ಸೋಮವಾರ, ಡಿಸೆಂಬರ್ 29, 2008

ಕುವೆಂಪು ಜಯಂತಿ


ಈ ರಸಋಷಿಯ ಜನ್ಮದಿನದಂದು ಬರೆಯುತ್ತಿರುವ ಈ ಲೇಖನಕ್ಕೆ ವರಕವಿ ಬೇಂದ್ರೆಯವರ ಈ ಕವನದಿಂದ ಪ್ರಾರಂಭಿಸಿದರೆ ಹೆಚ್ಚು ಅರ್ಥಪೂರ್ಣವಾಗಬಲ್ಲದು.

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ - ಮಣಿಯದವರು ಯಾರು?
ರಾಮಕೃಷ್ಣ ವಚನೋದಿದ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?
ಕನ್ನಡಿಸಲಿ ಶಿವ ಜೀವನ
ಮುನ್ನಡೆಸಲಿ ಯುವ - ಜನ - ಮನ
ಅದೆ ಪ್ರಾರ್ಥನೆ ನಮಗೆ
ತಮವೆಲ್ಲಿದೆ ರವಿಯಿದಿರಿಗೆ? (ತಮ = ಕತ್ತಲು, ಅಂಧಕಾರ)
ಉತ್ತಮ ಕವಿ ನುಡಿ - ಚದುರೆಗೆ (ಚದುರ = ಜಾಣ)
ಚಾರುತ್ವದ ಕುಂದಣದಲಿ (ಚಾರು = ಶ್ರೇಷ್ಠವಾದ, ಇಷ್ಟವಾದ ; ಕುಂದಣ = ಅಪರಂಜಿ)
ಚಾರಿತ್ರ್ಯದ ರತ್ನ
ಚಾತುರ್ಯದ ಮಂತನದಲಿ
ಸತ್ಸಂಗದ ಯತ್ನ
ಇದೆ ತೃಪ್ತಿಯು ನಿಮಗೆ

ಇದು ಕನ್ನಡ ಒಬ್ಬ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರು, ಇನ್ನೊಬ್ಬ ಶ್ರೇಷ್ಠ ಕವಿಯಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಬಗ್ಗೆ ಬರೆದ ಕವನ. ಇಂದು ಕುವೆಂಪು ರವರ ೧೦೪ ಜನ್ಮ ವರ್ಷ.

ಹಿಂದೆ ಕುವೆಂಪುರವರ ಕಿರು ಪರಿಚಯ ಮಾಡಿಕೊಟ್ಟಿದ್ದೆ! ಇಲ್ಲಿ ಓದಿ!
http://guruve.blogspot.com/2006/10/blog-post_27.html

ನಾನು ಬಹಳ ಹಿಂದೆ ಇವರ ಎರಡು ಬೃಹತ್ ಕಾದಂಬರಿಗಳಾದ ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಓದಿದೆ. ಈ ಕಾದಂಬರಿಗಳ ಭಾಷೆ, ಪ್ರಕೃತಿ ವರ್ಣನೆ, ಕಥೆಯನ್ನು ಕೊಂಡೊಯ್ಯುವ ರೀತಿ ಬಹಳ ಚೆನ್ನಾಗಿದೆ. ಒಮ್ಮೆ ಪುಸ್ತಕ ಓದಲು ಕುಳಿತರೆ ಪುಸ್ತಕ ನಿಮ್ಮನ್ನು ಓದಿಸಿಬಿಡುತ್ತದೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಸಮಾಜವನ್ನು ತಿದ್ದುವ ಸಾಮಾಜಿಕ ಕ್ರಾಂತಿಕಾರಿ ಕಾದಂಬರಿ. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ಹೂವಯ್ಯ ವಿದ್ಯಾವಂತ, ತಿಳಿದವ. ಹೇಗೆ ತನ್ನ ಸುತ್ತಲಿನ ಸಮಾಜದ ಮೌಢ್ಯಗಳನ್ನು ತನ್ನ ಆದರ್ಶಗಳಿಂದ ಹೆದರಿಸುತ್ತಾನೆ ಎಂಬುದು ಕಥೆಯ ಮುಖ್ಯ ವಸ್ತು. ಈ ಕಾದಂಬರಿ ಈ ಕವನದಿಂದ ಕೊನೆಯಾಗುತ್ತದೆ.

ಉದಯಿಸುತಿದೆ ಅಭಿನವ ದಿನಮಣಿ
ಸಹ್ಯಾದ್ರಿಯ ಶೃಂಗಾಳಿಯ ಮೇಲೆ.
ಹರಿದೋಡೀದೆ ನಿಶೆ, ನಗೆ ಬೀರಿದೆ ಉಷೆ,
ತೀಡುತಲಿದೆ ತಂಗಾಳಿಯ ಲೀಲೆ.
ಮಲೆನಾಡನು ಮನಮೋಹಿಸುತಿದೆ ಓ
ದಿನಮುಖದಿನ ಕಾಂಚನಕಾಂತಿ
ಏಳೇಳಿರಿ! ಕರೆಯುತ್ತಿದೆ ಕೇಳಿರಿ,
ಓ ನವಜೀವನ ಸಂಕ್ರಾಂತಿ!

ಉದಯಿಸುತಿದೆ ನೂತನಯುಗದೇವತೆ!
ಮಿಥ್ಯೆಯ ಮೌಢ್ಯತೆಯನು ಸೀಳಿ;
ಙ್ನಾನದ ವಿಙ್ನಾನದ ಮತಿಖಡ್ಗದಿ
ಮೈದೋರುವಳೈ ನವಕಾಳಿ!
ಕೆಚ್ಚಿನ ನೆಚ್ಚಿನ ತನುಮಯ ಪಟುತೆಯ
ಸಂಪಾದಿಸಿ ಓ ಮೇಲೇಳಿ;

ಕಣ್ದೆರೆಯಿರಿ ನವಕಾಂತಿಗೆ. ಶಾಂತಿಗೆ,
ಓ ಕ್ರಾಂತಿಯ ಪುತ್ರರೆ, ಬಾಳಿ!

ಈ ಕವನದಲ್ಲಿ ಪ್ರಕೃತಿ ಸೌಂದರ್ಯ ಮತ್ತು ವೈಚಾರಿಕತೆಯು ಮೇಳೈಸಿರುವುದನ್ನು ಕಾಣಬಹುದು. ಹೇಗೆ ಮೌಢ್ಯತೆ ನಾಶವಾಗಿ, ಙ್ನಾನ - ವಿಙ್ನಾನವು ಮಲೆನಾಡಿನಲ್ಲಿ ಉದಯವಾಗುತ್ತಿದೆ ಎಂಬ ತಮ್ಮ ಕಾದಂಬರಿಯ ಸಾರಾಂಶವನ್ನು ಈ ಕವಿತೆಯ ಮೂಲಕ ಹೇಳಿ ಮುಗಿಸಿದ್ದಾರೆ.

ಸಾಮಾನ್ಯವಾಗಿ ಕುವೆಂಪುರವರ ಕಾವ್ಯದಲ್ಲಿ ಪ್ರಕೃತಿ ರಮಣೀಯತೆ, ಆಧ್ಯಾತ್ಮಿಕತೆ, ವೈಚಾರಿಕತೆ - ಸಾಮಾಜಿಕ ಮೌಢ್ಯಗಳನ್ನು ವಿರೋಧಿಸುವ ಮನೋಭಾವಗಳು ಎದ್ದು ಕಾಣಿಸುತ್ತವೆ. ಉದಾಹರಣೆಗೆ "ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ" ಕವಿತೆಯಾಗಲೀ "ನೂರು ದೇವರನೆಲ್ಲಾ ನೂಕಾಚೆ ದೂರ, ಭಾರತಾಂಬೆಯೇ ನಿನ್ನ ಪೂಜಿಸುವ ಬಾರ" ಕವಿತೆಯಾಗಲೀ, ದೇಶದ ಮೌಢ್ಯ ಆಚರಣೆಗಳನ್ನು ವಿರೋಧಿಸಿ ಬರೆದವು. ಕುವೆಂಪುರವರು ಅರ್ಥವಿಲ್ಲದ ಆಚರಣೆಯ ವಿರೋಧಿಗಾಳಗಿದ್ದವರೇ ಹೊರತು ಆಧ್ಯಾತ್ಮಿಕ ಸಾಧನೆಯ ವಿರೋಧಿಗಳಲ್ಲ! ತಮ್ಮ ಕವನಗಳಲ್ಲಿ ಆಚರಣೆ ಮತ್ತು ಆಧ್ಯಾತ್ಮಿಕತೆ ಳನ್ನು ಪ್ರತ್ಯೇಕಿಸುವ ಗೆರೆ ಎಳೆದಿದ್ದಾರೆ. ಕುವೆಂಪುರವರು ಶ್ರೀ ರಾಮಕೃಷ್ಣ ಮತ್ತು ವಿವೇಕಾನಂದರ ಆತ್ಮಚರಿತ್ರೆಗಳನ್ನು ಕೂಡ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.ನಮ್ಮದೇಶದ ಜಾತಿ ಪದ್ಧತಿ ಯನ್ನು ವಿರೋಧಿಸಿದ ಕನ್ನಡ ಕವಿಗಳಲ್ಲ್ಲಿ ಪ್ರಮುಖರು ಎನ್ನಬಹುದು.

ಕುವೆಂಪುರವರು ಎಲ್ಲಾ ಪ್ರಾಕಾರದ ಸಾಹಿತ್ಯಗಳಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕಾದಂಬರಿ, ಕವನ, ನಾಟಕ (ಜಲಗಾರ, ರಕ್ತಾಕ್ಷಿ, ಇತ್ಯಾದಿ), ಮಹಾಕಾವ್ಯ (ಙ್ನಾನಪೀಠ ಪ್ರಶಸ್ತಿ ವಿಜೇತ "ಶ್ರೀ ರಾಮಾಯಣದರ್ಶನಂ"), ವಿಮರ್ಶೆ, ಸಣ್ಣಕಥೆಗಳು, ಶಿಶು ಸಾಹಿತ್ಯ (ಬೊಮ್ಮನ ಹಳ್ಳಿಯ ಕಿಂದರಜೋಗಿ - ಇದು ಬರೀ ಶಿಶು ಸಾಹಿತ್ಯವಾಗಿರವೆ ಸಾಮಾಜಿಕ ವಿಡಂಬನೆಯ ಕೃತಿ ಕೂಡ ಆಗಿದೆ).

ಇನ್ನು ಇವರ "ಜೈ ಭಾರತ ಜನನಿಯ ತನುಜಾತೆ " ನಾಡಗೀತೆಯನ್ನು ಕೇಳದ ಕನ್ನಡಿಗರಿರಲಾರರು! ಇವರ ಅನಿಕೇತನ ಪದ್ಯ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದಂತಹ ಕವಿತೆ. ಕುವೆಂಪುರವರು ವಿಶ್ವಕ್ಕೆ ವಿಶ್ವ ಮಾನವ ಸಂದೇಶವನ್ನು ಕೂಡ ಕೊಟ್ಟಿದ್ದಾರೆ!

ಕುವೆಂಪುರವರ ಕೆಲವು ಕವನಗಳ, ಕೆಲವು ಸಾಲುಗಳನ್ನು ನೆನೆಯುವುದಾದರೆ,
ನೇಗಿಲ ಯೋಗಿ
"ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೆ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿನಿಯಮದೊಳಗವನೇ ಭೋಗಿ"

ಒಂದು ಕನ್ನಡ ಚಲನಚಿತ್ರದಲ್ಲೂ ಈ ಕವನವನ್ನು ಬಳಸಿಕೊಂಡಿದ್ದಾರೆ.

ನಿನ್ನವನು ನಾನಲ್ಲವೆ?
"ದೇಹವಿದು ನೀನಿರುವ ಗುಡಿಯೆಂದು ತಿಳಿದು
ಗುಡಿಸುವೆನು ದಿನದಿನವು, ದೇವಡೇವ;
ಬುದ್ಧಿಯಿದು ಗುಡಿಯೊಳುರಿಯುವ ದೀಪವೆಂದು
ಅಮಲ ಚಿಂತೆಯ ತೈಲವನು ತುಂಬುವೆ"

ಉದಯ
"ನೋಡುತಳಿತ ತಳಿರ ನಡುವೆ
ಅರುಣ ಕಿರಣ ಸರಿಯ ಸುರಿಸಿ
ಉದಯ ರವಿಯು ಮೆರೆಯುವನು;
ಕವಿಯ ಮನವ ಮೋಹಿಸುತ್ತ
ಮೌನವಾಗಿ ಕರೆವನು!"

ಭಾರತ ಜನನಿಗೆ
"ಭಾರತಾಂಬೆಯೆ, ಜನಿಸಿ ನಿನ್ನೊಳು ಧನ್ಯನಾನೆದು, ದೇವಿಯೇ.
ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು, ತಾಯಿಯೆ"

ತೆರೆದಿದೆ ಮನೆ, ಓ, ಬಾ ಅತಿಥಿ!
"ತೆರೆದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸ ಗಾಳಿಯ ಹೊಸಬಾಳನು ತಾ, ಅತಿಥಿ!"

ಈ ಹಾಡನ್ನು ರಾಜ್ ಕುಮಾರ್ ರವರ ಹೊಸಬೆಳಕು ಚಿತ್ರದಲ್ಲಿ ಕೇಳಿದ್ದೀರಲ್ಲವೆ?

ಆತ್ಮನಿವೇದನ
"ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೇ ಬೇಗ, ಸಖಿ!
ಬೃಂದಾವನದಿ ಹಾಲನು ಕೊಳ್ಳುವರ್
ಆರಿಹರೇ ಹೆಳಿಂದುಮುಖಿ"

"ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು"

"ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ"
ಇದನ್ನು ಕೂಡ ಕೇಳದೆ ಇದ್ದಿರಲಾರಿರಿ.

ಶುಕ್ರವಾರ, ಡಿಸೆಂಬರ್ 26, 2008

ಕುಮಾರ ಪರ್ವತ/ ಪುಷ್ಪಗಿರಿಯ ಚಾರಣದ ಕಥೆ

ಬೆಂಗಳೂರು-ಕುಕ್ಕೆ-ಕುಮಾರಪರ್ವತ/ಪುಷ್ಪಗಿರಿ-ಹೆಗ್ಗಡೆಮನೆ-ಸೋಮವಾರಪೇಟೆ-ಬೆಂಗಳೂರು


ಗೆಳೆಯರ ಗುಂಪು
ಪಿಂಗ(ನವೀನ), ಕುಂಟ(ಸಂದೀಪ), ಆನೆ(ಅನಿರುದ್ಧ) ಮೂರೂ ಜನ ಕುಮಾರಪರ್ವತ ಏರುವುದೆಂದು ನಿರ್ಧರಿಸಿದ್ದರು. ಕೊನೆಗೆ ಇವರನ್ನು ನಾನೂ ಸಹ ಸೇರಿದೆ.

ಸಿದ್ಧತೆ
೨೨ ರ ರಾತ್ರಿ ಬಿಡುವುದೆಂದೂ, ಮತ್ತು ಪರ್ವತವನ್ನು ಕುಕ್ಕೆಯಿಂದಲೂ ಹತ್ತುವುದೆಂದು ನಿಶ್ಚಯಿಸಿ ರಾಜಹಂಸದಲ್ಲಿ ೪ ಸ್ಥಳಗಳನ್ನು ಮುಂಗಡ ಕಾಯ್ದಿರಿಸಿದ್ದೆವು. ಇಳಿಯುವುದು ಕುಕ್ಕೆಗೋ ಅಥವ ಹೆಗ್ಗಡೆ ಮನೆಯ (ಸೋಮವಾರ ಪೇಟೆಯ ಕಡೆ) ಕಡೆಗೋ ಎಂಬುದರ ಬಗ್ಗೆ ಒಮ್ಮತಕ್ಕೆ ಬರಲಾಗದೆ ಹಿಂದಿರುಗುವ ಯೋಜನೆಯನ್ನು ಭವಿಷ್ಯದಲ್ಲಿ ಯೋಚಿಸುವುದೆಂದು ನಿರ್ಣಯಿಸಿದೆವು. ನಾಲ್ಕೂ ಜನದ ಚೀಲಗಳಲ್ಲಿ ಸಾಕಷ್ಟು ತಿಂಡಿ ತಿನಿಸು, ಬೇಡವಾಗಿದ್ದ ಅನಗತ್ಯ ಬಟ್ಟೆಗಳು, ಪಾನೀಯಗಳು ತುಂಬಿ ನನ್ನ ಮತ್ತು ಆನೆಯ ದೇಹದ ಭಾರವನ್ನು ಅಣಕಿಸುವಂತೆ ಯಮ ಭಾರವಾಗಿ ಊದಿಕೊಂಡಿದ್ದವು. ಬಾಡಿಗೆ ಟೆಂಟಿನ ಸಮಾನುಗಳನ್ನು ತುಂಬಿದ್ದ ಮತ್ತೊಂದು ಹೆಣ ಭಾರದ ಮತ್ತೊಂದು ಚೀಲವನ್ನು ಸರದಿ ಪ್ರಾಕಾರವಾಗಿ ಎಲ್ಲರೂ(!) ಎತ್ತಿ ಒಯ್ಯುವುದು ಎಂಬುದಾಗಿ ೨೨ ರ ರಾತ್ರಿ ೯:೩೦ ಕ್ಕೆ ಬೆಂಗಳೂರಿನಿಂದ ಹೊರಟೆವು.

ನಾವೇನೂ ನಿಯತ ಚಾರಣಿಗರಲ್ಲ ಮತ್ತು ಯಾವುದೇ ಚಾರಣಿಗ ಗುಂಪಿನ ಸದಸ್ಯರಲ್ಲ. ನನಗೆ ಹಿಂದೆ ಒಮ್ಮೆ ಸಾವನದುರ್ಗ ಬೆಟ್ಟ, ದಾಂಡೇಲಿಯ ಕಾಡಿನ ಸಮತಟ್ಟಿನ ದಾರಿಯಲ್ಲೊಮ್ಮೆ ನಡೆದಿದ್ದು, ಮಗದೊಮ್ಮೆ ಹುಣ್ಣಿಮೆ ಬೆಳಕಿನಲ್ಲಿ ಕಳಾವಾರಿ ಬೆಟ್ಟ (ಸ್ಕಂದಗಿರಿಯನ್ನು ) ಹತ್ತಿದ್ದು ಬಿಟ್ಟರೆ ಬೇರೆ ಯಾವುದೇ ಚಾರಣದ ಅನುಭವವಿರಲಿಲ್ಲ. ಉಳಿದ ಗೆಳೆಯರ ಅನುಭವಗಳು ಕೂಡ ಅಷ್ಟಕ್ಕಷ್ಟೆ! ಇದೇ ಕಾರಣದಿಂದ ಕೆಲವು ಚಾರಣಿಗ ಗೆಳೆಯರನ್ನು ಕುಮಾರಪರ್ವತದ ಬಗ್ಗೆ ಕೇಳಿದಾಗ, ಅವರುಗಳ ಚಾರಣದ ರೋಚಕ ಕಥೆಗಳು, ಅಲ್ಲಿ ಪ್ಲಾಷ್ಟಿಕ್ ವಸ್ತುಗಳನ್ನು ಎಸೆಯಬೇಡಿ ಎಂಬ ಬುದ್ಧಿವಾದದ ಮಾತುಗಳ ಅಬ್ಬರದಲ್ಲಿ ಅವರು ಕೊಟ್ಟ ಉಪಯುಕ್ತ ಮಾಹಿತಿಗಳು ಮಸುಕಾಗಿದ್ದವು.ಇದಲ್ಲದೆ ನಾವು ಕೆಲವು ಬ್ಳಾಗುಗಳ ಮೊರೆ ಹೋಗಿ ಬೇಕಾದ ಮಾಹಿತಿ ಸಂಗ್ರಹಿಸಿಕೊಂಡೆವು.


