ಬುಧವಾರ, ಫೆಬ್ರವರಿ 25, 2009

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ,

ಪ್ರತಿದಿನದ ವಿಜಯಕರ್ನಾಟಕ ನನಗೆ ಮೊದಲ ಪುಟದಿಂದ ಶುರುವಾದರೆ, ಶನಿವಾರದ ವಿಜಯಕರ್ನಾಟಕ ಮಾತ್ರ ಸಂಪಾದಕೀಯದಿಂದ ಪ್ರಾರಂಭವಾಗುತ್ತದೆ-ಕಾರಣ: ಪ್ರತಾಪ್ ಸಿಂಹರ ಸಂಪಾದಕೀಯ. ತಾವು ಬರೆದ ಲೇಖನದ ತರ್ಕ ಭರ್ಜರಿಯಾಗಿದ್ದರೂ ಅಥವಾ ಬಾಲಿಷವಾಗಿದ್ದರೂ, ಬರೆಯುವ ಶೈಲಿ ಮತ್ತು ಉಪಯೋಗಿಸುವ ಭಾಷೆ ಮಾತ್ರ ಎಂದೂ ಹರಿತವಾಗಿರುತ್ತದೆ. ಎಷ್ಟೋ ಬಾರಿ ತಾವು "ವಿಕಿಪೀಡಿಯಾದಿಂದ" ಹೆಕ್ಕಿ ತೆಗೆದ ವಿಷಯಗಳನ್ನು ಕೂಡ ತಮ್ಮ ಬರವಣಿಗೆ ಶೈಲಿಗೆ ಬದಲಾವಣೆ ಮಾಡಿ ಲೇಖನವನ್ನು ಮೊನಚುಗೊಳಿಸುತ್ತಾರೆ. ಎಷ್ಟೋ ಬಾರಿ ತಾವು ಬರೆದ ವಿಷಯಗಳಲ್ಲಿ ತಿರುಳಿಲ್ಲದಿದ್ದರೂ, ಆ ವಿಷಯದ ಬಗ್ಗೆ ತಿಳುವಳಿಕೆ ತೀರ ಕಡಿಮೆ ಇರುವವರಿಗೆ ಆ ಲೇಖನ ಇಷ್ಟವಾಗಿ ಹೋಗುತ್ತದೆ. ಪ್ರತಾಪ್ ಸಿಂಹ ಹೋದ ಶನಿವಾರ ಬರೆದ ಸಂಪಾದಕೀಯದ ಮೇಲೆ ಕಣ್ಣಾಡಿಸಿದರೆ, ಮಾಹಿತಿ ತಂತ್ರಙ್ನಾನ, ಮಾಹಿತಿ ತಂತ್ರಙ್ನರ ಮತ್ತು ಜಾಕತಿಕ ಆರ್ಥಿಕ ಬಿಕ್ಕಟ್ಟಿನ ಬಗೆಗಿನ ತಮ್ಮ ಅಙ್ನಾನವನ್ನು ಸಂಪಾದಕೀಯದಲ್ಲಿ ಪ್ರದರ್ಶಿಸಿದ್ದಾರೆ! ಕೆಲವು ಪತ್ರಕರ್ತರು ಅರ್ಥವಿಲ್ಲದೆ ಮಾ.ತಂ ವನ್ನು ದೂಷಿಸುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ತಮ್ಮ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಿಕೊಳ್ಳಬಹುದೆಂಬ ಕಲ್ಪನೆಯಲ್ಲಿ ಮುಳುಗಿರುವವರಿಗೆ ಈ ಲೇಖನ ಸ್ವಲ್ಪವಾದರು ಕಣ್ಣು ತೆರೆಸುತ್ತೇನೊ!

ಮೊದಲು ಪ್ರತಾಪ್ ಸಿಂಹ ರವರು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಕೇವಲ ಮಾಹಿತಿ ತಂತ್ರಙ್ನಾನ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಮಾತ್ರ ತಟ್ಟಿರುವುದು ಎಂಬ ತಮ್ಮ ತಪ್ಪು ವಾದವನ್ನು ತಿದ್ದಿಕೊಳ್ಳಬೇಕು. ಈ ಬಿಸಿ ತಟ್ಟಿದ್ದು ಮೊದಲು ಹಣಕಾಸು, ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ. ಹಲವಾರು ಜನರು ಮೊದಲು ಕೆಲಸ ಕಳೆದುಕೊಂಡಿದ್ದು ಅಲ್ಲೇ! ಇದರ ಕಾರಣಗಳು ಈ ಲೇಖನದ ವ್ಯಾಪ್ತಿಗೆ ಸೇರಿಸುವುದು ಬೇಡ. ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ. ಆಮೇಲೆ ಮಾಹಿತಿ ತಂತ್ರಙ್ನಾನ, ರೀಟೈಲ್, ಹಾಸ್ಪಿಟಾಲಿಟಿ, ಹೋಟೆಲ್, ಪ್ರವಾಸೊದ್ಯಮ, ಸಾರಿಗೆ, ಹೀಗೆ ಬಹಳಷ್ಟು ಎಲ್ಲಾ ಉದ್ಯಮಗಳಿಗೂ ಬಿಸಿ ಪಸರಿಸಿದ್ದು, ಎಲ್ಲಾ ಉದ್ಯಮಗಳಲ್ಲೂ ಜನರು ಕೆಲಸ ಕಳೆದುಕೊಂಡ ನಿದರ್ಶನಗಳಿವೆ. ಪತ್ರಕರ್ತರಿಗೆ ಸ್ವಲ್ಪ ವಿಶಾಲವಾಗಿ, ಕೂಲಂಕುಶವಾಗಿ ಅವಲೋಕಿಸುವ ಸಂಯಮ ಇರಬೇಕಿತ್ತು! ಬಹುಷ: ಈ ಬಿಕ್ಕಟ್ಟಿನ ಸುದ್ದಿಗಳನ್ನು ಮನೆಮನೆಗೆ (ಅಂತರ್ಜಾಲಕ್ಕಿಂತ ಸ್ವಲ್ಪ ನಿಧಾನವಾಗಿಯಾದರೂ) ತಲುಪಿಸುವ ಪತ್ರಿಕಾ ಮಾಧ್ಯಮಕ್ಕೆ ಇನ್ನೂ ಈ ಬಿಸಿ ತಟ್ಟಿಲ್ಲ ಎಂದೆನಿಸುತ್ತದೆ.ಅದಕ್ಕೇ ಪ್ರತಾಪ್ ಸಿಂಹರವರು ಬಹಳಷ್ಟು ಅರ್ಥವಿಲ್ಲದ ಮಾತುಗಳನ್ನು ತಮ್ಮ ಲೇಖನದಲ್ಲಿ ಪ್ರಲಾಪಿಸಿದ್ದಾರೆ! (ಆ ಲೇಖನಕ್ಕೆ ಇಲ್ಲಿ ಒತ್ತಿ).

ನಾನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದಾಗ, ದಿನ ಪತ್ರಿಕೆಗಳನ್ನು ಓದುತ್ತಿದ್ದುದು ಕಡಿಮೆ. ಯಾವಾಗಲಾದರೂ ಪತ್ರಿಕೆ ತೆಗೆದರೆ, "ನಿರುದ್ಯೋಗದ" ಬಗ್ಗೆ ಒಂದು ಲೇಖನ ಇದ್ದೇ ಇರುತ್ತಿತ್ತು. ನಿರುದ್ಯೋಗದ ವಿರುದ್ಧ ಹೋರಾಟಗಳು ನಿರಂತರ ನಡೆಯುತ್ತಿದ್ದವು. "ನಿರುದ್ಯೋಗ"ವೆಂಬ ಪದ ಅಂದಿನ ಯುವಕರ ನಾಲಿಗೆಯಲ್ಲಿ ತಾಂಡವವಾಡುತ್ತಿದ್ದ ಪದ ಎಂದರೆ ತಪ್ಪಾಗಲಾರದು! ಇಂದು ಈ ಪದದ ಬಳಕೆಯಿಂದ ಹಿಡಿದು, ನಿರುದ್ಯೋಗ ಸಮಸ್ಯೆಯೇ ಕಡಿಮೆಯಾಗಿದೆಯೆಂದರೆ, ಅದಕ್ಕೆ ಕಾರಣ ಜಾಗತೀಕರಣ ಮತ್ತು ಮಾಹಿತಿ ತಂತ್ರಙ್ನಾನದಲ್ಲಾದ ’ಕ್ರಾಂತಿ’. ಇದು ಸ್ವತಂತ್ರ ಪೂರ್ವ, ಸ್ವತಂತ್ರಾನಂತರ ನಡೆದ ಯಾವುದೇ ಕ್ರಾಂತಿಗಳಷ್ಟೇ ಮಹತ್ವವಾದದ್ದು. ೧೦ ವರ್ಷಗಳ ಹಿಂದಿದ್ದ ನಿರುದ್ಯೋಗದ ಪಿಡುಗನ್ನು ನೆನೆದರೆ ಆ ಮಹತ್ವ ಗೊತ್ತಾಗುತ್ತದೆ. ಮಾ.ತಂ ಬಂತು, ಊಟಕ್ಕೆ, ವಸತಿಗೃಹಗಳಿಗೆ, ಮನೆಗಳಿಗೆ, ಪತ್ರಿಕೆಗಳಿಗೆ, ಸಾರಿಗೆಗೆ, ಚಾಲಕರಿಗೆ, ಮೂಲಸೌಕರ್ಯಕ್ಕೆ ಎಲ್ಲದಕ್ಕೂ ಬೇಡಿಕೆ ಬಂತು. ಇದೇ ಸ್ವಾಮಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಕಾರಣ! ಮಾ.ತಂ ನಿಂದ ಕೆಲವೊಂದು ವ್ಯತಿರಿಕ್ತ ಪರಿಣಾಮಗಳಾಗಿವೆ, ಮೂಲ ಸೌಕರ್ಯದ ನೆಪದಲ್ಲಿ ಮರಗಳು ಕಡಿಯಲ್ಪಟ್ಟವು, ಹಸಿರು ಕಡಿಮೆಯಾಯಿತು. ತ್ರಿಚಕ್ರ ವಾಹನಗಳ ಪ್ರಯಾಣ ದರ ತೀವ್ರ ಏರಿಕೆ ಕಂಡಿತು. ಸಾಮಾಜಿಕ ಅಸಮತೋಲನ ಕೆಲವೊಂದು ಕಡೆ ಹೆಚ್ಚಾಯಿತು.(ಕೆಲೊವೊಂದು ಕಡೆ ಕಡಿಮೆಯೂ ಆಗಿದೆ).

