್ರಬುದ್ದವಾಗಿದೆ . ಈ ಪತ್ರಿಕೆಯ ಮುಖ್ಯಾಂಶ ಗಮನಿಸಿ. "ಸಮಾವೇಶದ ಅಬ್ಬರ, ನಗರ ಜೀವನ ತತ್ತರ", "ಟ್ರಾಫಿಕ್ ಜಾಮ್ ನಿಂದ ನರಕವಾದ ನಗರ", "ಶಾಲ ಮಕ್ಕಳಿಗೆ ರಸ್ತೆ ಬಂಧನ", "ರಾಜಕೀಯ ನಾಯಕರಿಗೆ ಜನರ ಹಿಡಿ ಶಾಪ" . ಇಬ್ಬರು ಜನ ಸಾಮಾನ್ಯರ ಹೇಳಿಕೆಗಳನ್ನೂ, "ಜನರ ಆಕ್ರೋಶ" ಎಂಬ ಶೀರ್ಷಿಕೆಯಡಿ, ಮುಖ್ಯಸುದ್ದಿಯಲ್ಲಿ ಪ್ರಕಟಿಸಿದ್ದಾರೆ. ಜನ ಸಾಮಾನ್ಯರ ಮಿಡಿತಕ್ಕೆ ಸ್ಪಂದಿಸಿರುವ ಪ್ರಜಾವಾಣಿ ಅಭಿನಂದನಾರ್ಹವಲ್ಲವೇ?

ಕನ್ನಡ ಪ್ರಭ ಕೂಡ ವಿಜಯ ಕರ್ನಾಟಕಕ್ಕೆ ಹೋಲಿಸಿದರೆ ಪರವಾಗಿಲ್ಲ. ಮುಖ್ಯ ಸುದ್ದಿಗೆ "ಕುಮಾರನ ಹೊಸ ಪರ್ವ ಎಂಬ ಶೀರ್ಷಿಕೆಯಿದ್ದರೂ, ಉಪ ಶೀರ್ಷಿಕೆಯಡಿ "ಜೆ ಡಿ ಎಸ್ ಜಾಮ್ ಗೆ ನಗರ ತತ್ತರ" ಎಂಬ ಸುದ್ದಿ ಮುದ್ರಣಗೊಂಡಿದೆ.

ತನ್ನ ಸಂಪಾದಕೀಯ ಲೇಖನಗಳಿಂದ ಹೆಸರು ಗಳಿಸಿರುವ ವಿಜಯ ಕರ್ನಾಟಕ, ಸುದ್ದಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಇನ್ನೂ ಪಕ್ವವಾಗಬೇಕಿದೆ. ಇನ್ನು ಮುಂದೆ ಸ್ವಲ್ಪ ಶ್ರಮ ವಹಿಸಿ, ತನ್ನ ತಪ್ಪುಗಳನ್ನು ತಿದ್ದಿಕೊಂಡು, ಸುದ್ದಿ ಪ್ರಕಟನೆಗೆ ಗಮನ ಹರಿಸಿ ಪತ್ರಿಕೆ ಇನ್ನೂ ಬೆಳೆಯಲಿ ಎಂದು ಆಶಿಸುವೆ.

ನಿಮ್ಮ ಅಭಿಪ್ರಾಯವೇನು? ಕೆಳಗೆ ಬರೆಯಿರಿ.

ಶನಿವಾರ, ನವೆಂಬರ್ 15, 2008

ಇಬ್ಬರು ಮಹಾತ್ಮರ ಜಯಂತಿ

ಇಲ್ಲಿ ನಾನು ಕೆಲವು ಜಾತಿ ವ್ಯವಸ್ಥೆಗಳನ್ನು ಪ್ರಸ್ತಾಪಿಸಿದ್ದರೂ, ಅವುಗಳು ನಾನು ನಂಬಿದ್ದಲ್ಲ. ಈ ಲೇಖನಕ್ಕೆ ಪೂರಕವಾಗಿ ಉಲ್ಲೇಖಿಸಲೇಬೇಕಾಗಿದ್ದರಿಂದ ದು:ಖದಿಂದ ಪ್ರಸ್ತಾಪಿಸಲಾಗಿದೆ. ಶೂದ್ರರು, ಬ್ರಾಹ್ಮಣರು, ದಲಿತರು, ಮೇಲ್ವರ್ಗದವರು, ಕೆಳವರ್ಗದವರು ಎಂದು ಕರೆಯಲ್ಪಟ್ಟವರು ಎಂದಿದ್ದೇನೆಯೆ ಹೊರತು, ಈ ವಿಂಗಡನೆಯನ್ನು ನಾನು ನಂಬಿದ್ದಲ್ಲ. ಒಂದೆ ಜಾತಿ ಒಂದೆ ಕುಲ ನಾವು ಮನುಜರು ಎಂಬ ಕವಿವಾಣಿಯನ್ನು ಬೆಂಬಲಿಸುವವನು. ಆಚರಣೆ, ನಂಬಿಕೆ ಇತ್ಯಾದಿಗಳು ಒಬ್ಬೊಬ್ಬರಿಗೂ ವಿಭಿನ್ನವಾದುದರಿಂದ ಜಾತಿ, ಧರ್ಮಗಳಿರಲಿ ಆದರೆ ಎಲ್ಲರೂ ಸಮಾನರು ಎಂಬುದಾದರೆ ಅದಕ್ಕೂ
ನನ್ನ ಸಹಮತವಿದೆ.

