ಬುಧವಾರ, ನವೆಂಬರ್ 26, 2008

ತೀ ನಂ ಶ್ರೀ ಜಯಂತಿ

"ಯಾರು ನಂಟರು?

ಇದು ಎಂಥ ಪ್ರಶ್ನೆ! ಎಳೆಯ ಮಕ್ಕಳಿಗೆ ಕೂಡ ಯಾರು ನಂಟರು ಎಂದು ಗೊತ್ತಿದೆಯಲ್ಲಾ! ಎಂದು ಹಾಸ್ಯ ಮಾಡಬೇಡಿ. ಇದು ಎಷ್ಟು ತೊಡಕಾದ ಸಮಸ್ಯೆ ಎನ್ನುವುದು ಒಂದು ಕ್ಷಣದಲ್ಲಿ ಮನದಟ್ಟಾಗುತ್ತದೆ.

ಮಾವ, ಭಾವ, ಅತ್ತೆ, ಮೈದುನ - ಇವರೆಲ್ಲರೂ ನಂಟರೆಂದು ನೀವು ಬೇಗ ಹೇಳಿಬಿಡಬಹುದು. ರಕ್ತಸಂಬಂಧಿಗಳೆಲ್ಲರೂ ನಂಟರೆಂದು ಶಾಸ್ತ್ರ ಪರಿಷ್ಕೃತವಾದ ಬುದ್ಧಿಯುಳ್ಳವರು ಲಕ್ಷಣವನ್ನೂ ಕಲ್ಪಿಸಬಹುದು. ಆದರೆ ಬಾಂಧವ್ಯದ ರಹಸ್ಯಗಳನ್ನೆಲ್ಲಾ ಒಂದು ಸೂತ್ರದಿಂದ ಕಟ್ಟಿ ಹಾಕುವುದು ಸಾಧ್ಯವಿಲ್ಲ. ತಂದೆತಾಯಿಗಳ ರಕ್ತವೇ ನಮ್ಮ ದೇಹದಲ್ಲೆಲ್ಲಾ ಹರಿಯುತ್ತಿದೆಯಷ್ಟೆ. ಇವರು ನಂಟರೆ? ಈಗಿನ ವಿದ್ಯಾವಂತರಾದ ನೀವು ನಿಮ್ಮ ಮುಪ್ಪಿನ ತಂದೆಯೊಡನೆ ಬೆಂಗಳೂರಿನಲ್ಲಿ ಪೇಟೆಯ ಕಡೆಗೆ ಹೊರಟಿರಿ ಎನ್ನಿ. ಆಗ ನಿಮ್ಮ ಮಿತ್ರರೊಬ್ಬರು ಎದುರಿಗೆ ಬಂದು ಕಂಡು "ಇವರು ಯಾರು?" ಎಂದು ನಿಮ್ಮ ತಂದೆಯ ಕಡೆಗೆ ತೋರಿಸಿ ಕೇಳಿದಾಗ, ನೀವು "ನಮ್ಮ ನಂಟರು" ಎಂದು ಹೇಳಿಬಿಟ್ಟರೆ ಆಗುವ ಅನರ್ಥವನ್ನು ಊಹಿಸುವುದಾದರೂ ಸಾಧ್ಯವೆ? ಕೆಲವು ಮಂದಿ ಸತ್ಪುತ್ರರು ಇಂಥ ಉತ್ತರಗಳನ್ನು ಕೊಟ್ಟ ಮಾತ್ರದಿಂದಲೇ ಎಷ್ಟೋ ಸಂಸಾರಗಳು ಒಡೆದು ಹೋಗಿಲ್ಲವೇ?"

ನೀವು ನಿಮ್ಮ ಪ್ರೌಢಶಾಲೆಯಲ್ಲಿ (೯ ನೆಯ ಅಥವಾ ೧೦ ನೆಯ ತರಗತಿ ಇರಬಹುದು) ಪ್ರಥಮ ಭಾಷಾ ವಿಷಯವಾಗಿ ಕನ್ನಡವನ್ನು ಆಯ್ಕೆ ಮಾಡಿದ್ದರೆ (ಸಾಮಾನ್ಯವಾಗಿ ಸರ್ಕಾರಿ ಪಠ್ಯ ಪುಸ್ತಕಗಳು ೮ - ೧೦ ವರ್ಷಗಳಲ್ಲಿ ಬದಲಾಗುವುದಿಲ್ಲ), ನೀವು ಮೇಲಿನ ಸಾಲುಗಳನ್ನು ನಂಟರು ಎಂಬ ಗದ್ಯ/ಪಾಠದಲ್ಲಿ ಓದಿರಬಹುದು. ಆ ವಯಸ್ಸಿನಲ್ಲಿ ನಾನು ಭಾಷಾ ವಿಷಯಗಳನ್ನು ಅಷ್ಟೇನೂ ವಿಷೇಶಾಸಕ್ತಿಗಳಿಂದ ಓದದೇ ಇದ್ದಾಗ್ಯೂ, ಅದೇನೋ ಒಂದು ತರಹ ಆಸಕ್ತಿ ಮೂಡಿಸಿದ್ದ ಪಾಠವಿದು. ಇಂದು ಇದರ ಕರ್‍ತೃ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರ ಜನ್ಮ ದಿನ. (೨೬/೧೧/೧೯೦೬ - ೦೭/೦೯/೧೯೬೬).
(ನಂಟರು ಎಂಬ ಲಲಿತ ಪ್ರಬಂಧ ಓದುವ ಆಸಕ್ತಿಯುಳ್ಳವರು, ತೀ ನಂ ಶ್ರೀ ಯವರ ನಂಟರು ಎಂಬ ಪುಸ್ತಕವನ್ನು ಓದಬಹುದು. ಇದು ಇನ್ನೂ ಹಲವಾರು ಪ್ರಬಂಧಗಳು/ಹರಟೆಗಳನ್ನು ಒಳಗೊಂಡಿದೆ).

ತೀ ನಂ ಶ್ರೀ ಯವರು ನವೋದಯ ಕನ್ನಡ ಸಾಹಿತ್ಯ ಸಂದರ್ಭದ ಪ್ರಮುಖ ಸಾಹಿತಿ/ ಕವಿಗಳೊಲ್ಲೊಬ್ಬರು. (ಇತ್ತೀಚೆಗೆ ಬಹಳ ಉಪಯೋಗಿಸಲ್ಪಡುವ ಈ ನವೋದಯ ಸಾಹಿತ್ಯ ಕಾಲ ಯಾವುದು ಎಂದು ತಿಳಿಯಲು ಈ ಲೇಖನದ ಕೊನೆಯಲ್ಲಿರುವ ಕಿರು ಸೂಚನೆ ಓದಿ).
ಕವಿ, ವಿಮರ್ಶಕ, ಪ್ರಬಂಧಕಾರ ಪ್ರೊ. ತೀ ನಂ ಶ್ರೀ ಕರ್ನಾಟಕ, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ಬೋಧನೆ, ಗ್ರಂಥ ಸಂಪಾದನೆ ಇವರಿಗೆ ಪ್ರಿಯವಾದುದು. ೧೯೩೨ ರಲ್ಲಿ ಪ್ರಕಟವಾದ ’ಒಲುಮೆ’ ಹೊಸಗನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ. ’ನಂಬಿಯಣ್ಣನ ರಗಳೆ’ ಮತ್ತು ’ರನ್ನನ ಗಧಾಯುದ್ಧ ಸಂಗ್ರಹ’ - ಇವರು ಸಂಪಾದಿಸಿರುವ ಮಹತ್ವದ ಗ್ರಂಥಗಳು. ’ಭಾರತೀಯ ಕಾವ್ಯ ಮೀಮಾಂಸೆ’ ತೀ ನಂ ಶ್ರೀ ಯವರ ದೀರ್ಘಕಾಲದ ಅಧ್ಯಯನ,ಪರಿಶ್ರಮಗಳ ಫಲ.ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆಂದು ಬರೆದ ’ಕನ್ನಡ ಮಧ್ಯಮ ವ್ಯಾಕರಣ’ ಸರಳವಾದ ಗ್ರಂಥ. ಸಂಸ್ಕೃತ ಮೂಲಗಳನ್ನು ಆಧರಿಸಿ ಬರೆದ ಮುಕ್ತಕಗಳಲ್ಲಿ ತೀ ನಂ ಶ್ರೀ ಯವರ ಕಾವ್ಯಶಕ್ತಿಯ ವಿಶೇಷ ಗುಣವಿದೆ. ’ವಿಶಾಖದತ್ತ’ನ ’ಮುದ್ರಾರಾಕ್ಷಸ’ದ ಕನ್ನಡ ಅನುವಾದ ’ರಾಕ್ಷಸನ ಮುದ್ರಿಕೆ’ ನಾಟಕ ಅವರ ಅಪೂರ್ವ ಸಾಹಿತ್ಯ ಕೃತಿ. ’ನಂಟರು’ ಪ್ರಭಂದ ಸಂಕಲನದಲ್ಲಿ ತೀ ನಂ ಶ್ರೀಯವರ ಆಳವಾದ ಪಾಂಡಿತ್ಯ ಲೋಕಾನುಭವದ ಪರಿಚಯವಾಗುತ್ತದೆ. ’ಸಮಾಲೋಕನ’ ತೀ ನಂ ಶ್ರೀ ಯವರ ಅಸಾಧಾರಣ ವಿದ್ವತ್ತಿಗೆ ಸಾಕ್ಷಿಯಾಗಿದೆ.
(ತೀ ನಂ ಶ್ರೀ ಯವರ ಕೃತಿಗಳನ್ನು ಪರಿಚಯಿಸುವ ಈ ಮೇಲಿನ ಪಂಕ್ತಿಯನ್ನು ’ತೀ ನಂ ಶ್ರೀ ಯವರ ಸಮಗ್ರ ಕವಿತೆಗಳು’ ಪುಸ್ತಕದ ’ಪ್ರಕಾಶಕರ ಮಾತು’ - ನಾಗರತ್ನರಾವ್ ರವರ ಬರಹದಿಂದ ಆಯ್ದು ಪ್ರಕಟಿಸಲಾಗಿದೆ)

ಕೊನೆಗೆ ತೀ ನಂ ಶ್ರೀ ಯವರ ಒಂದು ಕವನ,

ಸುಳಿಸು ಕಣ್ಣಿನಲೊಮ್ಮೆ

ಸುಳಿಸು ಕಣ್ಣಿನಲೊಮ್ಮೆ
ನಗೆಮಿಂಚ ನಲ್ಲೆ!
ಒಲುಮೆ ಒಳಗಿರಲೇನು;
ತುಳಕದಿರೆ ನೋಟದಲಿ
ಬಗೆ ನೆಚ್ಚದಲ್ಲೆ!

ಮೊಗದ ಬಿಂಕದ ಮುಸುಕ -
ನೆರೆ ನಿಮಿಷ ಸರಿಸು;
ಬಿಗಿದ ತುಟಿಯನು ಬಿಚ್ಚಿ
ಕಿರುನಗೆಯ ಹರಿಸು;

ಕೆನ್ನೆ ನಸುಗೆಂಪೇರಿ
ಕಣ್ಣಿನಾಳದೊಳೊಮ್ಮೆ
ಒಲವಿಕ್ಕಿ ಬರಲಿ;
ನನ್ನ ದುಗುಡದ ಮನಕೆ
ನಲವನದು ತರಲಿ!

ಈ ಕವನ ಎಷ್ಟು ಸರಳವಾಗಿದ್ದು, ಮನಸ್ಸಿಗೆ ಮುದ ಕೊಡುವಂತಾಗಿದೆ ಅಲ್ಲವೆ?

(ಡಾ ಜಿ ಎಸ್ ಶಿವರುದ್ರಪ್ಪನವರು "ತೀ ನಂ ಶ್ರೀ ಯವರ ಸಮಗ್ರ ಗದ್ಯ" ಪುಸ್ತಕಕ್ಕೆ ಬರೆದಿರುವ ಮುನ್ನುಡಿಯ ಮಾತುಗಳಿಂದ : ತೀ ನಂ ಶ್ರೀಕಂಠಯ್ಯನವರು ಕನ್ನಡ ಸಾಹಿತ್ಯ ಪ್ರವೇಶಿಸಿದ್ದೇ ಒಬ್ಬ ಕವಿಯಾಗಿ, ೧೯೩೨ ರಲ್ಲಿ ಅವರು ಪ್ರಕಟಿಸಿದ ’ಒಲುಮೆ’ ಎಂಬ ಕವನ ಸಂಗ್ರಹದ ಮೂಲಕ. ಹೊಸಗನ್ನಡದಲ್ಲಿ ಪ್ರೇಮವನ್ನು ಒಂದು ಘನವಾದ ಹಾಗೂ ಜನಪ್ರಿಯವಾದ ರೀತಿಯಲ್ಲಿ ವರ್ಣಿಸಿ ವಿಖ್ಯಾತರಾದ ಕನ್ನಡದ ಒಲವಿನ ಕವಿ ಕೆ ಎಸ್ ನರಸಿಂಹಸ್ವಾಮಿಯವರಿಗಿಂತ ಮೊದಲೆ, ಈ ವಸ್ತುವನ್ನು ಕುರಿತು ಮೊದಲು ಬರೆದವರು ತೀ ನಂ ಶ್ರೀ. ಈ ದೃಷ್ಟಿಯಿಂದ ಚಾರಿತ್ರಿಕವಾಗಿ ತೀ ನಂ ಶ್ರೀ ಅವರ ಒಲುಮೆ ಕವನ ಸಂಗ್ರಹವೆ ಹೊಸಗನ್ನಡ ಸಾಹಿತ್ಯ ಸಂದರ್ಭದ ಮೊದಲ ಪ್ರೇಮಕಾವ್ಯ ಸಂಕಲನ.)