ಸ್ವಾಮಿ ’ಬದಲಾವಣೆ’ ಜಗತ್ತಿನ ನಿಯಮ! ತಾನು ದುಡಿದಿದ್ದನ್ನು ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ. ಹಿಂದೆಯೂ ಇದನ್ನು ಮಾಡುತ್ತಿದ್ದರು, ಬಹುಪಾಲು ಆಗ ದುಡಿಯುತ್ತಿದ್ದು ಕಡಿಮೆ ಇರಬಹುದು.ನೀವು ಹೇಳುವ ಪ್ರಕಾರ ಮಾ.ತಂ. ದಲ್ಲಿ ಕೆಲಸ ಮಾಡುವವರು ಯಾರೂ ಮಕ್ಕಳನ್ನು ಬೆಳೆಸುವುದೇ ಇಲ್ಲ, ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಇಲ್ಲ ಏಂಬ ಅರ್ಥ ಕಲ್ಪಿಸುವಂತೆ ಏನೇನೋ ಬಡಬಡಾಯಿಸಿದ್ದೀರ.ಹಿಂದೆಯೂ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುತ್ತಿದ್ದರು, ಇಂದೂ ಅದೇ ಆಗುತ್ತಿರುವುದು.ಇನ್ನು ಖರ್ಚು ಮಾಡುವುದು ಎಂದರೇನು? ದುಡಿದಿದ್ದನ್ನು ಕೂಡಿಡುವ ಸಂಸ್ಕೃತಿ ಬೆಳೆಸಿಕೊಂಡರೆ ಯಾವುದೇ ದೇಶದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗುವುದಿಲ್ಲ. ಹಿಂದಿನ ಕಾಲಗಳಲ್ಲಿ ಹಾಗೆ ಮಾಡುವವರನ್ನು ಜಿಪುಣರು, ಜುಗ್ಗರು ಎಂದು ಹಂಗಿಸುತ್ತಿದ್ದುದುಂಟು. (ಪುರಂದರ ದಾಸರೂ ಕೂಡ ಮೊದಲು ಜಿಪುಣರಾಗಿ, ಆಮೇಲೆಯೇ ಅವರಿಗೆ ಙ್ನಾನೋದಯವಾದದ್ದು). ದುಡಿದ ದುಡ್ಡನ್ನು ಅಗತ್ಯಕ್ಕೆ ,ಅಭಿರುಚಿಗೆ ತಕ್ಕಂತೆ ಖರ್ಚು ಮಾಡಿದಾದ, ಅಂದರೆ ಒಂದು ಬಟ್ಟೆಯನ್ನು ಕೊಂಡಾಗ, ಬಟ್ಟೆ ಮಾರುವವನ, ಬಟ್ಟೆ ಹೊಲೆಯುವವನ, ಗಾರ್ಮೆಂಟ್ಸ್ನಲ್ಲಿ ದುಡಿಯುವವನ ಜೀವನೋಪಾಯವಾಗುತ್ತದೆ. ಅಷ್ಟೇ ಯಾಕೆ ಸ್ವಾಮಿ, ನಾನು ನಿಮ್ಮ ಐದೂ ’ಬೆತ್ತಲೆ ಜಗತ್ತು’ ಪುಸ್ತಕಗಳನ್ನು ಮತ್ತು ’ಯಾರೂ ತುಳಿಯದ ಹಾದಿಯನ್ನು’ ಕೊಂಡಿದ್ದು ನಾನು ಕಷ್ಟ ಪಟ್ಟು ದುಡಿದ ದುಡ್ಡಿನಿಂದಲೇ!

"ದುಡ್ಡಿಗಿಂತ ಕಸುಬು ಕಲಿಯಬೇಕು ಎಂಬ ಮೆಂಟಾಲಿತು ಐ ಟಿ ಯವರಿಗೆ ಬರಲೇ ಇಲ್ಲ" ಎಂದಿರಿ. ಈ ನಿಮ್ಮ ಅಙ್ನಾನಕ್ಕೆ ಏನೆನ್ನಬೇಕೊ. ಸ್ವಾಮಿ ನೀವು ಸರ್ಕಾರಿ ನೌಕರಿಗಳನ್ನು ಮನಸ್ಸಿನಲ್ಲಿಟ್ಟು ಮಾಹಿತಿ ತಂತ್ರಙ್ನಾನದ ಬಗ್ಗೆ ಬರೆದರೆ ಹೀಗೆ ಅಪಭ್ರಂಶವಾಗುವುದು. ಎಲ್ಲಾದರು ತಾವು ದುಡಿಯುವ ದುಡ್ಡಿಗೆ ಅಗತ್ಯವಾದ ಙ್ನಾನವುಳ್ಳ ಮಾನವ ಸಂಪನ್ಮೂಲವಿದ್ದರೆ, ಅದರಲ್ಲಿ ಮೊದಲ ಸ್ಥಾನ ಮಾ.ತಂ ಕ್ಷೇತ್ರವೆ!ಕಸುಬು ಮತ್ತು ಙ್ನಾನ ಒಂದೊಕ್ಕೊಂದು ಪೂರಕ.

ಇವರ ವಾದಗಳನ್ನು ಇನ್ನೂ ಓದುತ್ತಾ ಹೋದರೆ, ದೊಡ್ಡ ನಿಟ್ಟುಸಿರು ಬಿಡಬೇಕು. ಇಲ್ಲಿ ನೋಡಿ, ಇದಕ್ಕಿಂತ ಜೊಳ್ಳು, ಬಾಲಿಷ ಇನ್ನಿರಲಾರದು! ನಕ್ಕುಬಿಡಿ.
"ಎಲ್ಲಾ ವೃತ್ತಿಗಳಿಗೂ ಅವುಗಳದೇ ಆದ ಒಂದು ಗುಣ, ಲಕ್ಷಣಗಳಿವೆಯಂತೆ, ಐ ಟಿ ಗೆ ಮಾತ್ರ ಏನೂ ಇಲ್ಲವಂತೆ. ಎಲ್ಲಾ ವೃತ್ತಿಗಳಲ್ಲೂ ಅವರ ಮಾಡುವ ಕೆಲಸ ಗೊತ್ತಾಗುತ್ತದಂತೆ, ಐ ಟಿ ಯವರು ನೆನೆದರೆ ಹೊಳೆಯುವುದು ದುಡ್ಡು ಮಾತ್ರವಂತೆ!"
ಇದು ಹೇಗೆಂದರೆ ನನಗೆ ಪತ್ರಕರ್ತರನ್ನು ನೆನೆದರೆ ರಾಜಕಾರಣಿಗಳನ್ನು ಬೆದರಿಸಿ ದುಡ್ಡು ಮಾಡುವ ಕೆಟ್ಟ ಜನರೇ ನೆನಪಿಗೆ ಬರುವುದು ಎಂಬ ಹೇಳಿಕೆ ಕೊಟ್ಟರೆ ಎಷ್ಟು ತಪ್ಪಾಗುತ್ತದಲ್ಲವೆ?ಪುಟ ತುಂಬಿಸಲು ಇವರಿಗೆ ಇದಕ್ಕಿಂತ ಒಳ್ಳೆಯ ಅಂಶಗಳೇ ಸಿಗಲಿಲ್ಲವೆ? ಇವರಿಗೆ ಐ ಟಿ ಬಗ್ಗೆ ಙ್ನಾನ ಬೇಕಾಗಿದ್ದರೆ ಯಾರನ್ನಾದರೂ ಕೇಳಬಹುದಿತ್ತು. ಹೇಳಿಕೊಳ್ಳುವದಕ್ಕೆ ಖ್ಯಾತ ಪತ್ರಕರ್ತರು. ಬೇರೆದ್ದಕ್ಕೆಲ್ಲಾ ವಿಕಿಪೀಡಿಯಾದಲ್ಲಿ, ಗೂಗಲ್ಲಿನಲ್ಲಿ ಹುಡುಕಾಡುತ್ತಾರೆ. ಈ ವಿಷಯದ ಬಗ್ಗೆ ಮಾತ್ರ ಜಾಣ ಕುರುಡು! ವಿಕಿಪೀಡಿಯ, ಗೂಗಲ್ಲು, ಸ್ವಾಮಿ ಅಷ್ಟೇ ಯಾಕೆ ತಾವು ಬಳಸುವ ದೂರವಾಣಿ, ಸುದ್ದಿ ಸಂಪಾದನೆಗೆ ಬಳಸುವ ಇನ್ನೂ ಹಲವಾರು ಸಲಕರಣೆಗಳು ಐ ಟಿ ಯವರು ಸಿದ್ಧಪಡಿಸಿದ್ದೇ!

ಇವರು ಈ ವಾದ ಚರ್ಚೆಗಳಲ್ಲಿ ಎಲ್ಲೆ ತಪ್ಪಿ, ಅನಾಥಾಲಯ, ವೃದ್ಧಾಶ್ರಮಗಳಿಗೆ ಸಹಾಯ ಮಾಡುವುದು, ತೆರಿಗೆ ಕಟ್ಟುವುದು ಮತ್ತು ಸರ್ಕಾರದಿಂದ ಉತ್ತಮ ಮೂಲ ಸೌಕರ್ಯಗಳನ್ನು ಅಪೇಕ್ಷಿಸುವುದು ಕೂಡ ತಪ್ಪೆಂದಿದ್ದಾರೆ. ಪತ್ರಕರ್ತರು ಏನು ಬೇಕಾದರೂ ಬರೆಯಬಹುದು ಎಂಬ ಉದ್ಧಟತನವೇ? ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದರೆ ಹೀಗೆ ಆಗುವುದು ಅನ್ನಿಸುತ್ತಿದೆ. ಅವರೇ ಹೇಳಿಕೊಂಡಂತೆ, ’ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧ ರಾತ್ರೀಲಿ ಕೊಡೆ ಹಿಡಿದುಕೊಂಡನಂತೆ!’ ಎಂಬ ಮಾತು ಪ್ರತಾಪ್ ಸಿಂಹರಿಗೇ ಹೆಚ್ಚು ಅನ್ವಯವಾಗುತ್ತದೆ.ಇನ್ನು ಕೂಲಿಯವನ ಬಳಿ ಮೊಬೈಲ್ ಫೋನು ಇರುವುದೇ ತಪ್ಪೆನ್ನುವಂತೆ ಅನಗತ್ಯ ಚರ್ಚೆಯನ್ನು ಎಳೆದು ತಂದಿದ್ದಾರೆ. ದೂರಸಂಪರ್ಕ ಕ್ರಾಂತಿಯ ಬಗ್ಗೆ ಇವರಿಗೆ ತಿಳಿ ಹೇಳಬೇಕಾರೆ ವರ್ಷಗಳೇ ಬೇಕಾಗಬಹುದು.

ಇನ್ನು ಮಾ.ತಂ ಮಂದಿ, ವಾರಾಂತ್ಯಕ್ಕೆ ಇನ್ನೋವಾ ದಲ್ಲಿ ಪ್ರವಾಸ ಹೋಗಿಬಿಡುತ್ತಾರಂತೆ. ಮಹನೀಯ ಪತ್ರಕರ್ತರಿಗೆ "ಕೋಶ ಓದು, ದೇಶ ಸುತ್ತು" ಎಂಬ ನಾನ್ನುಡಿ ಮರೆತುಹೋಗಿರುವ ಹಾಗಿದೆ. ಪತ್ರಕರ್ತರು ಎಂದೂ ಮರೆಯಬಾರದಂತಹ ಮಾತು ಸ್ವಾಮಿ ಇದು! ಆದರೆ ತಿಳಿಯಿರಿ, ಇನ್ನೋವಾದಲ್ಲಿ ಹೋಗುವವರೂ ಇದ್ದಾರೆ, ಸರ್ಕಾರಿ ಬಸ್ಸುಗಳಲ್ಲಿ ಹೋಗುವವರೂ ಇದ್ದಾರೆ, ಎಲ್ಲಾ ಅವರವರ ಅನುಕೂಲಕ್ಕೆ ಬಿಟ್ಟಿದ್ದು.