ಕೆಲವೇ ದಿನಗಳ ಹಿಂದೆ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಹಿಂದೂ ಧರ್ಮದ ಅಸ್ಪೃಶ್ಯತೆ ಹೋಗಲಾಡಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರು. ನಾವು ಮತ್ತು ನಮ್ಮ ಮಠದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದು ಬಹಿರಂಗವಾಗಿ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟರು. ದಲಿತರು/ಶೂದ್ರರು ಎಂದು ಕರೆಯಲ್ಪಟ್ಟವರು(ಕರೆದುಕೊಳ್ಳುವವರು) ಬೌದ್ಧ ಧರ್ಮ ಸೇರುವುದಕ್ಕಿಂತ, ಹಿಂದೂ ಧರ್ಮದ ಮೌಢ್ಯ, ಅಸ್ಪೃಶ್ಯತೆಗಳನ್ನು ಹೋಗಲಾಡಿಸಲು ಅವಿರತವಾಗಿ ದುಡಿದ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜ ಸೇರುವುದು ಬಹಳಷ್ಟು ಸೂಕ್ತ ಎಂಬ ಸಲಹೆ ಕೂಡ ಕೊಟ್ಟರು. ಇದನ್ನು ಕೆಲವರಿಗೆ ಸಹಿಸಲಾಗಲಿಲ್ಲ. ನಾವು ಕೆಳವರ್ಗದವರು ಎಂದು ತಾವೇ ಕರೆದುಕೊಳ್ಳುವವರು ಬಹಳಷ್ಟು ಮಂದಿ ನಮ್ಮಲ್ಲಿದ್ದಾರೆ. ಅವರ ಕೆಲಸ ಬ್ರಾಹ್ಮಣರು ಅಥವಾ ಮೇಲ್ವರ್ಗದವರು ಎಂದು ಕರೆಯಲ್ಪಟ್ಟವರು ಶೂದ್ರ ಎಂದು ಕರೆಯಲ್ಪಟ್ಟವರನ್ನು ಅನಾದಿಕಾಲದಿಂದ ಶೋಷಿಸಿದ್ದಾರೆ,(ಶೂದ್ರ ಎಂದು ಕರೆಯಲ್ಪಟ್ಟವರು, ದಲಿತರು ಎಂದು ಕರೆಯಲ್ಪಟ್ಟವರನ್ನು ಶೋಷಿಸಿದ್ದಾರೆ ಎಂಬುದೂ ಇದೆ) ಮತ್ತು ಈಗಲೂ ಶೋಷಿಸುತ್ತಿದ್ದಾರೆ ಎಂದು ಧರಣಿ ಸತ್ಯಾಗ್ರಹಗಳನ್ನು ಮಾಡುವುದು, ಸಂಘಗಳನ್ನು ಕಟ್ಟುವುದು, ಸತ್ವವಿಲ್ಲದ ವಿಚಾರ ಘೋಷ್ಠಿಗಳನ್ನು ಮಾಡುವುದು (ಇವುಗಳಲ್ಲಿ ತಮ್ಮನ್ನು ಬುದ್ಧಿಜೀವಿಗಳೆಂದು ಕರೆದುಕೊಂದು, ಮೇಲ್ವರ್ಗವೆಂದು ಕರೆಯಲ್ಪಟ್ಟ ವರನ್ನು ವಾಮಾಗೋಚರ ಬೈಯ್ಯುವುದು). ಒಟ್ಟಿನಲ್ಲಿ ತಮ್ಮನ್ನೇ ವಿಚಾರವಾದಿಗಳು, ಚಿಂತಕರು, ಬುದ್ಧಿಜೀವಿಗಳು ಎಂಬಿತ್ಯಾದಿಯಾಗಿ ಕರೆದುಕೊಂಡು ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿರುವುದೇ ಇವರ ಕೆಲಸ. ಎಲ್ಲಿ ಇನ್ನಿತರ ಸ್ವಾಮಿಗಳು ಹಿಂದೂ ಧರ್ಮದ ಏಳಿಗೆಗೆ, ಅಸ್ಪೃಶ್ಯತಾ ನಿವಾರಣೆಗೆ ಬದ್ಧರಾಗಿ ಒಂದಾಗಿ ಹೀಗೆ ಬಹಿರಂಗ ಹೇಳಿಕೆ ಕೊಟ್ಟರೆ ತಮ್ಮ ಮಾರುಕಟ್ಟೆ ಬೆಲೆ ಕಡಿಮೆಯಾಗುವುದೇನೋ ಎಂದು ದಿಗಿಲಾಗಿರಬೇಕು, ಶೂದ್ರರು, ಕೆಳವರ್ಗದವರು ಎಂದು ಕರೆದುಕೊಳ್ಳುವವರಿಗೆ. ಪೇಜಾವರ ಸ್ವಾಮಿಗಳ ಪ್ರಕೃತಿ ದಹನ ಮುಂತಾದ ಧರಣಿಗಳು ನಡೆದವು .