ಕಿರು ಸೂಚನೆ : ನವೋಹಯ ಸಾಹಿತ್ಯ ಸಂದರ್ಭದ ಬಗ್ಗೆ ಡಾ ಜಿ ಎಸ್ ಶಿವರುದ್ರಪ್ಪನವರು "ತೀ ನಂ ಶ್ರೀ ಯವರ ಸಮಗ್ರ ಗದ್ಯ" ಪುಸ್ತಕಕ್ಕೆ ಬರೆದಿರುವ ಮುನ್ನುಡಿಯಿಂದ: "ಹತ್ತೊಂಬತ್ತನೆಯ ಶತಮಾನದ ಕೊನೆಯ ಮೂರು ದಶಕಗಳು ಮತ್ತು ಇಪ್ಪತ್ತನೆಯ ಶತಮಾನದ ಮೊದಲ ಒಂದು ದಶಕ - ಈ ನಾಲ್ಕು ದಶಕಗಳು (೧೮೭೦ - ೧೯೧೦), ಹೊಸಗನ್ನಡ ಸಾಹಿತ್ಯ ದೃಷ್ಟಿಯಿಂದ, ಅನೇಕ ಮಹತ್ವದ ಸಾಹಿತಿಗಳು ಹುಟ್ಟಿಕೊಂಡ ಕಾಲವಾಗಿದೆ. ಪಂಜೆ, ಪೈ, ಬಿ ಎಂ ಶ್ರೀ, ಕೈಲಾಸಂ, ಡಿ ವಿ ಜಿ, ಎ ಆರ್ ಕೃ, ಮಾಸ್ತಿ, ಬೇಂದ್ರೆ, ಕುವೆಂಪು, ವಿ ಸೀ, ಕಾರಂತ, ಶ್ರೀರಂಗ, ಪು ತಿ ನ, ಡಿ ಎಲ್ ನ, ಅ ನ ಕೃ, ಗೊರೂರು, ತೀ ನಂ ಶ್ರೀ ಮತ್ತು ಇನ್ನೂ ಹಲವಾರು ಹುಟ್ಟಿದ್ದು ಈ ದಶಕಗಳಲ್ಲಿ. ಈ ಮಹಾ ಸಾಹಿತಿಗಳ ಸಾಧನೆಯಿಂದಾಗಿ, ನವೋದಯ ಸಾಹಿತ್ಯ ಸಂದರ್ಭ ಎಂದು ಹೆಸರಿಸುವ ಕಾಲಮಾನವು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಏಕಕಾಲಕ್ಕೆ ಅತ್ಯಂತ ಎತ್ತರದ ಬಹಿಸಂಖ್ಯೆಯ ಸಾಹಿತಿಗಳು ಸಂಭವಿಸಿದ ಹಾಗೂ ಕನ್ನಡ ಸಾಹಿತ್ಯಕ್ಕೆ ಅತ್ಯಂತ ವೈವಿಧ್ಯ, ವಿಸ್ತಾರ ಮತ್ತು ಚಲನಶೀಲತೆಗಳನ್ನು ತಂದ ಕಾಲವಾಗಿದೆ."

ಅಷ್ಟೇನು ಸ್ವಂತ ಬರಹವಲ್ಲದ, ಈ ಸಂಗ್ರಹ ಲೇಖನದ ಬಗ್ಗೆ ಮತ್ತು ತೀ ನಂ ಶ್ರೀ ಯವರ ಬಗ್ಗೆ ಹೆಚ್ಚಿನ ಮಾಹಿತಿಯಿದ್ದರೆ ಕೆಳಗೆ ಪ್ರತಿಕ್ರಿಯಿಸಿ.

ಭಾನುವಾರ, ನವೆಂಬರ್ 23, 2008

ಸ್ಲಂಬಾಲ,

’ರಾಜಕಾರಣಿಗಳ, ಪೋಲೀಸರ, ಭೂಗತ ಲೋಕದ ರೌಡಿಗಳ’ ವಿಕೃತ ಮನಸ್ಸುಗಳ ಉತ್ತಮ ಚಿತ್ರಣ!

ಅಗ್ನಿ ಶ್ರೀಧರ್ ರವರ ’ದಾದಾಗಿರಿಯ ದಿನಗಳು’ ಪುಸ್ತಕ ಆಧಾರಿತ,ಈ ಚಲನಚಿತ್ರದ ಅತಿ ದೊಡ್ಡ ಆಕರ್ಷಣೆ/ಧನಾತ್ಮಕ ಅಂಶ "ನಟನೆ"! ಮತ್ತು ನಟನೆಯೇ ಚಲನ ಚಿತ್ರದ ಜೀವಾಳ.ಒಬ್ಬೊಬ್ಬರೂ ಇನ್ನೊಬ್ಬರ ಜೊತೆಗೆ ಜಿದ್ದಿಗೆ ಬಿದ್ದಿರುವಂತೆ ನಟಿಸಿದ್ದಾರೆ! ದುನಿಯ ವಿಜಯ್ ಸ್ಲಂಬಾಲನ, ಸತ್ಯ? ಸ್ಲಂಬಾಲ ಗೆಳೆಯನಾಗಿ(ರಜ್ಜು),ಶುಭ ಪೂಂಜ ಸ್ಲಂಬಾಲನ ಪ್ರೇಯಸಿಯ(ಮಲ್ಲಿಗೆ), ಉಮಾಶ್ರೀ ಸ್ಲಂಬಾಲನ ಸಾಕು ಅವ್ವನ(ಪಾರ್ವತವ್ವ), ಶಶಿಕುಮಾರ್ ಹಿರಿಯ ಪೋಲೀಸ್ ಅಧಿಕಾರಿಯ(ಶಾಂತಾರಾಮ್), ಬ ಲ ಸುರೇಶ್ ರಾಜಕಾರಣಿಯ(ಪ್ರಸಾದಿ), ಅಚ್ಯುತರಾವ್ ಪ್ರಸಾದಿಯ ಆಪ್ತ ಕಾರ್ಯದರ್ಶಿಯ/ಬಲಗೈಯಾಗಿ (ಪ್ರೀತಿ ಇಲ್ಲದ ಮೇಲೆ ಧಾರಾವಾಹಿ ನೆನಪಿದೆಯಲ್ಲವೆ? ಅನಂತ್ ನಾಗ್ ರವರ ದೊಡ್ಡ ಮಗನಾಗಿ ಅದ್ಭುಟ ನಟನೆ ಕೊಟ್ಟಿದ್ದರಲ್ಲಾ ರಂಗಣ್ಣ) ಪಾತ್ರಗಳನ್ನು ಅಚ್ಚುಕಟ್ಟಾಗಿ, ಅತ್ಯುತ್ತಮವಾಗಿ ನಟಿಸಿದ್ದಾರೆ.

ಕಥೆ ಹೀಗೆ ಸಾಗುತ್ತದೆ, ಸ್ಲಂಬಾಲ ಬೆಳೆಯುತ್ತಿರುವ ರೌಡಿ. ಚುನಾವಣಾ ಸಮಯದಲ್ಲಿ ಶಾಂತಿ ಸ್ಥಾಪನೆಗಾಗಿ ಚಿಗುರುತ್ತಿರುವ ರೌಡಿಗಳೆಲ್ಲಾ ಗಡಿಪಾರಾಗುತ್ತಾರೆ! ಹೀಗೆ ಗಡಿಪಾರಾದ ಸ್ಲಂಬಾಲ ಮುಂಬೈ ಸೇರುತ್ತಾನೆ. ಬಾರೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ನಾಯಕಿಯ(ಮಲ್ಲಿಗೆ) ಭೇಟಿ. ಇತ್ತ ಬೆಂಗಳೂರಿನಲ್ಲಿ ಪ್ರಸಾದಿ, ಶಾಂತು ಮತ್ತು ಅಚ್ಯುತ ರಾವ್ (ಮರೆತು ಹೋಗಿದೆ: ಚಲನ ಚಿತ್ರದಲ್ಲಿ ಇವರ ಹೆಸರೇನು?) , ರಾಜಕೀಯ ವೈರಿ ಕೇಬಲ್ ಮಂಜನನ್ನು ಮುಗಿಸಲು ನಕ್ಷೆ ತಯಾರಿಸಿ ಒಮ್ಮೆ ವಿಫಲರಾಗುತ್ತಾರೆ. ಇನ್ ಸ್ಪೆಕ್ಟರ್ ಶಾಂತು ಸಲಹೆ ಮೇರೆಗೆ ಸ್ಲಂಬಾಲನಿಗೆ ಈ ಕೆಲಸಕ್ಕೆ ಬೆಂಗಳೂರಿಗೆ ಬರಲು ಕರೆ ಬರುತ್ತದೆ. ಜೊತೆಯಲ್ಲಿ ಮಲ್ಲಿಗೆ ಮತ್ತು ರಜ್ಜು ಕೂಡ ಬರುತ್ತಾರೆ. ಮುಂದೆ ಕೇಬಲ್ ಮಂಜನಿಗೆ ಏನು ಗತಿಯಾಗುತ್ತದೆ, ಕೇಬಲ್ ವ್ಯವಹಾರ ಸ್ಲಂಬಾಲನಿಗೆ ಸಿಗುತ್ತದೆಯೆ? ಸ್ಲಂಬಾಲನ ಗಡಿಪಾರು ಏನಾಗುತ್ತದೆ? ರಾಜಕಾರಣ/ರಾಜಕಾರಣಿಗಳು ಸ್ಲಂಬಾಲನನ್ನು ಹೇಗೆ ಬಳಸಿಕೊಳ್ಳುತ್ತದೆ? ಕೊನೆಗೆ ವ್ಯವಸ್ಥೆಯಲ್ಲಿ ಸ್ಲಂಬಾಲನ ಗತಿ ಏನಾಗುತ್ತದೆ ಎಂಬುದು ಕಥೆಯ ಕೊನೆ! ಕಥೆಯಲ್ಲಿ ಅಸಾಮಾನ್ಯವಾದುದು ಏನೂ ಇಲ್ಲದೆ ಇದ್ದರೂ ನಿರೂಪಣೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ.ನಿರ್ದೇಶಕಿ ಸುಮನ ಕಿತ್ತೂರು ಚೊಚ್ಚಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ.ವಿಜಯ್ ಭೂಗತ ರೌಡಿಗಳ ಮನೋವಿಕೃತಿಯನ್ನು ಅದ್ಭುತವಾಗಿ ನಟಿಸಿ ತೋರಿಸಿದ್ದಾರೆ.ಕಥೆಗೆ ಪೂರಕವಲ್ಲದ ಪ್ರೀತಿ ಪ್ರೇಮದ ಸಲ್ಲಾಪಗಳನ್ನು ಮೊಟಕು ಗೊಳಿಸಿ ಬೇಕಷ್ಟೇ ತೋರಿಸುವ ಜಾಣ್ಮೆಯನ್ನು ನಿರ್ದೇಶಕಿ ತೋರಿದ್ದಾರೆ.