ಇಂತಹ ಒದಲು ಅನರ್ಹವಾದ ಈ ಲೇಖನ ಓದಿದ ಮೇಲೆ ಏನನ್ನಾದರೂ ಬರೆಯಬೇಕೆನ್ನಿಸಿತು. ಬರೆದೆ. ಇನ್ನೂ ಬಹಳಷ್ಟು ಅಸಂಬದ್ಧ ಹೇಳಿಕೆಗಳು, ವಾದಗಳಿವೆ ಈ ಲೇಖನದಲ್ಲಿ. ಅವುಗಳಿಗೆ ಉತ್ತರಿಸಲು ಆ ಸಾಲುಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸಲೂ ಕೂಡ ಅರ್ಹವಲ್ಲ.ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ.

ಸ್ವಾಮಿ ಕೊನೆಯದಾಗಿ, ನಿಮ್ಮ ಅನುಕಂಪ ಯಾವ ಮಾ.ತಂ ಉದ್ಯೋಗಿಗೂ ಬೇಕಾಗಿಲ್ಲ. ’ಸಮಾಜ’ ಎಂಬುದು ನಿಮ್ಮಂತಹ ಸಣ್ಣ ಜನಗಳೇ ತುಂಬಿರುವ ವ್ಯವಸ್ಥೆ ಎಂಬ ತಪ್ಪು ಕಲ್ಪನೆಯನ್ನು ತಿದ್ದುಕೊಳ್ಳಿ. ನಿಮಗಿಂತಲೂ ವಿಶಾಲ ದೃಷ್ಟಿ ಕೋನ ಹೊಂದಿರುವ ಸಾಮಾನ್ಯರು, ಸಮಾನ ಮನಸ್ಕರು ಬಹಳಷ್ಟು ಜನರಿದ್ದಾರೆ. ನಿಮ್ಮ ದೃಷ್ಟಿಕೋನವೂ ವಿಶಾಲವಾಗಲಿ ಎಂದು ಹಾರೈಸುತ್ತೇನೆ. ಬೇಂದ್ರೆಯವರು, ಕೆಲವು ದುಷ್ಟರು ದುಡ್ಡಿನ ಮದದಲ್ಲಿ ಬಡವರನ್ನು ತುಳಿಯುತ್ತಿದ್ದಾರೆ ಎಂಬ ಅರ್ಥದಲ್ಲಿ ಬರೆದ ಕವನ ವನ್ನು, ಮಾಹಿತಿ ತಂತ್ರಙ್ನರಿಗೆ ಸಮೀಕರಿಸಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದೀರಿ. ಹಿರಿಯರು ಹೇಳಿದ್ದಾರೆ, ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ, ಇನ್ನು ಮುಂದೆಯಾದರೂ ನೀವು ತಿಳಿದ ಮತ್ತು ಓದುಗರು ನಂಬಲಾರ್ಹವಾದುದ್ದನ್ನೇ ಬರೆಯಿರಿ. ಎಲ್ಲ ಬಲ್ಲೆನೆಂಬ ಅಹಂಕಾರ ಬಿಡುವುದು ಒಳಿತು.

ಗುರುವಾರ, ಫೆಬ್ರವರಿ 19, 2009

ವಸುಧೇಂದ್ರ- ಪರಿಚಯ, ಸಂವಾದ, ಹಂಪಿ ಎಕ್ಸ್ ಪ್ರೆಸ್

ಪರಿಚಯ
ನನಗೆ ಇತ್ತೀಚಿನ ಕನ್ನಡ ಲೇಖಕರ ಪರಿಚಯವೇ ಇರಲಿಲ್ಲ, ಇದ್ದರೂ ಒಂದಿಬ್ಬರದು ಮಾತ್ರ ಮತ್ತು ಓದುತ್ತಿದ್ದುದು ಅವರು ವಿಜಯ ಕರ್ನಾಟಕದಲ್ಲಿ ಬರೆಯುವ ಲೇಖನಗಳು ಮಾತ್ರ.ಕಡಲತೀರ ಬ್ಳಾಗ್ ನಿಂದ ವಸುಧೇಂದ್ರ ರವರ ಪರಿಚಯ ಆಯ್ತು. ಅದರಲ್ಲಿ ಅವರ ಬಗ್ಗೆ ಮತ್ತು ಅವರ ಪುಸ್ತಗಳ ಬಗ್ಗೆ (ಹೆಚ್ಚಾಗಿ ಹಂಪಿ ಎಕ್ಸ್ ಪ್ರೆಸ್ ಬಗ್ಗೆ ಬಹಳ ಒಳ್ಳೆಯ ಅಭಿಪ್ರಾಯ ಮೂಡಿತ್ತು) ಮೆಚ್ಚುಗೆ ವ್ಯಕ್ತವಾಗಿತ್ತು. ಅವರ ಹಂಪಿ ಎಕ್ಸ್ ಪ್ರೆಸ್ ನನಗೆ ಸಪ್ನಾದಲ್ಲಿ ಸಿಗಲಿಲ್ಲ. ಬದಲಾಗಿ ’ಯುಗಾದಿ’ ಎಂಬ ಕಥಾಸಂಕಲನವನ್ನು ತಂದು ಮನೆಯಲ್ಲಿಟ್ಟೆ ಅಷ್ಟೆ! ನಂತರ ಒಂದು ದಿನ ವಸುಧೇಂದ್ರ ರವರ ಜಾಡು ಹಿಡಿದು ಅಂತರ್ಜಾಲದಲ್ಲಿ ಜಾಲಾಡಿದಾಗ ವಿಕ್ರಾಂತ ಕರ್ನಾಟಕ ತಾಣದಲ್ಲಿ ’ಬಾಗಿಲಿನಿಂದಾಚೆ ಪೋಗದಿರಲ, ರಂಗ’ ಕಥೆ ಓದಿದೆ. ಬಹಳ ಇಷ್ಟ ಆಯ್ತು! (ಸರಳ ಬರವಣಿಗೆ ಶೈಲಿಯಂತೂ ಮನಸ್ಸಿಗೆ ಬಹಳ ಹಿಡಿಸಿತು). ಹೀಗೆ, ಅವಧಿ/ಮೆ ಫ್ಲವರ್ ನವರು ಫಿಷ್ ಮಾರ್ಕೆಟ್ ನಲ್ಲಿ ನಡೆಸುತ್ತಿದ್ದ "ವಸುಧೇಂದ್ರ ಅಂದ್ರೆ ನಮಗಿಷ್ಟ" ಎಂಬ ಸಂವಾದ ಕಾರ್ಯಕ್ರಮದ ಬಗ್ಗೆ ತಿಳಿಯಿತು.ನಾನೂ ಕಾರ್ಯಕ್ರಮಕ್ಕೆ ಹೋದೆ. ಹೀಗೆ ನನಗೆ ಆದದ್ದು ವಸುಧೇಂದ್ರ ರವರ ಮೊದಲ ಪರಿಚಯ!

ಛಂದದ ಸಂಜೆಯ ಸಂವಾದ
ಅಂದಿನ ವಸುಧೇಂದ್ರ ರವರ ಭಾಷಣ ಮತ್ತು ನಂತರ ನಡೆದ ಸಂವಾದ ನಿಜಕ್ಕೂ ಬಹಳ ಚೆನ್ನಾಗಿತ್ತು. ಅಲ್ಲಿ ನಡೆದ ಮಾತುಕಥೆಯನ್ನು ನನ್ನ ಹೆಂಡತಿಯ ಮುಂದೆ ಬಿಚ್ಚಿಡುವವರೆಗೂ ಸಮಾಧಾನವೇ ಇಲ್ಲ. ನನ್ನ ಮನಸ್ಸಿಗೆ ನಾಟಿದ, ನೆನಪಿರುವ ಕೆಲವು ತುಣುಕುಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಟಿಪ್ಪಣಿ ಮಾಡುತ್ತೇನೆ!


ಚಿತ್ರ ಕೃಪೆ: ಅವಧಿ (ಫಿಷ್ ಮಾರ್ಕೆಟ್ ನಲ್ಲಿ ವಸುಧೇಂದ್ರರ ಹಸ್ತಾಕ್ಷರಕ್ಕೆ ಸರದಿಯಲ್ಲಿ ಕಾಯುತ್ತಿರುವ ನಾನು)

ನನಗೆ ಅಷ್ಟು ಚೆನ್ನಾಗಿ ಮಾತನಾಡುವುದಕ್ಕೆ ಬರುವುದಿಲ್ಲ ಎಂದೇ ಭಾಷಣಕ್ಕಿಳಿದ ವಸುಧೇಂದ್ರ ರವರು, ನಾನೇನು ಸಾಹಿತ್ಯಿಕ ವಾತಾವರಣದಲ್ಲಿ ಬೆಳೆದು ಬಂದದ್ದಿಲ್ಲ, ಕಥೆ ಬರೆಯುವುದಕ್ಕೆ ಆ ರೀತಿಯ ವಾತಾವರಣ ಅವಶ್ಯಕವೇನಿಲ್ಲ ಎಂದರು. ವಸುಧೇಂದ್ರ ರವರ ಅಮ್ಮ, ನಡೆದ/ನಡೆಯದ ಘಟನೆಗಳನ್ನು ತಮಗೆ ವೈಭವೀಕರಿಸಿ ವಿವರಿಸುತ್ತದ್ದ ರೀತಿ ತಾವು ಬರೆಯುವ ಕಥೆಯ ಶೈಲಿಗೆ ಒಂದು ಪ್ರೇರೇಪಣೆಯೆಂದರು. ತಾವು ಇಂಗ್ಲೇಂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ’ಬ್ರಿಟಿಷ್ ಲೈಬ್ರರಿ’ ಸಹಾಯದಿಂದ ನೋಡಿದ ಬಹಳಷ್ಟು ಭಾಷೆಯ ಅಂತರಾಷ್ಟ್ರೀಯ ಚಲನಚಿತ್ರಗಳು ಕೂಡ ತಾವು ಕಥೆಗಳನ್ನೇಳುವ ರೀತಿಗೆ ಸ್ಪೂರ್ಥಿಯೆಂದರು.

ಟಿ ಸಿ ಎಸ್ ಸಂಸ್ಥೆಯಲ್ಲಿ ಅಭಿಯಂತರರಾಗಿ ಕೆಲಸ ಮಾಡುವಾಗ, ಕೆಲಸ ಏಕತಾನತೆಗೆ ಬೇಸತ್ತು ಲೇಖನಿ ಹಿಡಿದರಂತೆ.

ಕನ್ನಡ ಮಾಧ್ಯಮದಲ್ಲಿ ಓದಿದವರು ಕನ್ನಡ ಕಥೆಗಳನ್ನು ಸುಲಲಿತವಾಗಿ ಬರೆಯಬಹುದು. ಈಗಿನ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವವರು ಕ್ಷೀಣಿಸುತ್ತಿರುವುದರಿಂದ ಕನ್ನಡ ಲೇಖಕರೂ ಕಡಿಮೆಯಾಗಬಹುದೇನೋ ಎಂಬ ಸಂಶಯವನ್ನು ವ್ಯಕ್ತಪಡಿಸಿದರು.

ಕಥೆಗಳನ್ನು ಬರೆಯುವಾಗ ಸೂಕ್ಷ್ಮತೆ ಬಹಳ ಮುಖ್ಯ ಎಂಬುದು ವಸುಧೇಂದ್ರರ ಅನಿಸಿಕೆ. ಬಡತನದ ಕಥೆಗಳನ್ನು ಬರೆಯಲು ಬಡತನದಲ್ಲಿ ಬದುಕಿ ಬಂದವರಿಗೇ ಸಾಧ್ಯವೆಂದೇನಿಲ್ಲ, ಶ್ರೀಮಂತರಾದರೂ ಬಡತನದ ಕಥೆಗಳನ್ನು ಬರೆಯಬಹುದು. ಆದರೆ ಆ ಸೂಕ್ಷ್ಮತೆ ಕಥೆಗಳಲ್ಲಿದ್ದರೆ, ಅದು ಒಳ್ಳೆಯ ಕಥೆಯೆನ್ನಿಸುತ್ತದೆಯೆಂದರು.