ಕುಕ್ಕೆಯಿಂದ ಚಾರಣ ಪ್ರಾರಂಭ
ರಜಾದಿನವಾಗದೆ, ವಾಹನ ದಟ್ಟಣೆ ಕಡಿಮೆಯಿದ್ದುದರ ಕಾರಣದಿಂದಲೋ ನಿಗದಿತ ಅವಧಿಗೆ ಮುಂಚೆಯೇ ಅಂದರೆ ೪:೪೫ ಕ್ಕೆ ಕುಕ್ಕೆ ತಲುಪಿದೆವು. ಪ್ರಕೃತಿ ಸವಿಯಲು ಹೊರಟಿರುವಾಗ ಪ್ರಕೃತಿ ವಿರುದ್ಧವಾದ ಹಲ್ಲು ಉಜ್ಜುವುದಕ್ಕೆ ನನ್ನ ಮೂರೂ ಗೆಳೆಯರು ನಿರಾಕರಿಸಿ ಅಲ್ಲೇ ಇದ್ದ ಒಂದು ಉಪಹಾರ ದರ್ಶಿನಿಯಲ್ಲಿ ಇಡ್ಲಿ ಮತ್ತು ಕಾಫಿಗಳಿಗೆ ಆಙ್ನೆಯಿತ್ತರು. ನಾನು ಅಲ್ಲೇ ಕೈ ತೊಳೆಯುವ ನಲ್ಲಿಯಲ್ಲಿ ಹಲ್ಲುಜ್ಜಿ ಅವರನ್ನು ಸೇರಿ ಬೆಳಗಿನ ತಿಂಡಿ ಮುಗಿಸಿ ಸುಮಾರು ೫:೩೦ ಕ್ಕೆ ಪರ್ವತದ ತಪ್ಪಲಾದ ಚಾರಣದ ಪ್ರಾರಂಭ ಬಿಂದುವನ್ನು ತಲುಪಿದೆವು.ಇನ್ನೂ ಬೆಳಕಾಗದೆ ಇದ್ದುದರಿಂದ ಮತ್ತು ಹಾವು ಹುಳ-ಹಪ್ಪಟೆಗಳ ಭಯದಿಂದ ೬:೧೫ ರವರೆಗೂ ಬೆಟ್ಟದ ತಪ್ಪಲಿನಲ್ಲಿ ಹರಟೆಗೆ ಜಾರಿದೆವು. ಇಲ್ಲಿಂದ ಕುಮಾರ ಪರ್ವತ ಶಿಖರಕ್ಕೆ ೧೩ ಕಿ ಮೀ ಗಳು.

ಮರಗಳ ಮಧ್ಯೆ ಇದ್ದ ಪಕ್ಷಿಯ ಛಾಯಾಚಿತ್ರವನ್ನು ಸೆರೆ ಹಿಡಿದಿದ್ದು ಹೀಗೆ (ಪಕ್ಷಿಯ ಹೆಸರು ಗೊತ್ತಿಲ್ಲ)

೬:೧೫ ರ ಮುಸುಕಿನಲ್ಲೆ ನಮ್ಮ ಚಾರಣ ಪ್ರಾರಂಭವಾಯಿತು. ಮುಂಜಾನೆಯ ಹಕ್ಕಿಗಳ ಚಿಲಿ ಪಿಲಿ ಕಲರವದ ನಡುವೆ, ಆರಂಭ ಶೂರತ್ವ ಸೇರಿ ಎಲ್ಲರೂ ಉಲ್ಲಾಸದಾಯಕವಾಗಿ ನಡೆಯತೊಡಗಿದೆವು. ತಂದಿದ್ದ ಪಾನೀಯಗಳಿಂದ ಅಲ್ಲಲ್ಲಿ ದಣಿವಾರಿಕೊಂಡು ಅಷ್ಟೇನು ಗೊಣಗಾಡದೆ ಸುಮಾರು ೩ ಕಿ ಮೀ ಹತ್ತಿ ಬಂದಾಗ ಒಂದು ದಾರಿ ಕವಲೊಡೆಯಿತು. ಅಲ್ಲಿ ಯಾರೋ "ನೀರು ಸಿಗುವ ಜಾಗ" ಎಂದು ಒಂದು ಬಿಳಿ ಹಾಳೆಯಲ್ಲಿ ಬರೆದು ನೇತು ಹಾಕಿದ್ದರು. ಆಗ ಅರಣ್ಯ ಇಲಾಖೆಯವರು ಪರ್ವತದ ತಪ್ಪಲಿನಲ್ಲಿ ಹಾಕಿದ್ದ ಹಲಗೆಯಲ್ಲಿ ನೀರು ಸಿಗುವ ಜಾಗಗಳಲ್ಲಿ ಮೊದಲನೆಯದಾದ ಭೀಮನಕಲ್ಲು ಎಂಬುದು ಇದೇ ಎಂದು ನೆನಪಿಗೆ ಬಂತು. ನಮ್ಮಲ್ಲಿ ನೀರಿನ ಕೊರತೆ ಇಲ್ಲವಾದದ್ದರಿಂದ ಭೀಮನಕಲ್ಲಿನ ನೀರಿನ ಒರತೆಯವರೆಗೆ ನಡೆದು ಶ್ರಮ ವ್ಯಯಿಸುವ ಧೈರ್ಯ ತೋರಲಿಲ್ಲ. ಇನ್ನೊಂದು ಕಿ ಮೀ ಮೇಲೆ ಹತ್ತಿ ದಣಿವಾರಿಸಿಕೊಳ್ಳುತ್ತಿದ್ದಾಗ ಯಾರೋ ಒಬ್ಬರು ತಲೆಯ ಮೇಲೆ ಮೂಟೆಯನ್ನು ಹೊತ್ತೊಯ್ಯುತ್ತಿದ್ದರು. ಅವರು ಭಟ್ಟರ ಮನೆಯವರು ಎಂಬುದು ತಿಳಿಯಲಾಗಿ ನಾವು ಕುಳಿತಿದ್ದ ಸ್ಥಳದಿಂದ ಭಟ್ಟರ ಮನೆ ಇನ್ನೆರಡು ಕಿ ಮೀ ಗಳು ಎಂದು ತಿಳಿದು ಏರತೊಡಗಿದೆವು. ದಾರಿಯುದ್ದಕ್ಕೂ ಹಕ್ಕಿಯ ಚಿಲಿಪಿಲಿ ಹೆಚ್ಚಾಗಿದ್ದರೂ ಆ ಪಕ್ಷಿಗಳನ್ನು ಕಾಣಲಾಗದೆ ಇದದ್ದುದರಿಂದ ನನಗೆ ದು:ಖವಾಗುತ್ತಿತ್ತು.(ಕೊನೆಗೆ ಯಾವುದೋ ಒಂದು ಕುಪ್ಪಳಿಸುವ ಪಕ್ಷಿ ಕಾಣಿಸಿತಾದರೂ, ನನ್ನ ಕ್ಯಾಮರಾಗೆ ಸೆರೆ ಸಿಕ್ಕಲಿಲ್ಲ). ಈ ವಿಷಯದ ಬಗ್ಗೆ ನನ್ನ ಗೆಳೆಯರು ನನ್ನನ್ನು ಹಾಸ್ಯ ಮಾಡುತ್ತಾ ಮುಂದುವರೆದರು.


ಭಟ್ಟರ ಮನೆ/ಗಿರಿಗದ್ದೆ ಜೋಯಿಸರ ಮನೆ
ಬಹಳಷ್ಟು ಮಂದಿಗೆ ಕುಮಾರ ಪರ್ವತದ ಬಗ್ಗೆ ಗೊತ್ತಿಲ್ಲದಿದ್ದರೂ ಈ ಭಟ್ಟರ ಮನೆಯ ಬಗ್ಗೆ ಗೊತ್ತಿರುತ್ತದೆ! ಇನ್ನು ಕೇವಲ ಎರಡೇ ಕಿ ಮೀ ಗಳು ಎಂದು ತಿಳಿದು ನಮ್ಮ ಮಾಮೂಲಿ ವೇಗಕ್ಕಿಂತ ಸ್ವಲ್ಪ ರಭಸವಾಗಿಯೇ ಏರಲು ಶುರು ಉಮಾಡಿದೆವು. ಆಗಲೇ ಸೂರ್ಯ ತನ್ನ ಝಳಪಿನಿಂದ ನಮ್ಮ ತಲೆಯನ್ನು ಕುಕ್ಕತೊಡಗಿದ್ದರಿಂದ ನಮಗೆ ಆ ೨ ಕಿ ಮೀಗಳು ಪೂರೈಸಲು ಹೆಣಗುತ್ತಿದ್ದಾಗ ನಮ್ಮ ಹಿಂದೆ ೩ ಜನದ ಇನ್ನೊಂದು ಚಾರಣಿಗ ಗುಂಪು ಪೀಪಿ ಊದುತ್ತಾ ಬಂದರು. ಅವರು ೭:೧೫ ಕ್ಕೆ ಪ್ರಾರಂಭಿಸಿ ನಮಗಿಂತಾ ವೇಗವಾಗಿ ಹತ್ತಿದ್ದನ್ನು ಕೇಳಿ ಸ್ವಲ್ಪ ಆಶ್ಚರ್ಯವಾಯಿತಾದರೂ, ಅವರ ಚೀಲಗಳು ನಮ್ಮ ಚೀಲಗಳಂತೆ ಉಬ್ಬಿರದೆ ಹಗುರಾಗಿದ್ದದ್ದನ್ನು (ಆ ಗುಂಪಿನದು ಅಂದು ಭಟ್ಟರ ಮನೆಯಲ್ಲೇ ತಂಗುವ ಯೋಜನೆಯಿತ್ತು) ಕಂಡು ನಮ್ಮ ಚೀಲಗಳನ್ನೂ ಮತ್ತು ಇನ್ನೆರಡೇ ಕಿ ಮೀ, ಬಹಳ ಹತ್ತಿರ ಎಂದು ಹೇಳಿ ಹೋದ ಭಟ್ಟರ ಮನೆಯ ಮನುಷ್ಯನನ್ನು ಬೈದುಕೊಂಡೆವು. ಪರರನ್ನು ಶಪಿಸಿ ಸಿಗುವ ವಿಕೃತ ಸಂತೋಷಕ್ಕೆ ದಣಿವಾರಿಸುವ ಶಕ್ತಿ ಕೂಡ ಇದೆ ಎಂದೆನೆಸುತ್ತಿತ್ತು ಆ ಕ್ಷಣದಲ್ಲಿ.

ಭಟ್ಟರ ಮನೆಯ ಮುಂದಿನ ದಾಸವಾಳ ಗಿಡದ ಹೂವಿನಲ್ಲಿ ಮಕರಂದ ಹೀರಲು ಬಂದ ಹೂವಿನ ಹಕ್ಕಿ ನನ್ನ ಕ್ಯಾಮರಾಗೆ ಸೆರೆ ಸಿಕ್ಕಿದ್ದು ಹೀಗೆ!

ಕೊನೆಗೂ ೧೦:೩೦ ಕ್ಕೆ (ಬೆಟ್ಟದ ತಪ್ಪಲಿನಿಂದ ೬ ಕಿ ಮೀ ಚಾರಣ) ಭಟ್ಟರ ಮನೆಗೆ ತಲುಪಿದಾಗ ಊಟದ ಅಪೇಕ್ಷೆಯಲ್ಲಿ ಅತೀವ ಆನಂದವಾಯಿತು. ಭಟ್ಟರೇ ಎದುರಿಗೆ ಸಿಕ್ಕಿದರಾದರೂ ಅವರ ಕಡೆ ಕೂಡ ನೋಡದೆ ಮನೆಯ ಒಳಗೆ ನುಗ್ಗಿದೆವು. ಕೊನೆಗೆ ಭಟ್ಟರು ಒಳಗೆ ಬಂದಾಗ ಅವರೇ ಭಟ್ಟರೆಂದು ತಿಳಿದು ಊಟಕ್ಕೆ ವ್ಯವಸ್ಥೆ ಮಾಡಬೇಕೆಂದು ಕೋರಿದೆವು. ಭಟ್ಟರು ಊಟ ೧ ಘಂಟೆಗೆ ಸಿದ್ಧವಾಗುವುದೆಂದು ತಿಳಿಸಿದಾಗ ನನ್ನ ಗೆಳೆಯರು ನಿದ್ದೆಗೆ ಜಾರಿದರು. ನಾನು ಮಾತ್ರ ಭಟ್ಟರ ಮನೆಯ ಎದುರಿಗಿದ್ದ ದಾಸವಾಳ ಗಿಡದ ಹೂವಿನಲ್ಲಿ ಮಕರಂದ ಹೀರಲು ಬರುತ್ತಿದ್ದ ಹೂವಿನ ಪಕ್ಷಿಯ (SunBird /Humming Bird?) ಫೋಟೋ ತೆಗೆಯುವುದರಲ್ಲಿ ಮಗ್ನನಾದೆ. ನಂತರ ಭಟ್ಟರ ಮನೆಯ ಶೌಚಾಲಯದಲ್ಲಿ ಮಲವಿಸರ್ಜನೆ ಮಾಡಿ, ಹೊಟ್ಟೆ ತುಂಬಾ ಊಟ ಮಾಡಿ ಭಟ್ಟರಿಗೆ ೨೦೦ ರೂ ಗಳನ್ನು ಕೊಟ್ಟು ೧:೩೦ ಕ್ಕೆ ಮುಂದಿನ ಗುರಿ ತಲುಪಲು ಆಣಿಯಾದೆವು.

ಮುಂದಿನ ಗುರಿ ಮಂಟಪ
ಪರ್ವತದ ತಪ್ಪಲಿನಿಂದ ೮ ಕಿ ಮೀ ದೂರದಲ್ಲಿರುವ ಮಂಟಪದಲ್ಲಿ ಟೆಂಟ್ ಹಾಕಿ ತಂಗುವುದೆಂದು ಈ ಮೊದಲೇ ನಿಶ್ಚಯಿಸಿದ್ದೆವು. ಬೇಗ ತಲುಪಿದರೆ ಪರ್ವತದ ತುದಿಗೆ ಹೋಗಿ ಅಲ್ಲೇ ತಂಗಬಹುದೆಂದು, ಸುಡುವ ಬಿಸಿಲಿನಲ್ಲಿ ಬಿರು ಬಿರನೆ ಹೆಜ್ಜೆ ಹಾಕತೊಡಗಿದೆವು. ಭಟ್ಟರ ಮನೆಯಿಂದ ಸ್ವಲ್ಪ ದೂರದಲ್ಲಿ ಅರಣ್ಯ ಇಲಾಖೆಯ ಕಛೇರಿಯಲ್ಲಿ ಒಬ್ಬರಿಗೆ ತಲಾ ೧೧೫ ರಂತೆ (ರೂ ೪೦ ಪ್ರವೇಶ ಶುಲ್ಕ + ೭೫ ಚಾರಣ ಶುಲ್ಕ) ಶುಲ್ಕ ಕಟ್ಟಿ, ರಸೀತಿ ಪಡೆದು, ಸಿಬ್ಬಂದಿಯಿಂದ ಪ್ಲಾಶ್ಟಿಕ್ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕುವಂತೆ ಕೋರಿಸಿಕೊಂಡು ಮುಂದೆ ಹೆಜ್ಜೆ ಹಾಕತೊಡಗಿದೆವು. ಅಲ್ಲಲ್ಲಿ ವಿಶ್ರಮಿಸಿ ಭಟ್ಟರ ಮನೆಯಿಂದ ಸುಮಾರು ೧ ಕಿ ಮೀ ನಡೆದ ಮೇಲೆ ಚಾರಣ ಬೇಕಾಗಿತ್ತೇ ಎನ್ನಿಸತೊಡಗಿತ್ತು! ಪಿಂಗ ತನ್ನ ಮನೆಯಲ್ಲಿ ತಕ್ಷಣದ ಬಟ್ಟಲು ಶ್ಯಾವಿಗೆಯನ್ನು (instant cup noodles) ಚೀಲದಲ್ಲಿ ತುಂಬಿಸುವಾಗ ಅವರಮ್ಮ ಕೋಪದಿಂದ ಕೇಳಿದ ಮಾತು "ಏನು ಈ ಶ್ಯಾವಿಗೆ ತಿನ್ನೋಕೆ ಬೆಟ್ಟದ ಮೇಲೆ ಹೋಗಬೇಕಾ? ಮನೇಲ್ಲಿ ತಿಂದರೆ ಆಗಲ್ವಾ?" ಎಂಬುದು ಇಲ್ಲಿಯವರೆಗೂ ತಮಾಷೆಯ ವಸ್ತುವಾಗಿದ್ದರೂ ಈಗ ಅದಕ್ಕೆ ತಾತ್ವಿಕ ಮೆರುಗು ಸಿಕ್ಕಿತ್ತು!ಸದಾಲು ಗೊಣಗುತ್ತಿರುವ ಪಿಂಗ ಈಗ ಕೂತಲ್ಲೆಲ್ಲಾ ತತ್ವ ಙ್ನಾನಿಯಂತೆ ಯೋಚಿಸತೊಡಗಿದ್ದ!ಈಗ ಯಾರನ್ನಾದರೂ ಬೈದುಕೊಳ್ಳಲೂ ಸಹ ಶಕ್ತಿಯಿರಲಿಲ್ಲ.ನಮ್ಮ ಗುರಿ ಸನಿಹವಾಗುತ್ತಿದ್ದಂತೆ ದಾರಿಯ ಏರು ಜಾಸ್ತಿಯಾಗುತ್ತಿತ್ತು. ಕೊನೆಗೆ ನಮ್ಮ ಜೊತೆಯಲ್ಲೇ ಹತ್ತುತ್ತಿದ್ದ ಧರ್ಮ (ಇದು ಭಟ್ಟರ ಮನೆಯಿಂದ ನಮ್ಮನ್ನು ಕೂಡಿಕೊಂಡ ನಾಯಿ, ಪಿಂಗ ಮಹಾಭಾರತದ ಪಾಂಡವರು ವನವಾಸಕ್ಕೆ ಕಾಡಿಗೆ ಹೊರಟಾಗ ಹಿಂಬಾಲಿಸಿದ ನಾಯಿಯ ಕಥೆ ಹೇಳಿ, ನಮ್ಮ ಜೊತೆಗೆ ಬಂದ ನಾಯಿಗೂ ಧರ್ಮ ಎಂದು ನಾಮಕರಣ ಮಾಡಿದ್ದ!) ಇದ್ದಕ್ಕಿದ್ದಂತೆ ಓಡಲು ಶುರು ಮಾಡಿತು.ಆಗಲೇ ನಮಗೆ ಮಂಟಪ ಇಲ್ಲೇ ಹತ್ತಿರದಲ್ಲಿರಬಹುದೆಂಬ ಸುಳಿವು ಸಿಕ್ಕಿದ್ದು. ಮಂಟಪದ ಹತ್ತಿರದಲ್ಲಿದ್ದ ನೀರಿನ ಗುಂಡಿಯಲ್ಲಿ ಧರ್ಮ ದಣಿವಾರಿಸಿಕೊಳ್ಳುತಿತ್ತು.ಕೊನೆಗೂ ನಮಗೆ ನಮ್ಮ ಗುರಿ ಕಂಡು ಸಂತಸವಾಗಿ ಅಲ್ಲೇ ಇದ್ದ ನೀರಿನ ಕುಳಿಯಲ್ಲಿ ನಮ್ಮ ಬಾಟಲಿಗಳಿಗೆ ನೀರು ತುಂಬಿಸಿ ಮಂಟಪವನ್ನು ಸೇರಿದೆವು.ಸಮಯ ೪:೦೦ ಕಳೆದಿತ್ತು.ಮುಂದೆ ನಡೆಯುವ ಉತ್ಸಾಹ ಕುಂದಿತ್ತು!