ಕೆಳವರ್ಗದವರು ಎಂದು ಕರೆದುಕೊಳ್ಳುವವರು ಮಾತ್ರ ಇರುವುದೇ? ತಾವು ಮೇಲ್ವರ್ಗದವರು ಎಂದು ಕರೆದುಕೊಳ್ಳುವವರೂ ಇದ್ದಾರೆ. ಇಂದು ಈ ಕೆಳವರ್ಗದವರು ಎಂದು ಕರೆದುಕೊಂಡು ಅನಾವಶ್ಯಕವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡುವುದಕ್ಕೆ ಇವರ ಪಾತ್ರವೂ ಇದೆ. ದೇವಸ್ಥಾನಗಳನ್ನು ಕಟ್ಟುವುದು, ದೇವರಿಗೇ ಜಾತಿ ಕಟ್ಟುವುದು, ಕೆಲವು ಜಾತಿಯವರನ್ನು ದೇವಸ್ಥಾನದ ಒಳಗೆ ಬಿಡದೆ ಇರುವುದು, ಒಂದೊಂದು ವರ್ಗದವರಿಗೆ ಒಂದೊಂದು ಊಟದ ಪದ್ಧತಿ ಮಾಡುವುದು ಈ ರೀತಿಯ ಶೋಷಣೆಗಳು ಇಂದಿಗೂ ಇರುವುದು ಬಹಳ ದು:ಖಕರ ಸಮಾಚಾರ.

ಯಾಕೋ ವಿಚಾರ ಲಹರಿ ನಿಲ್ಲುತ್ತಲೇ ಇಲ್ಲ. ಇನ್ನೊಂದು ಬ್ಳಾಗಿನಲ್ಲಿ ವಿಚಾರ ಮುಂದುವರೆಸುತ್ತೇನೆ. ಇವೊತ್ತು ನೆನೆಸಿಕೊಳ್ಳಬೇಕೆಂದುಕೊಂಡಿದ್ದು, "ಕನಕ ದಾಸರನ್ನು". "ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ " (ಈ ಕೃತಿಯ ಸಾಹಿತ್ಯ ಇಲ್ಲಿ ಓದಿ : http://www.kannadalyrics.com/?q=node/2358, ಭಕ್ತ ಕನಕದಾಸ ಚಿತ್ರದಲ್ಲಿ ಅಳವಡಿಸಿಕೊಂಡಿರುವ ಈ ಗೀತೆಯನ್ನು ಇಲ್ಲಿ ಕೇಳಿ:http://in.youtube.com/watch?v=s-ywVM3veDk)ಎಂದು ಮುಖಕ್ಕೆ ಉಗಿದಂತೆ ಹೇಳಿದ್ದರೂ, ಕನಕ ದಾಸರಿಗೇ ಜಾತಿ/ಮತಗಳನ್ನು ಕಟ್ಟಿ ಕಿತ್ತಾಡುವ ಮಹಾನುಭಾವರಿದ್ದಾರೆ! ಹೌದು ಇಂದು ’ಕನಕ ಜಯಂತಿ’.