ವಸುಧೇಂದ್ರರು ಹೇಳಿದ ಮತ್ತೊಂದು ಸೂಕ್ಷ್ಮ ಅಂಶವೆಂದರೆ, ಯಾವುದೇ ಕಥೆಗಾರನಿಗೆ ಅಪಾರ ಓದುಗ ವೃಂದ ಸೃಷ್ಟಿಯಾಗಬೇಕಾದರೆ ತನ್ನದೇ ಆದ ಕಾಲ ಹಿಡಿಯುತ್ತದೆ. ಅವರಿಗೂ ೧೦ ವರ್ಷ ಬೇಕಾಯುತಂತೆ. ನಿಮ್ಮ ಬಗ್ಗೆ ಮಾಧ್ಯಮಗಳಲ್ಲಿ ಪ್ರಚಾರ ಕಡಿಮೆ ಎಂಬ ಸಂಶಯವನ್ನು ಒಬ್ಬ ಓದುಗ ವ್ಯಕ್ತಪಡಿಸಿದಾಗ ವಸುಧೇಂದ್ರರು ಅದನ್ನು ಒಪ್ಪದೆ, ತಮ್ಮ ಕಥೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ ದಿನ ಪತ್ರಿಕೆ, ಮತ್ತು ಕನ್ನಡ ಪುಸ್ತಕ ಮಾರಾಟಕ್ಕೆ ತೆರಿಗೆ ವಿನಾಯಿತಿಯನ್ನು ಕೊಟ್ಟಿರುವ ರಾಜ್ಯ ಸರ್ಕಾರವನ್ನು ನೆನೆದರು. ಶ್ಲಾಘಿಸಿದರು.

ಕಥೆ ಬರೆಯುವ ಪ್ರಾರಂಭದಲ್ಲಿ, ಯಾವುದೋ ಪುಸ್ತಕ ಮಳಿಗೆಯಲ್ಲಿ ಮಾರಾಟಕಿಟ್ಟ ತಮ್ಮ ೫ ಪುಸ್ತಕಗಳಲ್ಲಿ, ೬ ತಿಂಗಳು ಕಳೆದರೂ ಒಂದೇ ಪುಸ್ತಕ ಮಾರಾಟವಾದದ್ದರಿಂದ ಕೊನೆಗೆ ತಾವೇ ಇನ್ನುಳಿದ ನಾಲ್ಕು ಪುಸ್ತಕಗಳನ್ನು ಕೊಂಡಿದ್ದರಂತೆ!

ಯಾವುದೇ ಒಬ್ಬ ಲೇಖಕನ ಮೊದಲನೆಯ ಪುಸ್ತಕವೇ ಒಂದು ವಿವಾದದಿಂದ ಪ್ರಖ್ಯಾತಿಯಾದರೆ, ಆ ಪ್ರಖ್ಯಾತಿಯನ್ನು ಉಳಿಸಿಕೊಳ್ಳುವುದು ಕಷ್ಟ ಎಂದರು. ಇದಕ್ಕೆ ಒಬ್ಬ ವಾಚಕ ಮುಂದಿನ ಪುಸ್ತಕಕ್ಕೂ ಒಂದು ವಿವಾದ ಸೃಷ್ಟಿಸಿದರಾಯಿತು ಎಂದು ನಗೆ ಚಟಾಕಿಯನ್ನು ಹಾರಿಸಿದರು. ವಸುಧೇಂದ್ರರು ತಮ್ಮ ವಾದಕ್ಕೆ ಬಾಲ ನಟರ ಉದಾಹರಣೆಯನ್ನು ಕೊಟ್ಟು ಸಮರ್ಥಿಸಿದರು.

ಪ್ರಸಕ್ತ ೨೦೦೯ ರ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ ಹಿಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ತಾವೇ ಪುಸ್ತಕ ಮಳಿಗೆಗಳನ್ನು ತೆರೆದು,ಕೊನೆಗೆ ಹೇಗೆ ನಾಚಿಕೆಯಿಂದ ಹೊರಬಂದು, ತಮ್ಮ ಪುಸ್ತಕಗಳನ್ನು ಹೊಗಳಿ ಮಾರಾಟ ಮಾಡಿದರು ಎಂಬುದನ್ನು ವಿವರಿಸಿದರು. ಮಾರಾಟ ಮಾಡುವಾಗ ನಡೆದ ಕೆಲವು ಹಾಸ್ಯ ಸನ್ನಿವೇಶಗಳನ್ನು ಹೇಳಿ ವಾಚಕರನ್ನು ನಗೆಯ ಕಡಲಲ್ಲಿ ತೇಲಿಸಿದರು. (ಒಮ್ಮೆ ಇಬ್ಬರು ಮಹಿಳೆಯರು ಮಳಿಗೆಗೆ ಬಂದು, ತಮ್ಮ ಯಾವುದೋ ಪುಸ್ತಕದ ಬಗ್ಗೆ ಅಭಿಪ್ರಾವನ್ನು ಕೇಳಿದರಂತೆ. ಅದಕ್ಕೆ ವಸುಧೇಂದ್ರರು ತಮ್ಮ ಪುಸ್ತಕವನ್ನು ಮನಸಾರೆ ಹೊಗಳಿದಾಗ, ಜೊತೆಯಲ್ಲಿ ಬಂದಿದ್ದ ಇನ್ನೊಬ್ಬ ಮಹಿಳೆ, ಆ ಪುಸ್ತಕವನ್ನು ಮಾತ್ರ ಕೊಳ್ಳಬೇಡ, ಲೇಖಕನಿಗೆ ಮಡಿ ಮೈಲಿಗೆ ಯಾವುದೂ ಇಲ್ಲ ಎಂದಳಂತೆ. ಅದಕ್ಕೆ ಪುಸ್ತಕದ ಬಗ್ಗೆ ವಿಚಾರಿಸಿದ ಮಹಿಳೆ ವಸುಧೇಂದ್ರರು ತನಗೆ ಮೋಸ ಮಾಡಿದರೆಂಬ ರೀತಿಯಲ್ಲಿ ನೋಟ ಬೀರಿ ಮುನ್ನಡೆದಳಂತೆ.)

ತಮ್ಮ ಒಂದು ಪುಸ್ತಕವನ್ನು ಬ್ರೈಲ್ ಲಿಪಿಗೆ (ಕಣ್ಣಿದ ದೋಷವಿರುವವರು ಓದಲು ಸಹಾಯವಾಗುವ ಲಿಪಿ) ತರಲು ಪಟ್ಟ ಪಾಡನ್ನು ವಿವರಿಸಿದರು. ಇದಕ್ಕೆ ಸಹಾಯ ಮಾಡಿ ಬರಹ ಖ್ಯಾತಿಯ ಶೇಷಾದ್ರಿ ವಾಸುವನ್ನು ಕೂಡ ನೆನೆದರು. ಇವರಿಬ್ಬರೂ ಭಾರತೀಯ ವಿಙ್ನಾನ ಸಂಸ್ಥೆಯಲ್ಲಿ ಓದುತ್ತಿದ್ದಾಗ ಸಹಪಾಠಿಗಳಂತೆ. ವಾಸು ಬರಹ ತಂತ್ರಙ್ನಾವನ್ನು ಸಿದ್ಧಪಡಿಸಿದಾಗ, ವಸುಧೇಂದ್ರರು ಅದರಲ್ಲಿ ಕಥೆ ಬರೆದು ತಂತ್ರಙ್ನಾವನ್ನು ಪರೀಕ್ಷಿಸಿದ್ದ್ರಂತೆ! ಈ ಬ್ರೈಲ್ ಲಿಪಿಗೆ ಪುಸ್ತಕವನ್ನು ತರಲು, ಅವರು ನೋಡಿನ ಒಂದು ಇರಾನ್ ಚಲನಚಿತ್ರ (The color of paradise) ಕಾರಣವಂತೆ. ಈ ಕಥೆಯಲ್ಲಿ ನಾಯಕನಿಗೆ (೭ ನೇ ತರಗತಿಯ ವಿದ್ಯಾರ್ಥಿ) ದೃಷ್ಟಿ ದೋಷ. ಅಂಧರ ಶಾಲೆಯಲ್ಲಿ ಕಲಿಯುತ್ತಿರುತ್ತಾನೆ. ಇವನು ಒಮ್ಮೆ ಸಮುದ್ರಕ್ಕೆ ಹೋದಾಗ, ತಳದಲ್ಲಿರುವ ಮರಳಿನಲ್ಲಿ ಕೈಯಾಡಿಸಿದಾಗ ಅವನಿಗೆ ಅಲ್ಲೂ ಅಕ್ಷರಗಳ ಸ್ಪರ್ಷ! ಮೆಕ್ಕೆ ಜೋಳದ ಮೇಲೆ ಕೈಯಾಡಿಸಿದಿಗಾಲೂ ಅಕ್ಷರಗಳ ಅನುಭವ. ಈ ವಿದ್ಯಾರ್ಥಿ ಇತರ ಸಾಮಾನ್ಯ (ಅಂಧರಲ್ಲದ) ವಿಧ್ಯಾರ್ಥಿಗಳನ್ನೂ ಹಿಂದಿಕ್ಕಿ ಶಾಲೆಗೆ ಪ್ರಥಮ ಸ್ಥಾನವನ್ನು ಗಳಿಸುತ್ತಾನಂತೆ.
ವಸುಧೇಂದ್ರರು ದೃಷ್ಟಿ ದೋಷವುಳ್ಳವರನ್ನು ಬ್ರೈಲ್ ಲಿಪಿಯ ಪುಸ್ತಕಗಳ ಬಗ್ಗೆ ವಿಚಾರಿಸಿದಾಗ, ಅವರಿಗೆ ಪುಸ್ತಕಗಳನ್ನು ಒಂದೇ ಸಮನೆ ಓದಲು ಕಷ್ಟವಾಗುತ್ತದಂತೆ. ಬೆರಳಿನ ಚರ್ಮದ ಸಂವೇದನೆ ಇಲ್ಲವಾಗುತ್ತದಂತೆ. ಅದಕ್ಕೆ ಪುಸ್ತಕಗಳನ್ನು ವಾಚನ (Audio) C D ಗಳ ಮೂಲಕ ಹೊರತಂದರೆ ಬಹಳ ಸಹಾಯಬಾಗುತ್ತದೆ ಎಂಬ ಸಲಹೆಯಿತ್ತರಂತೆ. ಈ ನಿಟ್ಟಿನಲ್ಲಿ ಯಾರಾದರೂ ಮುಂದಾಳತ್ವ ವಹಿಸಿ ಕೆಲಸ ಮಾಡಬೇಕಾಗಿದೆ ಎಂಬ ಕರೆಕೊಟ್ಟರು!