ಕೆಳಗಿನಿಂದ ಕಂಡ ಮಂಟಪ/ಕಲ್ಲು ಚಪ್ಪಡಿ

ಆ ರಾತ್ರಿ ಕಳೆದೆವು!
ಮಂಟಪ ಸೇರಿದ ಮೇಲೆ ಸ್ವಲ್ಪ ವಿಶ್ರಾಂತಿಯ ನಂತರ ಮತ್ತೆ ಕರ್ಮಕ್ಕೆ ಜಿಗಿದೆವು. ಟೆಂಟ್ ನ ಚೀಲವನ್ನು ಬಿಚ್ಚಿ,ಗುಳಿ ಹೊಡೆದು, ಹಗ್ಗ ಬಿಗಿದು ಟೆಂಟ್ ಕಟ್ಟಲು ಕಷ್ಟವೇನೂ ಆಗಲಿಲ್ಲ. ಅಲ್ಲೇ ಮಂಟಪದ ಪಕ್ಕದಲ್ಲಿದ್ದ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ಮಲಗಿದಾಗ ಒತ್ತದೆ ಇರಲಿ ಎಂದು ಪಕ್ಕದಲ್ಲೇ ಸಮೃದ್ಧವಾಗಿ ಬೆಳೆದಿದ್ದ ಹುಲ್ಲನ್ನು ಕುಯ್ದು ಹಾಕಿ ಅದರ ಮೇಲೆ ಟೆಂಟ್ ನಿರ್ಮಿಸಿದೆವು.ಕಲ್ಲುಗಳನ್ನು ಜೋಡಿಸಿ, ಒಣ ಕಟ್ಟಿಗೆಗಳನ್ನು ಆಯ್ದು ಒಲೆ ಹಾಕಿ ನೀರು ಕಾಯಿಸಲು ಶುರು ಮಾಡಿದೆವು.ಕುಂಟ ತಂದಿದ್ದ ಸೀಮೆ ಎಣ್ಣೆ ಮತ್ತು ಪಿಂಗ ತನ್ನ ಮನೆಯಲ್ಲಿ ನೀರೊಲೆಯಲ್ಲಿ ಸೌವ್ದೆ/ಕಟ್ಟಿಗೆ ಹಾಕಿ ನೀರು ಕಾಯಿಸಿದ ಅನುಭವ, ಉಪಯೋಗಕ್ಕೆ ಬಂತಾದರೂ, ಬೀಸುತ್ತಿದ್ದ ಗಾಳಿಯಿಂದ ಬೆಂಕಿಯನ್ನು ಆರದೆ ಇರುವಂತೆ ಮಾಡಲು ಹರ ಸಾಹಸ ಪಟ್ಟೆವು. ಕೊನೆಗೆ ಬೆಚ್ಚಗಿನ ನೀರನ್ನೆ ಬಟ್ಟಲು ಶ್ಯಾವಿಗೆಗೆ ಹಾಕಿ ಅರೆ ಬೆಂದ ಶ್ಯಾವಿಗೆ ಮತ್ತು ಇನ್ನಿತರ ಕುರುಕಲು ತಿಂಡಿಯನ್ನು ತಿಂದೆವು!ಸೂರ್ಯಾಸ್ತ ಶಿಖರಗಳ ನಡುವೆ ಅಂದವಾಗಿ ಕಾಣಿಸಿತು.ರಾತ್ರಿ ಏಳು ಗಂಟೆಗೆ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಾ ಅದ್ಭುತವಾದ ದೃಶ್ಯ ನಿರ್ಮಾಣವಾಗಿತ್ತು. ಆದರೆ ಆ ದೃಶ್ಯವನ್ನು ಸವಿಯುವ ಕ್ಷಮತೆ ಯಾರಲ್ಲೂ ಇರಲಿಲ್ಲ.ಎಲ್ಲರೂ ಟೆಂಟಿನೊಳಗೆ ಜಾರಿದೆವು.ಆನೆ ತಾನು ಟೆಂಟಿನ ಹೊರಗೆ ಮಲಗುವುದೆಂದು ನಿಶ್ಚಯಿಸಿ ತನ್ನ ನಿದ್ರಾ ಚೀಲ (sleeping bag) ತಂದಿದ್ದನಾದರೂ ಕೊನೆಯ ಗಳಿಗೆಯಲ್ಲಿ ಕಾಡಿನಲ್ಲಿರದ ಕಾಡುಪ್ರಾಣಿಗಳಿಗೆ ಹೆದರಿ ಟೆಂಟಿನೊಳಗೆ ಮಲಗಲು ಬಂದದ್ದಲ್ಲದೆ, ಟೆಂಟಿನ ಅರ್ಧ ಭಾಗವನ್ನು ಆಕ್ರಮಿಸಿಕೊಂಡು ಯಾರೂ ಹೊರಳಾಡದಂತೆ ಮಾಡಿದ.ಆನೆ ದೂರದ ಕುಕ್ಕೆಯ ಯಾವುದೋ ಬೀದಿ ದೀಪ ನೋಡಿ ಆ ದೀಪ ನಮ್ಮ ಕಡೆಗೇ ಬರುತ್ತಿದೆಯೆಂದು ಹೆದರಿಸುವದಕ್ಕೂ, ಪಿಂಗ ಎನೋ ಶಬ್ದ ಕೇಳಿ, ಕಾಡುಪ್ರಾಣಿಗಳಿರಬಹುದೆಂದು ಊಹಿಸಿ ನಮ್ಮನ್ನು ನಿಶ್ಯಬ್ದಗೊಳಿಸುವುದಕ್ಕೂ, ಅಲ್ಲೇ ಇದ್ದ ನೀರಿನ ಹೊಂಡದಿಂದ ಕಪ್ಪೆ ವಟರ್‍ ಗುಟ್ಟುವದಕ್ಕೂ, ಸಿಕ್ಕಾಪಟ್ಟೆ ಶಬ್ದ ಮಾಡಿ ಜೋರಾಗಿ ಬೀಸುತ್ತಿದ್ದ ಗಾಳಿ ಟೆಂಟನ್ನು ಎಲ್ಲಿ ಹಾರಿಸಿಬಿಡುವುದೋ ಎಂಬ ಭಯಕ್ಕೂ, ನಮ್ಮ ಕಾಲು ನೋವುಗಳು ಸೇರಿ ಯಾರಿಗೂ ನಿದ್ದೆ ಹತ್ತಲಿಲ್ಲ. ಗಂಟೆ ಗಂಟೆಗೂ ಗಡಿಯಾರ ನೋಡಿ ಇನ್ನೂ ಬೆಳಗಾಗಲಿಲ್ಲವೆಲ್ಲಾ ಎಂದು ಶಪಿಸಿಕೊಂಡು, ಒಬ್ಬರಿಗೊಬ್ಬರು ಇನ್ನೊಬ್ಬ ಚೆನ್ನಾಗಿ ಗೊರಕೆ ಹೊಡೆದು ನಿದ್ದೆ ಮಾಡಿದನೆಂದು ಬೈದುಕೊಂಡು ಗೊಣಗಿಡುತ್ತಿದ್ದಾಗ ಗಂಟೆ ಐದಾಯಿತು. ನೆನ್ನೆಯೇ ನಿಶ್ಚಯಿಸಿದಂತೆ ೬ ಗಂಟೆಗೆ ಹೊರಡುವುದೆಂದಿತ್ತು.೫ ಗಂಟೆಗೆ ನಾನು ಉಳಿದವರನ್ನು ಎಬ್ಬಿಸಲು ಪ್ರಯತ್ನಿಸಲು ಅವರಿಗೆಲ್ಲಾ ಆಗ ತಾನೆ ನಿದ್ದೆ ಹತ್ತಿದೆಯೆಂದು ಕಾದಾಟಕ್ಕೇ ಇಳಿದರು! ಕೊನೆಗೆ ಟೆಂಟನ್ನು ಅಳ್ಳಾಡಿಸಿ ಎಲ್ಲರನ್ನೂ ಎಬ್ಬಿಸಿ ನಾನೇ ಗೆದ್ದೆ. ನಂತರ ನಿತ್ಯಕರ್ಮದಲ್ಲಿ ಒಂದಾದ ಮಲವಿಸರ್ಜನೆಯನ್ನು ಮುಗಿಸಿ ಉಳಿದ ಬ್ರೆಡ್ ಜಾಮ್ ಮತ್ತು ಸಾಸ್ ಗಳನ್ನು ಹೊಟ್ಟೆಗೆ ತುಂಬಿಸಿ, ಬಿಸ್ಕಟ್ ಗಳನ್ನು ಧರ್ಮನ ಹೊಟ್ಟೆಗೆ ತುಂಬಿಸಿ, ನೀರನ್ನು ಬಾಟಲಿಗಳಿಗೆ ತುಂಬಿಸಿ ಮುಂದಿನ ಸಿದ್ಧಿಗೆ ಹೊರಡಲು ಪ್ರಾರಂಭಿಸಿದಾಗ ಗಂಟೆ ೭:೩೦.


(ಮೇಲೆ) ಮಂಟಪದಲ್ಲಿ ಅಡುಗೆ ಭಟ್ಟ ಪಿಂಗ, ನೀರು ಕಾಯಿಸಲು ಆಣಿಯಾಗುತ್ತಿರುವುದು, ನಮ್ಮ ಟೆಂಟನ್ನೂ ಕೂಡ ಕಾಣಬಹುದು
(ಬಲ) ಮಂಟಪದಿಂದ ಕಂಡ ಸೂರ್ಯಾಸ್ತ
(ಕೆಳಗೆ) ನಾವು ಹಾಕಿದ ಒಲೆ ಮತ್ತು ನಾವು


ಶೇಷಪರ್ವತ / ಕುಮಾರ ಪರ್ವತ ಮತ್ತು ಮುಂದೆ?
ಮೊದಲೇ ಭಟ್ಟರ ಮನೆಯಲ್ಲಿ ಕೇಳಿಕೊಂಡಂತೆ ಮಂಟಪದಿಂದ ಕುಮಾರಪರ್ವತದ ತುದಿಗೆ ೫ ಕಿ ಮೀ. ಇವುಗಳ ಮಧ್ಯೆ ಶೇಷಪರ್ವತ ಸಿಗುತ್ತದೆ, (ಮಂಟಪದಿಂದ ೨.೫ ಕಿ ಮೀ) ಅಲ್ಲಿ ಬಂಡೆಗಳ ಮಧ್ಯೆ ನೀರು ಸಿಗುತ್ತದೆ ಎಂದು ಕೂಡ ಹೇಳಿದ್ದರು. ಪರ್ವತದ ತಪ್ಪಲಿನಿಂದ ಭಟ್ಟರ ಮನೆವರೆಗೂ ಕಾಡಿನ ಹಾದಿ. ಮರಗಳ ನೆರಳು, ನಡೆಯಲು ಅಷ್ಟೇನು ತ್ರಾಸವಾಗುವುದಿಲ್ಲ. ಆದರೆ ಭಟ್ಟರ ಮನೆಯಿಂದ ಮಂಟಪ, ಮಂಟಪದಿಂದ ಶೇಷ ಪರ್ವತದ ವೆರೆಗೂ ಹುಲ್ಲುಗಾವಲಿನ ದಾರಿ. ಮರಗಳಿಲ್ಲ, ಆದ್ದರಿಂದ ಈ ದಾರಿಗಳಲ್ಲಿ ಚಾರಣಿಸುವಾಗ ಬಿಸಿಲಿಲ್ಲದ ಸಮಯವನ್ನು ಆಯ್ಕೆ ಮಾಡಿಕೊಂದರೆ ಸೂಕ್ತ! ನಾವು ಶೇಷ ಪರ್ವತವನ್ನು ಹುಡುಕಿ ನಡೆಯತೊಡಗಿದೆವು. ಮಂಟಪದಿಂದ ಮುಂದಿನ ದಾರಿ ಸ್ವಲ್ಪ ಏರು ಜಾಸ್ತಿ ಎನ್ನಬಹುದು. ಹಾದಿಯೆಲ್ಲ ಸುಮಾರು ೫೦-೭೦ ಡಿಗ್ರೀ ಕೋನದಲ್ಲಿರುವವು. ನಡೆಯಲು ಅಷ್ಟೇನೂ ದುರ್ಗಮವಲ್ಲದೇ ಇದ್ದರೂ, ಬಹಳ ದಣಿವನ್ನುಂಟುಮಾಡುವ ಏರು ರಸ್ತೆಗಳು, ಬಾರೆಗಳು. ಸುಮಾರು ೨.೫ ಕೆ ಮೀ ದೂರ ಕ್ರಮಿಸಿದಾಗ ಬಹಳಷ್ಟು ಬಂಡೆಗಳು ಕಂಡವಾದರೂ ಎಲ್ಲೂ ನೀರು ಕಾಣಿಸಲಿಲ್ಲ. ಧರ್ಮ ಕೂಡ ಓಡಿ ಹೋಗಿ ನೀರು ಕುಡಿದಿದ್ದು ಕಂಡು ಬರಲಿಲ್ಲ. ಮುಂದೆ ಮತ್ತೆ ಕಾಡಿನ ದಾರಿ ಪ್ರಾರಂಭವಾಯಿತು, ಅಲ್ಲಿ ನಾವು ಬೆಂಗಳೂರಿನಿಂದ ಬಂದ ಸುಮ್ಮಾರು ೧೦ ಜನರ ತಂಡವೊಂದು ಎದುರಾಯಿತು. ಅವರು ಹಿಂದಿನ ದಿನ ಸೋಮವಾರ ಪೇಟೆಯ ಕಡೆಯಿಂದ ಚಾರಣ ಪ್ರಾರಂಭಿಸಿ ಅಲ್ಲೇ ಟೆಂಟ್ ಹಾಕಿದ್ದರು. ಅವರ ಗುಂಪಿನಲ್ಲಿ ಇಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲಾ ಕುಮಾರಪರ್ವತವನ್ನು ೫-೬ ಬಾರಿ ಹತ್ತಿದವರಂತೆ! ಅದಕ್ಕೆ ಬಹುಶ: ಹೇಳುವುದು, ಕುಮಾರಪರ್ವತ ಚಾರಣಿಗರ ಸ್ವರ್ಗವೆಂದು. ನಮಗಿನ್ನೂ ಆ ಸ್ವರ್ಗ ನೋಡಲು ೨.೫ ಕಿ ಮೀ ನಡೆಯುವ ಅವಶ್ಯಕತೆಯಿತ್ತು.ಈಗ ನಾವು ಕೆಳಗೆ ಹಿಂತಿರುಗುವ ಯೋಜನೆಯ ಬಗ್ಗೆ ಚರ್ಚಿಸಲು, ಶಿಖರದ ತುದಿಯಿಂದ ೫ ಕಿಮೀ ಸೋಮವಾರ ಪೇಟೆಯ ಕಡೆಗೆ ತಗ್ಗಿನಲ್ಲಿ ಇಳಿದರೆ ಹೆಗ್ಗಡೆ ಮನೆ (ಊರಿನ ಹೆಸರು) ತಲುಪಬಹುದು, ಕ್ರಮಿಸಬೇಕಾದ ದೂರವೂ ಕಡಿಮೆ ಮತ್ತು ಪೂರ್ತಿ ಕಾಡಿನ ದಾರಿ, ದಣಿವಾಗುವುದು ಕಡಿಮೆ ಎಂದೆಣಿಸಿ ಸೋಮವಾರ ಪೇಟೆಯ ಕಡೆಗೇ ಇಳಿಯುವುದೆಂದು ನಿಶ್ಚಯಿಸಿದೆವು. ಆದರೆ ಇಲ್ಲಿದ್ದ ಒಂದು ತಾಂತ್ರಿಕ ತೊಂದರೆಯೆಂದರೆ, ಹೆಗ್ಗಡೆ ಮನೆಯ ಅರಣ್ಯ ಇಲಾಖಾ ಕಛೇರಿ ಯಿಂದ ಮತ್ತೆ ೪ ಕಿ ಮೀ ನಡೆದರೆ ಬೀದಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಮಾತ್ರ ನಮಗೆ ಸೋಮವಾರ ಪೇಟೆಗೆ ಬಸ್ ಸಿಗುವುದು. ಕೊನೆಯ ಬಸ್ ೩:೩೦ ಕ್ಕೆ ಮಾತ್ರ. ಅಂದರೆ ಕನಿಷ್ಟ ಪಕ್ಷ ೧:೩೦ ಕ್ಕಾದರೂ ನಾವು ಹೆಗ್ಗಡೆ ಮನೆ ತಲುಪಬೇಕು, ಇಲ್ಲದಿದ್ದರೆ ಮತ್ತೊಂದು ದಿನ ಟೆಂಟ್ ನಲ್ಲಿ ಕಳೆಯಬೇಕು. ಅಥವಾ ಅರಣ್ಯ ಸಿಬ್ಬಂದಿಯನ್ನು ನಮಗೆ ಸೋಮವಾರ ಪೇಟೆಯವರೆಗೂ ತಲುಪಿಸಲು ಯಾವುದಾದರೂ ವಾಹನದ ವ್ಯವಸ್ಥೆ ಮಾಡಿಕೊಡಲು ಕೋರಬೇಕು. ಹೀಗೆ ಅನಿಶ್ಚಯಗಳ ನಡುವೆಯೂ ಭಂಡ ಧೈರ್ಯದಿಂದ ಹೆಜ್ಜೆ ಹಾಕತೊಡಗಿದೆವು.