ಕಥೆಗೆ ಹೊಂದುವಂತ ಸಂಭಾಷಣೆ ಕೂಡ ಗಮನ ಸೆಳೆಯುತ್ತದೆ. "ಎಲಾ ನನ್ ಬ್ಯಾವರ್ಸಿ" ಎಂದು ಪಾರ್ವತವ್ವ, ಸ್ಲಂಬಾಲನಿಗೆ ಉದ್ಗರಿಸುವುದರೊಂದಿಗೆ ಸ್ಲಂಬಾಲನ ಪರಿಚಯವಾಗಿತ್ತದೆ.ಈ ರೀತಿಯ ಸಂಭಾಷಣೆ ಜನರಿಗೆ ಅಭಾಸವಾಗದಂತೆ ಎಚ್ಚರ ವಹಿಸಲಾಗಿದೆ. ಇದಕ್ಕೆ ನೈಜ್ಯ ನಟನೆ ಪೂರಕವಾಗಿದೆ ಎನ್ನಬಹುದು. ಅದರಲ್ಲೂ ಉಮಾಶ್ರೀ ತಮ್ಮ ಸಮಯೋಚಿತ dialogue delivery (ಇದಕ್ಕೆ ಸಮೀಪದ ಕನ್ನಡ ಅನುವಾದ ಸೂಚಿಸಿ) ಮತ್ತು ನಟನೆಯಿಂದ ಇಷ್ಟವಾಗುತ್ತಾರೆ.

ಚಿತ್ರದಲ್ಲಿ ಬರುವ ಎರಡು ಹಾಡುಗಳು ಪರವಾಗಿಲ್ಲ, ತೊಂದರೆ ಇಲ್ಲ ಎನ್ನಬಹುದು. ಅರ್ಜುನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.ಛಾಯಾಗ್ರಹಣ ಅಚ್ಚುಕಟ್ಟಾಗಿದೆ.

ಒಂದು ಋಣಾತ್ಮಕ ಅಂಶವೆಂದರೆ ದ್ವಿತೀಯಾರ್ಧದಲ್ಲಿ ಚಲನಚಿತ್ರ ತನ್ನ ವೇಗವನ್ನು ಕಳೆದುಕೊಂಡು, ಸ್ವಲ್ಪ ಕುಂಟುತ್ತಾ ಸಾಗುತ್ತದೆ.

ಚಿತ್ರ ನೋಡಿದ ಮೇಲೆ , ನನ್ನಲ್ಲಿ ಮೂಡಿದ ಪ್ರಶ್ನೆ ಇದು! ಜನರು ಮನರಂಜನೆಗಾಗಿ ಈ ಚಲನ ಚಿತ್ರ ನೋಡಿ ಮರೆತರೆ ಪರವಾಗಿಲ್ಲ! ಒಳ್ಳೆಯದೇನನ್ನಾದರೂ ಕಲಿತರೆ ಅದಕ್ಕಿಂತ ಉತ್ತಮ ಇನ್ನೊಂದಿಲ್ಲ.ಆದರೆ ಈ ರೌಡಿಗಳ ಮನೋವಿಕೃತಿಯನ್ನು ಅನುಕರಿಸಿದರೆ, ಸಮಾಜದ ಕೊಳಕನ್ನು ಚಿತ್ರ ಮಾಧ್ಯಮದಲ್ಲಿ ತೋರಿಸಿ ಕೊಳಕನ್ನು ಹೆಚ್ಚು ಮಾಡಿದಂತಾಗುವುದಿಲ್ಲವೇ? ಭೂಗತ ಲೋಕದ ಚಿತ್ರಗಳು ಸಮಾಜ/ಜನರ ಮೇಲೆ ಬೀರುವ ಪರಿಣಾಮದ ಬಗ್ಗೆ ನನಗೆ ಹೆಚ್ಚಿನ ಅರಿವಿಲ್ಲ! ಪ್ರಶ್ನೆಯಂತೂ ಮೂಡಿದೆ. ಮನ:ಶಾಸ್ತ್ರದ ವಿಧ್ಯಾರ್ಥಿಗಳಗಿ ಉತ್ತಮ ಅಧ್ಯಯನ ವಿಷಯವಾಗಬಹುದು.

ನೀವು ಚಿತ್ರ ನೋಡಿದ್ರಾ? ನಿಮಗೇನನ್ನಿಸ್ತು? ಪ್ರತಿಕ್ರಿಯಿಸಿ!

ಗುರುವಾರ, ನವೆಂಬರ್ 20, 2008

ಕುಮಾರನ ದುರಹಂಕಾರದ ಪರ್ವ!



ಏನೀಗ?? ಇಷ್ಟೋಂದ್ ಯಾಕೆ ಗೊಣಗಾಡ್ತಾ ಇದ್ದೀರ?? ಇದು ಸೋಮವಾರ "ಜಾತ್ಯಾತೀತ ಜನತಾದಳ ಸಮಾವೇಶ ಸೃಷ್ಟಿಸಿದ" ವಾಹನ ದಟ್ಟಣೆಯಿಂದ ಉಂಟಾದ ಜನಜೀವನ ಅಸ್ಥವ್ಯಸ್ಥೆಗೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು (ಈಗಿನ ಜೆ ಡಿ ಎಸ್ ಪಕ್ಷದ ರಾಜ್ಯಾಧ್ಯಕ್ಷ) ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ. ಕನಿಷ್ಟ ಕ್ಷಮೆ ಕೂಡ ಕೇಳದೆ ತಮ್ಮ ಮಾತಿನ ವರಸೆ ಮುಂದುವರೆಸಿ ಬೆಂಗಳೂರಿನ ನಗರವಾಸಿಗಳಿಗೆ (sophisticated ನಗರ ವಾಸಿಗಳಂತೆ) ಗ್ರಾಮೀಣ ಜನರ ಕಷ್ಟ ಗೊತ್ತಾಗಬೇಕಂತೆ!! ಹಳ್ಳಿಗಳಲ್ಲಿ ಎಷ್ಟೋ ಮಂದಿ ದಿನಾಲು ಶಾಲೆಗ ನಾಲ್ಕೈದು ಮೈಲಿ ನಡೆದು ಹೋಗುತ್ತಾರಂತೆ!! ವಾಹನ ದಟ್ಟಣೆಯಲ್ಲಿ ೩-೭ ಗಂಟೆ ನಿಂತರೆ ಏನೀಗ? ಐ-ಟಿ/ಬಿ-ಟಿ ಮಂದಿಯೇ ಅಂತೆ, ಆದ ತೊಂದರೆಗೆ ದೂರುತ್ತಿರುವುದು!!

ಏನಾಗಿದೆ ಈ ಮನುಷ್ಯನಿಗೆ? ಇವರ ಮಗ ಐಶಾರಾಮಿ ಕಾರಿನಲ್ಲಿ ಓಡಾಡಿಕೊಂಡು, ಕುಡಿದು ಬಾರಿನಲ್ಲಿ ಗಲಾಟೆ ಮಾಡಿ, ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾನೆ. (ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಿನಲ್ಲಿ ಮೋಜು ಮಾಡುವುದು, ಕುಡಿಯುವುದು ಅವರವರ ವ್ಯಯಕ್ತಿಕ ವಿಷಯ. ಇದರ ಬಗ್ಗೆ ನನ್ನ ಆಕ್ಷೇಪವಿಲ್ಲ. ಆದರೆ ಕುಡಿದು ಗಲಾಟೆ ಮಾಡಿ, ಇತರರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಸ್ಕೃತಿಗೆ ಪೇಟೆಯದೂ ಅಲ್ಲ, ಹಳ್ಳಿಯದೂ ಅಲ್ಲ್ಲ, ಪದ್ಮನಾಭನಗರ/ಹೊಳೆನರಸೀಪುರ ಸಂಸ್ಕೃತಿ ಎನ್ನಬೇಕಷ್ಟೆ! ಪದ್ಮನಾಭನಗರ ಮತ್ತು ಹೊಳೆನರಸೀಪುರದಲ್ಲಿರುವ ಸಜ್ಜನರು ನನ್ನನ್ನು ಕ್ಷಮಿಸಬೇಕು). ಇಂತಹ ಮಕ್ಕಳನ್ನು ಬೆಳೆಸಿರುವ ಕುಮಾರನಿಗೆ ಗ್ರಾಮೀಣ ಮಕ್ಕಳ ಕಷ್ಟ ಗೊತ್ತಾಗಿಬಿಡುತ್ತದೆ! ಆ ವಾಹನ ದಟ್ಟಣೆಯಲ್ಲಿ ಎಷ್ಟೋ ಪುಟ್ಟ ಮಕ್ಕಳು (ಪಾಪ ಇವರು ಯಾರೂ ಇನ್ನೂ ಐ ಟಿ / ಬಿ ಟಿ ನೌಕರರಾಗಿಲ್ಲ) ನರಕ ಯಾತನೆ ಅನುಭವಿಸಿದರೆ, ಅದು ಕಷ್ಟ ಅಲ್ಲ. (ಮುಂದಿನ ದಿನ ಮಂಗಳವಾರ ಬಹುತೇಕ ಮಕ್ಕಳು ಭಯಭೀತರಾಗಿ ಶಾಲೆ ಹೋಗಲು ನಿರಾಕರಿಸಿದ ವರದಿಯಿದೆ!). ಕುಮಾರರು ಈ ಮುಗ್ದ ಮಕ್ಕಳಿಗೂ ಜೆ ಡಿ ಎಸ್ ವಿರೋಧಿ ಪಟ್ಟ ಕಟ್ಟಿಬಿಡುತ್ತಾರೆ. ಇವರ ವಂಶದ ನರ ನಾಡಿಗಳಲ್ಲಿ ಹರಿಯುತ್ತಿರುವುದು ಹೊಲಸು ರಾಜಕಾರಣ ತಾನೆ! ಹಳ್ಳಿ ಮಕ್ಕಳು ಕಷ್ಟ ಪಟ್ಟರೆ, ನಗರ ವಾಸಿಗಳೂ ಕಷ್ಟ ಪಡಬೇಕು ಎಂಬುದು ಯಾವ ನ್ಯಾಯವೋ? (ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೆ?).ಹಳ್ಳಿ ಮಕ್ಕಳ ಏಳಿಗೆಗೆ ದುಡಿಯಲಿ, ಅವರು ನಡೆದು ಹೋಗಬೇಕಾದ ಕಡೆ ಬಸ್ಸುಗಳ ವ್ಯವಸ್ಥೆ ಮಾಡಲಿ! ಯಾವ ಪುರುಷಾರ್ಥಕ್ಕಾಗಿ ಈ ಸಮಾವೇಶ ಮಾಡಿದ್ದೊ? (’ಪುರುಷಾರ್ಥ’ ಕುಮಾರನ ಪ್ರಿಯವಾದ ಶಬ್ದ, ಕುಮಾರನು ಈ ಶಬ್ದವನ್ನು ಮಾಧ್ಯಮಗಳಲ್ಲಿ ಲೀಲಾಜಾಲವಾಗಿ ಬಳಸುತ್ತಾರೆ!).ಇದಕ್ಕೆ ವ್ಯಯಿಸಿದ ದುಡ್ಡಿನಲ್ಲಿ ಕನಿಷ್ಟ ೨೦ ಬಸ್ಸುಗಳನ್ನು ಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಡುಗೊರೆಯಾಗಿ ಕೊಡಬಹುದಿತ್ತು!(ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಾಗಿದ್ದರೆ ಮಾತ್ರ!).

ಇನ್ನು ಐ ಟಿ/ಬಿ ಟಿ ಮಂದಿಯನ್ನು ದೂರುವುದು! ಕೆಲಸ ಮಾಡಿ ದುಡಿದು ತಿಂದಿದ್ದರೆ ಗೊತ್ತಾಗುತ್ತಿತ್ತು, ಐ ಟಿ/ಬಿ ಟಿ ಯವರ ದುಡಿಮೆ, ಹೊಲಸು ರಾಜಕಾರಣ ಮಾಡಿ ಬೇನಾಮಿ ಆಸ್ತಿ ಮಾಡಿದೊಷ್ಟು ಸುಲಭ ಅಲ್ಲಾ ಅಂತ. ಒಂದು ಎದೆ ನೋವು ಬಂದರೆ, ವಾರಾನುಗಟ್ಟಲೆ ವೊಕ್ ಹಾರ್ಟ್ ಎಂಬ ಐಶಾರಮಿ ಆಸ್ಪತ್ರೆ ಸೇರುತ್ತಾರೆ! ಗ್ರಾಮೀಣ ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯುವ ನಿಜವಾದ ಕಾಳಜಿಯಿದ್ದರೆ ಯಾವುದಾದರೂ ಗ್ರಾಮೀಣ ಆಸ್ಪತ್ರೆ ಸೇರಲಿ? ಗ್ರಾಮ ವಾಸ್ತವ್ಯ ಹೆಸರಿನಲ್ಲಿ ಕಂಡ ಕಂಡವರ ಮನೆಯಲ್ಲಿ ಚನ್ನಾಗಿ ಕೋಳಿ ಮಾಂಸ ಉಂಡು ಮಲಗುವಷ್ಟು ಸುಲಭವಲ್ಲ ಅದು ಎಂದು ಗೊತ್ತಾಗುತ್ತದೆ! ಗ್ರಾಮೀಣ ಜನರ ಬಗ್ಗೆ ನಕಲಿ ಕಾಳಜಿ ತೋರಿಸುವುದು, ಆಶಾಢಭೂತಿ (hypocrite) ಮಾತುಗಳನ್ನಾಡುವುದು, ಹೊಲಸು ರಾಜಕಾರಣ ಮಾಡುವುದು , ಇಂತಹವುಗಳನ್ನು ಕಡಿಮೆ ಮಾಡಿ, ಇನ್ನಾದರೂ ಸನ್ಮಾರ್ಗದಲ್ಲಿ ನಡೆಯಲಿ ಕುಮಾರರು!

