
ಏನೀಗ?? ಇಷ್ಟೋಂದ್ ಯಾಕೆ ಗೊಣಗಾಡ್ತಾ ಇದ್ದೀರ?? ಇದು ಸೋಮವಾರ "ಜಾತ್ಯಾತೀತ ಜನತಾದಳ ಸಮಾವೇಶ ಸೃಷ್ಟಿಸಿದ" ವಾಹನ ದಟ್ಟಣೆಯಿಂದ ಉಂಟಾದ ಜನಜೀವನ ಅಸ್ಥವ್ಯಸ್ಥೆಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು (ಈಗಿನ ಜೆ ಡಿ ಎಸ್ ಪಕ್ಷದ ರಾಜ್ಯಾಧ್ಯಕ್ಷ) ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಕನಿಷ್ಟ ಕ್ಷಮೆ ಕೂಡ ಕೇಳದೆ ತಮ್ಮ ಮಾತಿನ ವರಸೆ ಮುಂದುವರೆಸಿ ಬೆಂಗಳೂರಿನ ನಗರವಾಸಿಗಳಿಗೆ (sophisticated ನಗರ ವಾಸಿಗಳಂತೆ) ಗ್ರಾಮೀಣ ಜನರ ಕಷ್ಟ ಗೊತ್ತಾಗಬೇಕಂತೆ!! ಹಳ್ಳಿಗಳಲ್ಲಿ ಎಷ್ಟೋ ಮಂದಿ ದಿನಾಲು ಶಾಲೆಗ ನಾಲ್ಕೈದು ಮೈಲಿ ನಡೆದು ಹೋಗುತ್ತಾರಂತೆ!! ವಾಹನ ದಟ್ಟಣೆಯಲ್ಲಿ ೩-೭ ಗಂಟೆ ನಿಂತರೆ ಏನೀಗ? ಐ-ಟಿ/ಬಿ-ಟಿ ಮಂದಿಯೇ ಅಂತೆ, ಆದ ತೊಂದರೆಗೆ ದೂರುತ್ತಿರುವುದು!!
ಏನಾಗಿದೆ ಈ ಮನುಷ್ಯನಿಗೆ? ಇವರ ಮಗ ಐಶಾರಾಮಿ ಕಾರಿನಲ್ಲಿ ಓಡಾಡಿಕೊಂಡು, ಕುಡಿದು ಬಾರಿನಲ್ಲಿ ಗಲಾಟೆ ಮಾಡಿ, ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾನೆ. (ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಿನಲ್ಲಿ ಮೋಜು ಮಾಡುವುದು, ಕುಡಿಯುವುದು ಅವರವರ ವ್ಯಯಕ್ತಿಕ ವಿಷಯ. ಇದರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಕುಡಿದು ಗಲಾಟೆ ಮಾಡಿ, ಇತರರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಸ್ಕೃತಿಗೆ ಪೇಟೆಯದೂ ಅಲ್ಲ, ಹಳ್ಳಿಯದೂ ಅಲ್ಲ್ಲ, ಪದ್ಮನಾಭನಗರ/ಹೊಳೆನರಸೀಪುರ ಸಂಸ್ಕೃತಿ ಎನ್ನಬೇಕಷ್ಟೆ! ಪದ್ಮನಾಭನಗರ ಮತ್ತು ಹೊಳೆನರಸೀಪುರದಲ್ಲಿರುವ ಸಜ್ಜನರು ನನ್ನನ್ನು ಕ್ಷಮಿಸಬೇಕು). ಇಂತಹ ಮಕ್ಕಳನ್ನು ಬೆಳೆಸಿರುವ ಕುಮಾರನಿಗೆ ಗ್ರಾಮೀಣ ಮಕ್ಕಳ ಕಷ್ಟ ಗೊತ್ತಾಗಿಬಿಡುತ್ತದೆ! ಆ ವಾಹನ ದಟ್ಟಣೆಯಲ್ಲಿ ಎಷ್ಟೋ ಪುಟ್ಟ ಮಕ್ಕಳು (ಪಾಪ ಇವರು ಯಾರೂ ಇನ್ನೂ ಐ ಟಿ / ಬಿ ಟಿ ನೌಕರರಾಗಿಲ್ಲ) ನರಕ ಯಾತನೆ ಅನುಭವಿಸಿದರೆ, ಅದು ಕಷ್ಟ ಅಲ್ಲ. (ಮುಂದಿನ ದಿನ ಮಂಗಳವಾರ ಬಹುತೇಕ ಮಕ್ಕಳು ಭಯಭೀತರಾಗಿ ಶಾಲೆ ಹೋಗಲು ನಿರಾಕರಿಸಿದ ವರದಿಯಿದೆ!). ಕುಮಾರರು ಈ ಮುಗ್ದ ಮಕ್ಕಳಿಗೂ ಜೆ ಡಿ ಎಸ್ ವಿರೋಧಿ ಪಟ್ಟ ಕಟ್ಟಿಬಿಡುತ್ತಾರೆ. ಇವರ ವಂಶದ ನರ ನಾಡಿಗಳಲ್ಲಿ ಹರಿಯುತ್ತಿರುವುದು ಹೊಲಸು ರಾಜಕಾರಣ ತಾನೆ! ಹಳ್ಳಿ ಮಕ್ಕಳು ಕಷ್ಟ ಪಟ್ಟರೆ, ನಗರ ವಾಸಿಗಳೂ ಕಷ್ಟ ಪಡಬೇಕು ಎಂಬುದು ಯಾವ ನ್ಯಾಯವೋ? (ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೆ?).ಹಳ್ಳಿ ಮಕ್ಕಳ ಏಳಿಗೆಗೆ ದುಡಿಯಲಿ, ಅವರು ನಡೆದು ಹೋಗಬೇಕಾದ ಕಡೆ ಬಸ್ಸುಗಳ ವ್ಯವಸ್ಥೆ ಮಾಡಲಿ! ಯಾವ ಪುರುಷಾರ್ಥಕ್ಕಾಗಿ ಈ ಸಮಾವೇಶ ಮಾಡಿದ್ದೊ? (’ಪುರುಷಾರ್ಥ’ ಕುಮಾರನ ಪ್ರಿಯವಾದ ಶಬ್ದ, ಕುಮಾರನು ಈ ಶಬ್ದವನ್ನು ಮಾಧ್ಯಮಗಳಲ್ಲಿ ಲೀಲಾಜಾಲವಾಗಿ ಬಳಸುತ್ತಾರೆ!).ಇದಕ್ಕೆ ವ್ಯಯಿಸಿದ ದುಡ್ಡಿನಲ್ಲಿ ಕನಿಷ್ಟ ೨೦ ಬಸ್ಸುಗಳನ್ನು ಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಡುಗೊರೆಯಾಗಿ ಕೊಡಬಹುದಿತ್ತು!(ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಾಗಿದ್ದರೆ ಮಾತ್ರ!).
ಇನ್ನು ಐ ಟಿ/ಬಿ ಟಿ ಮಂದಿಯನ್ನು ದೂರುವುದು! ಕೆಲಸ ಮಾಡಿ ದುಡಿದು ತಿಂದಿದ್ದರೆ ಗೊತ್ತಾಗುತ್ತಿತ್ತು, ಐ ಟಿ/ಬಿ ಟಿ ಯವರ ದುಡಿಮೆ, ಹೊಲಸು ರಾಜಕಾರಣ ಮಾಡಿ ಬೇನಾಮಿ ಆಸ್ತಿ ಮಾಡಿದೊಷ್ಟು ಸುಲಭ ಅಲ್ಲಾ ಅಂತ. ಒಂದು ಎದೆ ನೋವು ಬಂದರೆ, ವಾರಾನುಗಟ್ಟಲೆ ವೊಕ್ ಹಾರ್ಟ್ ಎಂಬ ಐಶಾರಮಿ ಆಸ್ಪತ್ರೆ ಸೇರುತ್ತಾರೆ! ಗ್ರಾಮೀಣ ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯುವ ನಿಜವಾದ ಕಾಳಜಿಯಿದ್ದರೆ ಯಾವುದಾದರೂ ಗ್ರಾಮೀಣ ಆಸ್ಪತ್ರೆ ಸೇರಲಿ? ಗ್ರಾಮ ವಾಸ್ತವ್ಯ ಹೆಸರಿನಲ್ಲಿ ಕಂಡ ಕಂಡವರ ಮನೆಯಲ್ಲಿ ಚನ್ನಾಗಿ ಕೋಳಿ ಮಾಂಸ ಉಂಡು ಮಲಗುವಷ್ಟು ಸುಲಭವಲ್ಲ ಅದು ಎಂದು ಗೊತ್ತಾಗುತ್ತದೆ! ಗ್ರಾಮೀಣ ಜನರ ಬಗ್ಗೆ ನಕಲಿ ಕಾಳಜಿ ತೋರಿಸುವುದು, ಆಶಾಢಭೂತಿ (hypocrite) ಮಾತುಗಳನ್ನಾಡುವುದು, ಹೊಲಸು ರಾಜಕಾರಣ ಮಾಡುವುದು , ಇಂತಹವುಗಳನ್ನು ಕಡಿಮೆ ಮಾಡಿ, ಇನ್ನಾದರೂ ಸನ್ಮಾರ್ಗದಲ್ಲಿ ನಡೆಯಲಿ ಕುಮಾರರು!
ನೀವೇನನ್ನುತ್ತೀರಾ?