ಕುಮಾರ ಪರ್ವತ/ಪುಷ್ಪಗಿರಿ
ಕೊನೆಗೂ ಒಂದು ಕಡಿದಾದ ಬಂಡೆಯೇರಿ ಸ್ವಲ್ಪ ಮೇಲೆ ನಡೆದಾಗ ಕುಮಾರ ಪರ್ವತ ಸಿಕ್ಕೇಬಿಟ್ಟಿತು. ಕರ್ನಾಟಕದ ಎರಡನೇ ಅತಿ ದೊಡ್ಡ ಶಿಖರವನ್ನು (ಸಮುದ್ರ ಮಟ್ಟಕ್ಕಿಂತ ೫೬೧೨ ಅಡಿಗಳು) ಕಾಲ್ನಡಿಗೆಯಲ್ಲಿ ಏರಿದ ತೃಪ್ತಿಯಿತ್ತು.ಹಿಂದೆ ಕರ್ನಾಟಕದ ಅತಿ ದೊಡ್ಡ ಶಿಖರವಾದ ಮುಳ್ಳಯ್ಯನ ಗಿರಿಯನ್ನು (ಚಿಕ್ಕಮಗಳೂರು ಜಿಲ್ಲೆ - ಸಮುದ್ರ ಮಟ್ಟಕ್ಕಿಂತ ೬೩೧೨ ಅಡಿಗಳು) ಮೋಟಾರು ಬಂಡಿಯಲ್ಲಿ ಏರಿದ್ದೆ. ಎರಡೂ ಗಿರಿಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಮುಳ್ಳಯ್ಯನ ಗಿರಿಯಲ್ಲಿ ಸದಾ, ಅದರಲ್ಲೂ ಚಳಿಗಾಲದಲ್ಲಿ ಮೋಡ ಮುಚ್ಚಿ ತಣ್ಣನೆಯ ಹವೆಯಿರುತ್ತದೆ,ಆದರೆ ಕುಮಾರ ಪರ್ವತದಲ್ಲಿ ಬಿಸಿಲಿನ ಝಳಪಿರುತ್ತದೆ, ಆದರೂ ತಣ್ಣನೆಯ ಗಾಳಿ ಬೀಸುತ್ತಿರುತ್ತದೆ.ಪರ್ವತದಲ್ಲಿ ಸ್ವಲ್ಪ ವಿರಮಿಸಿ ಅಲ್ಲಿದ್ದ ಒಂದು ಸಣ್ಣ ಶಿವ ಲಿಂಗ ದೇವಾಲಯವನ್ನು ವೀಕ್ಷಿಸಿ, ಫೋಟೋ ಗಳನ್ನು ಕ್ಳಿಕ್ಕಿಸಿ ಹೆಗ್ಗಡೆ ಮನೆಗೆ ಇಳಿಯಲು ಬಿರುಸಿನ ಹೆಜ್ಜೆ ಹಾಕತೊಡಗಿದಾಗ ಗಂಟೆ ೧೧:೩೦.ಇಲ್ಲಿಗೆ ಧರ್ಮ ತನ್ನ ನಿಯತ್ತನ್ನು ಬದಲಿಸಿ ಬೇರೆ ಗುಂಪನ್ನು ಸೇರಿಯಾಗಿತ್ತು.



ಕುಮಾರಪರ್ವತವನ್ನೇರಿದ ಮೇಲೆ, ಶಿಖರದ ತುದಿಯಲ್ಲಿ ನಿಂತು ವಿಜಯದ ಸಂಕೇತವನ್ನು ತೋರಿಸುತ್ತಿರುವ ನಾವು

ಹೆಗ್ಗಡೆ ಮನೆ
ಪುಷ್ಪಗಿರಿಯಿಂದ ಹೆಗ್ಗಡೆ ಮನೆಯವರೆಗಿನ ದಾರಿ ಕಾಡು ದಾರಿ, ೫ ಕಿ ಮೀ. ದಾರಿಯಲ್ಲಿ ಕೆಲವು ದೊಡ್ಡ ಕಡಿದಾದ ಬಂಡೆಗಳನ್ನು ಇಳಿದೆವು. ನಾವು ಹತ್ತಿದ ದಾರಿಗೆ ಹೋಲಿಸಿದರೆ ಈ ದಾರೆ ಸ್ವಲ್ಪ ಕಡಿದು ಮತ್ತು ದುರ್ಗಮ ದಾರಿ ಎನ್ನಬಹುದು. ಕೆಲವು ೬೦-೮೦ ಡಿಗ್ರೀ ಕೋನದ ದೊಡ್ದ ಬಂಡೆಗಳನ್ನು ಇಳಿಯಬೇಕಾಯಿತು. ನಾನಂತೂ ನನ್ನ ಭಾರವಾದ ದೇಹದ ಗುರುತ್ವಾಕರ್ಷಣ ಕೇಂದ್ರ ಬಿಂದುವನ್ನು (centre of gravity) ನಂಬದೆ ತೆವಳುವುದಕ್ಕೆ ಮೊರೆ ಹೋದೆ. ಇದರಿಂದ ನಡೆಯಲು ಬೇಕಾದ ಸ್ವಲ್ಪ ಶ್ರಮ ಉಳಿಸಿದೆ. ಚಡ್ಡಿ ಮತ್ತು ಚೀಲಗಳನ್ನು ಸವೆಸಿದೆ. ಇಷ್ಟೆಲ್ಲಾ ಕಾಡು ಸುತ್ತಿದರೂ ಒಂದೂ ಕಾಡು ಪ್ರಾಣಿ ಕೂಡ ನೋಡಲು ಸಿಗಲಿಲ್ಲವೆಲ್ಲಾ ಎಂದು ಶಪಿಸಿ ಮುನ್ನಡೆದು ಹೆಗ್ಗಡೆ ಮನೆಯ ಅರಣ್ಯ ಇಲಾಖೆಯ ಕಛೇರಿ ಸೇರಿದಾಗ ೨:೩೦. ಅರಣ್ಯ ಸಿಬ್ಬಂದಿಗಳನ್ನು ಮೋಟಾರು ವಾಹನಕ್ಕೆ ವಿಚಾರಿಸಲಾಗಿ, ಅವರಿಂದ ಋಣಾತ್ಮಕ/ನಕಾರಾತ್ಮಕ ಉತ್ತರ ಬಂದು ಬೀದಳ್ಳಿ ಗೆ ನಡೆದೇ ಹೋಗಬೇಕೆಂದು ಸೂಚಿಸಿದರು. ಹಾದಿ ಅಗಲವಾದ ರಸ್ತೆಯಾದರೂ ೧.೫ ಗಂಟೆಗಳೊಳಗೆ ೪ ಕಿ ಮೀ ಕ್ರಮಿಸಿ ಕನಿಷ್ಟ ೪:೦೦ ಗಂಟೆಯ ಒಳಗಾದರೂ ಬೀದಳ್ಳಿ ಸೇರಿ ಬಸ್ ಹಿಡಿಯಬೇಕಾಗಿತ್ತು. ಅಲ್ಲಿ ಒಬ್ಬ ಸಿಬ್ಬಂದಿ, ಮುಂದೆ ಒಂದು ಕಾಲು ದಾರಿ ಇರುವದಾಗಿ ಹೇಳಿ ಅಲ್ಲಿಂದ ಹೊರಟರೆ ನಾವು ೧ ಕಿ ಮೀ ದೂರವನ್ನು ಉಳಿತಾಯ ಮಾಡಿ ಕೇವಲ ೩ ಕಿ ಮೀ ನಡೆದರೆ ಬೀದಳ್ಳಿ ಮುಟ್ಟಬಹುದೆಂಬ ಸೂಚನೆ ಕೊಟ್ಟರು. ನಾವು ಬೇರೇನು ವಿಧಿಯಿಲ್ಲದೆ (ಟೆಂಟ್ ಹಾಕಬಹುದಾಗಿದ್ದರೂ ನಮ್ಮ ಹೊಟ್ಟೆಗಳಿಗೆ ಬೇಕಾದ ಅಗತ್ಯ ಪ್ರಮಾಣದ ವಸ್ತುಗಳಿಗೆ ಕೊರತೆ ಇತ್ತು!) ಬಾಟಲಿಗಳಲ್ಲಿ ನೀರು ತುಂಬಿಸಿ ಕಾಲಿಗೆ ಬುದ್ಧಿ ಹೇಳಿದೆವು.

ಶಿಖರದ ತುದಿಯಲ್ಲಿನ ದೇವಾಲಯದ ಮೇಲೆ ವಿರಮಿಸುತ್ತಿದ್ದ ಪಕ್ಷಿ (ಹೆಸರು ಗೊತ್ತಿಲ್ಲ)

ನಾಡಿನಲ್ಲೇ ಕಳೆದು ಹೋದೆವು!
ನಮಗೆ ಕಂಡ ಕಾಲು ದಾರಿ ಹಿಡಿದು ಹೊರಟೆವು. ಸಂಶಯವಿದ್ದರೂ ಯಾರಿಗೂ ಹಿಂದೆ ನಡೆದು ಸಂಶಯ ನಿವಾರಿಸಿಕೊಳ್ಳುವಷ್ಟು ಸಮಯ, ಶಕ್ತಿ ಇಲ್ಲದೆ ಹೋದದ್ದರಿಂದ, ಮತ್ತು ಬಸ್ ಹಿಡಯಲೇಬೇಕೆಂಬ ಛಲದಿಂದ ಬಿರುಸಿನ ಹೆಜ್ಜೆ ಹಾಕಿ ಸುಮಾರು ಒಂದೂ ವರೆ ಕಿ ಮೀ ನಡೆದಾಗ, ಚಾರಣಿಗರ ಸ್ವರ್ಗದಿಂದ ಇಳಿದು ಬಂದ ಅದೃಷ್ಟದ ಫಲವೋ ಏನೋ ಅಲ್ಲೇ ಒಬ್ಬ ವ್ಯಕ್ತಿ ದನ ಕಾಯುತ್ತಿದ್ದುದು ಕಂಡು ಬಂತು. ನಾವು ಬೀದಳ್ಳಿ ಬಗ್ಗೆ ವಿಚಾರಿಸಿದಾಗ, ವಿಕೃತ ಸಂತೋಷ ಪಡೆದುಕೊಳ್ಳುವ ಸರದಿ ಆ ಮನುಷ್ಯನದಾಗಿತ್ತು. ಹ ಹ ಹ ಈ ಕಡೆ, ಈ ಗುಡ್ಡಕ್ಕೆ ಯಾಕೆ ಬಂದಿರಿ? ತಪ್ಪು ದಾರಿ ಹಿಡಿದಿದ್ದೀರಿ ಎಂದು ಒಮ್ಮೆಮ್ಮೆ ನಕ್ಕಾಗಲೂ ನೋಯುತ್ತಿದ್ದ ಕಾಲಿನ ಮೇಲೆ ಯಾರೋ ಮರದ ದಿಮ್ಮಿಯಿಂದ ಬಾರಿಸಿದಂತಿತ್ತು! ಮತ್ತೆ ಬಂದ ದಾರಿಯಲ್ಲೇ ಪೂರ್ತಿ ಹಿಂದಿರುಗಿ, ಬೇರೆ ತಿರುವಿನಲ್ಲಿ ಸಿಗುವ ಕಾಲು ದಾರಿ ಹಿಡಿಯಲು ಸೂಚಿಸಿದರು. ಅರಣ್ಯ ಸಿಬ್ಬಂದಿಗೆ ಹಿಗ್ಗಾ ಮುಗ್ಗಾ ಬೈದುಕೊಂಡು ಮತ್ತೆ ೧.೫ ಕಿ ಮೀ ಕ್ರಮಿಸಿ ಹಿಂತಿರುಗಿದ್ದಾಯಿತು. ಬೆಳಗ್ಗಿನಿಂದ ತಿಂದದ್ದು ಬ್ರೆಡ್ ಬಿಟ್ಟರೆ ಬೇರೇನೂ ಇಲ್ಲ, ಕ್ರಮಿಸಿದ್ದು ೧೩ ಕಿ ಮೀ. ಈಗ ಪಿಂಗನ ಅಮ್ಮ ಕೇಳಿದ ಪ್ರಶ್ನೆಯನ್ನು ಕೂಡ ಯೋಚಿಸುವುದಕ್ಕೆ ದಿಗಿಲಾಗುತ್ತಿತ್ತು, ಯಾಕೆಂದರೆ ತಿನ್ನಲೂ ಶ್ಯಾವಿಗೆ ಕೂಡ ಇರಲಿಲ್ಲ! ಇನ್ನು ಆನೆ ಕಾಲೇ ಮುರಿದವನಂತೆ ನರಳಲು ಶುರು ಮಾಡಿದ, ನನ್ನಿಂದ ಇನ್ನಾಗುವುದಿಲ್ಲ, ನೀವು ಹೊರಡಿ ನಾನು ಇಲ್ಲೇ ಇದ್ದು ನಾಳೆ ಬರುತ್ತೇನೆಂದು ಕಣ್ಣೀರಿಡತೊಡಗಿದ! ನಾನು ಮತ್ತು ಪಿಂಗ, ಕಾಲು ದಾರಿಯನ್ನು ಹಿಡಿದು ಅಲ್ಲೇ ೧ ಕಿ ಮೀ ದೂರದಲ್ಲಿರುವ ಹತ್ತಿರದ ಊರಿಗೆ ಹೋಗಿ ಆನೆಯನ್ನು ಸಾಗಿಸಲು ಯಾವುದಾದರೂ ಟ್ರಕ್ ವ್ಯವಸ್ಥೆ ಮಾಡುವ ಸಲುವಾಗಿ ಹೊರಡಲು ಸನ್ನದ್ಧವಾಗುವುದಕ್ಕೂ, ಹಸು ಮೇಯಿಸುತ್ತಿದ್ದ ಆ ವ್ಯಕ್ತಿ ನಾವಿದ್ದಲ್ಲಿ ಬರುವುದಕ್ಕೂ ಸರಿಯಾಗಿ, ಇನ್ನು ದಾರಿ ತಪ್ಪುವುದಿಲ್ಲ ಎಂಬ ಖಾತ್ರಿಯಾಗಿ, ಕುಂಟ ಮತ್ತು ಕುಂಟಾನೆಯನ್ನು ಅಲ್ಲೆ ದಾರಿಯಲ್ಲಿ ಕೂರಿಸಿ ನಮ್ಮ ಚೀಲಗಳನ್ನು ಕಾಯಲು ಹೇಳಿ, ಆ ವ್ಯಕ್ತಿಯ ಜೊತೆಗೆ ಊರಿಗೆ ಹೊರಟೆವು.
ಹಲವರದ್ದು ಕಾಡಿನಲ್ಲಿ ಕಳೆದು ಹೋಗುವ ರೋಚಕ ಕಥೆಯಾದರೆ ನಮ್ಮದು ನಾಡಿನಲ್ಲಿ ಕಳೆದು ಹೋದ ವಿರೋಚಕ ಕಥೆ!

ಜೀಪು, ಸೋಮವಾರ ಪೇಟೆ, ಬೆಂಗಳೂರು ಮತ್ತು ಆಟೋ!
ಅಲ್ಲಿನ ಜನಕ್ಕೆ ಕಾಲು ದಾರಿ ಮತ್ತು ಕಾಡು ದಾರಿ ಎರಡೂ ಒಂದೆ. ಆ ದನಗಳನ್ನು ಓಡಿಸಿ ಹೋಗುತ್ತಿದ್ದ ಆ ಮನುಷ್ಯನ ವೇಗಕ್ಕೆ ನಾವೂ ಕೂಡ ಓಡಿ ಊರು ತಲುಪಿದೆವು. ನಮ್ಮ ಗೆಳೆಯನೊಬ್ಬನಿಗೆ ಕಾಲು ಉಳುಕಿ ನೋವಾಗಿದೆ ಎಂದು ಹೇಳಿದಾಗ ಹಳ್ಳಿಗರಿಗೆ ಆತಂಕ, ಪಾಪ ಆನೆಗೆ ಏನಾಯಿತೋ ಎಂದು. ಏಳುವುದಕ್ಕೆ ಆಗ್ತಾ ಇದ್ಯಾ? ಕಣ್ಣು ಬಿಟ್ಟಿದ್ದಾರಾ? ಮುಂತಾದ ಪ್ರಶ್ನೆಗಳಿಗೆ ಉತ್ತರಿಸಲು ಸಾಕು ಬೇಕಾಗಿ ಹೋಯಿತು. ಆನೆಯನ್ನು ಮನಸ್ಸಿನಲ್ಲೆ ಶಪಿಸಿಕೊಂಡು ಸುಮಾರು ಹತ್ತಿಪ್ಪತ್ತು ಜನರಿಗೆ ಉತ್ತರಿಸಿದ್ದಾಯಿತು.ಅಲ್ಲೇ ಇದ್ದ ಒಬ್ಬ ಮಾನವೀಯ ವ್ಯಕ್ತಿಗೆ ನಮ್ಮ ನೋವಿನ ಅರಿವಾಗಿ ಬೀದಳ್ಳಿಯಲ್ಲಿ ಜೀಪಿನ ಒಡೆಯ ತಮ್ಮಣನವರ ಮನೆಗೆ ದೂರವಾಣಿ ಕರೆ ಮಾಡಿದಾಗ, ಅವರ ಹೆಂಡತಿ ಕರೆಗೆ ಉತ್ತರಿಸಿ ತಮ್ಮಣ್ಣನವರು ಗದ್ದೆಯ ಕಡೆ ಹೋಗಿರುವುದಾಗಿ, ಬಂದ ತಕ್ಷಣ ಕಳಿಸಿಕೊಡುವುದಾಗಿ ತಿಳಿಸಿದರು. (ನಮ್ಮ ಎಲ್ಲರ ಮೊಬೈಲ್ ಫೋನುಗಳೂ ಅಷ್ಟರಲ್ಲಿ ಸತ್ತು ಹೋದದ್ದು ನಮ್ಮ ದುರ್ದೈವ!).೨ ಲೋಟ ಕಾಫಿ ಕೂಡ ಕೊಟ್ಟರು. ಅಮೃತ ಪಾನ ಮಾಡಲಾಗಿ, ಅಲ್ಲೆ ಇದ್ದ ಡಾಂಬರು ರಸ್ತೆಯಲ್ಲಿ ಬರುವ ಆ ಒಂದೇ ಜೀಪಿನ ಆಸೆಯಲ್ಲಿ ಕಾಯುತ್ತಾ ಕುಳಿತೆವು.ನಮಗೆ ಅವರು ಬರುತ್ತಾರೊ ಇಲ್ಲವೋ ಎಂಬ ಸಂಶಯವಿದ್ದರೂ ಆ ಊರಿನವರೆಲ್ಲಾ ತಮ್ಮಣನವರು ಹೇಳಿದ ಮೇಲೆ ಬಂದೇ ಬರುತ್ತಾರೆಂಬ ಅಭಯವನ್ನು ಕೊಡುತ್ತಿದ್ದರು. ೫:೦೦ ರಿಂದ ಸುಮಾರು ೬:೩೦ ರ ವರೆಗೆ ಕಾದ ನಂತರ ತಮ್ಮಣ್ಣನವರ ರಥ ಬಂದು ನಮ್ಮನ್ನು ಹತ್ತಿಸಿ ಅರಣ್ಯ ಇಲಾಖೆಯ ಕಛೇರಿಯ ಕಡೆ ಹೊರಟಿತು. ರಾತ್ರಿ ೮:೩೦, ೯:೦೦ ಮತ್ತು ೧೦:೦೦ ಗಂಟೆಗೆ ಬಸ್ಸುಗಳು ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಹೊರಡುವವೆಂದು ತಿಳಿಯಲಾಗಿ, ಸೋಮವಾರ ಪೇಟೆಯವರೆಗೂ ನಮ್ಮನ್ನು ಕೊಂಡೊಯ್ಯಬೇಕೆಂದು ವಿನಂತಿಸಿಕೊಂಡೆವು.ಹೊಡೆತಗಳು ಬಿದ್ದರೆ ಮೇಲಿಂದ ಮೇಲೆ ಬೀಳುತ್ತವೆ ನೋಡಿ, ನಾವು ಜೀಪಿನಿಂದ ಕಚೇರಿ ಕಡೆ ಹೊರಟರೆ ಯಾರೊ ಮೂರ್ಖ ಶಿಕಾಮಣಿಗಳು ರಸ್ತೇಯಲ್ಲೇ ಟೆಂಟ್ ಹಾಕಿದ್ದಾರೆ. ಸುಮಾರು ೧೫ ಕಾಲೇಜು ಹುಡುಗ-ಹುಡುಗಿಯರ ಗುಂಪು.(ಕಾಡಿನಲ್ಲಿ ಅಷ್ಟೋಂದು ಬಯಲು ಜಾಗವಿದ್ದರೂ, ರಸ್ತೆಯಲ್ಲಿ ಟೆಂಟ್ ಹಾಕುವವರು ಮಂದೆ ತಮ್ಮನ್ನು ನಿಯತ ಚಾರಣಿಗರು ಎಂದು ಕರೆದುಕೊಂಡು, ಗುಂಪು ಕಟ್ಟುತ್ತಾರೆ, ಇಂತಹ ಶತ ಮೂರ್ಖರು). ಇಂತ ಮೂರ್ಖರ ಹತ್ತಿರ ಇನ್ನೂ ಟೆಂಟ್ ಬಿಚ್ಚಿಸುವುದು ಕಾಲಹರಣ ಎಂದು ತಿಳಿದು, ಅಲ್ಲಿಂದ ಸುಮಾರು ೧/೩ ಕಿ ಮೀ ನಡೆದು ಹೋಗಿ ಕುಂಟಾನೆ ಮತ್ತು ಕುಂಟನನ್ನು ಕೂಡಿಕೊಂಡು ಜೀಪಿಗೆ ಮರಳಿದೆವು. ಅಲ್ಲೆ ತಮ್ಮಣ್ಣನ ಹತ್ತಿರ ಮಾತಾಡಿಕೊಂಡು ನಿಂತಿದ್ದ ಆ ಚಾರಣಿಗರ ಗುಂಪಿನ ಸದಸ್ಯನೊಬ್ಬನನ್ನು ಯಾರೋ ಎಂದು ತಿಳಿದು ಅಲ್ಲಿ ಟೆಂಟ್ ಹಾಕಿದವರಿಗೆ ಉಗಿದು ನಮ್ಮ ಸೋಮವಾರ ಪೇಟೆಯ ಪ್ರಯಾಣ ಮುಂದುವರೆಸಿದೆವು. ಸುಮಾರು ೨೮ ಕಿ ಮೀ ಪ್ರಯಾಣ. ಸೋಮವಾರ ಪೇಟೆ ತಲುಪಿದಾಗ ೭:೪೫. ತಮ್ಮಣ್ಣನವರಿಗೆ ೭೦೦ ರೂಪಾಯಿಗಳನಿತ್ತು ಅಲ್ಲೇ ಇದ್ದ ಗಣೆಶ ದರ್ಶಿನಿಯಲ್ಲಿ ನಮ್ಮ ಜಠರಾಗ್ನಿಯನ್ನು ಶಮನಗೊಳಿಸಿದಾಗಲೆ ಮಾತುಗಳನ್ನಾಡಲು ಶಕ್ತಿ ಬಂದದ್ದು! ೯:೧೫ ಕ್ಕೆ ಬೆಂಗಳೂರಿಗೆ ಹೊರಟ ultra deluxe ಬಸ್ ಹತ್ತಿ ಕುಳಿತಾಗ ಒಳ್ಳೆ ನಿದ್ದೆ ಆವರಿಸಿತು. ಬೆಂಗಳೂರಿಗೆ ತಲುಪಿದಾಗ ೩:೪೫. ಇನ್ನು ಗೊತ್ತೇ ಇದೆ ಬೆಂಗಳೂರು ಯಾವುದಕ್ಕೆ ಪ್ರಸಿದ್ಧಿ ಎಂದು! ಡಬಲ್ ಮೀಟರ್ ಖ್ಯಾತಿಯಿ ತ್ರಿಚಕ್ರ ವಾಹನ ಆಟೊ ಹಿಡಿದು ಮನೆ ತಲುಪಿದರೆ ಓಡಿದ ಮೀಟರ್ ೮೫ ರೂಪಾಯಿ! (ನ್ಯಾಯಸಮ್ಮತವಾಗಿ ಅಲ್ಲಿಂದ ಗರಿಷ್ಟ ೪೫ ರೂ ಆಗಬೇಕಿತ್ತು) ಜಗಳ ಮಾಡಿದರೂ ಕೊನೆಗೆ ೧೫೦ ರೂ ತೆತ್ತಲೇ ಬೇಕಾಯಿತು. ಮೋಸಕ್ಕೂ ಇತಿ ಮಿತಿ ಇಲ್ಲವೆ?