ನೀವೇನನ್ನುತ್ತೀರಾ?

ಬುಧವಾರ, ನವೆಂಬರ್ 19, 2008

ಶ್ರೇಷ್ಠ ಹನುಮಂತನಾಗಿದ್ದು!




ಪಠ್ಯ ಪುಸ್ತಕ ಓದು, ಓದು, ಓದು ಇಷ್ಟೇ ನನಗೆ ಗೊತ್ತಿದ್ದು ನಾನು ನನ್ನ ಪದವಿ ಪೂರ್ವ ಶಿಕ್ಷಣ ಮುಗಿಸುವವರೆಗು (ಜೀವನದ ೧೭ ವರ್ಷಗಳು)! ತಾಂತ್ರಿಕ / ವೃತ್ತಿಪರ ಶಿಕ್ಷಣಕ್ಕೆ ಬಂದ ಮೇಲೆಯೇ ನಾನು ವ್ಯಯಕ್ತಿಕವಾಗಿ ಪ್ರಬುದ್ಧವಾಗಿದ್ದು ಎನ್ನಬಹುದು. ಪ್ರಬುದ್ಧ ಎಂದರೆ, ಜೀವನದಲ್ಲಿ ಪಠ್ಯ ಪುಸ್ತಕ ಓದಿ ಅಂಕ ಗಳಿಸುವುದೊಂದೇ ಅಲ್ಲಾ, ಆಟ ಆಡಿ, ಪಠ್ಯವಲ್ಲದ ಪುಸ್ತಕಗಳನ್ನು ಓದಿ, ಚಲನ ಚಿತ್ರಗಳನ್ನು ನೋಡಿ, ವಿಭಿನ್ನ ಪ್ರಕಾರಗಳ ಸಂಗೀತಗಳನ್ನು ಆಲಿಸಿ, ಇತರೆ ಗೆಳೆಯರು/ಜನರೊಂದಿಗೆ ಬೆರೆತು, ಕಲಿಯುವುದು ಬೇಕಾದಷ್ಟಿದೆ ಎಂದು ಗೊತ್ತಾದದ್ದು. ಇವನ್ನೇ ಇಂದಿನ ದಿನಗಳಲ್ಲಿ ಶಿಶುವಿಹಾರದಿಂದಲೇ ಪಠ್ಯೇತರ ಚಟುವಟಿಕೆ(ಅಲ್ಲಾ.. ಈಗ ಎಷ್ಟೋ ಶಾಲೆಗಳಲ್ಲಿ ಪಠ್ಯ) ಎಂದು ಕರೆದು, ಮಕ್ಕಳನ್ನು ಉತ್ತೇಜಿಸುತ್ತಾರೆ. ಹೀಗೆ ನಮ್ಮ ಜೀವನದಲ್ಲಿ ನಾವು ಮಾಡಿಲ್ಲದ್ದನ್ನು (ಕಳೆದುಕೊಂಡಿರುವುದು ಎಂದರೆ ಇನ್ನೂ ಸೂಕ್ತ) ನಮ್ಮ ಮಕ್ಕಳು (ನಮ್ಮ ಮನೆಯಲ್ಲಿರುವ ಮಕ್ಕಳು) ಮಾಡಿದರೆ, ಮಕ್ಕಳಲ್ಲಿ ಈ ಚಟುವಟಿಕೆಗಳನ್ನು ಕಂಡು ಧನ್ಯವಾಗುವುದಿಲ್ಲವೇ?

ನನ್ನ ಸೋದರ ಅಳಿಯ ಶ್ರೇಷ್ಠನಿಗೆ, ಅವನು ಎಲ್. ಕೆ . ಜಿ ಯಲ್ಲಿ ಓದುತ್ತಿರುವ ವೆಂಕಟ್ ಶಾಲೆಯಲ್ಲಿ ಆಲಂಕಾರಿಕ ಉಡುಗೆ/ವೇಷ (fancy dress) ಕಾರ್ಯಕ್ರವಿದೆ ಎಂದು ಸುತ್ತೋಲೆ ಕಳಿಸಿದ್ದರು. (ವಸ್ತು: ಯಾವುದಾದರೂ ಪೌರಾಣಿಕ ಪಾತ್ರ). ಇತ್ತೀಚೆಗೆ "ಬಾಲ್ ಹನುಮಾನ್" ಎಂಬ ವ್ಯಂಗ್ಯ ಚಲನಚಿತ್ರ ಚಿತ್ರವನ್ನು (Animated/cartoon cinema, ಅನುವಾದ ಸರಿ ಎನ್ನಿಸಲಿಲ್ಲವೆ? ದಯವಿಟ್ಟು ಬೇರೆ ಪದ ಸೂಚಿಸಿ)ನೋಡಿ, ದಿನಾಲು "ಜೋಯ್ ಹನುಮೋನ್" "ಭೋಲೋ ಭೊಜರಂಗ್ ಬೊಲೀ ಕೀ ಜೋಯ್" "ಪ್ರಿಯ ಹನುಮೋನ್" "ಪುತ್ತರ್ ಹನುಮೋನ್" ಇತ್ಯಾದಿ ಘೋಷಣೆಗಳನ್ನು ಗಂಟೆಗೆ ೧೦ ಬಾರಿಯಾದರೂ ಶ್ರೇಷ್ಠನಿಂದ ಕೂಗಿಸಿಕೊಂಡಿದ್ದ ನಮಗೆ ಮೊದಲು ಹೊಳೆದದ್ದೇ "ಮಾರುತಿ". ಅವನ ಮನಸ್ಸಿನಲ್ಲಿ ಮೊದಲು ಕೃಷ್ಣನಿದ್ದರೂ ಸ್ವಲ್ಪ ಪುಸಲಾಯಿಸಿ ಮಾರುತಿ ವೇಷಕ್ಕೆ ಒಪ್ಪಿಸಿದ್ದಾಯಿತು.

ಕಾರ್ಯಕ್ರಮದ ದಿನ ಶ್ರೇಷ್ಠನಿಗೆ ಖುಷಿಯೋ ಖುಷಿ. ಶ್ರೇಷ್ಠ ಹನುಮಂತನಾದದ್ದಾಯಿತು. ಅಲ್ಲಿ ಅವನ ಇನ್ನಿಬ್ಬರು ಗೆಳತಿಯರು ಶಕುಂತಲಾ ಮತ್ತು ಸರಸ್ವತಿ ವೇಷವನ್ನು ತೊಟ್ಟು ಮುದ್ದಾಗಿ ಕಾಣಿಸುತ್ತಿದ್ದರು. ವೇಷದ ಅಂಗಡಿಯಿಂದ ಶಾಲೆಯವರೆಗಿನ ಪ್ರಯಾಣದಲ್ಲಿ, ಜನರು ಶ್ರೇಷ್ಠನ ಅವತಾರ ನೋಡಿ ಆಶ್ಚರ್ಯ ಭರಿತ ಸಂತೋಷ ಪಡುತ್ತಿದ್ದರು.ಇನ್ನು ಶಾಲೆಯಲ್ಲಿ ಆ ಸಂಭ್ರಮವನ್ನು ನೋಡಿಯೇ ಸವಿಯಬೇಕು.ಮಕ್ಕಳನ್ನು ನೋಡುವುದೇ ಚಂದ. ಇನ್ನು ಈ ವಿಶಿಷ್ಟ ವೇಷ-ಭೂಷಣಗಳನ್ನು ತೊಟ್ಟ ಮಕ್ಕಳನ್ನು ನೋಡುವುದಂತೂ ಕಣ್ಣಿಗೆ ಸುಗ್ಗಿ.ಒಂದೊಂದು ಮಗುವೂ ಮುದ್ದು ಮುದ್ದಾದ ಉಡುಗೆ ತೊಟ್ಟು ಸಂತೋಷದಿಂದ ನಲಿದಾಡುತ್ತಿದ್ದವು.(ಈಶ್ವರ, ದುರ್ಗಾ ದೇವಿ, ಶ್ರೀಕೃಷ್ಣ, ರಾಮ ಇತ್ಯಾದಿ). ಕಾರ್ಯಕ್ರಮ ಶಾಲೆ/ತರಗತಿಗೆ ಮಾತ್ರ ಸೀಮಿತವಾದದ್ದರಿಂದ, ಶಾಲೆಯ ಸಿಬ್ಬಂದಿ ಪೋಷಕರನ್ನು ಹೊರದಬ್ಬಿ ನಿರಾಸೆ ಉಂಟು ಮಾಡಿದರು.ಒಟ್ಟಿನಲ್ಲಿ ಅಂದಿನ ಮುಂಜಾನೆ ನಿತ್ಯ ಬದುಕಿನಿಂದ ಒಂದು ವಿರಾಮ ಕೊಟ್ಟು ಅತೀವ ಆನಂದ ನೀಡಿತ್ತು.



ಸಂಜೆ ಮನೆಗೆ ಬಂದ ಶ್ರೇಷ್ಠನ ಮಾತುಗಳಿವು, "ಇವೊತ್ತು ಸೂಪರ್ ಮಜಾ ಇತ್ತಪ್ಪಾ... ಎಲ್ಲಾ ನನ್ನ ಬಾಲ ನೋಡಿ ನಕ್ತಾನೆ ಇದ್ರು.. ನಮ್ಮ ಮಿಸ್ಸೂ ನಕ್ಕಿದ್ರು". ಅಂದು ಅವನಿಗೆ ಶಾಲೆಯಲ್ಲಿ ಓದು, ಬರೆಯುವುದು ಇಲ್ಲದೆ ಇದ್ದದ್ದು ಖುಷಿಯನ್ನು ಇಮ್ಮಡಿಗೊಳಿಸಿತ್ತು.ಅವನ ಆತ್ಮೀಯ ಗೆಳೆಯ ಪ್ರಥಮ್ ರಾಮನ ವೇಷ ಹಾಕಿದ್ದನಂತೆ.

ವೇಷವನ್ನು ಹಿಂದಿರುಗಿಸಲು ಹೋಗುವಾಗ ಕೂಡ, ದಾರಿಯುದ್ದಕ್ಕೂ ಗಧೆಯನ್ನು ತನ್ನ ಹೆಗಲ ಮೇಲಿಟ್ಟು ಮೆರೆದಿದ್ದೇ! ದಾರಿಹೋಕರೆಲ್ಲಾ ಗಧೆ ಹೊತ್ತು ನೆಗೆದು ಕುಣಿಯುತ್ತಿದ್ದ ಆಂಜನೇಯನನ್ನು (ಈ ಹೊತ್ತಿಗೆ ವೇಷ ಕಳಚಿತ್ತು) ನೋಡಿ ನಗುತ್ತಿದ್ದರು.

ನಮ್ಮ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆದದ್ದು ನನಗೆ ನೆನಪಿಲ್ಲ, ನಾನು ಶಾಲೆಯಿಂದ ಖುಷಿಯಾಗಿ ಮನೆಗೆ ಬಂದು ಇವೊತ್ತು ಶಾಲೆ ಬಹಳ ಮಜವಾಗಿತ್ತು ಎಂದು ಮನೆಯಲ್ಲಿ ಹೇಳಿದ ಪ್ರಸಂಗಗಳಂತೂ ಇಲ್ಲವೇ ಇಲ್ಲಾ!

ಮಕ್ಕಳು ಸ್ವಚ್ಚಂದವಾಗಿ ಕುಣಿಯುವದನ್ನು ನೋಡಿದಾಗ ಆಗುವ ಖುಷಿಗೆ ಬೇರೆ ಯಾವುದಾದರು ಸಾಟಿಯುಂಟೆ?

ಮಂಗಳವಾರ, ನವೆಂಬರ್ 18, 2008

ನಿನ್ನೆಯ ಪ್ರಮುಖ ಸುದ್ದಿಗೆ ಕನ್ನಡ ದಿನಪತ್ರಿಕೆಗಳು ಸ್ಪಂದಿಸಿದ ಪರಿ...