ಇನ್ನೊಂದು ಸೋಜಿಗದ ಸಂಗತಿಯೆಂದರೆ ವಸುಧೇಂದ್ರರವರು ಬಹಳ ಬರೆಯುವುದು ವಾಹನದಟ್ಟಣೆಯಲ್ಲೇ ಅಂತೆ! ಅದಕ್ಕೆ ಒಬ್ಬ ಓದುಗರು, ಬೆಂಗಳೂರಿನ ಮೂಲಸೌಕರ್ಯಗಳು ಅಭಿವೃದ್ಧಿಯಾಗಿ ವಾಹನ ದಟ್ಟಣೆ ಮಾಯವಾದರೆ ನಿಮ್ಮ ಬರವಣಿಗೆಯ ಗತಿಯೇನು ಎಂದಾಗ, ಇನ್ನೊಬ್ಬ ಸಹೃದಯ ಓದುಗನಿಂದ, ನಾವು ಚಳುವಳಿ, ಪ್ರತಿಭಟನೆಗಳನ್ನು ಮಾಡಿ ರಸ್ತೆ ತಡೆ ಮಾಡಿ ವಾಹನ ದಟ್ಟನೆಯನ್ನು ಸೃಷ್ಟಿಸಿ ವಸುಧೇಂದ್ರರವರಿಗೆ ಬರೆಯಲು ಅನುಕೂಲ ಮಾಡಿಕೊಡುತ್ತೇವೆ ಎಂದಾಗ ಎಲ್ಲರೂ ಒಮ್ಮೆ ನಕ್ಕರು!

ತಾವು ತಮ್ಮ ಗೆಳೆಯೊರೊಂದಿಗೆ ಪ್ರಾರಂಭಿಸಿದ ಪ್ರಕಾಶನ ಸಂಸ್ಥೆಯ ’ಛಂದ ಪುಸ್ತಕ’ ಬಗ್ಗೆ ಕೂಡ ಮಾತನಾಡಿದರು. ಛಂದ ಎಂಬ ಛಂದಸ್ಸಿನ ಛಂದ ಏಕೆ ಹೆಸರಿನಲ್ಲಿ, ಇದು ಅಕ್ಷರ ದೋಷವಲ್ಲವೆ ಎಂದು ಬಹಳಷ್ಟು ಮಂದಿ ಕೇಳಿದ್ದಾರಂತೆ. ಉತ್ತರ ಕರ್ನಾಟಕ ಸೊಗಡಿರಲೆಂದು ಈ ಛಂದ ಪದವನ್ನು ಆಯ್ಕೆ ಮಾಡಿರುವುದಾಗಿ ಹೇಳಿದರು.

ಕೇಳುಗರ ಓಂದು ಪ್ರಶ್ನೆಗೆ, ತಾವಿನ್ನೂ ಬರೆಯುತ್ತಿರುವುದು ಕೇಳಿ ಕಂಡ ಅನುಭವದ ಕಥೆಗಳೆಂದೂ, ಅಮೂರ್ತ (Abstract) ಕಥೆಗಳನ್ನು ಬರೆಯಲು ಇನ್ನೂ ಸಮಯ ಬೇಕೆಂದರು. ಕವನಗಳನ್ನೂ ಮುಂದೊಮ್ಮೆ ಬರೆಯುವೆನೆಂದರು.

ಹಿಂದೊಮ್ಮೆ ’ಜೋಗಿ’ ಯವರು (ಇವರು ಕೂಡ ಇತ್ತೀಚಿನ ಕನ್ನಡ ಲೇಖಕರು) ಕೆಟ್ಟವನಾದರೂ ಬುದ್ಧಿವಂತನ ಜೊತೆ ವ್ಯವಹರಿಸಬಹುದು, ಆದರೆ ಒಳ್ಳೆಯವನಾದರೂ ದಡ್ಡನ ಜೊತೆ ವ್ಯವಹರಿಸುವುದು ಕಷ್ಟ ಎಂದಿದ್ದರಂತೆ. ಇದಕ್ಕೆ ವಿರುದ್ಧವಾದ ನಿಲುವಂತೆ ವಸುಧೇಂದ್ರರವರದು. ಯಾವುದೇ ಮನುಷ್ಯನ ಜೊತೆ ವ್ಯವಹರಿಸಬೇಕಾದರೆ ಆ ವ್ಯಕ್ತಿ ಮೊದಲು ಒಳ್ಳೆಯವನಾಗಿರಬೇಕು. ಮನುಷ್ಯ ಕಥೆಗಾರನಾಗುವದಕ್ಕಿಂತಲೂ ಮೊದಲು ಒಳ್ಳೆಯ ವ್ಯಕ್ತಿಯಾಗಬೇಕೆಂಬ ಮಾತನ್ನು ಹೇಳಿದರು.

ಇದೇ ರೀತಿ ಎಲ್ಲದಕ್ಕೂ ಸಂಭದವನ್ನು ಬೆಸೆದು ಒಂದೂ ವರೆ ಘಂಟೆ ತಮ್ಮ ಮಾತಿನಲ್ಲಿ ವಾಚಕರನ್ನು ಮೋಡಿ ಮಾಡಿದರು. ಸೂಕ್ಷ್ಮತೆ ಕಥೆಯಲ್ಲಿ, ಕಥೆಯ ಪಾತ್ರಗಳಲ್ಲಷ್ಟೇ ಅಲ್ಲ ಬೇಕಾಗಿರುವುದು, ಎಲ್ಲ ಮನುಷ್ಯರಲ್ಲಿರಬೇಕು ಎಂಬುದನ್ನು ಸಾರಿ ಹೇಳುವಂತಿತ್ತು ಅವರ ಮಾತುಗಳು. ವಸುಧೇಂದ್ರರೂ ಸೂಕ್ಷ್ಮಜೀವಿ ಎಂದು ನೆರೆದವರಿಗೆಲ್ಲಾ ಗೊತ್ತಾಗಿತ್ತು!

ಹಂಪಿ ಎಕ್ಸ್ ಪ್ರೆಸ್

ಸಂವಾದ ಮುಕ್ತಾಯವಾದ ಮೇಲೆ, ವಸುಧೇಂದ್ರರಿಗೆ ನನ್ನ ಪರಿಚಯವನ್ನು ಹೇಳಿ ಅವರ ಹಸ್ತಾಕ್ಷರ ಪಡೆದ ಹಂಪಿ ಎಕ್ಸ್ ಪ್ರೆಸ್ ಪುಸ್ತಕವನ್ನು ಕೊಂಡೆ.ಮನೆಗೆ ಬಂದ ಮೇಲೆ ಪ್ರಸಕ್ತವಾಗಿ ಓದುತ್ತಿದ್ದ ’ವಿ ಎಸ್ ನಾಯ್ಪಾಲ್’ ರವರ ’INDIA - A Million Mutinies Now' ಪುಸ್ತಕದ ಓದನ್ನು ಸದ್ಯಕ್ಕೆ ತಡೆ ಹಿಡಿದು ಹಂಪಿ ಎಕ್ಸ್ ಪ್ರೆಸ್ ಪ್ರಾರಂಭಿಸಿದೆ. ’ಸೀಳು ಲೋಟ’ ಓದಿದೆ. ಬಹಳ ಇಷ್ಟವಾಯಿತು. ನಂತರ ’ಕೆಂಪು ಗಿಣಿ’ಯನ್ನು ಓದಿದೆ. ನಿಜಕ್ಕೂ ಈ ಕಥೆಯನ್ನು ಹೊಗಳಲು ನನಗೆ ಪದಗಳ ಕೊರತೆ ಇದೆ. ಇದು ಅತಿಶಯೋಕ್ತಿಯಲ್ಲ. ಆ ಶೀರ್ಷಿಕೆ, ಕಥೆಯನ್ನು ಕೊಂಡೊಯ್ಯುವಿಕೆ, ಒಂದೊಕ್ಕೊಂದರ ಸಂಬಂಧ, ಮುಕ್ತಾಯ ಎಲ್ಲವೂ ವರ್ಣನಾತೀತ. ನಾನು ಸಾಮಾನ್ಯವಾಗಿ ಕಾದಂಬರಿಗಳನ್ನು ಓದುತ್ತಿದ್ದೆ. ಸಣ್ಣ ಕಥೆಗಳನ್ನು ಓದುತ್ತಿದ್ದುದೆ ಕಡಿಮೆ. ವಸುಧೇಂದ್ರರ ಬರವಣಿಗೆ ನನ್ನನ್ನು ಈ ಸಣ್ಣ ಕಥಾಲೋಕಕ್ಕೆ ಎಳೆದು ತಂದಿದೆ. ಮುಂದೆ ’ಕ್ಷಮೆಯಿಲ್ಲದೂರಿನಲಿ’ ಓದಿದೆ. ವಸುಧೇಂದ್ರರು ಅಂದು ಸಂವಾದದಲ್ಲಿ ಮಾತನಾಡಿದ ಸೂಕ್ಷ್ಮತೆ ನನಗೆ ಈ ಕಥೆಯಲ್ಲಿ ಕಾಣಿಸಿತು.ವ್ಯಯಕ್ತಿಕ ಅಭಿಪ್ರಾಯವಾಗಿ ಈ ಕಥೆಯ ಮುಕ್ತಾಯ ನನಗೆ ಅಷ್ಟೇನು ಇಷ್ಟವಾಗಲಿಲ್ಲ.ಆದರೂ ಬರವಣಿಗೆ ಖುಷಿ ಕೊಟ್ಟಿತು. ಕೆಂಪು ಗಿಣಿಯನ್ನು ಓದಲು ಪುಸ್ತಕವನ್ನು ನನ್ನ ಮಡದಿಗೆ ಒಪ್ಪಿಸಿದ್ದೇನೆ. ಅಷ್ಟರಲ್ಲಿ ಈ ಟಿಪ್ಪಣಿಯನ್ನು ಬರೆಯಬೇಕೆಂದು ಮನಸ್ಸು ಹವಣಿಸುತ್ತಿತ್ತು.ಯುಗಾದಿ ಕಥಾಸಂಕಲನವನ್ನೂ ತಂದು ಮೇಜಿನ ಮೇಲಿಟ್ಟಿದ್ದೇನೆ!

ನೆನ್ನೆ ಇದನ್ನು ಬರೆದ ನಂತರ, ಕೆಂಧೂಳಿ, ಹೊಸ ಹರೆಯ, ಎರಡು ರೂಪಾಯಿ ಮತ್ತು ನವಿರು ಗರಿ ಕಥೆಗಳನ್ನೂ ಓದಿ ಮುಗಿಸಿದೆ. ಕೆಂಧೂಳಿಯನ್ನು ಹೊರತು ಪಡಿಸಿ ಎಲ್ಲಾ ಕಥೆಗಳೂ ಬಹಳ ಹಿಡಿಸಿದವು ಮನಸ್ಸಿಗೆ.

ಬುಧವಾರ, ಫೆಬ್ರವರಿ 18, 2009

ಹಳೆ ಜೋಡಿ,ಬರಿ ಮಾತು.. ಬಲು ಬೇಜಾರ್ ಕಣೊ _ _ (ಡ್ಯಾಶ್ ಡ್ಯಾಶ್) ?