ಓದುವ ತಾಳ್ಮೆಯಿದ್ದರೆ ಕೊನೆಗೆ ಒಂದಿಷ್ಟು ಸಲಹೆಗಳು!
೧)ಕುಮಾರ ಪರ್ವತ ಏರುವು/ಇಳಿಯುವ ದಾರಿ ಯಾವುದೂ ದುರ್ಗಮವಲ್ಲ. ಕಾಲು/ತೊಡೆಗಳಲ್ಲಿ ಬಲವಿದ್ದರೆ, ಮತ್ತು ಯೋಜನೆಯನ್ನು ಸರಿಯಾಗಿ ಮಾಡಿಕೊಂಡರೆ ನಿಮಗೆ ಬೇರೆ ಯಾವುದೇ ಚಾರಣದ ಅನುಭವವಿಲ್ಲದೇ ಇದ್ದರೂ ಕುಮಾರಪರ್ವತಕ್ಕೆ ಚಾರಣ ಮಾಡಬಹುದು.
೨)ಕನಿಷ್ಟ ಬಟ್ಟೆಗಳನ್ನು ಕೊಂಡೊಯ್ಯಿರಿ. ಚಾರಣದ ಮಧ್ಯೆ ಸ್ನಾನ ಮಾಡಲು ಅವಕಾಶ ಬಹಳ ಕ್ಷೀಣ. ಆದ್ದರಿಂದ ಹೆಚ್ಚು ಬಟ್ಟೆಗಳನ್ನು ಕೊಂಡೊಯ್ಯದಿರಿ.ಚೀಲದ ತೂಕ ಕಡಿಮೆಯಾದಷ್ಟೂ ನಿಮ್ಮ ಚಾರಣದ ವೇಗ ಹೆಚ್ಚಾಗುತ್ತದೆ.
೩)ಟೆಂಟ್, ಮತ್ತು ಬೆಚ್ಚಗಿನ ಉಡುಪುಗಳನ್ನು ಹೊತ್ತೊಯ್ಯುವುದು ಸೂಕ್ತ!
೪)ಒಂದು ಕಡೆಯಿಂದ ಹತ್ತಿ ಮತ್ತೊಂದು ಕದೆಯಿಂದ ಇಳಿಯುವುದು ಸಮಯದ ಸದ್ಬಳಕೆಯಾಗುತ್ತದೆ ಎಂಬುದು ನನ್ನ ಅನಿಸಿಕೆ. ಮತ್ತು ಎರಡೂ ಕಡೆಗಳಲ್ಲಿ ಚಾರಣ ಮಾಡಿದ ತೃಪ್ತಿ.
೫)ಹೆಚ್ಚಿನ ತಿಂಡಿ ತಿನಿಸುಗಳು, ಪಾನೀಯಗಳು ಅದರಲ್ಲೂ ನೀರು ನಿಮ್ಮ ಚೀಲದಲ್ಲಿರಲಿ.

ವಿ ಸೂ : ಮತ್ತೊಮ್ಮೆ ತನ್ನ ಕ್ಯಾಮಾರವನ್ನು ಒದಗಿಸಿದ ಗೆಳೆಯ ಕೃಪಾಶಂಕರ್ ಗೆ ಧನ್ಯವಾದಗಳು.
ಕುಂಟ ತನ್ನ ಕ್ಯಾಮಾರಾದಿಂದ ತೆಗೆದ ಕೆಲವು ಛಾಯಾಚಿತ್ರಗಲನ್ನು ಅವನ ಅನುಮತಿಯಿಲ್ಲದೆ ಪ್ರಕಟಿಸಿದ್ದೇನೆ. ಕುಂಟನಿಗೂ ಅನಂತ ಧನ್ಯವಾದಗಳು.

ಗುರುವಾರ, ಡಿಸೆಂಬರ್ 18, 2008

ಚೂರು ಚಿಂದಿ,

"ಬರಿಯ ನೋವುಗಳಲ್ಲ, ಭಯದ ಆತಂಕಗಳು ಕಾಡುತಿದೆ ವಿಶ್ವವೆಲ್ಲಾ"
೧)
ಭಾರತಕ್ಕೆ ಸಂಬಂಧವಿಲ್ಲದ ಯಾವುದೋ ರಾಷ್ಟ್ರದ ಪತ್ರಕರ್ತ (ಮುಸ್ಲಿಂ ರಾಷ್ಟ್ರ ಎನ್ನಲೇಬೇಕಾಗುತ್ತದೆ), ಇನ್ಯಾವುದೋ ರಾಷ್ಟ್ರದ ಅಧ್ಯಕ್ಷನಿಗೆ ಪತ್ರಿಕಾ ಘೋಷ್ಠಿಯಲ್ಲಿ ಚಪ್ಪಲಿಯಿಂದ ಹೊಡೆದು, ನಂತರ ಜೈಲಿನಲ್ಲಿ ಒದೆಸಿಕೊಳ್ಳುತ್ತಾನೆ. ಬೆಂಗಳೂರಿನ ಒಂದು ಪ್ರತಿಷ್ಟಿತ ಸಂಸ್ಥೆಯ ನೌಕರನಿಗೆ ಆ ಸ್ವಧರ್ಮೀಯ ಮುಸ್ಲಿಮ್ ಪತ್ರಕರ್ತ ನಾಯಕನಾಗಿಬಿಡ್ತಾನೆ. ತನ್ನ ಸಹೋದ್ಯೋಗಿಗಳ ಜೊತೆ ಈ ಕೃತ್ಯವನ್ನು ಒಂದು ಐತಿಹಾಸಿಕ ಮರೆಯಲಾಗದ ಘಟನೆ ಎಂಬಂತೆ ಸಮರ್ಥಿಸಿಕೊಳ್ಳುವುದಲ್ಲದೆ, ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡುತ್ತಾನೆ. ಮೊದಲೇ ೨೬/೧೧ ನಂದು ಮುಂಬೈ ನಲ್ಲಿ ನಡೆದ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕ ಕೃತ್ಯದಿಂದ ನಲುಗಿರುವ ಕೆವವು ನೌಕರರಿಗೆ ಈ ಆಸಾಮಿಯ ಬಗ್ಗೆ ಸಂಶಯ ಬಂದು ಪೋಲೀಸರಿಗೆ ವಿಷಯವನ್ನು ತಿಳಿಸುತ್ತಾರೆ.ಪೋಲೀಸರು ಆ ಮನುಷ್ಯನ ಮನೆಯನ್ನು ಹುಡುಕಿದಾಗ ಭಯೋತ್ಪಾದನೆಯನ್ನು ಸಮರ್ಥಿಸುವ ಕೆಲವು ಲೇಖನಗಳು, ಸಂಸತ್ ಭವನದ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವೆ ಅಪ್ಜಲ್ ಗುರುವಿಗೆ ಕ್ಷಮಾಪಣೆ ಕರುಣಿಸಬೇಕೆಂದು ರಾಷ್ಟ್ರಪತಿಯವರನ್ನು ಕೋರಿ ಬರೆದ ಪತ್ರದ ನಕಲು,ಭಾರತದಲ್ಲಿ ನಡೆದ ಭಯೋತ್ಪಾದನಾ ಕೃತ್ಯಗಳ ಸುದ್ದಿ ಲೇಖನಗಳು ಇತ್ಯಾದಿ ಸಿಗುತ್ತವೆ!!

ಇವೊತ್ತು ಮತ್ತು ನೆನ್ನೆಯ ದಿನಪತ್ರಿಕೆ ಓದಿದರಲ್ಲವೆ? ಜಮೀಲ್ ಎಂಬ ವ್ಯಕ್ತಿಯ ಮೇಲೆ ಮೈಕೋ ಬಾಷ್ (ಕನ್ನಡ ಬಳಗ) ನೌಕರರಿಗೆ ಅನುಮಾನ ಬಂದು ಪೋಲೀಸರಿಗೆ ಹಿಡಿದು ಕೊಟ್ಟಿದ್ದಾರೆ! ಪೋಲೀಸರು, ಭಯೋತ್ಪಾದನ ನಿಗ್ರಹ ಸಮಿತಿ ವಿಚಾರಣೆ ನಡೆಸುತ್ತಿದ್ದಾರೆ!

[ ಸ್ಪಷ್ಟನೆ: ಇಂದಿನ (೧೯/೧೨ ರ) ಸುದ್ದಿಯಂತೆ ಪೋಲೀಸರು ಜಮೀಲ್ ನನ್ನು ಬಿಡುಗಡೆ ಮಾಡಿದ್ದಾರಂತೆ! ಆದರೂ ಉಗ್ರಗಾಮಿಯ ಕ್ಷಮಾಪಣೆ ಕೋರಿ ಪತ್ರ ಬರೆಯುವುದು ದೇಶದ್ರೋಹವಲ್ಲವೆ? ]

೨)
ನಮ್ಮಲ್ಲಿ ಬುದ್ಧಿಜೀವಿ, ಮಾನವ ಹಕ್ಕುಗಳ ರಕ್ಷಕಿ/ಹೋರಾಟಗಾರ್ತಿ , ಬರಹಗಾರ್ತಿ ಇನ್ನೂ ಮುಂತಾದವುಗಳಿಂದ ಕರೆದುಕೊಳ್ಳುವ ಈ ಜೀವಿಯನ್ನು ಇನ್ನೊಂದು ತಲೆಕೆಟ್ಟ ೨೪/೭ ಸುದ್ದಿ ವಾಹಿನಿ (CNN-IBN) ನಡೆಸಿದ ಸಂದರ್ಶನ ತುಣುಕು ನೋಡಿ!
Q : Is Pakistan is responsible? (For 26/11 attack on CST, Taj, Oberai, Nariman Hous)

A: Having closely looked at the Batla house encounter and Parliament attacks, I am not ready to believe what anyone says. I have to see and think for myself. I am not prepared to believe anything. On the other hand, I am prepared to believe anything.

ಇಡೀ ವಿಶ್ವವೇ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವೇ ಈ ಕೃತ್ಯಕ್ಕೆ ಕಾರಣ ಎಂದು ಕ್ಯಾಕರಿಸಿ ಉಗಿಯುತ್ತಿರುವ ಈ ಸಂದರ್ಭದಲ್ಲಿ ಈ ಮಹಿಳೆ ಕೊಟ್ಟಿರುವ ಅರ್ಥಹೀನ ಉತ್ತರ ನೋಡಿ. ಬುದ್ಧಿಜೀವಿ ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ನ ಬುದ್ಧಿಗೇಡಿತನದ ಪರಮಾವಧಿಯೇ?

೩)
ಹೇಮಂತ್ ಕರ್ಕರೆ ಯನ್ನು ಆ ಪಾಕಿಸ್ತಾನಿ ಮುಸ್ಲಿಮ್ ಉಗ್ರಗಾಮಿಯೇ ಸಾಯಿಸಿದ್ದೆ? ನನಗೆ ಸಂದೇಹ ಇದೆ, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು! ಎಂದು ಈ ಮಾನವ ಉರುಹುತ್ತಾನೆ, ನಂತರ ಎಲ್ಲರೂ ಛೀ ಥೂ (ತನ್ನ ಪಕ್ಷದವರೂ ಕೂಡ) ಎಂದು ಉಗಿಯಲು ಶುರು ಮಾಡಿದಾಗೆ ತನ್ನ ಹೇಳಿಕೆಗೆ ತ್ಯಾಪೆ ಹಾಕಿ, ನಾನು ಅಂದದ್ದು ಹಾಗಲ್ಲ, ಕರ್ಕರೆಯವರನ್ನು ಯಾರೋ ದಾರಿ ತಪ್ಪಿಸಿ ತಾಜ್ ಹೋಟೆಲ್ ಕಡೆ ಕಳಿಸುವ ಬದಲು ಆಸ್ಪತ್ರೆ ಬಳಿಗೆ ಕಳಿಸಿದ್ದಾರೆ ಎಂಬ ಮತ್ತೊಂದು ಬೇಜವಬ್ದಾರಿ ಹೇಳಿಕೆ ಕೊಟ್ಟು ತಾನೆಂತ ನಾಚಿಕೆಗೆಟ್ಟವನು ಎಂಬುದು ಸಾಬೀತುಪಡಿಸಿಕೊಳ್ಳುತ್ತಾನೆ!

ಇದು ಅಲ್ಪಸಂಖ್ಯಾತ ವ್ಯವಹಾರ ಕೇಂದ್ರ ಸಚಿವ ಆಂತುಲೆಯ ಅಲ್ಪ ವರ್ತನೆ!

ಹೀಗೆ ಈ ಪ್ರಸಂಗಗಳ ಬಗ್ಗೆ ಬರೆಯುವಾಗ, ಹಿಂದೊಮ್ಮೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿಂದ ಒಂದು ಹಾಡಿನ ಸಾಲು ನೆನಪಿಗೆ ಬಂತು! "ಬರಿಯ ನೋವುಗಳಲ್ಲ, ಭಯದ ಆತಂಕಗಳು ಕಾಡುತಿವೆ ವಿಶ್ವವೆಲ್ಲಾ!" ಈ ಸಾಲು ಇಂದಿನ ದಿನಕ್ಕೆ ಎಷ್ಟು ಉಚಿತ ಅಲ್ಲವೇ?

ಮಂಗಳವಾರ, ಡಿಸೆಂಬರ್ 16, 2008

ಹೊಟ್ಟೆಗೆ ಇಟ್ಟಿಲ್ಲ, ಜುಟ್ಟಿಗೆ ತಾವರೆ ಹೂವ!!


ಫೋಟೋ ಕೃಪೆ (ಪ್ರಜಾವಾಣಿ ದಿನಪತ್ರಿಕೆ)

ಇಂದಿನ ದಿನಪತ್ರಿಕೆಯಲ್ಲಿ ನಾನು ಓದಿದ ಈ ಸುದ್ದಿಯನ್ನು ನೋಡಿ! ೨೦ ಜನರು ಕೂರಬಲ್ಲ ಹವಾನಿಯಂತ್ರಿತ ಬಸ್ ತಂಗುದಾಣ! ಇದನ್ನು ಕಾಯಲು ಒಬ್ಬ ಸಿಬ್ಬಂದಿ ಬೇರೆ! ನಗಬೇಕೋ? ಅಳಬೇಕೋ? ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬೄ ಬೆಂ ಮ ಪಾ) ಉಗಿಬೇಕೋ? ಯಾವ ತಗಡು ತಲೆಯ ಬೇಕುಪ್ಪ (ಹಿಂದಿಯ ಬೇವಕೂಫ್ ಪದದ ಕನ್ನಡ ಅವತರಣಿಕೆ ಇದು) ಅಧಿಕಾರಿಗೆ ಇಂತಹ ಉಪಾಯ/ಯೋಜನೆಗಳು ಹೊಳೆಯುತ್ತವೋ?