ಕನ್ನಡದ ಪ್ರಮುಖ ೩ ಪತ್ರಿಕೆಗಳು ಎನ್ನಬಹುದಾದ ಮೇಲಿನ ಪತ್ರಿಕೆಗಳ, ಮೊದಲ ಪುಟದ, ಪ್ರಮುಖ ಸುದ್ದಿಯನ್ನು ( ಮೊದಲನೆ ಪುಟದಲ್ಲಿ ,ಮೇಲ್ಭಾಗದಲ್ಲಿ ಬರುವ ಸುದ್ದಿ ಯಾವಾಗಲೂ ಪ್ರಮುಖ/ವಿಶೇಷ ವಾಗಿರುತ್ತದೆ ಎಂದರೆ ತಪ್ಪಾಗಲಾರದು)ಒಮ್ಮೆ ವಿಶ್ಲೇಷಿಸಿ. ಪತ್ರಿಕೆಗಳು ಜನರಿಗೆ ಸುದ್ದಿ ತಲುಪಿಸುವದರ ಜೊತೆಗೆ, ಜನರ ನೋವು ನಲಿವಿಗೆ ಸ್ಪಂದಿಸಬೇಕಲ್ಲವೆ? ಜನರ ನೋವಿಗೆ ಸ್ಪಂದಿಸುವ ಸುದ್ದಿ ಪತ್ರಿಕೆಯ ಮುಖ್ಯ ಭೂಮಿಕೆಯಲ್ಲಿ ಪ್ರಕಟವಾಗಬೇಕು ಎಂದೆನಿಸುದಿಲ್ಲವೆ ನಿಮಗೆ? ನೆನ್ನೆ ನಡೆದ ಜೆ. ಡಿ . ಎಸ್ ಸಮಾವೇಶದಿಂದ ನಗರದ ಬಹುತೇಕ ಮಂದಿ ತೊಂದರೆ/ಯಾತನೆಗಳನ್ನು ಅನುಭವಿಸಿದ್ದಾರೆ. ಶಿಶುವಿಹಾರ/ಪ್ರಾಥಮಿಕಾ ಶಾಲ ಮಕ್ಕಳು, ಜೆ ಡಿ ಎಸ್ ಸೃಷ್ಟಿಸಿದ ವಾಹನ ದಟ್ಟಣೆಯಿಂದ ಶಾಲ ವಾಹನಗಳಲ್ಲಿ ೩-೭ ಗಂಟೆಗಳ ಕಾಲ ಹಿಂಸೆ ಅನುಭವಿಸಿದ್ದಾರೆ. ಕೆಲವು ಮಕ್ಕಳಂತೂ ವಾಹನದಲ್ಲಿ ಅಳುತ್ತಾ ಕೂತಿದ್ದರು ಎಂಬ ವರದಿಗಳಿವೆ! ಪಾಲಕರ, ಪೋಷಕರ ಆತಂಕ ಒಮ್ಮೆ ನೆನೆಸಿಕೊಳ್ಳಿ. ಇವುಗಳನ್ನು ಖಂಡಿಸುವ ಸುದ್ದಿ ಪತ್ರಿಕೆಯ ಮುಖ್ಯಾಂಶವಾಗಬೇಕಲ್ಲವೆ??

ವಿಜಯ ಕರ್ನಾಟಕ ಪತ್ರಿಕೆ ನೋಡಿ, " ಜೆ ಡಿ ಎಸ್ ರಣಕಹಳೆ" ಎಂಬುದು ಇವರ ಮುಖ್ಯ ಸುದ್ದಿ! ಈ ಸಮಾವೇಶದಿಂದ ಆದ ತೊಂದರೆ ಎರಡನೇ ಪುಟಕ್ಕೆ ತಳ್ಳಲ್ಪಟ್ಟಿದೆ!! ಸ್ವಲ್ಪ ದಿನದ ಹಿಂದೆ ಭೀಮ್ ಸೇನ್ ಜೋಶಿ ಯವರಿಗೆ ಭಾರತ ರತ್ನ ಲಭಿಸಿದ ಸಂದರ್ಭದಲ್ಲಿ, ಕನ್ನಡಿಗರ ನಲಿವಿಗೆ ಸ್ಪಂದಿಸಿ ಮುಖ್ಯ ಭೂಮಿಕೆಯಲ್ಲಿ ಪ್ರಕಟಿಸಿ, ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದ ಈ ಪತ್ರಿಕೆಯ ಸಂಪಾದಕರಿಗೆ ನೆನ್ನೆ ಮಂಕು ಬಡಿದಿತ್ತೆ? ಇದೇ ಮೊದಲಲ್ಲ, ದೇವೇಗೌಡರ ಸಂದರ್ಶನ ಮುಖ ಪುಟದ ಸುದ್ದಿಯೇ? ಸಂಪಾದಕೀಯದಲ್ಲಿ ಪ್ರಕಟಗೊಳ್ಳಬೇಕಾದ ಮತಾಂತರ ಕುರಿತ ಭೈರಪ್ಪನವರ ಲೇಖನ ಮೊದಲ ಪುಟದ ಮೇಲ್ಭಾಗದಲ್ಲಿ ಪ್ರಕಟವಾಗಬೇಕೆ? ಇವೆರಡೂ ಪ್ರಮುಖ ಸುದ್ದಿಗಳಾದರೂ ಮುಖ ಪುಟದಲ್ಲಿ ಪ್ರಕಟವಾಗಬೇಕಾಗಿರುವವಲ್ಲ ಎಂದೆನಿಸುವುದಿಲ್ಲವೆ?

ಮೇಲಿನ ಪತ್ರಿಕೆಗಿಂತ ಅನುಭವೀ ಪತ್ರಿಕೆ ಪ್ರಜಾವಾಣಿಯ ಮುಖ್ಯ ಸುದ್ದಿ ಪ್ರಬುದ್ದವಾಗಿದೆ . ಈ ಪತ್ರಿಕೆಯ ಮುಖ್ಯಾಂಶ ಗಮನಿಸಿ. "ಸಮಾವೇಶದ ಅಬ್ಬರ, ನಗರ ಜೀವನ ತತ್ತರ", "ಟ್ರಾಫಿಕ್ ಜಾಮ್ ನಿಂದ ನರಕವಾದ ನಗರ", "ಶಾಲ ಮಕ್ಕಳಿಗೆ ರಸ್ತೆ ಬಂಧನ", "ರಾಜಕೀಯ ನಾಯಕರಿಗೆ ಜನರ ಹಿಡಿ ಶಾಪ" . ಇಬ್ಬರು ಜನ ಸಾಮಾನ್ಯರ ಹೇಳಿಕೆಗಳನ್ನೂ, "ಜನರ ಆಕ್ರೋಶ" ಎಂಬ ಶೀರ್ಷಿಕೆಯಡಿ, ಮುಖ್ಯಸುದ್ದಿಯಲ್ಲಿ ಪ್ರಕಟಿಸಿದ್ದಾರೆ. ಜನ ಸಾಮಾನ್ಯರ ಮಿಡಿತಕ್ಕೆ ಸ್ಪಂದಿಸಿರುವ ಪ್ರಜಾವಾಣಿ ಅಭಿನಂದನಾರ್ಹವಲ್ಲವೇ?

ಕನ್ನಡ ಪ್ರಭ ಕೂಡ ವಿಜಯ ಕರ್ನಾಟಕಕ್ಕೆ ಹೋಲಿಸಿದರೆ ಪರವಾಗಿಲ್ಲ. ಮುಖ್ಯ ಸುದ್ದಿಗೆ "ಕುಮಾರನ ಹೊಸ ಪರ್ವ ಎಂಬ ಶೀರ್ಷಿಕೆಯಿದ್ದರೂ, ಉಪ ಶೀರ್ಷಿಕೆಯಡಿ "ಜೆ ಡಿ ಎಸ್ ಜಾಮ್ ಗೆ ನಗರ ತತ್ತರ" ಎಂಬ ಸುದ್ದಿ ಮುದ್ರಣಗೊಂಡಿದೆ.

ತನ್ನ ಸಂಪಾದಕೀಯ ಲೇಖನಗಳಿಂದ ಹೆಸರು ಗಳಿಸಿರುವ ವಿಜಯ ಕರ್ನಾಟಕ, ಸುದ್ದಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಇನ್ನೂ ಪಕ್ವವಾಗಬೇಕಿದೆ. ಇನ್ನು ಮುಂದೆ ಸ್ವಲ್ಪ ಶ್ರಮ ವಹಿಸಿ, ತನ್ನ ತಪ್ಪುಗಳನ್ನು ತಿದ್ದಿಕೊಂಡು, ಸುದ್ದಿ ಪ್ರಕಟನೆಗೆ ಗಮನ ಹರಿಸಿ ಪತ್ರಿಕೆ ಇನ್ನೂ ಬೆಳೆಯಲಿ ಎಂದು ಆಶಿಸುವೆ.

ನಿಮ್ಮ ಅಭಿಪ್ರಾಯವೇನು? ಕೆಳಗೆ ಬರೆಯಿರಿ.

The white Tiger - Aravind Adiga

The White Tiger - This book,in the words of the protagonist The White Tiger-Balram Halwai,is "what a fucking 'jokes book'!". Balram had learnt this phrase "what a fucking joke" from his ex master ashok's wife pinky.

I read this book buying a original copy bearing ISBN code 978-81-7223-745-5, even though pirated books were already available in the market. The inside cover page tells that this is a story of a driver Balram halwai, The white Tiger, a servant, philosopher, enterpreneur, murderer. The story is made up of the letters written by Balram to Premier of China who was due to visit India. Most of the content of these letters is reserved for describing 'corrupted' India in a very humorous way.To quote a few "Hillarious" lines from the book:

(Warning: These are generally found humorous when read in the context rather stand alone)
1.The book starts with a biggest joke calling "Beijing" a capital of the "freedom" loving nation china!
2. Looking at a wanted poster of a murderer(himself), Balram comments that "The photo resembles half of the Indians"!! And when he describes an incident where he converses with a person staring at this poster in railway tation makes you laugh more.
3.Balram tells he does not deny that he is a murderer, but "what a fucking joke" to be called a murderer by an Indian policeman?
4."I wonder if buddha walked through Lakshmangarh (Balram's village)- some people say he did. My own feeling is that he ran through it- as fast as he could - and got to the other side - and never looked back. (This is how Balram describes his corrupted village).

and many more!

There are also some poor statements where author tries to add humour,but fails to do so.

Jokes apart, the philosophy of the book as i see is 'freedom'.The story is mainly about how the servant Balram gets liberated from his master.The inside cover says, "Balram's journey from darkness of village life to the light of enterpreneuril success is utterly amoral, brilliantly irreverent, deeply endearing and altoghether unforgettabe." I agree to the fact that the philosophy the story gives out is amoral and irrverant, but not endearing and also is easily forgettable.

The book also brings out, how the rich treat their servants, how the recruited driver does not just remain a driver but servant of the landlord, how all the drivers spend their time when their bosses are not around.The author tries to portray the struggle of a Indian, hit by poverty, during the course of which he resorts to corruption.He also brings out hard truths of life in rural India.We have seen enough of these stuff in movies.If the author could have thought of a good plot for the murder, the story could be easily turned into a thriller.A reader will definitely feel that murdering is not so easy.

I thoroughly feel this is a kind of book which gives relief from its comedy.But not one of its kind to store in your book shelves.

Booker Prize??
Some critics have argued that, the book which brought out only negative aspects of India to the world, should not have been awarded The Booker.Some say, it has been awarded Booker for its negative description of India and people outside India like it. But I do not agree that world does not know about negative side/corrupted ways of life in India! There are lot of movies,newspaper articles which hold out this fact to the world.Which country is free from corrupted police officers/judges? The degree of corruption might vary!

I do not know the criteria for awarding the Booker prize, nor haven i read books by the Booker prize winners.So i guess the book might have been awarded Booker for its hillarious comedy.

Out of curiosity, to know how better the other Booker winning books are, i have started reading winner of "Booker", "Booker of Bookers", "Best of Booker" - Midnight's children by Salman Rushdie".

Have you read The White Tiger?What dou you think?Do leave your comments below.