ಇನ್ನು ಈ ಹೊಲಸು ಜಾತಿ, ಅಸ್ಪೃಶ್ಯತೆಗಳನ್ನು ಇಲ್ಲಿಗೆ ನಿಲ್ಲಿಸಿ ಕನಕ ದಾಸರ ಬಗ್ಗೆ ಅವಲೋಕಿಸೋಣ.
ವ್ಯಾಸರಾಯರ ಶಿಷ್ಯವರ್ಗದಲ್ಲಿ ಒಬ್ಬರಾದ ಕನಕದಾಸರು ಕರ್ನಾಟಕದ ಪ್ರಮುಖ ಹರಿದಾಸರುಗಳಲ್ಲಿ ಒಬ್ಬರು.(ಪುರಂದರ ದಾಸರು, ವಾದಿರಾಜರು ಕೂಡ ವ್ಯಾಸರಾಯರ ಶಿಷ್ಯರು). ಕನಕದಾಸರು, ’ನೆಲೆಯಾದಿಕೇಶವ’, ಕಾಗಿನೆಲೆಯಾದಿಕೇಶವ’ ’ಬಡದಾದಿಕೇಶವ’ ಮೊದಲಾದ ಅಂಕಿತದಿಂದ ಅಪಾರ ಭಕ್ತಿ ಕೀರ್ತನೆ ಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಕನಕದಾಸರ ಕೊಡುಗೆ ಅಪಾರ. ವರಕವಿಗಳಾದ ಇವರು ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ಕನಕನ ಮುಂಡಿಗೆ’ ಎಂಬ ಗ್ರಂಥಗಳನ್ನು ರಚಿಸಿರುವುದು ಕನ್ನಡ ಭಾಷೆಗೆ ಕನಕದಾಸರ ಕೊಡುಗೆ.

ಉಡುಪಿ ಶ್ರೀಕ್ಷೇತ್ರದಲ್ಲಿ ಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿರಲು, ಗರ್ಭ ಗೃಹದ ಹಿಂಭಾಗದಲ್ಲಿ ನಿಂತು ದೇವರನ್ನು ಪರಮ ಭಕ್ತಿಯಿಂದ ಸ್ತುತಿಸಲು, ಪರಮಾತ್ಮ ಕನಕದಾಸರ ಕಡೆಗೇ ತಾನೂ ತಿರುಗಿ ಗರ್ಭಗುಡಿಯ ಹಿಂಭಾಗದ ಗೋಡೆಯ ಕಿಂಡಿಯಿಂದ ದರ್ಶನವಿತ್ತನಂತೆ. ಅಠಾಣ ರಾಗದಲ್ಲಿರುವ "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂಬ ಕನಕದಾಸರ ದೇವರ ನಾಮವನ್ನು, ಮೇಲಿನ ದೃಶ್ಯವನ್ನು ಭಕ್ತ ಕನಕದಾಸ ಚಲನಚಿತ್ರದಲ್ಲಿ ತೋರಿಸುವಾಗ ಬಳಸಿಕೊಂಡಿದ್ದಾರೆ.(ಇಲ್ಲಿ ಕೇಳಿ:http://in.youtube.com/watch?v=CrK0-EhhCUc&feature=related, ಇಲ್ಲಿ ಸಾಹಿತ್ಯ ಲಭ್ಯವಿದೆ: http://haridasa.in)

ಕನಕ ದಾಸ ರಚನೆಗಳು ಬಹಳ ಸರಳವಾಗಿದ್ದು ಭಕ್ತಿ ರಸವನ್ನೇ ಹರಿಸುವಂತವಾಗಿವೆ. ಉದಾಹರಣೆಗೆ ದರ್ಬಾರಿ ರಾಗದಲ್ಲಿರುವ "ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ" ಕೇಳಿದರೆ ಭಕ್ತಿಯ ಜೊತೆಗೆ ಮನಸ್ಸೂ ಕೂಡ ನಲಿಯುವುದು . (ವಿದ್ಯಾಭೂಷಣ ರವರು ಹಾಡಿರುವ ಈ ಕೀರ್ತನೆಯನ್ನು ಇಲ್ಲಿ ಕೇಳಿ:http://in.youtube.com/watch?v=1pPd_CWaQm4 ). ಇನ್ನು ಹಲವಾರು ಕರ್ನಾಟಕ ಸಂಗೀತ ಸಭೆಗಳಲ್ಲಿ (ಅದರಲ್ಲೂ ಮಾಂಡೋಲಿನ್ ವಾದಕ ಯು. ಶ್ರೀನಿವಾಸರ ವಾದನಗಳಲ್ಲಿ) "ಬಾರೋ ಕೃಷ್ಣಯ್ಯಾ" ದ ಪ್ರಸ್ತುತಿ ಸಭಿಕರ ಮೆಚ್ಚುಗೆಗೆ ಪಾತ್ರವಾಗಿ ಹೆಚ್ಚಿನ ಚಪ್ಪಾಳೆಗಳನ್ನು ಗಳಿಸುತ್ತದೆ.(ಇಲ್ಲಿ ಕೇಳಿ: http://in.youtube.com/watch?v=pksRRuwgOms,) ಇದು ಕೂಡ ಕನಕ ದಾಸರ ರಚನೆಯೆ.