ಒಂದು ಸೋಲು ಮನುಷ್ಯನನ್ನು ಈ ಪರಿ ಬೆಚ್ಚಿ ಬೀಳಿಸುತ್ತದೆ ಎಂದರೆ? ’ದುನಿಯ’ ಗೆಲುವಿನ ನಾಗಾಲೋಟದಲ್ಲಿದ್ದ ಸೂರಿಯವರಿಗೆ ತುಸು ವಿಭಿನ್ನ ರುಚಿಯ ’ಇಂತಿ ನಿನ್ನ ಪ್ರೀತಿಯ’ ತಡೆ ಹೊಡ್ಡಿತು. ’ಇಂತಿ ನಿನ್ನ ಪ್ರೀತಿಯ’ ಚಿತ್ರವನ್ನು ತಾವೇ ನಿರ್ಮಿಸಿದ್ದಿದ್ದರಿಂದೇನೋ, ತಡೆಯ ಜೊತೆ ಹೊಡೆತ ಕೂಡ ಕಂಡರು ಸೂರಿ. ಚಿತ್ರ ಕೆಟ್ಟದಾಗಿಲ್ಲದಿದ್ದರೂ ಗಲ್ಲಾಪೆಟ್ಟಿಯಲ್ಲಿ ಸೋತದ್ದಕ್ಕೆ ಸೂರಿ ಖಿನ್ನರಾಗಿ, ತಮ್ಮ ಹಳೆಯ ಹಳಿಗೆ ಜಾರಿ ’ಜಂಗ್ಲಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕಥೆ: ಕಥೆಯ ಒಂದು ಎಳೆ, ಮಾಮೂಲಿ ಹೊಡೆದಾಟದ-ಭೂಗತ ಜಗತ್ತಿನ ಕಥೆಗಳಿಗಿಂತ ತುಸು ಭಿನ್ನ ಎನ್ನಬಹುದು. ಅಷ್ಟೆ! ಹೆಚ್ಚೇನು ಮಹತ್ವವಿಲ್ಲ ಕಥೆಗೆ.

ಸಂಭಾಷಣೆ: ಪ್ರೇಕ್ಷಕರು ಸೂರಿ ಮೇಲೆ ಮತ್ತೆ ಕೋಪಿಸಿಕೊಂಡರೆ ಈ ಚಿತ್ರದ ಮೊದಲರ್ಧದ ಸಂಭಾಷಣೆಗೆ. "ಅತಿಯಾದರೆ ಅಮೃತವೂ ವಿಷ" ಎನ್ನುವ ನಾನ್ನುಡಿಗೆ ಕನ್ನಡಿ ಹಿಡಿದಂತಿದೆ ಸಂಭಾಷಣೆ. ಮೊದಲರ್ಧವನ್ನು ಬಹಳಷ್ಟು ಆಕ್ರಮಿಸಿಕೊಂಡಿರುವುದು ರಂಘಾಯಣ ರಘು ಮತ್ತು ವಿಜಯ್ ನಡುವಿನ ಸಂಭಾಷಣೆ ಮತ್ತು ಅವರ ಪೂರ್ವಾಪರ ಜೀವನ ವೃತ್ತಾಂತಗಳು. ಇವುಗಳು ತಲೆ ನೋವು ಬರಿಸುತ್ತವೆ. ಇವರಿಬ್ಬರ ಏಕತಾನತೆಯ ಯಾತನೆ ಕೊನೆಗೊಂಡರೆ ಸಾಕೆನ್ನಿಸುತ್ತದೆ. ದ್ವಿತೀಯಾರ್ಧದ ಸಂಭಾಷಣೆ ಅದ್ಭುತವಲ್ಲದಿದ್ದರೂ ಮೆದುಳಿಗೆ ಕೈ ಹಾಕದಿರುವುದೇ ಸಂತೋಷ.

ನಟನೆ:ಎಲ್ಲರೂ ತಮ್ಮ ಪಾತ್ರವನ್ನು ಚೊಕ್ಕಟವಾಗಿ ಅಭಿನಯಿಸಿದ್ದಾರೆ. ದುನಿಯಾ ಖ್ಯಾತಿಯ ರಘು ಮತ್ತು ವಿಜಯ್ ಜೋಡಿ ಪಡ್ಡೆ ಹುಡುಗರಿಗೆ ಮುದ ನೀಡುತ್ತದೆ. ಮುದ ನೀಡುವುದು ಅವರಷ್ಟೇ ಅಲ್ಲ, ನಾಯಕಿ ಅಂದ್ರಿತಾ ರೇ ಮೈ ಚಳಿಯನ್ನು ಬಿಟ್ಟು ನಟಿಸಿರುವುದು ಚಿತ್ರದ ಋಣಾತ್ಮಕ ಅಂಶ. ಯುವಕರನ್ನು ಚಿತ್ರಕ್ಕೆ ಎರಡನೇ ಬಾರಿ ಬರುವಂತೆ ಮಾಡಿದರೆ, ಸಂಪೂರ್ಣ ಖ್ಯಾತಿ ರೇ ಗೆ ಸಲ್ಲಬೇಕು. ಇನ್ನು ವಿಜಯ್ ರವರು ಹಾಡುಗಳಲ್ಲಿ ಶಾರುಕ್ ಖಾನ್ ನಟನೆಯನ್ನು ಅನುಕರಿಸಿ, ಸ್ವಲ್ಪ ಮಟ್ಟಿಗೆ ಗೆದ್ದಿದ್ದಾರೆ.

ಸಂಗೀತ, ಸಾಹಿತ್ಯ: ಸಂಗೀತ ಸಾಹಿತ್ಯ ಎರಡನ್ನೂ ಒಟ್ಟಿಗೆ ಅವಲೋಕಿಸಿದರೆ ನಿಮಗೆ ಹಾಡುಗಳನ್ನು ಮುಂದೆಂದೂ ಕೇಳಬೇಕೆನ್ನಿಸುವುದಿಲ್ಲ. (ಜಯಂತ್ ಕಾಯ್ಕಿಣಿ ಬರೆದಿರುವ ’ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ’ ಒಂದು ಹಾಡು ಇದಕ್ಕೆ ಅಪವಾದ.). ಸಂಗೀತ ಅದ್ಭುತವಾಗಿದೆ. ಹರಿಕೄಷ್ಣ ರವರು ಕೂಡ ಜಂಗ್ಲಿ ಯಶಸ್ಸಿದೆ ಶ್ರಮಿಸಿದ್ದಾರೆ. ಆದರೆ ಎರಡು ಹಾಡುಗಳ "ಸೋಪ್ ಹಾಕ್ಕೊಳೊ ತಲೆ ಬಾಚ್ಕಳೊ" (ಇದು ಇದ್ದುದರಲ್ಲಿ ಪರವಾಗಿಲ್ಲ), "ಹಳೆ ಕಬ್ಣ.. ಹಳೆ ಪಾತ್ರೆ" ಸಾಹಿತ್ಯ ಕೆಟ್ಟದಾಗಿದೆ ಮತ್ತು ಚಿತ್ರಕ್ಕೆ ಅಸಂಬದ್ಧವಾಗಿದೆ. ಯೋಗರಾಜ್ ಭಟ್ ರವರ ಸೃಜನಶೀಲತೆಗೆ ಕಪ್ಪು ಚುಕ್ಕೆಯಂತಿವೆ, ಅವರು ಬರೆದ ಈ ಹಾಡುಗಳು. ಆದರೆ ಹಿಂದಿಯ ಕೈಲಾಶ್ ಕೇರ್ ರವರು ’ಹಳೆ ಕಬ್ಣ’ ಹಾಡನ್ನು ಚೆನ್ನಾಗಿ ಹಾಡಿದ್ದಾರೆ.

ಛಾಯಾಗ್ರಹಣ: ಛಾಯಾಗ್ರಹಣದಲ್ಲಿ ವಿಶೇಷತೆಯೂ ಇಲ್ಲ. ಕೊರತಯೂ ಇಲ್ಲ.

ನಿರೂಪಣೆ, ನಿರ್ದೇಶನ: ನಿರ್ದೇಶನ ಸಮಾನ್ಯ. ನಿರೂಪಣೆಯೂ ಕೂಡ ಸ್ವಲ್ಪ ವಿಶಿಷ್ಟವಾಗಿದೆ (ಮೊದಲಾರ್ಧದ ಪೂರ್ವಾಪರ ಕಥೆಗಳು ಮತ್ತು ಸಂಭಾಷಣೆಯನ್ನು ಹೊರತುಪಡಿಸಿ).ಸೂರಿಯವರು ಸೋಲನ್ನು ಸ್ವಲ್ಪ ಹಗುರವಾಗಿ ತೆಗೆದುಕೊಂದು ಇನ್ನೂ ಹೊಸತನದ ಚಿತ್ರಗಳನ್ನು ಮಾಡಲಿ. ತಮ್ಮ ಕ್ರಿಯಾಶೀಲತೆಯನ್ನು ಮಾಮೂಲಿ ಚಿತ್ರಗಳನ್ನು ಮಾಡುವುದಕ್ಕೆ ಹಾಳುಗೆದವದಿರಲಿ ಎಂಬುದು ಈ ಅಭಿಮಾನಿಯ ಕೋರಿಕೆ.

ಏನೆ ಕೊರತೆ ಇದ್ದರೂ ಅಂದ್ರಿತಾ ರೇ ಗಾಗಿ, ಮತ್ತು ಕೆಟ್ಟ ಸಾಹಿತ್ಯವನ್ನು ಹೊರತುಪಡಿಸಿದ ಉತ್ತಮ ಸಂಗೀತದ ಹಾಡುಗಳನ್ನು ಕೇಳಿಬರಲು, ಮತ್ತು ಆ ಹಾಡುಗಳ ಮಾದಕ ನೃತ್ಯವನ್ನು (ಅಂದ್ರಿತಾ ರೇ ರವರ) ನೋಡಿ ಬರಲು ಖಂಡಿತಾ ಹೋಗಿ ಬನ್ನಿ. ಕೊಟ್ಟ ದುಡ್ಡಿಗೆ ಮೋಸವಿಲ್ಲ!

ಕನ್ನಡ ಸಾಹಿತ್ಯ ಸಮ್ಮೇಳನ , ಚಿತ್ರದುರ್ಗ ಪ್ರವಾಸ


ಕೋಟೆಯ ಮೇಲಿಂದ ಸೆರೆ ಹಿಡಿದ ಒಂದು ಪಕ್ಷಿನೋಟ. (ಗಾಳಿಗೋಪುರದ ಜೊತೆ ಕನ್ನಡ ಬಾವುಟಗಳನ್ನು ಕಾಣಬಹುದು)
ಸಿದ್ಧತೆ
ಕೊನೆಯ ದಿನ ಸಮ್ಮೇಳನದಲ್ಲಿ ಭಾಗವಹಿಸುವ ಮತ್ತು ಚಿತ್ರದುರ್ಗವನ್ನು ಸುತ್ತಾಡುವ ಮಹದಾಸೆಯಿಂದ ಶುಕ್ರವಾರ ಸಂಜೆ ೫ ಘಂಟೆಗೆ ನನ್ನ ಇಂಡಿಕಾ ರಥದಲ್ಲಿ ಹೊರಟೆವು. ೫ ಜನರ ತಂಡದಿಂದ ಒಬ್ಬ ಹಿಂದೆ ಸರಿದು, ಉಳಿದದ್ದು ನಾನು, ರವೀಶ, ಮಧುರ್ ಮತ್ತು ಆದರ್ಶ. ರಾಷ್ಟ್ರೀಯ ಹೆದ್ದಾರಿ-೪ ರಲ್ಲಿ ಚಲಿಸಿ ಚಿತ್ರದುರ್ಗವನ್ನು ತಲುಪಿದಾಗ ರಾತ್ರಿ ೯:೩೦. ಜನರು ಸಮ್ಮೇಳನದಲ್ಲಿ ಊಟ ಮುಗಿಸಿ ಗುಂಪು ಗುಂಪಾಗಿ ಮನೆಗೆ ತೆರಳುತಿದ್ದರು. ಬಹಳ ಬೇಡಿಕೆಯಲ್ಲಿದ್ದ ವಸತಿ ಗೃಹಗಳಿಗೆ ಹೆಣಗಾಡಿ ಕೊನೆಗೆ ದುಬಾರಿಯೆನಿಸಿದ (ನಾಲ್ಕು ಜನರಿಗ ೧ ಕೊಠಡಿ, ೧೨೦೦ ರೂ) ಕೊಠಡಿಯನ್ನಿಡಿದೆವು. ರಾತ್ರಿ ಸುಖನಿದ್ದೆಗೆ ಜಾರಿ, ಬೆಳಗೆದ್ದು ಸಾಹಿತ್ಯ ಸಮ್ಮೇಳನದ ಕೊನೆಯ ದಿನವನ್ನು ಕಣ್ಣಾರೆ ನೋಡಲು ಸಿದ್ಧರಾದೆವು.