ಶನಿವಾರ, ನವೆಂಬರ್ 15, 2008

ಇಬ್ಬರು ಮಹಾತ್ಮರ ಜಯಂತಿ

ಇಲ್ಲಿ ನಾನು ಕೆಲವು ಜಾತಿ ವ್ಯವಸ್ಥೆಗಳನ್ನು ಪ್ರಸ್ತಾಪಿಸಿದ್ದರೂ, ಅವುಗಳು ನಾನು ನಂಬಿದ್ದಲ್ಲ. ಈ ಲೇಖನಕ್ಕೆ ಪೂರಕವಾಗಿ ಉಲ್ಲೇಖಿಸಲೇಬೇಕಾಗಿದ್ದರಿಂದ ದು:ಖದಿಂದ ಪ್ರಸ್ತಾಪಿಸಲಾಗಿದೆ. ಶೂದ್ರರು, ಬ್ರಾಹ್ಮಣರು, ದಲಿತರು, ಮೇಲ್ವರ್ಗದವರು, ಕೆಳವರ್ಗದವರು ಎಂದು ಕರೆಯಲ್ಪಟ್ಟವರು ಎಂದಿದ್ದೇನೆಯೆ ಹೊರತು, ಈ ವಿಂಗಡನೆಯನ್ನು ನಾನು ನಂಬಿದ್ದಲ್ಲ. ಒಂದೆ ಜಾತಿ ಒಂದೆ ಕುಲ ನಾವು ಮನುಜರು ಎಂಬ ಕವಿವಾಣಿಯನ್ನು ಬೆಂಬಲಿಸುವವನು. ಆಚರಣೆ, ನಂಬಿಕೆ ಇತ್ಯಾದಿಗಳು ಒಬ್ಬೊಬ್ಬರಿಗೂ ವಿಭಿನ್ನವಾದುದರಿಂದ ಜಾತಿ, ಧರ್ಮಗಳಿರಲಿ ಆದರೆ ಎಲ್ಲರೂ ಸಮಾನರು ಎಂಬುದಾದರೆ ಅದಕ್ಕೂ
ನನ್ನ ಸಹಮತವಿದೆ.

ಕೆಲವೇ ದಿನಗಳ ಹಿಂದೆ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಹಿಂದೂ ಧರ್ಮದ ಅಸ್ಪೃಶ್ಯತೆ ಹೋಗಲಾಡಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದರು. ನಾವು ಮತ್ತು ನಮ್ಮ ಮಠದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂದು ಬಹಿರಂಗವಾಗಿ ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟರು. ದಲಿತರು/ಶೂದ್ರರು ಎಂದು ಕರೆಯಲ್ಪಟ್ಟವರು(ಕರೆದುಕೊಳ್ಳುವವರು) ಬೌದ್ಧ ಧರ್ಮ ಸೇರುವುದಕ್ಕಿಂತ, ಹಿಂದೂ ಧರ್ಮದ ಮೌಢ್ಯ, ಅಸ್ಪೃಶ್ಯತೆಗಳನ್ನು ಹೋಗಲಾಡಿಸಲು ಅವಿರತವಾಗಿ ದುಡಿದ ಸ್ವಾಮಿ ದಯಾನಂದ ಸರಸ್ವತಿಯವರ ಆರ್ಯ ಸಮಾಜ ಸೇರುವುದು ಬಹಳಷ್ಟು ಸೂಕ್ತ ಎಂಬ ಸಲಹೆ ಕೂಡ ಕೊಟ್ಟರು. ಇದನ್ನು ಕೆಲವರಿಗೆ ಸಹಿಸಲಾಗಲಿಲ್ಲ. ನಾವು ಕೆಳವರ್ಗದವರು ಎಂದು ತಾವೇ ಕರೆದುಕೊಳ್ಳುವವರು ಬಹಳಷ್ಟು ಮಂದಿ ನಮ್ಮಲ್ಲಿದ್ದಾರೆ. ಅವರ ಕೆಲಸ ಬ್ರಾಹ್ಮಣರು ಅಥವಾ ಮೇಲ್ವರ್ಗದವರು ಎಂದು ಕರೆಯಲ್ಪಟ್ಟವರು ಶೂದ್ರ ಎಂದು ಕರೆಯಲ್ಪಟ್ಟವರನ್ನು ಅನಾದಿಕಾಲದಿಂದ ಶೋಷಿಸಿದ್ದಾರೆ,(ಶೂದ್ರ ಎಂದು ಕರೆಯಲ್ಪಟ್ಟವರು, ದಲಿತರು ಎಂದು ಕರೆಯಲ್ಪಟ್ಟವರನ್ನು ಶೋಷಿಸಿದ್ದಾರೆ ಎಂಬುದೂ ಇದೆ) ಮತ್ತು ಈಗಲೂ ಶೋಷಿಸುತ್ತಿದ್ದಾರೆ ಎಂದು ಧರಣಿ ಸತ್ಯಾಗ್ರಹಗಳನ್ನು ಮಾಡುವುದು, ಸಂಘಗಳನ್ನು ಕಟ್ಟುವುದು, ಸತ್ವವಿಲ್ಲದ ವಿಚಾರ ಘೋಷ್ಠಿಗಳನ್ನು ಮಾಡುವುದು (ಇವುಗಳಲ್ಲಿ ತಮ್ಮನ್ನು ಬುದ್ಧಿಜೀವಿಗಳೆಂದು ಕರೆದುಕೊಂದು, ಮೇಲ್ವರ್ಗವೆಂದು ಕರೆಯಲ್ಪಟ್ಟ ವರನ್ನು ವಾಮಾಗೋಚರ ಬೈಯ್ಯುವುದು). ಒಟ್ಟಿನಲ್ಲಿ ತಮ್ಮನ್ನೇ ವಿಚಾರವಾದಿಗಳು, ಚಿಂತಕರು, ಬುದ್ಧಿಜೀವಿಗಳು ಎಂಬಿತ್ಯಾದಿಯಾಗಿ ಕರೆದುಕೊಂಡು ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿರುವುದೇ ಇವರ ಕೆಲಸ. ಎಲ್ಲಿ ಇನ್ನಿತರ ಸ್ವಾಮಿಗಳು ಹಿಂದೂ ಧರ್ಮದ ಏಳಿಗೆಗೆ, ಅಸ್ಪೃಶ್ಯತಾ ನಿವಾರಣೆಗೆ ಬದ್ಧರಾಗಿ ಒಂದಾಗಿ ಹೀಗೆ ಬಹಿರಂಗ ಹೇಳಿಕೆ ಕೊಟ್ಟರೆ ತಮ್ಮ ಮಾರುಕಟ್ಟೆ ಬೆಲೆ ಕಡಿಮೆಯಾಗುವುದೇನೋ ಎಂದು ದಿಗಿಲಾಗಿರಬೇಕು, ಶೂದ್ರರು, ಕೆಳವರ್ಗದವರು ಎಂದು ಕರೆದುಕೊಳ್ಳುವವರಿಗೆ. ಪೇಜಾವರ ಸ್ವಾಮಿಗಳ ಪ್ರಕೃತಿ ದಹನ ಮುಂತಾದ ಧರಣಿಗಳು ನಡೆದವು .

ಕೆಳವರ್ಗದವರು ಎಂದು ಕರೆದುಕೊಳ್ಳುವವರು ಮಾತ್ರ ಇರುವುದೇ? ತಾವು ಮೇಲ್ವರ್ಗದವರು ಎಂದು ಕರೆದುಕೊಳ್ಳುವವರೂ ಇದ್ದಾರೆ. ಇಂದು ಈ ಕೆಳವರ್ಗದವರು ಎಂದು ಕರೆದುಕೊಂಡು ಅನಾವಶ್ಯಕವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡುವುದಕ್ಕೆ ಇವರ ಪಾತ್ರವೂ ಇದೆ. ದೇವಸ್ಥಾನಗಳನ್ನು ಕಟ್ಟುವುದು, ದೇವರಿಗೇ ಜಾತಿ ಕಟ್ಟುವುದು, ಕೆಲವು ಜಾತಿಯವರನ್ನು ದೇವಸ್ಥಾನದ ಒಳಗೆ ಬಿಡದೆ ಇರುವುದು, ಒಂದೊಂದು ವರ್ಗದವರಿಗೆ ಒಂದೊಂದು ಊಟದ ಪದ್ಧತಿ ಮಾಡುವುದು ಈ ರೀತಿಯ ಶೋಷಣೆಗಳು ಇಂದಿಗೂ ಇರುವುದು ಬಹಳ ದು:ಖಕರ ಸಮಾಚಾರ.

ಯಾಕೋ ವಿಚಾರ ಲಹರಿ ನಿಲ್ಲುತ್ತಲೇ ಇಲ್ಲ. ಇನ್ನೊಂದು ಬ್ಳಾಗಿನಲ್ಲಿ ವಿಚಾರ ಮುಂದುವರೆಸುತ್ತೇನೆ. ಇವೊತ್ತು ನೆನೆಸಿಕೊಳ್ಳಬೇಕೆಂದುಕೊಂಡಿದ್ದು, "ಕನಕ ದಾಸರನ್ನು". "ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರು ಬಲ್ಲಿರಾ " (ಈ ಕೃತಿಯ ಸಾಹಿತ್ಯ ಇಲ್ಲಿ ಓದಿ : http://www.kannadalyrics.com/?q=node/2358, ಭಕ್ತ ಕನಕದಾಸ ಚಿತ್ರದಲ್ಲಿ ಅಳವಡಿಸಿಕೊಂಡಿರುವ ಈ ಗೀತೆಯನ್ನು ಇಲ್ಲಿ ಕೇಳಿ:http://in.youtube.com/watch?v=s-ywVM3veDk)ಎಂದು ಮುಖಕ್ಕೆ ಉಗಿದಂತೆ ಹೇಳಿದ್ದರೂ, ಕನಕ ದಾಸರಿಗೇ ಜಾತಿ/ಮತಗಳನ್ನು ಕಟ್ಟಿ ಕಿತ್ತಾಡುವ ಮಹಾನುಭಾವರಿದ್ದಾರೆ! ಹೌದು ಇಂದು ’ಕನಕ ಜಯಂತಿ’.

ಇನ್ನು ಈ ಹೊಲಸು ಜಾತಿ, ಅಸ್ಪೃಶ್ಯತೆಗಳನ್ನು ಇಲ್ಲಿಗೆ ನಿಲ್ಲಿಸಿ ಕನಕ ದಾಸರ ಬಗ್ಗೆ ಅವಲೋಕಿಸೋಣ.
ವ್ಯಾಸರಾಯರ ಶಿಷ್ಯವರ್ಗದಲ್ಲಿ ಒಬ್ಬರಾದ ಕನಕದಾಸರು ಕರ್ನಾಟಕದ ಪ್ರಮುಖ ಹರಿದಾಸರುಗಳಲ್ಲಿ ಒಬ್ಬರು.(ಪುರಂದರ ದಾಸರು, ವಾದಿರಾಜರು ಕೂಡ ವ್ಯಾಸರಾಯರ ಶಿಷ್ಯರು). ಕನಕದಾಸರು, ’ನೆಲೆಯಾದಿಕೇಶವ’, ಕಾಗಿನೆಲೆಯಾದಿಕೇಶವ’ ’ಬಡದಾದಿಕೇಶವ’ ಮೊದಲಾದ ಅಂಕಿತದಿಂದ ಅಪಾರ ಭಕ್ತಿ ಕೀರ್ತನೆ ಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಕನಕದಾಸರ ಕೊಡುಗೆ ಅಪಾರ. ವರಕವಿಗಳಾದ ಇವರು ’ಮೋಹನ ತರಂಗಿಣಿ’, ’ನಳ ಚರಿತ್ರೆ’, ’ಕನಕನ ಮುಂಡಿಗೆ’ ಎಂಬ ಗ್ರಂಥಗಳನ್ನು ರಚಿಸಿರುವುದು ಕನ್ನಡ ಭಾಷೆಗೆ ಕನಕದಾಸರ ಕೊಡುಗೆ.