ಒಂದು ದೊಡ್ದ ಕೊರಗೆಂದರೆ ಇಷ್ಟೋಂದು ಅಚ್ಚ ಕನ್ನಡದ ಕನಕ ದಾಸರ ದೇವರನಾಮಗಳು ಕರ್ನಾಟಕ ಸಂಗೀತ ಸಭೆಗಳಲ್ಲಿ ಹೆಚ್ಚು ಬಳಕೆಯಾಗದೆ ಇರುವುದು. ನಮ್ಮಲ್ಲಿ ಬಹಳಷ್ಟು ಕರ್ನಾಟಕ ಸಂಗೀತ ವಿದ್ವಾಂಸರಿದ್ದಾರೆ. ಬಹಳಷ್ಟು ಸಂಗೀತ ಸಭೆಗಳು ನಡೆಯುತ್ತವೆ. ಇನ್ನು ಮುಂದೆಯಾದರೂ ನಮ್ಮ ಹರಿದಾಸರ ಕೃತಿಗಳನ್ನು ಜನಪ್ರಿಯಗೊಳಿಸಲು ವಿದ್ವಾಂಸರುಗಳು , ಕಾರ್ಯಕ್ರಮ ಪ್ರಾಯೋಜಕರು ಉತ್ತೇಜನ ಕೊಡಬೇಕಾಗಿದೆ.(ಇದು ಕನ್ನಡ ರಾಜ್ಯೋತ್ಸವ ಮಾಸ)

ನಮ್ಮ ಸಮಾಜೋದ್ಧಾರಕ್ಕೆ ಕನಕದಾಸರು ಅನೇಕ ಕೃತಿಗಳನ್ನು ರಚಿಸಿದ್ದಾರೆ. "ಕುಲ ಕುಲವೆಂದು ಹೊಡೆದಾಡದಿರಿ" ಜನಪ್ರಿಯವಾಗಿದೆ. ಹಾಡುವುದು, ಕೇಳುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆ. ಕನಕದಾಸರ ಇನ್ನೊಂದು ರಚನೆ ಇಲ್ಲಿ ನೋಡೋಣ. ರಾಗ ಮಧ್ಯಮಾವತಿಯಲ್ಲಿ,

ಪಲ್ಲವಿ: ಕುಲಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ!!
ಚರಣ: ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ (ಬಿಸಜನಾಭ : ತಾವರೆಯನ್ನು ಹೊಕ್ಕುಳಿನಲ್ಲುಳ್ಳವ, ವಿಷ್ಣು)
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ

ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ ತೆಗೆದು ಪೂಸುವರು ಭೂಸುರರೆಲ್ಲರು
ಬಗೆಯಿಂದ ನಾರಯಣನ್ಯಾವಕುಲದವ ಅಗಜಾವಲ್ಲಭನ್ಯಾತರಕುಲದವನು (ಅಗಜಾವಲ್ಲಭ : ಪಾರ್ವತಿಯ ಪತಿ, ಈಶ್ವರ)

ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವ ಆತನೊಲಿದಮೇಲೆ ಯಾತರ ಕುಲವಯ್ಯ

(ಕನಕದಾಸರ, ರಚನೆಗಳ ಬಗ್ಗೆ ಮಾಹಿತಿಗೆ, ಗ್ರಂಥ ಋಣ : "ಹರಿದಾಸ ಕೀರ್ತನ ಸುಧಾಸಾಗರ-ಪ್ರಥಮ ತರಂಗ" - ಗಾನಕಲಾಸಿಂಧು ಎನ್ ಚೆನ್ನಕೇಶವಯ್ಯ)
__________________________________________________________________________________
ಕೆಲವು ವಿಶಿಷ್ಟ ವ್ಯಕ್ತಿಗಳಿರುತ್ತಾರೆ. ಇವರ ಬಗ್ಗೆ ಹೆಚ್ಚೇನೂ ತಿಳಿಯದೆ ಇದ್ದರೂ ತಮ್ಮ ಯಾವುದೋ ಒಂದೇ ಒಂದು ವಿಶಿಷ್ಟ ಕೆಲಸದಿಂದ ಸಾರ್ವಜನಿಕರ ಮನೆಮಾತಾಗಿಬಿಟ್ಟಿರುತ್ತಾರೆ. ಅಥವ ಅವರ ಆ ವಿಶಿಷ್ಟ ಕೆಲಸ ಮನೆ ಮಾತಾಗಿರುತ್ತದೆ ಎಂದರೆ ಇನ್ನೂ ಬಹಳ ಸೂಕ್ತವೆನಿಸುತ್ತದೆ. ಕಣಗಲ್ ಪ್ರಭಾಕರ ಶಾಸ್ತ್ರಿಯವರು ಬಹಳ ಅತ್ಯುತ್ತಮ ಚಿತ್ರ ಗೀತೆಗಳನ್ನು ರಚನೆಗ ಮಾಡಿದ್ದಾರೆ. ಸಾಕ್ಷಾತ್ಕಾರ ಚಲನ ಚಿತ್ರದ "ಒಲವೆ ಜೀವನ ಸಾಕ್ಷಾತ್ಕಾರ" ಹಾಡು ಕೇಳಿದರೆ ಶಾಸ್ತ್ರಿಯವರು ತಟ್ಟನೆ ನೆನಪಾಗುತ್ತಾರೆ. ಅತ್ಯುತ್ತಮ ಸಾಹಿತ್ಯದಿಂದ ಕೂಡಿದ ಆ ರಚನೆಯಿಂದ ಶಾಸ್ತ್ರಿಯವರು ಮನೆಮಾತಾಗಿಬಿಟ್ಟಿದ್ದಾರೆ. ಹೀಗೆ ಯಾವುದೇ ಕನ್ನಡ ಉತ್ಸವ, ಸಮಾರಂಭಗಳು ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವಗೀತೆಯಿಂದ. ಇದು ೧೯೬೦ ರಲ್ಲಿ ೫೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪ್ರಾರ್ಥನಾ ಗೀತೆಯಾಗಿ ಹಾಡಲ್ಪಟ್ಟಿತು, ಆನಂತರ ಇಂದಿನ ದಿನಗಳಲ್ಲಿ ಅಧಿಕೃತ ಉದ್ಘಾಟನಾ/ಪ್ರಾರ್ಥನಾ ಗೀತೆಯಾಗಿಬಿಟ್ಟಿದೆ.(ಇಲ್ಲಿ ಕೇಳಿ: http://in.youtube.com/watch?v=ohuUHGIaKuA, ಸಾಹಿತ್ಯ ಇಲ್ಲಿ ಓದಿ: http://vishvakannada.com/?q=node/147) ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ.

ಇಂದು ಇಂತಹ ಉತ್ಕೃಷ್ಟ ಕವಿತೆಯನ್ನು ಕನ್ನಡ ನಾಡಿಗೆ ಕೊಟ್ಟ ನವೋದಯ ಪರಂಪರೆಯ ಹಿರಿಯ ಕವಿ ಡಾ ಡಿ ಎಸ್ ಕರ್ಕಿಯವರ ಜನ್ಮ ದಿನ. ೧೯೦೭ ರಲ್ಲಿ ಬೆಳಗಾವಿಯ ಬಾಗೋಜಿ ಕೊಪ್ಪದಲ್ಲಿ ಜನನ. ತಂದೆ ಕೃಶಿಕ ಸಿದ್ಧಪ್ಪ ಕರ್ಕಿ, ತಾಯಿ ದುಂಡವ್ವ. ಚಿಕ್ಕಂದಿನಲ್ಲೆ ತಂದೆ, ತಾಯಿಯ ಮರಣ. ಸೋದರ ಮಾವ ಈಶ್ವರಪ್ಪ ಕಣಗಲಿ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ. ಬಾಗೋಜಿ ಕೊಪ್ಪದಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಢದಲ್ಲಿ ಬಿ ಎ ಪದವಿ. ಮುಂಬೈ ಮಹಾವಿದ್ಯಾಲಯದಿಂದ ಕನ್ನಡ ಎಂ ಎ. ಕಾರಾವಾರದ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿ ಆರಂಭ. ನಂತರ ಕೆ ಎಲ್ ಇ - ಬೆಳಗಾವಿ, ಕಾಲೇಜಿನಲ್ಲಿ ಸೇವೆ. ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಕರ್ಣಾಟಕ ವಿಶ್ವವಿದ್ಯಾಲಯ ಧಾರವಾಢದಲ್ಲಿ ಉಪನ್ಯಾಸಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಕರ್ಕಿಯವರು ಅಪಾರ ಕವಿತೆಗಳನ್ನು ರಚಿಸಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು. ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಕರಿಕೆ ಕಣಗಿಲು ಕವನ ಸಂಕಲನವನ್ನು ತಮ್ಮ ಪೋಷಕರಾದ ಸೋದರಮಾವ ಈಶ್ವರಪ್ಪ ಕಣಗಲಿ ಅವರಿಗೆ ಅರ್ಪಿಸಿದ್ದಾರೆ. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ( ಕಾರಾವರದಲ್ಲಿ, ಗೋಕರ್ಣ ತೀರ, ಕೂಡಲ ಸಂಗಮ, ಜೋಗದ ಯೋಗ ಇತ್ಯಾದಿ). ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಬಹಳ ಸೂಕ್ತವಾಗಿವೆ. ಈ ಸರಳ ರಚನೆ ಬಣ್ಣದ ಚೆಂಡು ಹಾಡಿದರೆ ನಾವೂ ಕೂಡ ಬಾಲ್ಯದ ನೆನಪಿಗೆ ಜಾರುತ್ತೇವೆ. (ನೆನ್ನೆ ಮಕ್ಕಳ ದಿನಾಚಾರಣೆ, ಇದು ಕನ್ನಡ ರಾಜ್ಯೋತ್ಸವ ಮಾಸ, ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಈ ಸರಳ ಕನ್ನಡ ಪದ್ಯ ಹೇಳಿಕೊಡಿ). ಈ ಕವನ ಸಂಕಲನಗಳಲ್ಲಿರುವ ಎಲ್ಲಾ ಪದ್ಯಗಳೂ ಹಾಡಿಕೊಳ್ಳಲೂ ಮತ್ತು ಮಕ್ಕಳಿಗೆ ಕಳಿಸಿಕೊಳ್ಳಲು ಬಹಳ ಸುಲಭವಾಗಿವೆ. ಕೆಲವಂತೂ (ಬೆಲ್ಲ ತಿನ್ನುವ ಮಲ್ಲ ಇತ್ಯಾದಿ) ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ.