ನೀವು ಬೆಂಗಳೂರಿನಲ್ಲಿ ನಡೆದೋ ಅಥವಾ ಸರ್ಕಾರಿ ಬಸ್ ಸೇವಯನ್ನೋ ಉಪಯೋಗಿಸಿ ಸಂಚರಿಸುವವರಾಗಿದ್ದರೆ ಗೊತ್ತಿರುತ್ತದೆ, ಯಾವಾಗಲಾದರೂ ಆತುರವಾಗಿ ಮೂತ್ರವಿಸರ್ಜನೆಮಾಡಬೇಕೆನಿಸಿದರೆ ತಕ್ಷಣಕ್ಕೆ (ತಕ್ಷಣಕ್ಕೇನು , ಅರ್ಧ ಗಂಟೆ ಹುಡುಕಿದರೂ) ಯಾವುದೇ ಶೌಚಾಲಯ ಸಿಗುವುದಿಲ್ಲ! ಕೊನೆಗೆ ಎಲ್ಲವನ್ನೂ ಬಿಟ್ಟು ಮರದ ಮರೆಯಲ್ಲೋ, ಗೋಡೆಯ ಮರೆಯಲ್ಲೋ ಕಾಲು ಎತ್ತಬೇಕಾಗುತ್ತದೆ! ಹೀಗೆ ಆತುರವಾದವರು ನಾಲ್ಕು ಜನ ನೆನ್ನೆ ಉದ್ಘಾಟನೆಗೊಂದ ಹವಾನಿಯಂತ್ರಿತ ಬಸ್ ತಂಗುದಾಣದಲ್ಲಿ ಉಚ್ಚೆ ಉಯ್ದು, ಸುವಾಸನೆ ಬರಿಸಿದಾಗ ಗೊತ್ತಾಗುತ್ತದೆ ಬೄ ಬೆಂ ಮ ಪಾ ಗೆ, ನಮಗೆ ಬೇಕಾಗಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳು, ಹವಾನಿತಂತ್ರಿತ ಬಸ್ ನಿಲ್ದಾಣಗಳಲ್ಲವೆಂದು!

ಬೆಂಗಳೂರಿಗರೂ ಯವೊತ್ತೂ ಈ ಐಶಾರಮ್ಯದ ಸೌಲಭ್ಯಗಳನ್ನು ಕೇಳಿದ್ದಿಲ್ಲ. ಕೇಳಿದ್ಧು ಕೇವಲ ಇಂತಹ ಅತ್ಯವಶ್ಯಕವಾದ ಮೂಲ ಸೌಕರ್ಯಗಳನ್ನಷ್ಟೆ.
೧) ರಸ್ತೆಗಳಲ್ಲಿರುವ ಹೊಂಡ, ಹಳ್ಳಗಳನ್ನು ತಡಕಿ ಹುಡುಕಿ, ಟಾರ್ ತುಂಬಿಸಿ, ದುರಸ್ತಿ ಮಾಡಿಸಿ.

ಸಣ್ಣ ಉದಾಹರಣೆ ನೋಡಿ. ದಿನಾಲು ಮಲ್ಲೇಶ್ವರಮ್ ನ ಸಂಪಿಗೆ ರಸ್ತೆಯಲ್ಲಿ ವಾಹನ ದಟ್ಟಣೆ. ಸಮಸ್ಯೆ ಏನೆಂದರೆ, ಸಂಪಿಗೆ ಚಿತ್ರಮಂದಿರದ ಕಡೆ ಇರುವ ಎಡತಿರುವಿನ ರಸ್ತೆ (ದೇವಯ್ಯ ಉದ್ಯಾನವನ, ಶ್ರೀರಾಮಪುರ, ಸುಬ್ರಮಣ್ಯನಗರಗಳ ಕಡೆ ತಿರುಗುವ ರಸ್ತೆ!) ಗಬ್ಬೆದ್ದು ಹೋಗಿದೆ! ಇದರಿಂದ ವಾಹನಗಳು ಎಡಕ್ಕೆ ಮುಕ್ತವಾಗಿ ತಿರುಗಿಸಲಾಗದೆ ಬಳಸಿ ಬರುವ ಕಾರಣ ನೇರವಾಗಿ ಹೋಗುವ ವಾಹನಗಳು ಕೂಡ ನಿಲ್ಲಬೇಕಾಗುತ್ತವೆ. ಇದರಿಂದ ಗಂಟೆಗಟ್ಟಲೆ ವಾಹನ ದಟ್ಟಣೆ! ಸುಮಾರು ೧೦೦ ಮೀಟರ್ ಈ ರಸ್ತೆಯ ತಿರುವನ್ನು ದುರಸ್ತಿ ಮಾಡಿದರೆ ಸಾಕು, ಸಮಸ್ಯೆ ಬಗೆ ಹರಿಯುತ್ತದೆ!

೨) ಹೆಚ್ಚಿನ ಸಂಖ್ಯೆಯ ಆಕಾಶ ಮಾರ್ಗಗಳನ್ನು (sky walk) ನಿರ್ಮಿಸಿ. (ಇಲ್ಲಿ ಜನಗಳೂ ಕೂಡ ಆಕಾಶ / ಸುರಂಗ ಮಾರ್ಗಗಳನ್ನು ಉಪಯೋಗಿಸಿವ ಮತ್ತು ಅವುಗಳ ಸ್ವಚ್ಚತೆಯನ್ನು ಕಾಪಾಡುವ ಔದಾರ್ಯವನ್ನು ತೋರಿಸಬೇಕಾಗಿದೆ!)

ಕೋರಮಂಗಲದಿಂದ ದೊಮ್ಮಲೂರಿನ ಕಡೆ ಹೋಗುವ ಒಳ ವರ್ತುಲ ರಸ್ತೆಯ ಒಂದು ಬದಿಯಲ್ಲಿ EGL ವ್ಯವಹಾರ ಕ್ಷೇತ್ರ. (Embassy golf view business park). ಇಲ್ಲಿ ನೂರಾರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಸಾವಿರಾರು ಜನರು ಉದ್ಯೋಗ ಮಾಡುತ್ತಾರೆ. ಈ ಪಾದಾಚಾರಿ ಉದ್ಯೋಗಿಗಳಿಗೆ ಈ ವರ್ತುಲ ರಸ್ತೆ ದಾಟುವುದು ಎಂತ ಸಾಹಸ ಕಾರ್ಯ ನೋಡಬೇಕು. (ಯಾವುದೇ ಕಡಿದಾದ ಬೆಟ್ಟದಲ್ಲಿ ಚಾರಣ ಮಾಡುವ ಸಾಹಸಕ್ಕಿಂತ ಕಡಿಮಿಯೇನಿಲ್ಲ!). ಇಲ್ಲಿ ಒಂದು ಆಕಾಶ ಮಾರ್ಗ ನಿರ್ಮಾಣವಾದರೆ, ಸಾವಿರಾರು "ಪ್ರಙ್ನಾವಂತ" ಸಿಬ್ಬಂದಿಗಳ ಕಷ್ಟ ಕಳೆಯುತ್ತದೆ! (ಯಾರಾದರೂ ಕುಮಾರನಂತ ರಾಜಕಾರಣಿಗಳ ಛೇಲಗಳು ಬೄ ಬೆಂ ಮ ಪಾಲಿಕೆಯಲ್ಲಿದ್ದರೆ, ಐ ಟಿ ಮಂದಿಗೂ ಕಷ್ಟ ಗೊತ್ತಾಗಲಿ ಎಂಬ ಉಡಾಫೆ, ದುರಹಂಕಾರದ ಮಾತುಗಳನ್ನು ಆಡಬಹುದು, ಆದರೆ ವಿಧಿ, ಇಲ್ಲಿ ಐ ಟಿ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಮತ್ತು ಎಲ್ಲ ರೀತಿಯ ಸಿಬ್ಬಂದಿ ವರ್ಗದವರೂ ರಸ್ತೆ ದಾಟುತ್ತಾರೆ!)

೩) ಹೆಚ್ಚಿನ ಶೌಚಾಲಯನ್ನು ನಿರ್ಮಿಸಿ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಸ್ವಚ್ಚತೆ ಕಾಪಾಡಿ.

ಈಗ ಬೃಹತ್ ಮರದ ಕೆಳಗೆ ನಿರ್ಮಿಸಿರುವ ಈ ಐಶಾರಾಮಿ ಹವಾನಿಯಂತ್ರಿತ ಬಸ್ ತಂಗುದಾಣನ ಹಿಂದೆ ಒಂದು ದುರ್ವಾಸನೆ ಬೀರುವ ಒಂದು ಶೌಚಾಲಯ ಇತ್ತು. (ರಿಯಲ್ ಎಸ್ಟೇಟ್ ಭರಾಟೆಯಲ್ಲಿ ಈಗ ಕಾಣೆಯಾಗಿರಲೂಬಹುದು). ಈ ಶೌಚಾಲಯದ ನಿರ್ವಹಣೆ ಎಷ್ಟು ಕೆಟ್ಟದಾಗಿತ್ತೆಂದರೆ ಎಷ್ಟೋ ಸೂಕ್ಷ್ಮಮತಿಗಳು ಅಲ್ಲಿ ಮೂತ್ರಕ್ಕೆಂದು ಹೋಗಿ ವಾಂತಿ ಮಾಡಿ ಬರುತ್ತಿದ್ದರು. ಇಂತಹ ಮೂಲಭೂತ ಸೌಕರ್ಯಗಳ ಕಡೆ ಬೄ ಬೆಂ ಮ ಪಾ ಗಮನ ಹರಿಸಬೇಕು.

ಹೆಚ್ಚಿನ ಸಾಮಾನ್ಯ ಛಾವಣಿ ಇರುವ ಬಸ್ ತಂಗುದಾಣಗಳನ್ನು ನಿರ್ಮಿಸಿ, ಹೆಚ್ಚಿನ ಬಸ್ ಗಳನ್ನು ಓಡಿಸಿ, ಮರಗಳನ್ನು ಕಡಿಯದೆ ರಸ್ತೆ ಅಗಲೀಕರಣ, ಉತ್ತಮ ರಸ್ತೆಗಳ ನಿರ್ಮಾಣ ಮಾಡಿ.

ಇಂತಹ ತೊಂದರೆಗಳು ಇನೂ ಬಹಳಷ್ಟಿವೆ. ಉದಾಹರಣೆಗಳಂತೂ ಅಸಂಖ್ಯಾತ!

ಸ್ಪರ್ಧಾತ್ಮಕವಲ್ಲದ ಅಧಿಕಾರಿಗಳು, ತಲೆಕೆಟ್ಟ ಜನ ನಾಯಕರನ್ನು ಕಟ್ಟಿಕೊಂದು ಇವುಗಳನ್ನೆಲ್ಲಾ ಅಪೇಕ್ಷಿಸುವುದು ನನ್ನದೂ ಸ್ವಲ್ಪ ಮೂರ್ಖತನವೇ?

ಏನಂತೀರಾ?

ಸೋಮವಾರ, ಡಿಸೆಂಬರ್ 15, 2008

೪ ನೇ ಪೀಳಿಗೆ ಭಾರತಕ್ಕೆ ಬರುವುದೆಂದು?

೩ ನೇ ಪೀಳಿಗೆಗೇ ಕಿತ್ತಾಟಗಳು ನಡೆಯುತ್ತಲೇ ಇವೆ. ಹಣಕಾಸು ಸಚಿವಾಲಯ ಏರಿಗೆಳೇದರೆ, ದೂರ ಸಂಪರ್ಕ ಸಚಿವಾಲಯ ನೀರಿಗೆಳೆಯುತ್ತದೆ! (ಯಾರ ಯಾರ ಸಚಿವರ, ಇವರ ಮಕ್ಕಳ, ದುಡ್ಡು ಯಾವ ಯಾವ ಸಂಸ್ಥೆಗಳಲ್ಲಿ ಹೂಡಿಕೆಯಾಗಿದೆಯೋ?).ಇನ್ನು TRAI, DOT ಇವುಗಳ ಮಾತುಗಳಿಗೆ ಕವಡೆ ಕಿಮ್ಮತ್ತಿಲ್ಲ. ಈ ಸಂಸ್ಥೆಗಳು ಕೊಡುವ ವರದಿಗಳು ಕೂಡ ಒಂದೊಕ್ಕೊಂದು ಸಾಮ್ಯವಿಲ್ಲದವು. ಒಂದೊಂದು ವರದಿಗಳೂ ಒಂದೊಂದು ಸಂಸ್ಥೆಗೆ ಉಪಕಾರಿಯಾಗಿರುವಂತವು. ನೀವು ಊಹಿಸಿರಬೇಕು ಇಂದಿನ ಚರ್ಚೆ ೩ ನೇ ಮತ್ತು ೪ ನೇ ಪೀಳಿಗೆಯ ದೂರಸಂಪರ್ಕ ತಂತ್ರಙ್ನಾನ.(3G and 4G Communication technologies)

೧೨/೧೨/೦೮ ರ ದಿನಪತ್ರಿಕೆಗಳ ಮೇಲೆ ನೀವು ಕಣ್ಣಾಡಿಸಿದ್ದರೆ, ೩ ನೇ ಪೀಳಿಗೆಯ ದೂರಸಂಪರ್ಕ ಸೇವೆಯಲ್ಲಿ ಒಂದಾದ UMTS ತಂತ್ರಙ್ನಾನ ಭಾರತಕ್ಕೆ ಅಂಬೆಗಾಲಿಟ್ಟಿರುವ ಸುದ್ದಿಯನ್ನು ನೀವು ಓದಿರಬಹುದು. ಸದ್ಯಕ್ಕೆ ದೆಹಲಿಯಲ್ಲಿ ಟಾಟಾ ಮತ್ತು ಕೇಂದ್ರ ಸರ್ಕಾರ ಒಡೆತನದ ಎಂ ಟಿ ಎನ್ ಎಲ್ ಗ್ರಾಹಕರಿಗೆ ಈ ಸೇವೆ ಲಭ್ಯವಿದೆಯಂತೆ. ವಿವಿಧ ಸೇವಗಳ ದರಗಳ ಬಗ್ಗೆ ಇನ್ನೂ ಮಾಹಿತಿ ಇಲ್ಲ! (ಹಿಂದೊಮ್ಮೆ ಬಿ ಎಸ್ ಎನ್ ಎಲ್, ಮತ್ತೊಂದು ೩ ಪೀ ತಂತ್ರಙ್ನಾನವಾದ E V D O ಆಧಾರಿತ ಸೇವೆಯನ್ನು ಒದಗಿಸುವುದಾಗಿ ಹೇಳಿಕೊಂಡು, ಕೆಲವು ಕಡೆ ಪ್ರಯೋಗ ಕೂಡ ಮಾಡಿತ್ತು ಎಂಬುದನ್ನು ಇಲ್ಲಿ ನೆನೆಸಿಕೊಳ್ಳಬೇಕು)

ಈಗಾಗಲೇ ಯೂರೋಪ್ ಮತ್ತು ಇತರ ಖಂಡಗಳಲ್ಲಿ ಬಳಸಲ್ಪಡುತ್ತಿರುವ ಈ ೩ಪೀ (UMTS, EVDO /CDMA REV-A/B- ಇದು ಹೆಚ್ಚಾಗಿ ಉತ್ತರ ಅಮೇರಿಕ ದಲ್ಲಿ ಬಳಕೆಯಲ್ಲಿರುವ) ಯಿಂದ ೩.೫ ಪೀ (HSDAP/HSUPA) ಸೇವೆಗಳು ಇನ್ನೂ ಈಗ ಭಾರತಕ್ಕೆ ಅಂಬೆಗಾಲಿಡುತ್ತಿರುವುದು ಖೇದಕರ ಸಂಗತಿ. ನೀವು ಇತಿಹಾಸ ಗಮನಿಸಿದರೆ ಈ ೩ ಪೀಳಿಗೆಯ UMTS ಸೇವೆ ಯೂರೋಪಿನಲ್ಲಿ (ಇಂಗ್ಲೇಂಡ್ ಮತ್ತು ಇಟಲಿ ದೇಶಗಳಲ್ಲಿ) ಮಾರ್ಚ್ ೨೦೦೩ ರಲ್ಲಿ ಮೊದಲ ಬಾರಿಗೆ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾದದ್ದು, ಊಹಿಸಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂದು?

ಏನಿದು ನಾಲ್ಕನೆ ಪೀಳಿಗೆ ದೂರಸಂಪರ್ಕ ತಂತ್ರಙ್ನಾನ? ನಮಗೇಕೆ ಬೇಕು?
ಯಾವುದೇ ದೇಶದ ಆರ್ಥಿಕ ಬಲವರ್ಧನೆಗೆ ದೂರಸಂಪರ್ಕ ತಂತ್ರಙ್ನಾನ/ಸಾಧನಗಳ ಕೊಡುಗೆ ಅಪಾರ. ಇಂದು ಭಾರತ ದೇಶದಿಂದ ಸಾಫ್ಟ್ ವೇರ್ ರಫ್ತಾಗುತ್ತಿರುವುದು ದೂರ ಸಂಪರ್ಕ ಸೇವೆಗಳಿಂದ! ಆದರೆ ಇಂದಿನ ಅವಶ್ಯಕತೆ ಇನ್ನೂ ಉತ್ತಮ ವೇಗವನ್ನು ಒದಗಿಸಬಲ್ಲ ತಂತಿ ರಹಿತ ದೂರಸಂಪರ್ಕ ಸೇವೆಗಳು. ನಮ್ಮಲ್ಲಿ ಇಂದು "Broadband" ಎಂದು ಕರೆಸಿಕೊಳ್ಳುವ ತಂತಿ ಸಹಿತ ಸೇವೆಯ ವೇಗ ಕನಿಷ್ಟ ೨೫೬ kB/s. ಗರಿಷ್ಟ ೨ mB/s.ಆದರೆ ಗಮನಿಸಿ ಅಮೇರಿಕಾದಲ್ಲಿ ಯಾವುದೇ ದೂರಸಂಪರ್ಕ ಸೇವೆ "Broadband" ಎಂದು ಕರೆಸಿಕೊಳ್ಳಬೇಕಾದರೆ ಅದು ಕನಿಷ್ಟ ೧ mB/s ವೇಗವನ್ನು ಒದಗಿಸಬೇಕು!ಇನ್ನು ತಂತಿರಹಿತ ಸೇವೆಯಲ್ಲಿರುವುದು ೨ ಪೀ ಮತ್ತು ೨.೫ ಪೀ ತಂತ್ರಙ್ನಾನ ಎನಿಸಿಕೊಳ್ಳುವ GSM ಮತ್ತು GPRS ಸೇವೆಗಳು ಒದಗಿಸುವ ವೇಗ ೧೪೪ kB/s ಮೀರಿಲ್ಲ. ಅಂದರೆ ಈ ಸೇವೆಗಳಲ್ಲಿ ಕರೆಗಳು ಮಾತ್ರ ಲಭ್ಯ. IPTV (ಅಂತರ್ಜಾಲ ಆಧಾರಿತ ದೂರದರ್ಶನ ಸೇವೆ) ,real time video streaming (ತತ್ ಕ್ಷಣದ ದೃಶ್ಯಾವಳಿ ಬಿತ್ತರ/ಪ್ರಸಾರ ಎನ್ನಬಹುದೆ?), online gaming (ಅಂತರ್ಜಾಲದ ಆಟ) ಸೇವೆಗಳಿಗೆ ಬೇಕಾದ data ವರ್ಗಾವಣೆ ಅಸಾಧ್ಯ! ಸಾಧ್ಯವಾದರೂ ಆಮೆ ವೇಗದಲ್ಲಿ. ಆದ್ದರಿಂದ ಸೇವೆಯ ಗುಣಮಟ್ಟ (QOS - Quality of Service) ಕಳಪೆ. ಈಗ ಬೇರೆ ದೇಶಗಳಲ್ಲಿ ಲಭ್ಯವಿರುವ ೩.೫ ಪೀ HSDPA/HSUPA ತಂತಿರಹಿತ ತಂತ್ರಙ್ನಾನ ಸೇವೆಗಳು ಕ್ರಮವಾಗಿ downlink ಮತ್ತು uplink ಗಲಲ್ಲಿ (ಇಳಿಕಾ ವರ್ಗಾವಣಾ ವೇಗ ಮತ್ತು ಏರಿಕೆ ವರ್ಗಾವಣೆ ವೇಗ) ೧೪ mB/s ಮತ್ತು ೫mB/s ಒದಗಿಸುತ್ತವೆ.(ಇದು ಸೇವೆಯನ್ನು, ಒಂದು cell ವ್ಯಾಪ್ತಿಯಲ್ಲಿ ಒಬ್ಬನು ಮಾತ್ರ ಉಪಯೋಗಿಸಿತಿದ್ದು, ಉತ್ತಮ ಸನ್ನಿವೇಶದ theoritical ಸಂಖ್ಯೆ). ಅಲ್ಲದೆ ಇದು ತಡೆರಹಿತ ಸಂಚಾರ ಸೇವೆಯನ್ನೂ (Seamless mobility) ಕೂಡ ಒದಗಿಸುತ್ತದೆ.