ಉಡುಪಿ ಶ್ರೀಕ್ಷೇತ್ರದಲ್ಲಿ ಕೃಷ್ಣನ ದರ್ಶನಕ್ಕೆ ಅವಕಾಶ ಸಿಗದಿರಲು, ಗರ್ಭ ಗೃಹದ ಹಿಂಭಾಗದಲ್ಲಿ ನಿಂತು ದೇವರನ್ನು ಪರಮ ಭಕ್ತಿಯಿಂದ ಸ್ತುತಿಸಲು, ಪರಮಾತ್ಮ ಕನಕದಾಸರ ಕಡೆಗೇ ತಾನೂ ತಿರುಗಿ ಗರ್ಭಗುಡಿಯ ಹಿಂಭಾಗದ ಗೋಡೆಯ ಕಿಂಡಿಯಿಂದ ದರ್ಶನವಿತ್ತನಂತೆ. ಅಠಾಣ ರಾಗದಲ್ಲಿರುವ "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎಂಬ ಕನಕದಾಸರ ದೇವರ ನಾಮವನ್ನು, ಮೇಲಿನ ದೃಶ್ಯವನ್ನು ಭಕ್ತ ಕನಕದಾಸ ಚಲನಚಿತ್ರದಲ್ಲಿ ತೋರಿಸುವಾಗ ಬಳಸಿಕೊಂಡಿದ್ದಾರೆ.(ಇಲ್ಲಿ ಕೇಳಿ:http://in.youtube.com/watch?v=CrK0-EhhCUc&feature=related, ಇಲ್ಲಿ ಸಾಹಿತ್ಯ ಲಭ್ಯವಿದೆ: http://haridasa.in)

ಕನಕ ದಾಸ ರಚನೆಗಳು ಬಹಳ ಸರಳವಾಗಿದ್ದು ಭಕ್ತಿ ರಸವನ್ನೇ ಹರಿಸುವಂತವಾಗಿವೆ. ಉದಾಹರಣೆಗೆ ದರ್ಬಾರಿ ರಾಗದಲ್ಲಿರುವ "ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ" ಕೇಳಿದರೆ ಭಕ್ತಿಯ ಜೊತೆಗೆ ಮನಸ್ಸೂ ಕೂಡ ನಲಿಯುವುದು . (ವಿದ್ಯಾಭೂಷಣ ರವರು ಹಾಡಿರುವ ಈ ಕೀರ್ತನೆಯನ್ನು ಇಲ್ಲಿ ಕೇಳಿ:http://in.youtube.com/watch?v=1pPd_CWaQm4 ). ಇನ್ನು ಹಲವಾರು ಕರ್ನಾಟಕ ಸಂಗೀತ ಸಭೆಗಳಲ್ಲಿ (ಅದರಲ್ಲೂ ಮಾಂಡೋಲಿನ್ ವಾದಕ ಯು. ಶ್ರೀನಿವಾಸರ ವಾದನಗಳಲ್ಲಿ) "ಬಾರೋ ಕೃಷ್ಣಯ್ಯಾ" ದ ಪ್ರಸ್ತುತಿ ಸಭಿಕರ ಮೆಚ್ಚುಗೆಗೆ ಪಾತ್ರವಾಗಿ ಹೆಚ್ಚಿನ ಚಪ್ಪಾಳೆಗಳನ್ನು ಗಳಿಸುತ್ತದೆ.(ಇಲ್ಲಿ ಕೇಳಿ: http://in.youtube.com/watch?v=pksRRuwgOms,) ಇದು ಕೂಡ ಕನಕ ದಾಸರ ರಚನೆಯೆ.

ಒಂದು ದೊಡ್ದ ಕೊರಗೆಂದರೆ ಇಷ್ಟೋಂದು ಅಚ್ಚ ಕನ್ನಡದ ಕನಕ ದಾಸರ ದೇವರನಾಮಗಳು ಕರ್ನಾಟಕ ಸಂಗೀತ ಸಭೆಗಳಲ್ಲಿ ಹೆಚ್ಚು ಬಳಕೆಯಾಗದೆ ಇರುವುದು. ನಮ್ಮಲ್ಲಿ ಬಹಳಷ್ಟು ಕರ್ನಾಟಕ ಸಂಗೀತ ವಿದ್ವಾಂಸರಿದ್ದಾರೆ. ಬಹಳಷ್ಟು ಸಂಗೀತ ಸಭೆಗಳು ನಡೆಯುತ್ತವೆ. ಇನ್ನು ಮುಂದೆಯಾದರೂ ನಮ್ಮ ಹರಿದಾಸರ ಕೃತಿಗಳನ್ನು ಜನಪ್ರಿಯಗೊಳಿಸಲು ವಿದ್ವಾಂಸರುಗಳು , ಕಾರ್ಯಕ್ರಮ ಪ್ರಾಯೋಜಕರು ಉತ್ತೇಜನ ಕೊಡಬೇಕಾಗಿದೆ.(ಇದು ಕನ್ನಡ ರಾಜ್ಯೋತ್ಸವ ಮಾಸ)

ನಮ್ಮ ಸಮಾಜೋದ್ಧಾರಕ್ಕೆ ಕನಕದಾಸರು ಅನೇಕ ಕೃತಿಗಳನ್ನು ರಚಿಸಿದ್ದಾರೆ. "ಕುಲ ಕುಲವೆಂದು ಹೊಡೆದಾಡದಿರಿ" ಜನಪ್ರಿಯವಾಗಿದೆ. ಹಾಡುವುದು, ಕೇಳುವುದರ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅವಶ್ಯಕತೆ. ಕನಕದಾಸರ ಇನ್ನೊಂದು ರಚನೆ ಇಲ್ಲಿ ನೋಡೋಣ. ರಾಗ ಮಧ್ಯಮಾವತಿಯಲ್ಲಿ,

ಪಲ್ಲವಿ: ಕುಲಕುಲವೆನ್ನುತಿಹರು ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ!!
ಚರಣ: ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ (ಬಿಸಜನಾಭ : ತಾವರೆಯನ್ನು ಹೊಕ್ಕುಳಿನಲ್ಲುಳ್ಳವ, ವಿಷ್ಣು)
ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ

ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ ತೆಗೆದು ಪೂಸುವರು ಭೂಸುರರೆಲ್ಲರು
ಬಗೆಯಿಂದ ನಾರಯಣನ್ಯಾವಕುಲದವ ಅಗಜಾವಲ್ಲಭನ್ಯಾತರಕುಲದವನು (ಅಗಜಾವಲ್ಲಭ : ಪಾರ್ವತಿಯ ಪತಿ, ಈಶ್ವರ)

ಆತ್ಮ ಯಾವ ಕುಲ ಜೀವ ಯಾವ ಕುಲ ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮಾಂತರಾತ್ಮ ನೆಲೆಯಾದಿಕೇಶವ ಆತನೊಲಿದಮೇಲೆ ಯಾತರ ಕುಲವಯ್ಯ

(ಕನಕದಾಸರ, ರಚನೆಗಳ ಬಗ್ಗೆ ಮಾಹಿತಿಗೆ, ಗ್ರಂಥ ಋಣ : "ಹರಿದಾಸ ಕೀರ್ತನ ಸುಧಾಸಾಗರ-ಪ್ರಥಮ ತರಂಗ" - ಗಾನಕಲಾಸಿಂಧು ಎನ್ ಚೆನ್ನಕೇಶವಯ್ಯ)
__________________________________________________________________________________
ಕೆಲವು ವಿಶಿಷ್ಟ ವ್ಯಕ್ತಿಗಳಿರುತ್ತಾರೆ. ಇವರ ಬಗ್ಗೆ ಹೆಚ್ಚೇನೂ ತಿಳಿಯದೆ ಇದ್ದರೂ ತಮ್ಮ ಯಾವುದೋ ಒಂದೇ ಒಂದು ವಿಶಿಷ್ಟ ಕೆಲಸದಿಂದ ಸಾರ್ವಜನಿಕರ ಮನೆಮಾತಾಗಿಬಿಟ್ಟಿರುತ್ತಾರೆ. ಅಥವ ಅವರ ಆ ವಿಶಿಷ್ಟ ಕೆಲಸ ಮನೆ ಮಾತಾಗಿರುತ್ತದೆ ಎಂದರೆ ಇನ್ನೂ ಬಹಳ ಸೂಕ್ತವೆನಿಸುತ್ತದೆ. ಕಣಗಲ್ ಪ್ರಭಾಕರ ಶಾಸ್ತ್ರಿಯವರು ಬಹಳ ಅತ್ಯುತ್ತಮ ಚಿತ್ರ ಗೀತೆಗಳನ್ನು ರಚನೆಗ ಮಾಡಿದ್ದಾರೆ. ಸಾಕ್ಷಾತ್ಕಾರ ಚಲನ ಚಿತ್ರದ "ಒಲವೆ ಜೀವನ ಸಾಕ್ಷಾತ್ಕಾರ" ಹಾಡು ಕೇಳಿದರೆ ಶಾಸ್ತ್ರಿಯವರು ತಟ್ಟನೆ ನೆನಪಾಗುತ್ತಾರೆ. ಅತ್ಯುತ್ತಮ ಸಾಹಿತ್ಯದಿಂದ ಕೂಡಿದ ಆ ರಚನೆಯಿಂದ ಶಾಸ್ತ್ರಿಯವರು ಮನೆಮಾತಾಗಿಬಿಟ್ಟಿದ್ದಾರೆ. ಹೀಗೆ ಯಾವುದೇ ಕನ್ನಡ ಉತ್ಸವ, ಸಮಾರಂಭಗಳು ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವಗೀತೆಯಿಂದ. ಇದು ೧೯೬೦ ರಲ್ಲಿ ೫೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಪ್ರಾರ್ಥನಾ ಗೀತೆಯಾಗಿ ಹಾಡಲ್ಪಟ್ಟಿತು, ಆನಂತರ ಇಂದಿನ ದಿನಗಳಲ್ಲಿ ಅಧಿಕೃತ ಉದ್ಘಾಟನಾ/ಪ್ರಾರ್ಥನಾ ಗೀತೆಯಾಗಿಬಿಟ್ಟಿದೆ.(ಇಲ್ಲಿ ಕೇಳಿ: http://in.youtube.com/watch?v=ohuUHGIaKuA, ಸಾಹಿತ್ಯ ಇಲ್ಲಿ ಓದಿ: http://vishvakannada.com/?q=node/147) ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ.

ಇಂದು ಇಂತಹ ಉತ್ಕೃಷ್ಟ ಕವಿತೆಯನ್ನು ಕನ್ನಡ ನಾಡಿಗೆ ಕೊಟ್ಟ ನವೋದಯ ಪರಂಪರೆಯ ಹಿರಿಯ ಕವಿ ಡಾ ಡಿ ಎಸ್ ಕರ್ಕಿಯವರ ಜನ್ಮ ದಿನ. ೧೯೦೭ ರಲ್ಲಿ ಬೆಳಗಾವಿಯ ಬಾಗೋಜಿ ಕೊಪ್ಪದಲ್ಲಿ ಜನನ. ತಂದೆ ಕೃಶಿಕ ಸಿದ್ಧಪ್ಪ ಕರ್ಕಿ, ತಾಯಿ ದುಂಡವ್ವ. ಚಿಕ್ಕಂದಿನಲ್ಲೆ ತಂದೆ, ತಾಯಿಯ ಮರಣ. ಸೋದರ ಮಾವ ಈಶ್ವರಪ್ಪ ಕಣಗಲಿ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ. ಬಾಗೋಜಿ ಕೊಪ್ಪದಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಢದಲ್ಲಿ ಬಿ ಎ ಪದವಿ. ಮುಂಬೈ ಮಹಾವಿದ್ಯಾಲಯದಿಂದ ಕನ್ನಡ ಎಂ ಎ. ಕಾರಾವಾರದ ಸರ್ಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿ ಆರಂಭ. ನಂತರ ಕೆ ಎಲ್ ಇ - ಬೆಳಗಾವಿ, ಕಾಲೇಜಿನಲ್ಲಿ ಸೇವೆ. ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಕರ್ಣಾಟಕ ವಿಶ್ವವಿದ್ಯಾಲಯ ಧಾರವಾಢದಲ್ಲಿ ಉಪನ್ಯಾಸಕರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.

ಕರ್ಕಿಯವರು ಅಪಾರ ಕವಿತೆಗಳನ್ನು ರಚಿಸಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು. ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಕರಿಕೆ ಕಣಗಿಲು ಕವನ ಸಂಕಲನವನ್ನು ತಮ್ಮ ಪೋಷಕರಾದ ಸೋದರಮಾವ ಈಶ್ವರಪ್ಪ ಕಣಗಲಿ ಅವರಿಗೆ ಅರ್ಪಿಸಿದ್ದಾರೆ. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ( ಕಾರಾವರದಲ್ಲಿ, ಗೋಕರ್ಣ ತೀರ, ಕೂಡಲ ಸಂಗಮ, ಜೋಗದ ಯೋಗ ಇತ್ಯಾದಿ). ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಬಹಳ ಸೂಕ್ತವಾಗಿವೆ. ಈ ಸರಳ ರಚನೆ ಬಣ್ಣದ ಚೆಂಡು ಹಾಡಿದರೆ ನಾವೂ ಕೂಡ ಬಾಲ್ಯದ ನೆನಪಿಗೆ ಜಾರುತ್ತೇವೆ. (ನೆನ್ನೆ ಮಕ್ಕಳ ದಿನಾಚಾರಣೆ, ಇದು ಕನ್ನಡ ರಾಜ್ಯೋತ್ಸವ ಮಾಸ, ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಈ ಸರಳ ಕನ್ನಡ ಪದ್ಯ ಹೇಳಿಕೊಡಿ). ಈ ಕವನ ಸಂಕಲನಗಳಲ್ಲಿರುವ ಎಲ್ಲಾ ಪದ್ಯಗಳೂ ಹಾಡಿಕೊಳ್ಳಲೂ ಮತ್ತು ಮಕ್ಕಳಿಗೆ ಕಳಿಸಿಕೊಳ್ಳಲು ಬಹಳ ಸುಲಭವಾಗಿವೆ. ಕೆಲವಂತೂ (ಬೆಲ್ಲ ತಿನ್ನುವ ಮಲ್ಲ ಇತ್ಯಾದಿ) ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ.