ಬಣ್ಣದ ಚೆಂಡು,
ಆಹಹಾ ರಬ್ಬರ ಚೆಂಡು!
ಗಾಳಿಯನುಂಡು
ಪುಟಿಯುವ ಚೆಂಡು
ಕಾಣಿಸುವುದು ಬಲು ದುಂಡು
ಆಹಹಾ ರಬ್ಬರ ಚೆಂಡು

ಆಹಹಾ ಬಣ್ಣದ ಚೆಂಡು!
ಪುಟಿಯಲು ಕಂಡು
ಹುಡುಗರ ದಂಡು
ನೆರೆವುದು ಹಿಂಡು ಹಿಂಡು
ಕರೆವುದು ಬಣ್ಣದ ಚೆಂಡು

ಆಹಹಾ ಕುಣಿಯುವ ಚೆಂಡು!
ತೈ ತಕ್ಕ ಎಂದು
ಕುಣಿ ಕುಣಿ ಎಂದು
ನಮ್ಮನು ಕುಣಿಸುವ ಚೆಂಡು
ಆಹಹಾ ರಬ್ಬರ ಚೆಂಡು

ಆಟಕೆ ಎಳೆಯುವ ಚೆಂಡು!
ಅಮ್ಮನು ಕರೆದರು
ಅಪ್ಪನು ಕರೆದರು
ಹೋಗಲು ಬಿಡದೀ ಚೆಂಡು
ಆಹಹಾ ಬಣ್ಣದ ಚೆಂಡು

ಮೊದಲೇ ಗಾಳಿಯ ಚೆಂಡು!
ಕೊನೆಯಲಿ ಒಂದು
ದಿನ ಪುಸ್ಸೆಂದು
ಆಟವ ಮುಗಿಸುವ ಚೆಂಡು
ಆಹಾಹ ರಬ್ಬರ ಚೆಂಡು

ಕರ್ಕಿಯವರ "ತಿಳಿ ನೀಲಿದಲ್ಲಿ ತಾ ನೀಲವಾಗಿ ಅವನು ಹೋದ ದೂರ ದೂರ", ಮಹಾತ್ಮ ಗಾಂಧಿ ಯವರು ಮರಣ ಹೊಂದಿದಾಗ ಬರೆದ ಮತ್ತೊಂದು ಕವನ.

ಕರ್ಕಿಯವರ ಇತರ ಕೃತಿಗಳು, "ಮಕ್ಕಳ ಶಿಕ್ಷಣ", "ಕನ್ನಡ ಛಂದೋವಿಕಾಸ", "ಸಾಹಿತ್ಯ-ಸಂಸ್ಕೃತಿ-ಶೃತಿ", "ನಾಲ್ದೆಸೆಯ ನೋಟ". ಕನ್ನದ ಛಂದೋವಿಕಾಸಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಈ ಕೃತಿ ಇಂದಿಗೂ ಕನ್ನಡ ವಿಧ್ಯಾರ್ಥಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ಭಗವದ್ಗೀತೆಯಾಗಿದೆ.

