ಶುಕ್ರವಾರ, ಏಪ್ರಿಲ್ 23, 2010

ಪೃಥ್ವಿ – ಈ ವಾರದ ಚಲನ ಚಿತ್ರ

ಇಂದು ಬಿಡುಗಡೆಯಾದ ಪೃಥ್ವಿ ಚಲನಚಿತ್ರ ಹತ್ತರಲ್ಲಿ ಹನ್ನೊಂದನೆಯ ಚಿತ್ರವೆನ್ನಬಹುದಷ್ಟೆ. ಬಳ್ಳಾರಿಯ ಅಕ್ರಮ ಗಣಿಗಾರಿಕೆಯನ್ನು ತೋರಿಸವ ಸಲುವಾಗಿ, ಒಬ್ಬ ಅತೀ ದಕ್ಷ ಜಿಲ್ಲಾಧಿಕಾರಿ ಪಾತ್ರವನ್ನು ಪುನೀತ್ ರಾಜ್‌ಕುಮಾರ್ ಕೈಯಲ್ಲಿ ಪೋಷಿಸಿದ್ದಾರೆ ನಿರ್ದೇಶಕ ಜೇಕಬ್ ವರ್ಗೀಸ್. ಒಂದು ಹೊಡೆದಾಟ, ತಕ್ಷಣ ಒಂದು ಹಾಡಿನಿಂದ ಪ್ರಾರಂಭವಾಗುವ ಚಲನಚಿತ್ರ ಮೊದಲರ್ಧದಲ್ಲಿ ಬಳ್ಳಾರಿಗೆ ಕರೆದೊಯ್ಯುತ್ತದೆ. ಬಳ್ಳಾರಿಯ ಗಣಿಗಾರಿಕೆ, ಧೂಳು, ಆಸ್ಪತ್ರೆಗಳ ದುಸ್ಥಿತಿ, ಗಣಿಗಾರಿಕೆಯಲ್ಲಿ ಕೆಲಸ ಮಾಡುವವರು ವಾಸಿಸುವ ದುಸ್ಥಿತಿಗಳ ಸಾಕ್ಷ್ಯಚಿತ್ರದಂತಿದ್ದು, ಪತ್ರಿಕೆಗಳಲ್ಲಿ ಓದಿರುವ ವಿಷಯಗಳು ಕಣ್ಮುಂದೆ ಬಂದಂತಾಗುತ್ತವೆ. ಇನ್ನು ಚಲನಚಿತ್ರದ ಎರಡನೆಯ ಭಾಗದಲ್ಲಿ ಪುನೀತ್ ರ ವೈಭವೀಕರಣ.

ದಕ್ಷ ಜಿಲ್ಲಾಧಿಕಾರಿ ಗಡಿಯನ್ನು ಸರ್ವೇ ಮಾಡಲು ಹೋದಾಗ ಯಾವ ಪೋಲೀಸರನ್ನೂ ಜೊತೆಗೆ ಕರೆದೊಯ್ಯದಿರುವುದು, ಗಣಿಗಾರಿಕೆ ಸಂಸ್ಥೆಯ ಮಾಲೀಕನ ತಮ್ಮ (ರೌಡಿ) ಜಿಲ್ಲಾಧಿಕಾರಿಯನ್ನು ನಡುರಸ್ತೆಯಲ್ಲೇ ಬೆದರಿಸುವುದು, ಜಿಲ್ಲಾಧಿಕಾರಿಯ ಕಛೇರಿಗೂ ನುಗ್ಗಿ ಬೆದರಿಸಿ ದಾಂಧಲೆ ನಡೆಸುವುದು, ಜಿಲ್ಲಾಧಿಕಾರಿ ತನ್ನ ಕಛೇರಿಯಲ್ಲೇ ಆ ರೌಡಿಯ ಜೊತೆ ಕಿಕ್ ಬಾಕ್ಸಿಂಗ್ ಆಡುವುದು, ನಂತರ ಮಾಧ್ಯಮದವರು ಜಿಲ್ಲಾಧಿಕಾರಿಯನ್ನು ಬೈಯ್ಯುವುದು, ಜಿಲ್ಲಾಧಿಕಾರಿ ಮಾಧ್ಯಮದವರಿಗೆ ಹಿಂತಿರುಗಿ ಬೈಯ್ಯುವುದು ಇವೆಲ್ಲ ಅಸಹಜತೆಯನ್ನು ಎತ್ತಿ ತೋರಿಸುವಂತಿವೆ. ಒಂದು ವಾಸ್ತವಿಕ ಸಮಸ್ಯೆಯನ್ನು ಚಲನಚಿತ್ರದ ವಸ್ತುವಾಗಿಟ್ಟುಕೊಂಡು, ಈ ರೀತಿಯ ಅಸಹಜ ದೃಶ್ಯಗಳನ್ನು ಚಿತ್ರದಲ್ಲಿ ತುರುಕಿದರೆ ಅದು ಪ್ರೇಕ್ಷಕನ ಮನರಂಜನೆಗೂ ನ್ಯಾಯ ಒದಗಿಸುವುದಿಲ್ಲ, ಸಮಸ್ಯೆಯನ್ನು ಜನರಿಗೆ ಪರಿಣಾಮಕಾರಿಯಾಗಿ ತೋರಿಸುವುದರಲ್ಲೂ ಯಶಸ್ವಿಯಾಗುವುದಿಲ್ಲ. ಸುಮ್ಮನೆ ಅತಿರಂಜನೆಯಾಗುತ್ತದಷ್ಟೆ! ನಿರ್ದೇಶಕರು ಪ್ರೇಕ್ಷಕರನ್ನು ಮನರಂಜಿಸಲು ಹೊರಟಿದ್ದಾರ? ಅಥವಾ ಒಂದು ಸಮಸ್ಯೆಗೆ ಕನ್ನಡಿ ಹಿಡಯಲು ಪ್ರಯತ್ನಿಸಿದ್ದಾರ? ಎಂಬ ಪ್ರಶ್ನೆ ಕಾಡಿದರೆ ಇವೆರಡನ್ನೂ ಒಟ್ಟಿಗೆ ಮಾಡಲು ಹೋಗಿ ಸೋತಿದ್ದಾರೆ ಅಷ್ಟೆ!

ಮುಂದೆ ಓದಿ