ಸಮ್ಮೇಳನ,ಸಂಗೀತ,ಭಾಷಣ,ಕವಿಘೋಷ್ಠಿ, ಪುಸ್ತಕ ಮಳಿಗೆಗಳು ಮತ್ತು ಊಟ
ಭವ್ಯವಾಗಿ ಅಲಂಕೃತಗೊಂಡ ’ತಾ ರಾ ಸು’ ವೇದಿಕೆಯನ್ನು ಕಂಡು ಮನಸ್ಸು ಪುಳಕಿತಗೊಂಡಿತು! ಮದಕರಿ ನಾಯಕನ, ಒನಕೆ ಓಬವ್ವನ ಚಿತ್ರಪಟಗಳು ಮುಖ್ಯವಾಗಿ ವೇದಿಕೆಯ ಹಿಂಭಾಗದಲ್ಲಿ ರಾರಾಜಿಸುತ್ತಿದ್ದವು.ವೇದಿಕೆಯ ಮೇಲೆ ಒಬ್ಬ ಹಿರಿಯರು ಮತ್ತು ಸಂಗಡಿಗರು ಕರ್ನಾಟಕ ಸಂಗೀತದಲ್ಲಿ ವೀಣೆಯನ್ನು ನುಡಿಸುತ್ತಿದ್ದರು. ಬಹಳ ಅದ್ಭುತವಾಗಿತ್ತು ಆ ವೀಣಾವಾದನ. ಆದರೆ ಒಂದು ಕೊರಗಂತೂ ಮನಸ್ಸಿನಲ್ಲುಳಿಯಿತು. ಬೇರೆ ವೇದಿಕೆಗಳಲ್ಲಿ ಕನ್ನಡೇತರ ಕೃತಿಗಳನ್ನು ನುಡಿಸಿದರೆ ಬೇಜಾರಿಲ್ಲ, ಆದರೆ ಕನ್ನಡವೇ ರಾರಾಜಿಸಿಬೇಕಾದ ಇಂತಹ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಕೃತಿಗಳನ್ನೇ ನುಡಿಸುವುದೊಳಿತೆಂಬುದು ನನ್ನ ಅನಿಸಿಕೆ. ಅಂದಹಾಗೆ ಅಲ್ಲಿ ನುಡಿಸುತ್ತಿದ್ದುದು ಮುತ್ತು ಸ್ವಾಮಿ ದೀಕ್ಷಿತರ ’ವಾತಾಪಿ ಗಣಪತೀಂ’, ನಂತರ ಪುರಂದರದಾಸರ ’ಭಾಗ್ಯದ ಲಕ್ಷ್ಮಿ ಬಾರಮ್ಮ’ ದೇವರ ನಾಮದಿಂದ ಮುಕ್ತಾಯವಾಯಿತು. ನಂತರ ವೀಣೆ ನುಡಿಸಲು ಬಂದ ಮತ್ತೊಂದು ತಂಡ ಕೂಡ ’ವಾತಾಪಿ’ ಕೃತಿಯಿಂದಲೇ ಪ್ರಾರಂಭಿಸಿದರು. ಕಾರ್ಯಕ್ರಮವನ್ನು ವಿಘ್ನನಿವಾರಕ ಗಣಪತಿಯ ಆರಾಧನೆಯೊಂದಿಗೆ ಪ್ರಾರಂಭಿಸುವುದು ವಾಡಿಕೆ. ಕನ್ನಡದ್ದೇ ಆದ ದಾಸರ ’ಗಜವಧನ ಬೇಡುವೆ’ ಕೃತಿಯಿಂದ ಆರಂಭಿಸಿದ್ದಿದ್ದರೆ ಕಾರ್ಯಕ್ರಮ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು. (ಇಲ್ಲೊಂದು ಸ್ಪಷ್ಟೀಕರಣ: ನನಗೆ ಮುತ್ತು ಸ್ವಾಮಿ ದೀಕ್ಷಿತರ ಮತ್ತು ಅವರ ಕೃತಿಗಳ ಮೇಲೆ ಬಹಳ ಅಭಿಮಾನ, ಅಪಾರ ಗೌರವ. ಆದರೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡವೇ ರಾರಾಜಿಸಬೇಕೆಂಬುದು ಆಸೆ).ನಂತರ ಇದೇ ತಂಡ ಕೆಲವು ಕನ್ನಡದ ಭಾವಗೀತೆಗಳನ್ನು ವೀಣೆಯಲ್ಲಿ ನುಡಿಸಿದರು. ಸಮಾನ್ಯವಾಗಿತ್ತು! (ಇದೇ ರೀತಿ ಮತ್ತೊಂದು ವೇದಿಕೆಯಲ್ಲಿ, ತೆಲುಗಿನ ’ರಾ ರಾ’ ಹಾಡಿಗೆ ನೃತ್ಯ ಪ್ರದರ್ಶನ ಮಾಡಿ, ಪ್ರತಿಭಟನೆ ಕೂಡ ನಡೆದಿದ್ದನ್ನು ನೆನಪಿಸಿಕೊಳ್ಳಬಹುದು.)

(ಮೇಲೆ) ಮದಕರಿನಾಯಕನ ಮಂಟಪ
(ಕೆಳಗೆ) ತಾ ರಾ ಸು ವೇದಿಕೆ



ನಂತರ ಕವಿಘೋಷ್ಠಿಗೆ ವೇದಿಕೆ ಸಜ್ಜಾಯಿತು. ಇದು ನಾನು ಪ್ರತ್ಯಕ್ಷವಾಗಿ ನೋಡುತ್ತಿದ್ದ ಮೊದಲ ಕಾವ್ಯಘೋಷ್ಠಿಯಾದದ್ದರಿಂದ ಉತ್ಸಾಹ ತುಸು ಜಾಸ್ತಿಯಾಗಿತ್ತು. ನೆರೆದಿದ್ದ ಎಲ್ಲಾ ಕವಿಗಳ ಸನ್ಮಾನವಾದ ಮೇಲೆ, ಒಬ್ಬರ ಭಾಷಣ. ಈ ಭಾಷಣ ನನ್ನ ಉತ್ಸುಕತೆಯನ್ನು ಇಳಿಸಿಬಿಟ್ಟಿತು. ಮೊದಲೇ ಸಮ್ಮೇಳನಾಧ್ಯಕ್ಷರ ಕೆಟ್ಟ ಭಾಷಣವನ್ನು (ಆ ಭಾಷಣದಲ್ಲಿ ಸಮ್ಮೇಳಾಧ್ಯಕ್ಷರು ಆ ವರ್ಗ,ಈ ವರ್ಗ ಎಂದು ಮನುಷ್ಯರನ್ನು ವರ್ಗೀಕರಿಸಿ ಕೆಲೊವೊಂದು ವರ್ಗದವರ ಮೇಲೆ ವಿಷ ಕಾರಲು ಬಹಳಷ್ಟು ಸಮಯವನ್ನು ಮೀಸಲಿಟ್ಟಿದ್ದರು!) ಓದಿದ್ದ ನನಗೆ, ಈ ಮಹಾನುಭಾವನ ಭಾಷಣವನ್ನು ಕೇಳಿ ಸಮ್ಮೇಳನದ ಬಗ್ಗೆ ನಿರಾಸಕ್ತಿ ಮೂಡಿಸಿಬಿಟ್ಟಿತು.ಇನ್ನು ಕವಿಘೋಷ್ಠಿಯ ಮೊದಲನೆ ಕಾವ್ಯ ವಾಚನವನ್ನು ಆಲಿಸಿದೆ, ಮತ್ತೆ ಆಸಕ್ತಿಯನ್ನು ಕೆರಳಿವಂತಿರಲಿಲ್ಲ ಆ ವಾಚನ. ಎಲ್ಲರೂ ಪುಸ್ತಕ ಮಳಿಗೆಗಳ ಕಡೆ ಹೆಜ್ಜೆ ಹಾಕಿದೆವು.

ಪುಸ್ತಕ ಮಾರಾಟ ಮಳಿಗೆಗಳ ಅವ್ಯವಸ್ಥೆಯ ಬಗ್ಗೆ ಬಹಳಷ್ಟು ಸುದ್ದಿಯನ್ನು ವೀಕ್ಷಿಸಿ, ಓದಿದ್ದ ನಮಗೆ ಅಷ್ಟೇನು ತೊಂದರೆಯಾಗಲಿಲ್ಲ. ಅಪಾರ ಮಳಿಗೆಗಳಿದ್ದವು. ಬಹಳಷ್ಟು ಮಳಿಗೆಗಳನ್ನು ಸುತ್ತಾಡಿ, ಪುಸ್ತಕಗಳನ್ನು ಕೊಂಡು ಊಟಕ್ಕೆ ಹೊರಟೆವು. ಸ್ವಲ್ಪ ಧೂಳು ಹೆಚ್ಚ್ಹೆನ್ನುವುದು ಬಿಟ್ಟರೆ, ಅಂತಹ ಅವ್ಯವಸ್ಥೆ ನನಗೇನೂ ಕಾಣಲಿಲ್ಲ.

ಊಟದ ವ್ಯವಸ್ಥೆ ಕೂಡ ಅದ್ಬುತವಲ್ಲದಿದ್ದರೂ ಚೊಕ್ಕಟವಾಗಿತ್ತು. ಬಹಳಷ್ಟು ಊಟದ ಮಳಿಗೆಗಳನ್ನು ತೆರೆಯಲಾಗಿತ್ತು. ಊಟವಾಯಿತು, ಕೊಠಡಿಗೆ ಹಿಂತಿರುಗಿದೆವು. ಇನ್ನು ಪ್ರವಾಸಕ್ಕೆ ಸನ್ನದ್ಧವಾದೆವು.