ಕರ್ಕಿಯವರು, ಕನ್ನಡದ ವರಕವಿ ಬೇಂದ್ರೆ ಮತ್ತು ಮತ್ತೊಬ್ಬ ಮೇರು ಕವಿ ವಿ ಕೃ ಗೋಕಾಕರು ಒಡನಾಡಿಗಳಾಗಿದ್ದರು.

ಕರ್ಕಿಯವರು ೧೬-೦೧-೧೯೮೪ ರಲ್ಲಿ ಕಾಲವಾದರು.

(ಮಾಹಿತಿ ಕೃಪೆ: ಡಿ ಎಸ್ ಕರ್ಕಿಯವರ ಮೊಮ್ಮಗನಾದ ಸಂತೋಷ್ ಕರ್ಕಿಯವರು , ಗ್ರಂಥ ಋಣ: ಹಚ್ಚೇವು ಕನ್ನಡದ ದೀಪ : ಡಾ ಡಿ ಎಸ್ ಕರ್ಕಿಯವರ ಸಮಗ್ರ ಕಾವ್ಯ)

ಶುಕ್ರವಾರ, ಅಕ್ಟೋಬರ್ 27, 2006

ಸುವರ್ಣ ಕನ್ನಡ ರಾಜ್ಯೋತ್ಸವ

ಗೆಳೆಯರೆ,

ಸುವರ್ಣ ಕನ್ನಡ ರಾಜ್ಯೋತ್ಸವ ಸನ್ನಿಹಿತವಾಗ್ತಾ ಇರೋ ಅಂತ ಸಂದರ್ಭದಲ್ಲಿ ನಮ್ಮ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟ ನಮ್ಮ ಸಾಹಿತಿಗಳನ್ನು ನೆನೆಯಲು ಒಂದು ಸುವರ್ಣಾವಕಾಶ.

ಈ ನಿಟ್ಟಿನಲ್ಲಿ ದಿನವೂ ಒಬ್ಬ ಕವಿಯ ಬಗ್ಗೆ ನೆನೆಯೋಣ.. ಅವರ ಕೆಲವು ಕಾವ್ಯಗಳನ್ನು ಮೆಲುಕು ಹಾಕೋಣ..

ಕುವೆಂಪು : ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

ಇವರ ಅತ್ಯುತ್ತಮ ಕೃತಿಗಳು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಹೆಗ್ಗಡತಿ. ಒಂದು ಬಾರಿ ಇವುಗಳನ್ನು ಓದಿ. ನೀವು ಕುವೆಂಪೂರವರ ಅಭಿಮಾನಿಗಳಾಗುವುದರಲ್ಲಿ ಸಂಶಯವೇ ಇಲ್ಲ.ಈ ಕೃತಿಗಳು ನಿಮ್ಮನ್ನು ಎಲ್ಲಾ ಭಾವಗಳಿಗೂ ಕೊಂಡೊಯ್ಯುವುದಲ್ಲದೆ ಸಮಾಜದ ಮೌಢ್ಯಗಳನ್ನು ಎತ್ತಿ ತೋರಿಸುತ್ತವೆ.

ಇವರ ಕೃತಿಗಳ ಬಗ್ಗೆ ಹೇಳಲು ನಮ್ಮಂತ ಸಾಮಾನ್ಯರಿಂದ ಸಾಧ್ಯವಾಗದ ಮಾತು. ಆದರೂ ಅವರನ್ನು ನೆನೆಸಿಕೊಳ್ಳಲು ಈ ಎರಡು ಅತ್ಯುತ್ತಮ ಕಾವ್ಯಗಳನ್ನು ನೋಡುವ..

ಅನಿಕೇತನ

ಓ ನನ್ನ ಚೇತನ
ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ

ಓ ನನ್ನ ಚೇತನ....

ಎಲ್ಲಿಯು ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು
ಓ ಅನಂತವಾಗಿರು

ಓ ನನ್ನ ಚೆತನ....

ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

ಓ ನನ್ನ ಚೇತನ
ಆಗು ನೀ ಅನಿಕೇತನ

ನಾಡಗೀತೆ
ಜಯ ಹೇ ಕರ್ನಾಟಕ ಮಾತೆ!

ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ ,
ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ.
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರರಿಹ ದಿವ್ಯಾರಣ್ಯ.
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ!
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ;
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ.
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ.
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ.
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ!
ಕನ್ನಡ ನುಡಿ ಕುಣಿದಾಡುವ ಗೇಹ!
ಕನ್ನಡ ತಾಯಿಯ ಮಕ್ಕಳ ದೇಹ!
ಜಯ್ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ್ ಸುಂದರ ನದಿವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!