ಇದೇ ರೀತಿ ೪ ಪೀ ಎಂದು ಕರೆಸಿಕೊಳ್ಳುವ L T E (Long term Evolution) ಉತ್ತಮ ಸನ್ನಿವೇಶದಲ್ಲಿ ೧೦೦ mB/s ವೇಗವನ್ನು ಒದಗಿಸುವ ಭರವಸೆ ನೀಡುತ್ತವೆ. (ಪೂರ್ತಿ ೨೦ MHz ಆವರ್ತನ ಶ್ರೇಣಿಯಲ್ಲಿ - Bandwidth). ೪ ಪೀ ಎಂದು ಕರೆಸಿಕೊಳ್ಳುವ ಇತರ ತಂತ್ರಙ್ನಾನಗಳೆಂದರೆ WIMAX ಮತ್ತು UMB (CDMA ಆಧಾರಿತ) ಸೇವೆಗಳು. ಆದರೆ ಈಗಾಗಲೆ UMB ಯನ್ನು ಸೃಷ್ಟಿಸುತ್ತಿದ್ದ qualcomm ಸಂಸ್ಥೆ, ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಆದ್ದರಿಂದ ೪ ಪೀಳಿಗೆಗೆ LTE ಮತ್ತು WIMAX ಗಳು ಪ್ರತಿಸ್ಪರ್ಧಿಗಳು. ಯಾರು ಗೆಲ್ಲುತ್ತಾರೆ ಯಾರು ಬೀಳುತ್ತಾರೆ ನಿರ್ಧರಿಸಲು ಬಹಳ ಸಮಯ ಬೇಕಾಗುತ್ತದೆ. ಆದರೆ ಈ ಎರದೂ ಸೇವಗಳು ೨೦೧೦ ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ! ದೊಡ್ಡ ಪ್ರಶ್ನೆ ಈ ೪ ನೇ ಪೀ ತಂತ್ರಙ್ನಾನ ಭಾರತಕ್ಕೆ ಬರುವುದೆಂದು? ಆದರೆ ಈ ತಂತ್ರಙ್ನಾನದ ಒಂದು ವಿಶೇಷತೆಯೆಂದರೆ ಈ ಸೇವೆಗಳು ೧.೨೫MHz ಯಿಂದ ೨೦ MHz ಆವರ್ತನ ಶ್ರೇಣಿಯಲ್ಲಿ ಕೆಲಸ ಮಾಡುವವವಾಗಿವೆ! (ವೇಗಗಳಲ್ಲಿ ಹೆಚ್ಚು ಕಡಿಮೆ ಇರುತ್ತದೆ). ಅಂದರೆ ೩ನೇ ಪೀ ತಂತ್ರಙ್ನಾನಕ್ಕೆ ಈ ಜನವರಿ ಯಲ್ಲಿ ಹರಾಜಾಗುವ ೫ MHz ತರಂಗಾಂತರ ಶ್ರೇಣಿಯಲ್ಲಿ, UMTS ಸೇವೆ ಒದಗಿಸುವವರು (Service providers) ಮುಂದೆ LTE ಸೇವೆ ಕೂಡ ಒದಗಿಸಬಹುದಾಗಿದೆ. ಇಲ್ಲಿ ಮತ್ತೊಂದು ಪ್ರಶ್ನೆ ಮೂಡುತ್ತದೆ! ಇದಕ್ಕೆ ಮತ್ತೆ ಸರ್ಕಾರಕ್ಕೆ ಹೆಚ್ಚಳ ಶುಲ್ಕ ಕಟ್ಟಬೇಕಾಗುತ್ತದೆಯೆ? ಅಥವಾ ಸರ್ಕಾದವರು LTE ಸೇವೆಗೆ ಕಡ್ಡಾಯ ತರಂಗಾಂತರ ಶ್ರೇಣಿಯ ಹರಾಜು ನೀತಿಯನ್ನು ತಯಾರು ಮಾಡುತ್ತಾರೆಯೆ? ಇದಕ್ಕೆ ಹಿಡಿಯುವ ಕಾಲವೆಷ್ಟು?

ಇನ್ನು ಕೊನೆಗೆ ಮೂಡುವ ಪ್ರಶ್ನೆಗಳು!
ಭಾರತದಲ್ಲಿ ತಂತ್ರಙ್ನಾನದ ಉನ್ನತಿಗೆ ಸರ್ಕಾರದ ಇಛ್ಛಾಶಕ್ತಿ ಸಾಲದೆ?
ತರಂಗಾಂತರ ಶ್ರೇಣಿ (frequency spectrum) ಹರಾಜಿನ ನೀತಿಯನ್ನು ರೂಪಿಸಲು ಇಷ್ಟು ಸಮಯ ಬೇಕೆ?
ಭಯೋತ್ಪಾದನೆ ಯಿಂದ ಹಿಡಿದು ಅಭಿವೃದ್ಧಿ, ತಂತ್ರಙ್ನಾನಕ್ಕೂ ರಾಜಕೀಯ ಬೆರೆಸಬೇಕೆ?

ನೀವೆನ್ನೆನ್ನುತ್ತೀರಿ?

ಗುರುವಾರ, ಡಿಸೆಂಬರ್ 04, 2008

ರತ್ನನ ಜಯಂತಿ


"ಅವರೂ ನಾನೂ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಮೇಲೆ ಕುಳಿತಿದ್ದು ಉಡುಪಿಯಲ್ಲಿ. ೧೯೪೪ ರಲ್ಲಿ ನಡೆದ ನಾಡಹಬ್ಬಕ್ಕೆ ’ವಿ.ಸೀ.’ (ವಿ ಸೀತಾರಾಮಯ್ಯ)ಅವರೊಂದಿಗೆ ನಾನೂ ಹೋಗಿದ್ದೆ. ಅದೇ ಕಾರಣಕ್ಕಾಗಿ ಶ್ರೀ ರಾಜರತ್ನಂ ಅಲ್ಲಿಗೆ ಬಂದಿದ್ದರು. ಆ ಸಂಜೆಯ ಸಮಾರಂಭ ಬೋರ್ಡ್ ಹೈಸ್ಕೂಲ್ ಸಭಾಓಗಣದಲ್ಲಿ ’ವಿ ಸೀ.’ ಅವರ ಅಧ್ಯಕ್ಷತೆಯಲ್ಲಿ ಜರುಗಿತು; ನಾವಿಬ್ಬರೂ ಕವನಗಳನ್ನು ಓದುವ ಕಾರ್ಯಕ್ರಮವಿತ್ತು. ಮೊದಲು ನನ್ನ ಸರದಿ ಬಂತು. ನಾನು ’ರಾಯರು ಬಂದರು’ (’ಮೂಲ’ ಮೈಸೂರು ಮಲ್ಲಿಗೆ ಚಿತ್ರದಲ್ಲಿ ಅಳವಡಿಸಿರುವ ’ರಾಯರು ಬಂದರು ಮಾವನ ಮನೆಗ’ ಕೇಳಿದ್ದೀರಲ್ಲವೆ?) ಕವನವನ್ನು ಓದುತ್ತಿದ್ದಾಗ ಸಭೆಯಲ್ಲಿ ಗದ್ದಲ ಕೇಳಿಸಿತು. ಆಗ ಶ್ರೀ ರಾಜರತ್ನಂ ಎದ್ದು ನಿಂತು, ಅಧ್ಯಕ್ಷರ ಅನುಮತಿ ಪಡೆದು, "ಕಾವ್ಯವಾಚನಕ್ಕೆ ಅವರು ಕೊಂಚ ಹೊಸಬರು ಎಂದು ತೋರುತ್ತದೆ. ಅದೇ ಕವನವನ್ನು ನಾನೀಗ ಓದುತ್ತೇನೆ, ಶಾಂತಿಯಿಂದ ಕೇಳಿ" ಎಂದು ಸಭೆಗೆ ಭಿನ್ನವಿಸಿ ನನ್ನ ಕವನವನ್ನು ಹಾಡಿದರು. ಅವರ ಕಂಚಿನ ಕಂಠದಿಂದ ಮೂಡೀಬಂದ ಆ ಕವನವನ್ನು ಕೇಳಿ ತುಂಬಿದ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆಯಾಯಿತು. ನಾನು ಹಿಗ್ಗಿ ಹೋದೆ."

ಮೇಲಿನ ಮಾತುಗಳನ್ನು (ಆವರಣಗಳಲ್ಲಿರುವುದನ್ನು ಬಿಟ್ಟು) ಕನ್ನಡದ ಖ್ಯಾತ ಪ್ರೇಮ ಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿಯವರು, ಜೆ ಪಿ ರಾಜರತ್ನಂ ರವರ ನೆನಪಿನಲ್ಲಿ ಬರೆದಿರುವುದು!

ಇಂದು "ಗುಂಡ್ಲು ಪಂಡಿತ ರಾಜರತ್ನಂ" ರವರ ಜನ್ಮ ದಿನ.ಇಂದಿಗೆ ರಾಜರತ್ನಂ ರವರು ಹುಟ್ಟಿ ೧೦೦ ವರ್ಷ. ಜನನ : ೦೫/೧೨/೧೯೦೮.

ಹಿಂದೆ ಜೆ ಪಿ ರಾಜರತ್ನಂರವರ ಕಿರು ಪರಿಚಯ ಮಾಡಿಕೊಟ್ಟಿದ್ದೆ! ಇಲ್ಲಿ ಓದಿ!

http://guruve.blogspot.com/2006/10/blog-post_116218904908111393.html


ರಾಜರತ್ನಂ ರವರು ತಮ್ಮ ರತ್ನನ ಪದಗಳು ಮತ್ತು ನಾಗನ ಪದಗಳ ಬಗ್ಗೆ ಸ್ವತ: ಏನು ಹೇಳುತ್ತಾರೆ?
ರತ್ನನ ಪದಗಳು
೧೯೩೨ ರಲ್ಲಿ ನಾನು ರತ್ನನ ಪದಗಳನ್ನು ಬರೆಯ ತೊಡಗಿದಾಗ, ಇಂಥ ಪದ್ಯಗಳನ್ನು ಇಷ್ಟು ಸಂಖ್ಯೆಯಲ್ಲಿ ಬೆರೆಯುವೆನೆಂದು ನಾನೇ ಅಂದುಕೊಂಡಿರಲಿಲ್ಲ. ಆಯಾ ಸಂದರ್ಭದಲ್ಲಿ ನಾನು ವ್ಯಯಕ್ತಿಕವಾಗಿ ಅನುಭವಿಸಿದ ವಿವಿಧವಾದ ಯಾತನೆಗಳನ್ನು ಕುಡುನೊಬ್ಬನು ಹೇಳಿಕೊಂಡ ಹಾಗೆ ಹೇಳಿಕೊಳ್ಳುವುದು ನನಗೆ ಸಹಜವಾಗಿತ್ತು. ಅದುವರೆಗೆ ನಾನು ಬರೆಯುತ್ತಿದ್ದ (’ಶಾಂತಿ’ ಮೊದಲಾದ) ಗ್ರಂಥಸ್ಥ ಭಾಷೆಯ ರೀತಿರಚನೆಗಳೇ ಬೇರೆ; ೧೯೩೨ ರಿಂದ ೧೯೩೪ ರ ವರೆಗೆ ನಾನು ಬರೆದ ಈ ಪದ್ಯಗಳ ರೀತಿ ರಚನೆಗಳೇ ಬೇರೆ. ’ರತ್ನ’ನ ಪ್ರಾಣವಾಗಿದ್ದ ’ನಂಜಿ’ಯ ಮರಣದೊಂದಿಗೆ ಈ ಪದ್ಯಗಳ ಮಾಲೆ ಮುಗಿದುಹೋಯಿತು.

ನಾಗನ ಪದಗಳು
೧೯೩೨-೩೪ ರಲ್ಲಿ ರತ್ನನ ಪದಗಳನ್ನು ಬರೆದಾಗ ನನ್ನನ್ನು ಮೆಟ್ಟಿಕೊಂಡಿದ್ದ ಭೂತಾವೇಶದ ಸ್ವರೂಪವೇ ಬೇರೆ; ೧೯೫೦-೫೨ ರಲ್ಲಿ ನಾಗನ ಪದಗಳನ್ನು ಬರೆದಾಗ ನನ್ನನ್ನು ಮೆಟ್ಟಿಕೊಂಡ ಭೂತಾವೇಶದ ಸ್ವರೂಪವೇ ಬೇರೆ. ಅವುಗಳಲ್ಲಿ ಮೊದಲನೆಯದಕ್ಕಿಂತ ಎರಡನೆಯದರ ಅನುಭವ ಹೆಚ್ಚು ತೀವ್ರವಾದದ್ದು ಹೊರಗಡೆ ನೋಡುವುದಕ್ಕೆ ಸಾಮಾನ್ಯವಾಗಿದ್ದರೂ ತಮ್ಮ ಅಂತರಂಗ ಸಂಪತ್ತಿಯಿಂದ ಆಢ್ಯವಗಿರುವ ನಾಗ-ಮಲ್ಲಿಯ ಸಂಸಾರದ ಚಿತ್ರಣವು ನನಗಂತೂ ತುಂಬ ತೃಪ್ತಿಯನ್ನು ಕೊಟ್ಟಿದೆ. ನಾಗನ ಪದಗಳನ್ನು ರಚಿಸುವಾಗ ನನಗೆ ಆದ ಅನುಭವ ರತ್ನನ ಪದಗಳನ್ನು ಬರೆದಾಗ ಆಗಲಿಲ್ಲ.

ಕೊನೆಗೆ ನಾಗನ ಪದಗಳಿಂದ ಆರಿಸಿದ ಈ ಪದ್ಯ,
ಛೀ!

ಪುಂಡಮಾತು! ಛೀ! ಸುಡು!
ಕಿವಿಗೆ ಕಾದ ಗುಳ!
ಯೇಳಿದೋರ ಬಾಯಾಗೇ
ಬೀಳತೈತೆ ವುಳ!

ಬಂಡಮಾತು ಬರದು - ಸೇದೇ
ವೋಗತೈತೆ ಕೈ!
ತಾಯಿ ಆಲು ಕುಡಿಲಿಲ್ಲಿದು-
ಏನೋ ತಿಂದ ಮೈ!

ಸುಲಬದಾಗೆ ಸಿಕಾಕಿಲ್ಲ
ಮನಸು - ಕೋತಿಮರಿ!
ಮಾತಿಗೊಂದು, ಮೈಯಿಗೆರಡು,
ಅವಕೆ ಕಿತ್ತು ಗರಿ!

ಮನಸಿಗೊಂದು ನೀನೆ ಸದಾ!
ಕನಡಿ ಯೆತ್ತಿ ಯಿಡಿ!
ಯಿದನೆ ಬಾಪು ನಮಗ್ ಯೋಳಿದ್ದು;
"ಮಾಡು - ಇಲ್ಲವೆ ಮಡಿ."

ಬುಧವಾರ, ಡಿಸೆಂಬರ್ 03, 2008

ರಂಗನತಿಟ್ಟು ಮತ್ತು ಅತ್ತಿವೇರಿ ಪಕ್ಷಿಧಾಮಗಳು

[ವಿಶೇಷ ಸೂಚನೆ: ಈ ಬ್ಳಾಗಿನ ಚಿತ್ರಗಳು "Internet Explorer" ನಲ್ಲಿ ವೀಕ್ಷಿಸಿದಾಗ ಸರಿಯಾಗಿ (ಸ್ಥಾನ ಪಲ್ಲಟವಾಗದೆ) ಕಾಣಿಸುತ್ತವೆ.]
ಸುಮಾರು ನನ್ನ ಜೀವನದ ೧೩ ವರ್ಷಗಳು ನಮ್ಮ ಊರಿನಲ್ಲೇ ಕಳೆದಿದ್ದು. ನಮ್ಮ ಊರಿನಲ್ಲಿ ಒಂದು ದೊಡ್ಡ ಕೆರೆಯಿತ್ತು. ಮಳೆಗಾಲದಲ್ಲಿ ಕೆರೆ ಭರ್ತಿಯಾಗಿ ನಮ್ಮ ಹೊಲವನ್ನೂ ಸುತ್ತಿವರೆದುಬಿಡುತ್ತಿತ್ತು. ಇಂತಹ ದೊಡ್ಡ ಕೆರೆಯ ಸುತ್ತಮುತ್ತ ಬಹಳಷ್ಟು ಪಕ್ಷಿಗಳು (ಅಪರೂಪದವು ಕೂಡ) ಬಂದಿರದೆ ಇರಲಾರವು. ಆದರೆ ನಾನೆಂದೂ ಆ ದಿನಗಳಲ್ಲಿ ಹವ್ಯಾಸ, ನೋಡಲು ಚಂದವೆಂದು ಪಕ್ಷಿ ವೀಕ್ಷಣೆ ಮಾಡಿದ್ದೇ ಇಲ್ಲ! ಆ ದಿನಗಳಲ್ಲಿ ನಾನು ಹೆಚ್ಚಾಗಿ ನೋಡಿದ್ದು, ತಿಳಿದಿದ್ದು ಮತ್ತು ಗೊತ್ತಿದ್ದುದು ಕಾಗೆ, ಗುಬ್ಬಿ ಮತ್ತು ಕೊಕ್ಕರೆ ಮೂರೇ ಎನ್ನಬಹುದು. ಇನ್ನೊಂದೆರಡು ಓದಿ ತಿಳಿದಿದ್ದಿರಬಹುದು! ಎಂಥಾ ವಿಪರ್ಯಾಸ! ಅಭಿಯಂತರನಾದ (engineer) ಮೇಲೆ, ಈ ಕಾರ್ಯನಿರತ ಯಾಂತ್ರಿಕ ಜೀವನದ ನಡುವೆ ಇತ್ತೀಚಿಗೆ ಈ ಪಕ್ಷಿವೀಕ್ಷಣೆಯ ಚಪಲ ಹುಟ್ಟಿಕೊಂಡಿದೆ ನನ್ನಲ್ಲಿ.ಇಲ್ಲಿಗೆ ಪೀಠಿಕೆ ಸಾಕು,

ಪಕ್ಷಿ ವೀಕ್ಷಣೆ ಮತ್ತು ಪಕ್ಷಿ ಛಾಯಾಗ್ರಹಣಕ್ಕೆ ಹೊಸಬನಾದ ನಾನು ಸೆರೆ ಹಿಡಿದ ಕೆಲವು ಪಕ್ಷಿಗಳ ಛಾಯಾ ಪಟಗಳು ಅವುಗಳ ಹೆಸರಿನೊಂದಿಗೆ, ಮತ್ತು ಈ ಪಕ್ಷಿಗಳ ವಿಶೇಷತೆಯೇನಾದರೂ ನನಗೆ ಪಕ್ಷಿಧಾಮದ ಸಿಬ್ಬಂದಿಯ ಮೂಲಕವೋ ಅಥವಾ ಇನ್ಯಾವುದೇ ಮಾಧ್ಯಮದ ಮೂಲಕ ತಿಳಿದಿದ್ದರೆ ಅದನ್ನೂ ಪಕ್ಷಿ ಪಟದ ಕೆಳಗೆ ನಮೂದಿಸಲು ಪ್ರಯತ್ನಿಸಿದ್ದೇನೆ. ಬಹಳಷ್ಟು ಪಕ್ಷಿಗಳ ಕನ್ನಡ ಹೆಸರುಗಳಿಗೆ ಪೂರ್ಣಚಂದ್ರ ತೇಜಸ್ವಿಯವರ "ಹಕ್ಕಿ ಪುಕ್ಕ" ಪುಸ್ತಕದಿಂದ ತಿಳಿದುಕೊಂದಿರುವವು.