ಚಂದ್ರವಳ್ಳಿ

ಚಿತ್ರದುರ್ಗದ ಕೇಂದ್ರದಿಂದ ೨ ಕಿ ಮೀ ದೂರದಲ್ಲಿದೆ. ಸಂಜೆ ನಾಲ್ಕು ಘಂಟೆಗೆ ಹೊರಟೆವು. ಚಂದ್ರವಳ್ಳಿಯಲ್ಲಿ ಮೊದಲು ಎದುರಾಗುವುದು ಭವ್ಯ ಕೆರೆ. ಮುಂದುವರೆದು, ಸ್ವಲ್ಪ ಮೇಲೆರಿದರೆ, ಗುಡ್ಡದಂತಹ ಪ್ರದೇಶದಲ್ಲಿ, ಗುಹೆಗಳು. ಒಬ್ಬ ಮಾರ್ಗದರ್ಶಿಯನ್ನು ಹಿಡಿದು ಕಗ್ಗತ್ತಲಿನ ಗುಹೆಗಳನ್ನು ಸುತ್ತಾಡಿದೆವು. ಅದ್ಭುತವೆನಿಸಿತು. ನಾವು ಬೆಟ್ಟದ ತುದಿಯಿಂದ ೭೫ ಮೀ ಕೆಳಗೆ, ಗುಹೆಯೊಳಗೆ ಇದ್ದೇವೆಂದಾಗ ಆಶ್ಚರ್ಯವಾಯಿತು. ಆ ಗುಹೆಗಳ ರಚನೆಗೆ ಮತ್ತು ಗೊಹೆಯೊಳಗಿನ ಚಿತ್ರ ಮತ್ತು ಶಿಲ್ಪ ಕಲೆಗೆ ತಲೆದೂಗಿದೆವು. ಆ ಗುಹೆ ಒಬ್ಬರು ಸ್ವಾಮೀಜಿಗಳು ವಾಸವಾಗಿದ್ದ ಸ್ಥಳವಂತೆ. ಆಗಿನ ಸ್ವಾಮಿಗಳು ಲೌಖಿಕತೆಯಿಂದ ದೂರವಿರಲು ಎಂತಹ ಸ್ಥಳಗಳನ್ನು ಆಯ್ಕೆ ಮಾಡುತ್ತಿದರು ಎಂದು ನೆನೆದು ಸೋಜಿಗವೆನಿಸಿತು ನನಗೆ!


(ಮೇಲೆ) ಕಗ್ಗತ್ತಲಿನ ಗುಹೆ (ಕ್ಯಾಮರಾದ ಬೆಳಕಿನಿಂದ ಕತ್ತಲೆ ಮಾಯವಾಗಿದೆ!)
(ಎಡ) ಗುಹೆಯೊಳಗೆ, ಸ್ವಾಭಾವಿಕ (ತರಕಾರಿಗಳಿಂದ) ಬಣ್ಣಗಳಿಂದ ಮೂಡಿ ಬಂದಿರುವ ಚಿತ್ರ
(ಕೆಳಗೆ) ಗುಹೆಯೊಳಗಿನ ಕೆತ್ತನೆ




ಚಂದ್ರವಳ್ಳಿಯ ಒಳಗೆ,ಸುತ್ತಮುತ್ತ



ಜಂಗ್ಲಿ
ಚಂದ್ರವಳ್ಳಿ ನೋಡಿ ಬಂದು ಅಲ್ಲಿನ ಒಂದು ಚಿತ್ರಮಂದಿರದಲ್ಲಿ, ರಾತ್ರಿ ಆಟದಲ್ಲಿ ಈ ಕನ್ನಡ ಚಲನಚಿತ್ರವನ್ನು ನೋಡಿದೆವು. ಇದರ ವಿಮರ್ಶೆಯನ್ನು ಶೀಘ್ರದಲ್ಲೆ ನಿರೀಕ್ಷಿಸಿ. ನಂತರ ನಿದ್ದೆ ಮಾಡುವ ಸಮಯವಾಗಿತ್ತು.

ಏಳು ಸುತ್ತಿನ ಕೋಟೆ

ಚಿತ್ರದುರ್ಗದ ಐತಿಹಾಸಿಕ ಕೋಟೆಯನ್ನು ಸುತ್ತಾಡಲು, ಬೆಳಗ್ಗೆ ಬೇಗನೆ ಹೊರಟೆವು. ಸುಮಾರು ೫ ಘಂಟೆಗಳ ಕಾಲ ಕೋಟೆಯನ್ನು ಸುತ್ತಾಡಿದೆವು. ಬಹಳ ಆನಂದ ಪಟ್ಟೆವು. ಕೋಟೆಯ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಛಾಯಾಚಿತ್ರಗಳೆ ಮಾತಾಡಲಿ!


(ಮೇಲೆ)ಕೋಟೆಯ ಕಲ್ಲಿನ ಗೋಡೆಯ ಮುಂದೆ ಪ್ರಜೆಗಳು (ಬಲದಿಂದ ಎಡಕ್ಕೆ :ನಾನು, ಆದರ್ಶ, ರವೀಶ,ಮಧುರ್)
(ಬಲ)ಕೋಟೆಯ ಒಂದು ಕಲ್ಲಿನ ಗೋಡೆಯ ಮೇಲೆ ’ನಾಗರ ಹಾವಿನ’ ಲಾಂಚನ
(ಕೆಳಗೆ)ಅರಮನೆಯ ಪಳೆಯುಳಿಕೆ



















1)ತುಪ್ಪದ ಕೊಳಕ್ಕೆ ಇಳಿಯುತ್ತಿರುವ ನಾನು
2)ಓಬವ್ವನ ಕಿಂಡಿ ಯಲ್ಲಿ ಶತ್ರು!
3)ದೇಹದ ಗುರುತ್ವಾಕರ್ಷಣ ಕೇಂದ್ರ ಬಿಂದುವನ್ನು ಕೆಳಗಿಳಿಸಿ ಹತ್ತು!
4)ಕೋಟೆ ಹತ್ತಿದ್ದಕ್ಕೆ ಪುರಾವೆ!
(ಛಾಯಚಿತ್ರ ಮತ್ತು ಅಡಿಬರಹವನ್ನು ನೀವೇ ಹೊಂದಿಸಿಕೊಳ್ಳಿ!)








































ಚಿತ್ತಾರ/ಚಿತ್ರ - ದುರ್ಗ



1)ಮೊಲ/ಗೂಳಿ ಬಂಡೆ
2)ಆನೆ ಬಂಡೆ
3)ಹಡಗು ಬಂಡೆ
4)ಕಪ್ಪೆ ಬಂಡೆ
(ಚಟುವಟಿಕೆ : ಬಂಡೆಯನ್ನು ಆಕಾರದ ಅಡಿಬರಹಕ್ಕೆ ಹೊಂದಿಸಿ!)














ಜೋಗಿಮಟ್ಟಿ, ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯ
ಕೋಟೆಯ ವೀಕ್ಷಣೆಯ ನಂತರ ಚಿತ್ರದುರ್ಗದಿಂದ ೧೦ ಕಿ ಮೀ ದೂರವಿರುವ ಜೋಗಿಮಟ್ಟಿ ಗಿರಿಧಾಮಕ್ಕೆ ಹೊರಟೆವು. ಜೋಗಿಮಟ್ಟಿಗೆ ತಲುಪಲು ಅರಣ್ಯ ಇಲಾಖೆಯ ಅನುಮತಿ ಪತ್ರವಿರಬೇಕೆಂಬುದನ್ನು, ಅರಣ್ಯ ಸಿಬ್ಬಂದಿಯಿಂದ ತಿಳಿಸಲ್ಪಟ್ಟಾಗ ನಿರಾಸೆಯಿಂದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ಗಾಡಿಯನ್ನು ತಿರುಗಿಸಿದೆವು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೈಸೂರು ಪ್ರಾಣಿ ಸಂಗ್ರಹಾಲಯಗಳನ್ನು ನೋಡಿದ ಬೆಂಗಳೂರು-ಮೈಸೂರು ಸೀಮೆಯವರಿಗೆ ಈ ಪ್ರಾಣಿಸಂಗ್ರಹಾಲಯದಲ್ಲಿ ನಿರಾಸೆ ಕಟ್ಟಿಟ್ಟ ಬುತ್ತಿ!

ಮದಿಸಿದ ಕರಿಯ ಮದವಡಗಿಸಿದ ಮದಕರಿನಾಯಕನ ಪ್ರತಿಮೆ!
ನೆಲಂಗಲದ ಬವಣೆ,
ಚಿತ್ರದುರ್ಗದಿಂದ ೪ ಘಂಟೆಗೆ ಹೊರಟು ನೆಲಮಂಗಲ ವಾಹನದಟ್ಟಣೆಯಲ್ಲಿ ಪ್ರಾಣಹಿಂಸೆ ಅನುಭವಿಸಿ ಮನೆ ತಲುಪಿದಾಗ ರಾತ್ರಿ ೯:೩೦.

ಒಟ್ಟಿನಲ್ಲಿ ಸಮ್ಮೇಳನ, ವಾಹನ ದಟ್ಟಣೆಯ ಕಹಿಯನ್ನು, ಚಿತ್ರದುರ್ಗ ಪ್ರವಾಸದ ನೆನಪುಗಳು ಮರೆಸಿತ್ತು.

ಧನ್ಯವಾದಗಳು: ರವೀಶ, ಮಧುರ್ ಮತ್ತು ಆದರ್ಶ ಸೆರೆ ಹಿಡಿದ ಬಹಳಷ್ಟು ಭಾವಚಿತ್ರಗಳನ್ನು ಅವರ ಅನುಮತಿ ಇಲ್ಲದೆ ಧಾರಾಳವಾಗಿ ಇಲ್ಲಿ ಬಳಸಿದ್ದೇನೆ.ಗೆಳೆಯರೆ ಛಾಯಾಚಿತ್ರಗಳಿಗೆ ಧನ್ಯವಾದಗಳು.

ಬುಧವಾರ, ಫೆಬ್ರವರಿ 04, 2009

ಬೀರು ಹೇಳಿದ ಪಬ್ಬಿನ ಕಥೆ!

ಇದ್ದ ಐವರಲ್ಲಿ ಉತ್ತಮನು ಯಾರು?
ನಾನೇ ಎಂದಿತು ಪಬ್ಬಿನ ಬೀರು!
ಪಬ್ಬಿನ ಹೈಕಳಿಗೆ ಮ(ಮು)ತ್ತನು ಕೊಟ್ಟೆ!
ಧೀರ-ಶೂರ ಸೇನೆಯನ್ನು ಜೈಲಿಗೆ ಅಟ್ಟೆ!
ಮಾಧ್ಯಮಕ್ಕೆ ಬಿಸಿ ಬಿಸಿ ಸುದ್ದಿಯ ಹಾರಿಸಿ ಬಿಟ್ಟೆ!
ರೇಣುಕಾ ಅಮ್ಮನಿಗೆ ಯಾಕೊ ಕಾಣೆ, ಬರೀ ಸಿಟ್ಟೆ!

ಬೀರು ಉವಾಚ,
ತೋರುವರು ತಮ್ಮ ಬೆಟ್ಟುಗಳನ್ನು ನನ್ನೆಡೆಗೆ(ಇನ್ನೊಬ್ಬನೆಡೆಗೆ), ನರರು
ಮುಚ್ಚಿಕೊಳ್ಳಲು ತಮ್ಮ ದೌರ್ಬಲ್ಯಗಳನು,

ಪಬ್ಬಿನ ಹೈಕಳಿಗೆ ಅಮಲಿನ,
ಸೇನೆಗೆ ಕ್ಷಣದಲಿ ಸರ್ವನಾಯಕರಾಗುವ ದುರಾಸೆಯ,
ಮಾಧ್ಯಮಕ್ಕೆ ಹಸಿ ಬಿಸಿ ಸುದ್ದಿಯನು ತೋರುವ ತೆವಲಿನ,
ರೇಣುಕಮ್ಮನಿಗೆ ರಾಜಕೀಯದಲ್ಲಿ ಚಾಲ್ತಿಯಲ್ಲಿರಬೇಕಾದ,
ಇವುಗಳನ್ನೋದುವವರಿಗೆ ಕೆಲಸದೊತ್ತಡದ ಮಧ್ಯೆ ಬೇಕಾದ ಮನರಂಜನೆಯ ದೌರ್ಬಲ್ಯ......