ರಂಗನತಿಟ್ಟು

(ಮೇಲೆ) ರಂಗನತಿಟ್ಟು ಪಕ್ಷಿಧಾಮದ ಪಕ್ಷಿನೋಟ

(ಮೇಲೆ, ಬಲ, ಕೆಳಗೆ) 'ಐಬಿಸ್ (Ibis) ಪಕ್ಷಿಗಳ' (ಈ ಪಕ್ಷಿಗೆ ಕನ್ನಡ ನಾಮ?) ಆಕರ್ಷಕ ಭಂಗಿಗಳು



(ಮೇಲೆ) 'ಚಮಚ ಕೊಕ್ಕು ಪಕ್ಷಿ'ಯ ಪಾರ್ಶ್ವ ನೋಟ - side view of 'Spoonbill'
(ಬಲ)'[ಬಿಳಿ ಎದೆಯ ಕಿರು?]ಮಿಂಚುಳ್ಳಿ - white breasted kingfisher'
(ಕೆಳಗೆ) ಹಾರುತ್ತಿರುವ ಮೇಲಿನ 'ಮಿಂಚುಳ್ಳಿ'



(ಮೇಲೆ) ಮರದಲ್ಲಿ ನೇತಾಡುತ್ತಿರುವ ’ಹಣ್ಣು ಬಾವಲಿ / ಕಪಟ’? ಗಳು - Fruit Bats
(ಬಲ) ಗುಬ್ಬಚ್ಚಿಯಲ್ಲದ ಈ ಪಕ್ಷಿಯ ಹೆಸರೇನು?
(ಕೆಳಗೆ) ಬಂಡೆಯ ಮೇಲೆ ಬಿಸಿಲು ಕಾಯಿಸುತ್ತಿರುವ 'ಮಾರ್ಷ್ ಮೊಸಳೆಗಳು' - Marsh Crocodiles


ರಂಗನತಿಟ್ಟಿನ ಮತ್ತೊಂದು ವಿಶೇಷ ಅಲ್ಲಿನ ಮಾರ್ಶ್ ಮೊಸಳೆಗಳು! ಇವುಗಳನ್ನು ಕೆಲವೇ ಅಡಿಗಳ ದೂರದಿಂದ ನೋಡಬಹುದು. ಇವುಗಳು ಇಲ್ಲಿಯವರೆಗೂ ಯಾವುದೇ ಮನುಷ್ಯನಿಗೂ ತೊಂದರೆ ಮಾಡಿಲ್ಲವಂತೆ!ರಂಗನತಿಟ್ಟಿನಲ್ಲಿರುವ ಮಾರ್ಷ್ ಮೊಸಳೆಗಳ ಸಂಖ್ಯೆ ೪೦ - ೫೦. ಈ ಮೊಸಳೆಗಲು ಹೆಚ್ಚಾಗಿ ಸಂತಾನೋತ್ಪತ್ತಿ ಮಾಡಿದರೂ, ಇವುಗಳ ಸಂಖ್ಯೆ ೪೦ - ೫೦ ರ ಆಸುಪಾಸಿನಲ್ಲೇ ಇರುವುದು ಒಂದು ರಹಸ್ಯ ಮತ್ತು ಆಶ್ಚರ್ಯಕರವಾದ ಸಂಗತಿ ಎನ್ನುತ್ತಾರೆ ರಂಗನತಿಟ್ಟಿನ ಸಿಬ್ಬಂದಿ.
_____________________________________________________________________________________
ಅತ್ತಿವೇರಿ ಪಕ್ಷಿಧಾಮ

(ಮೇಲೆ) ಅತ್ತಿವೇರಿ ಪಕ್ಷಿಧಾಮದ ಪಕ್ಷಿನೋಟ

ಅತ್ತಿವೇರಿ ಪಕ್ಷಿಧಾಮ ಹುಬ್ಬಳ್ಳಿ ಯಿಂದ ಸುಮಾರು ೪೫ ಕಿ ಮೀ ಗಳು. ಹುಬ್ಬಳ್ಳಿಯಿಂದ ಮುಂಡಗೋಡ್ (ಉತ್ತರ ಕನ್ನಡ ಜಿಲ್ಲೆ) ಗೆ ಹೋಗುವ ದಾರಿಯಲ್ಲಿದೆ.(ಪಕ್ಷಿಧಾಮ ಇರುವುದು ಹಾವೇರಿ ಜಿಲ್ಲೆಯಲ್ಲಿ). ಹುಬ್ಬಳ್ಳಿಯಿಂದ ಬಸ್ ಹತ್ತಿ, ಪಕ್ಷಿಧಾಮದ ತಿರುವಿನಲ್ಲಿ ಕೋರಿಕೆಯ ಮೇರಿಗೆ (ಅಲ್ಲಿ ನಿಲ್ದಾಣ ಇಲ್ಲ್ಲ) ಇಳಿದುಕೊಂಡು, ಅಲ್ಲಿಂದ ನಾಲ್ಕು ಕಿ ಮೀ ಪಕ್ಷಿಧಾಮಕ್ಕೆ. ನಡೆದೇ ಹೋಗಬೇಕು. ಬೇರೆ ಯಾವುದೇ ಸರ್ಕಾರಿ ವಾಹನಗಳಿಲ್ಲ. ಆರ್ಥಿಕವಾಗಿ ಬಹಳ ವ್ಯಥೆ ಪಡದೆ ಇರುವವರು ಮುಂಡಗೋಡ್ ಗೆ ಹೋಗಿ ತ್ರಿಚಕ್ರ ವಾಹನದಲ್ಲಿ (auto) ಕೂಡ ಹೋಗಬಹುದು. ಒಂದು ಕಡೆಗೆ ಸುಮಾರು (೧೮ ಕಿ ಮೀ ಪ್ರಯಾಣ).

ಈ ವರ್ಷ ಮಳೆ ಪ್ರಮಾಣ ಕಡಿಮೆ ಇದ್ದು, ಕೆರೆ ಪೂರ್ಣ ತುಂಬದೆ ಇದ್ದ ಕಾರಣ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯ ಕಡಿಮೆಯಾಗಿತ್ತು.

ಇಲ್ಲಿನ ಸಿಬ್ಬಂದಿ ವರ್ಗ ಬಹಳ ಸ್ನೇಹಜೀವಿಗಳು. ಆಸಕ್ತಿ ಯಿದ್ದವರಿಗೆ ಪಕ್ಷಿಗಳನ್ನು ವಿಶೇಷಾಸಕ್ತಿಗಳಿಂದ ತೋರಿಸುತ್ತಾರೆ. ಮಹೇಶ್ ಎನ್ನುವವರು (ಅರಣ್ಯ ಇಲಾಖೆಯ ಸಿಬ್ಬಂದಿ) ನನಗೆ ಬಹಳ ಆತ್ಮೀಯತೆಯಿಂದ ಪಕ್ಷಿಗಳ ವಿವರಗಳನ್ನು ತಿಳಿಸಿದರು. ಸುಮಾರು ೨ ಘಂಟೆಗಳ ಕಾಲ ದೋಣಿ ವಿಹಾರದೊಂದಿಗೆ ಪಕ್ಷಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬಹಳ ಸಹಾಯ ಮಾಡಿ, ಪಕ್ಷಿಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನೂ ಕೊಟ್ಟರು.

(ಮೇಲೆ)ಅತ್ತಿವೇರಿಯಲ್ಲಿ ಕಂಡುಬಂದ 'ಚಮಚ ಕೊಕ್ಕು (spoon bill)' ಪಕ್ಷಿಗಳು



(ಮೇಲೆ) 'ಬಿಳಿ ಮಿಂಚುಳ್ಳಿ - pied kingfisher'
(ಬಲ) '[ಬಿಳಿ ಎದೆಯ] ಗದ್ದೆ ಮಿಂಚುಳ್ಳಿ - white brested kingfisher'

(ಕೆಳಗೆ) 'ಕಿರು ನೀಲಿ ಮಿಂಚುಳ್ಳಿ - small blue kingfisher'



(ಮೇಲೆ) ಸಾಮಾನ್ಯವಾಗಿ ದಂಡೆಯ ಮೇಲೇ ಗೂಡು ಮಾಡುವ 'ರಿವರ್ ಟರ್ನ್ (River tern)' ಪಕ್ಷಿಗಳು, (ಕನ್ನಡ ನಾಮ?)
(ಬಲ) ನಾವು ಸಮೀಪಿಸಿದಂತೆ ಎಚ್ಚರಗೊಂಡು ಕಿರುಚುತ್ತಿರುವ ರಿವರ್ ಟರ್ನ್
(ಕೆಳಗೆ) ನಾವಿನ್ನೂ ಹತ್ತಿರ ಸಮೀಪಿಸಿದಂತೆ ಪುರ್ರೆಂದು ಹಾರಿದ ರಿವೆರ್ ಟರ್ನ್


















೧) 'ಕರಿ ಕುಂಡೆಕುಸ್ಕ - large pied wagtail'
೨) ಹಾರುತ್ತಿರುವ ಕರಿ ಕುಂಡೆಕುಸ್ಕ - pied wagtail's flight
೩) 'ಬೂದು? ಕುಂಡೆಕುಸ್ಕ - gray wagtail'?




(ಮೇಲೆ) 'ಬಾಯ್ಕಳಕ - open billed strok'
(ಬಲ) ಕೊಕ್ಕಿನಲ್ಲಿ ಆಹಾರದೊಂದಿಗೆ ಬಾಯ್ಕಳಕ - open billed strok with its prey in its Beak
(ಕೆಳಗೆ) ಬಿಳಿ ಪಾರಿವಾಳದಂತಿರುವ 'ಬೆಳವನ ಹಕ್ಕಿ' - Ring Dove

ಈ ಪಕ್ಷಿಯನ್ನು ಮಹೇಶ್ ರವರು ಶಿಶುನಾಳ ಶರೀಪರ ಗೀತೆಯ ಮೂಲಕವೇ ಪರಿಚಿಯಿಸಿದ್ದು,
" ಕೂ ಕೂ ಎನುತಿದೆ ಬೆಳವಾ - ಬಂದು
ಹೊಕ್ಕಿತು ಭವವೆಂಬ ದು:ಖದ ಹಳುವ "


(ಮೇಲೆ) 'ಬಾಲಗೋರೆ'ಗಳ ಸಮೂಹ - stock of 'Pin Tailed Ducks'
(ಎಡ) ಈಜುತ್ತಿರುವ ಒಂಟಿ ’ಬಾಲಗೋರೆ’ - lone pin tailed duck swimming

ಮಹೇಶ್ ರವರು ವಿವರಿಸುವಂತೆ : ಈ ಬಾಲಗೋರೆ ಪಕ್ಷಿಗಳು ಯೂರೋಪ್ ಖಂಡದಿಂದ ವಲಸೆ ಬರುವ ಪಕ್ಷಿಗಳಂತೆ. ಇವುಗಳ ವಿಶೇಷತೆಯೆಂದರೆ, ಈ ಪಕ್ಷಿಗಳು ಆಹಾರವನ್ನು ತಿಂದು, ಕೊಬ್ಬಿನ ರೂಪದಲ್ಲಿ ಶೇಖರಿಸಿ ಒಂದೇ ಸಮನೆ ಯೂರೋಪಿನಿಂದ ಭಾರತದವರೆಗೆ ಬೇರೆನನ್ನೂ ತಿನ್ನದೆ ಒಂದೇ ಉಸಿರಿನಲ್ಲಿ ಹಾರಿ ಬರುವ ಸಾಮರ್ಥ್ಯವುಳ್ಳವವಂತೆ!



(ಮೇಲೆ , ಬಲ, ಕೆಳಗೆ) 'ಕೆಮ್ಮಂಡೆ ಗಣಿಗಾರ್ಲ ಹಕ್ಕಿ - small green bee eater'
ಈ ಪಕ್ಷಿಗಳ ವಿಶೇಷತೆಯೆಂದರೆ, ಎಲ್ಲಿಂದಲೋ ಪುರ್ರೆಂದು ಹಾರಿ ಹೋಗಿ, ಮತ್ತದೇ ಜಾಗದಲ್ಲಿ ಬಂದು ಕೂರುತ್ತವೆ
!


(ಮೇಲೆ) 'ಚೋರೆಹಕ್ಕಿ ಚಾಣ ? - osprey / (kestrel ?)'
ಇದು ಚಳಗಾಲದಲ್ಲಿ ಹಿಮಾಲಯದಿಂದ ವಲಸೆ ಬರುವ ಪಕ್ಷಿಯಂತೆ!


(ಮೇಲೆ) ಈಜುತ್ತಿರುವ 'ಸ್ಪಾಟ್ಟೆಡ್ ಬಾತುಕೋಳಿಗಳು' ? - Swimming 'Spotted Ducks'
(ಎಡ) ಹಾರುತ್ತಿರುವ ಸ್ಪಾಟ್ಟೆಡ್ ಬಾತುಕೋಳಿಗಳು - Flying 'Spotted Ducks'
(ಕೆಳಗೆ) ಒಂಟಿಯಾಗಿ ಈಜುತ್ತಿರುವ ಸ್ಪಾಟ್ಟೆಡ್ ಬಾತುಕೋಳಿಯ ಮರಿ - A lone 'Baby Spotted Duck' swimming




(ಮೇಲೆ) ಹಾರುತ್ತಿರುವ 'ಬೆಳ್ಳಕ್ಕಿ'ಯ ಆಕರ್ಷಕ ಭಂಗಿ
(ಬಲ) 'ದೊಡ್ಡ ಬೆಳ್ಳಕ್ಕಿ'

ನಾವು ಸಾಮಾನ್ಯವಾಗಿ ಕಾಣುವ 'ಕೊಕ್ಕರೆಗಳಲ್ಲಿ (ಬೆಳ್ಳಕ್ಕಿ) - Egret ೩ ವಿಧ, ದೊಡ್ಡ ಬೆಳ್ಳಕ್ಕಿ (Big Egret) , ಮಧ್ಯಮ ಬೆಳ್ಳಕ್ಕಿ (Little Egret) ಮತ್ತು ಜಾನುವಾರು ಬೆಳ್ಳಕ್ಕಿ (Cattle Egret)'. (ಸಾಮಾನ್ಯವಾಗಿ ಹಸುಗಳ ಒಟ್ಟಿಗಿರುವುದರಿಂದ ಜಾನುವಾರು ಬೆಳ್ಳಕ್ಕಿಯೆಂಬ ಹೆಸರಂತೆ)


(ಮೇಲೆ) 'ನೀರು ಕಾಗೆ - Little Indian Cormorant' (ನೀರು ನವಿಲು ಎಂದೂ ಕರೆಯುವುದುಂಟಂತೆ)
(ಎಡ) ಹಾರುತಿರುವ ನೀರು ಕಾಗೆಯ ಭಂಗಿ - Flight of Cormorant






ಈ ಪಕ್ಷಿಗಳ ಹೆಸರುಗಳು ನಿಖರವಾಗಿ ನೆನಪಿಲ್ಲ!







ಕೊನೆಯದಾಗಿ ಈ ಗೂಡಿನ ಭಾವಚಿತ್ರ (ಪಕ್ಷಿಯ ಹೆಸರು ನೆನಪಿಲ್ಲ! :()

ಅತ್ತಿವೇರಿ ಪಕ್ಷಿಧಾಮದ ಸಿಬ್ಬಂದಿಗಳು ಪಕ್ಷಿಗಳ ಭಾವಚಿತ್ರಗಳನ್ನು ಸಂಗ್ರಹಿಸಿ ಅವುಗಳ ಸಂಪೂರ್ಣ ವಿವರಗಳನ್ನು ಕೂಡ ಬರೆದು ಬೃಹತ್ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ಇವರ ಶ್ರಮಕ್ಕೆ ಮೆಚ್ಚಲೇಬೇಕಾದ್ದು. ಆ ಸಂಗ್ರಹದ ಮೊದಲಿಗೆ ಕನ್ನಡದ ಮೇರು ಕವಿಗಳು ಹಕ್ಕಿಗಳ ಬಗ್ಗೆ ಬರೆದ ಕವನಗಳ ಕೆಲವು ಸಾಲುಗಲನ್ನೂ ಬರೆದಿದ್ದಾರೆ. ಆದರೆ ವರಕವಿ ಬೇಂದ್ರೆ ಯವರ ಈ ಕವನ ಬಿಟ್ಟು ಹೋಗಿದೆ!

ಹಕ್ಕಿ ಹಾರುತಿದೆ ನೋಡಿದಿರಾ?

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?

ಕರಿ ನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?

ನೀಲಮೇಘಮಂಡಲ - ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು
ಸೂರ್ಯ - ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?

ಕಿ ಸೂ : ಈ ಪಕ್ಷಿಗಳನ್ನು ಸೆರೆ ಹಿಡಿಯಲು ತಮ್ಮ ಕ್ಯಾಮರಾವನ್ನು ಒದಗಿಸಿಕೊಟ್ಟ ಗೆಳೆಯ ಕೃಪಾ ಶಂಕರ್ ಗೆ ಅನಂತ ಧನ್ಯವಾದಗಳು.

ಈ ಚಿತ್ರ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮ್ಮ ಬಳಿ ಈ ಪಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿಯಿದೆಯೆ? ಪಕ್ಷಿಗಳ ಚಿತ್ರ ಮತ್ತು ಅವುಗಳ ಹೆಸರುಗಳಲ್ಲಿ ವ್ಯತ್ಯಾಸವೇನಾದರೂ ಇದೆಯೆ? ದಯವಿಟ್ಟು ಕೆಳಗೆ ಬರೆಯಿರಿ!