ಬಣ್ಣದ ಚೆಂಡು,
ಆಹಹಾ ರಬ್ಬರ ಚೆಂಡು!
ಗಾಳಿಯನುಂಡು
ಪುಟಿಯುವ ಚೆಂಡು
ಕಾಣಿಸುವುದು ಬಲು ದುಂಡು
ಆಹಹಾ ರಬ್ಬರ ಚೆಂಡು

ಆಹಹಾ ಬಣ್ಣದ ಚೆಂಡು!
ಪುಟಿಯಲು ಕಂಡು
ಹುಡುಗರ ದಂಡು
ನೆರೆವುದು ಹಿಂಡು ಹಿಂಡು
ಕರೆವುದು ಬಣ್ಣದ ಚೆಂಡು

ಆಹಹಾ ಕುಣಿಯುವ ಚೆಂಡು!
ತೈ ತಕ್ಕ ಎಂದು
ಕುಣಿ ಕುಣಿ ಎಂದು
ನಮ್ಮನು ಕುಣಿಸುವ ಚೆಂಡು
ಆಹಹಾ ರಬ್ಬರ ಚೆಂಡು

ಆಟಕೆ ಎಳೆಯುವ ಚೆಂಡು!
ಅಮ್ಮನು ಕರೆದರು
ಅಪ್ಪನು ಕರೆದರು
ಹೋಗಲು ಬಿಡದೀ ಚೆಂಡು
ಆಹಹಾ ಬಣ್ಣದ ಚೆಂಡು

ಮೊದಲೇ ಗಾಳಿಯ ಚೆಂಡು!
ಕೊನೆಯಲಿ ಒಂದು
ದಿನ ಪುಸ್ಸೆಂದು
ಆಟವ ಮುಗಿಸುವ ಚೆಂಡು
ಆಹಾಹ ರಬ್ಬರ ಚೆಂಡು

ಕರ್ಕಿಯವರ "ತಿಳಿ ನೀಲಿದಲ್ಲಿ ತಾ ನೀಲವಾಗಿ ಅವನು ಹೋದ ದೂರ ದೂರ", ಮಹಾತ್ಮ ಗಾಂಧಿ ಯವರು ಮರಣ ಹೊಂದಿದಾಗ ಬರೆದ ಮತ್ತೊಂದು ಕವನ.

ಕರ್ಕಿಯವರ ಇತರ ಕೃತಿಗಳು, "ಮಕ್ಕಳ ಶಿಕ್ಷಣ", "ಕನ್ನಡ ಛಂದೋವಿಕಾಸ", "ಸಾಹಿತ್ಯ-ಸಂಸ್ಕೃತಿ-ಶೃತಿ", "ನಾಲ್ದೆಸೆಯ ನೋಟ". ಕನ್ನದ ಛಂದೋವಿಕಾಸಕ್ಕಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ಈ ಕೃತಿ ಇಂದಿಗೂ ಕನ್ನಡ ವಿಧ್ಯಾರ್ಥಿಗಳಿಗೆ, ಸಾಹಿತ್ಯಾಭಿಮಾನಿಗಳಿಗೆ ಭಗವದ್ಗೀತೆಯಾಗಿದೆ.

ಕರ್ಕಿಯವರು, ಕನ್ನಡದ ವರಕವಿ ಬೇಂದ್ರೆ ಮತ್ತು ಮತ್ತೊಬ್ಬ ಮೇರು ಕವಿ ವಿ ಕೃ ಗೋಕಾಕರು ಒಡನಾಡಿಗಳಾಗಿದ್ದರು.

ಕರ್ಕಿಯವರು ೧೬-೦೧-೧೯೮೪ ರಲ್ಲಿ ಕಾಲವಾದರು.

(ಮಾಹಿತಿ ಕೃಪೆ: ಡಿ ಎಸ್ ಕರ್ಕಿಯವರ ಮೊಮ್ಮಗನಾದ ಸಂತೋಷ್ ಕರ್ಕಿಯವರು , ಗ್ರಂಥ ಋಣ: ಹಚ್ಚೇವು ಕನ್ನಡದ ದೀಪ : ಡಾ ಡಿ ಎಸ್ ಕರ್ಕಿಯವರ ಸಮಗ್ರ ಕಾವ್ಯ)

ಶುಕ್ರವಾರ, ನವೆಂಬರ್ 07, 2008

ಭಾರತ ರತ್ನ ಭೀಮ್ ಸೇನ್ ಜೋಶಿ

ಭೀಮ್ ಸೇನ್ ಜೋಶಿಯವರ/ಜೋಶಿಯವರ ಸಂಗೀತದ ಬಗ್ಗೆ ನಾನು ತಿಳಿದಿರುವ (ಓದಿ, ಕೇಳಿ) ಕೆಲವು ಸ್ವಾರಸ್ಯಕರ ಸಂಗತಿಗಳು.

ಕೆಲವೇ ತಿಂಗಳುಗಳ ಹಿಂದೆ ಚೌಡಯ್ಯ ಸ್ಮಾರಕ ಭವನದಲ್ಲಿ , ಪದ್ಮವಿಭೂಶಣ ಜಸ್ ರಾಜ್ ರವರ (ಅಂಬಿ ಸುಬ್ರಮಣ್ಯನ್ ರವರ ಪಿಟೀಲು ವಾದನ ಕೂಡ ಇತ್ತು.) ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆ. ಕಾರ್ಯಕ್ರಮದ ನಂತರ ಸಂವಾದ ಕೂಡ ಏರ್ಪಡಿಸಿದ್ದರು. ಶ್ರೋತೄಗಳು ತಮ್ಮ ಪ್ರಶ್ನೆಗಳನ್ನು ವಿದ್ವಾಂಸರಲ್ಲಿ (ಜಸ್ ರಾಜ್, ಖ್ಯಾತ ಪಿಟೀಲು ವಾದಕ ಎಲ್ ಸುಬ್ರಮಣ್ಯನ್, ಅಂಬಿ - ಎಲ್ ಸುಬ್ರಮಣ್ಯನ್ ರವರ ಮಗ ಮೂರು ಜನ ವೇದಿಕೆ ಮೇಲೆ ಉಪಸ್ಥಿತರಿದ್ದರು) ಕೇಳುವ ಸದವಕಾಶವಿತ್ತು. ಈ ಸಂದರ್ಭದಲ್ಲಿ ಒಬ್ಬ ಜಿಗುಪ್ಸಿ ತಂತ್ರಜ್ಞ (ಸಾಫ್ಟ್ ವೇರ್ ಇಂಜಿನೀಯರ್) ಜಸ್ ರಾಜ್ ರವರಿಗೆ ಕೇಳಿದ ಪ್ರಶ್ನೆ,
ಸ್ವಾಮಿ ನನಗೆ ಸಂಗೀತ ಮೇಲೆ ಬಹಳ ಆಸಕ್ತಿ ಇತ್ತು. ಆದರೆ ನಮ್ಮ ಮನೆಯಲ್ಲಿ ಅದಕ್ಕೆ ಅಗತ್ಯ ಪ್ರೋತ್ಸಾಹ ಸಿಗಲಿಲ್ಲ. ಬಲವಂತದಿಂದ ಇಂದು ನಾನು ಸಾಫ್ಟ್ ವೇರ್ ಇಂಜಿನೀಯರ್ ಆಗಿ ಬಹಳ ನೊಂದಿದ್ದೇನೆ, ಹೀಗೆ ಸುಮಾರು ೧೦ ನಿಮಿಶ ತನ್ನ ಜೀವನ ಸಂಕಟಗಳೊಂದಿಗೆ ಪ್ರಶ್ನೆಯನ್ನು ಬೆರೆಸಿ, ಇಂತಹ ಸಮಯದಲ್ಲಿ ನಮ್ಮಂತ ಸಾಮಾನ್ಯ ಸಂಗೀತಾಸಕ್ತರು ಏನು ಮಾಡಬೇಕು ಎಂಬ ದೀರ್ಘ ಪ್ರಶ್ನೆಯನ್ನು ವಿದ್ವಾಂಸರ ಮುಂದಿಟ್ಟ.

ಈ ಧೀರ್ಘ ಪ್ರಶ್ನೆಗೆ ಜಸ್ ರಾಜ್ ರವರು ಕೊಟ್ಟಿದ್ದು ಒಂದು ಸಾಲಿನ ಉತ್ತರ! "ಸಂಗೀತಾಸಕ್ತಿಯಿಂದ ಚಿಕ್ಕವಯಸ್ಸಿನಲ್ಲಿಯೆ ಮನೆ ಬಿಟ್ಟು ಓಡಿ ಹೋಗಿ, ನಂತರ ದೇಶದಲ್ಲೆ ದೊಡ್ದ ಸಂಗೀತ ವಿದ್ವಾಂಸರಾದದ್ದು ಈ ರಾಜ್ಯದವರೆ! ಭೀಮ್ ಸೇನ್ ಜೋಶಿ!"

ಇಲ್ಲಿ ಈ ಪ್ರಸಂಗ ನೆನೆಸಿಕೊಂಡ ಔಚಿತ್ಯವೇನೆಂದರೆ, ಇಂತಹುದೊಂದು ಸೂಕ್ಷ್ಮ ಪ್ರಶ್ನೆಗೆ ಉತ್ತರಿಸಲು ಹೆಸರಾಂತ ಹಿಂದೂಸ್ತಾನಿ ಗಾಯಕ ಜಸ್ ರಾಜ್ ಉದಾಹರಿಸಿದ್ದು ಇನ್ನೊಬ್ಬ ಘನ ವಿದ್ವಾಂಸ ಭೀಮ್ ಸೇನ್ ಜೋಶಿ ಎಂದರೆ ಓದುಗರಿಗೆ ಜೋಶಿಯವರ ಪಾಂಡಿತ್ಯದ ಪರಿಚಯವಾಗುತ್ತದೆ.

ಇನ್ನೊಂದು ಪ್ರಸಂಗ, ಒಮ್ಮೆ ನನ್ನ ಹಿಂದಿನ ಸಂಸ್ಥೆ ಲ್ಯೂಸೆಂಟ್ ನಲ್ಲಿ ಒಬ್ಬ ತೆಲುಗು ಗೆಳೆಯನ ಜೊತೆ ಸಂಗೀತ, ಸಂಗೀತ ಕಾರರ ಬಗ್ಗೆ ಚರ್ಚಿಸುತ್ತಿದ್ದೆ. ನಾನು ಅವನಲ್ಲಿ, ಭೀಮ್ ಸೇನ್ ಜೋಶಿ ಯವರು ನಿನಗೆ ಗೊತ್ತೆ? ಅವರ ಸಂಗೀತ ಆಲಿಸಿದ್ದೀಯೆ? ಎಂದು ಕೇಳಿದ್ದೆ! ಆದರೆ ಅವ ಜೋಶಿಯವರ ಬಗ್ಗೆ ಗೊತ್ತಿಲ್ಲ ಎಂದಾಗ ಆಶ್ಶ್ಚ್ರರ್ಯ ಸಹಿತ ಖೇದವಾಯಿತು. ಆದರೆ ಜೋಶಿ ಯವರ ಬಗ್ಗೆ ಅವನಿಗೆ ತಿಳಿಸಲು ನನಗೆ ಬಹಳ ಕಷ್ಟವಾಗಲಿಲ್ಲ. ನೀನು "ಮೀಲೆ ಸುರುಮೇಳ ತುಮ್ಹಾರಾ" ಕೇಳಿದ್ದೀಯ? ಒಹ್ ಕೇಳಿದ್ದೀನಿ, ಅದು ನನಗೆ ಬಹಳ ಪ್ರಿಯವಾದದ್ದು ಎಂದ. ಆ ಹಾಡು ಶುರುವಾಗುವುದೆ ಪಂಡಿತ್ ಭೀಮ್ ಸೇನ್ ಜೋಶಿ ಯವರ ಕಂಠದಿಂದ!

ಹೀಗೆ ಬಹಳಷ್ಟು ವರ್ಷಗಳಿಂದ ಸಂಗೀತಾಸಕ್ತರ ತನು ಮನಗಳನ್ನು ತಮ್ಮ ವಿಶಿಷ್ಟ ಗಾಯನದಿಂದ ತಣಿಸಿರುವ ಕನ್ನಡಿಗ ಭೀಮ್ ಸೇನ್ ಜೊಷಿಯವರಿಗೆ ಅತ್ಯುನ್ನತ ನಾಗರೀಕ ಪ್ರಶಸ್ತಿ ಎನ್ನಿಸಿರುವ (ಈ ಪ್ರಶಸ್ತಿ ಕೆಲವು ರಾಜಕಾರಣಿ, ಸ್ವಾಮಿ ನಿಷ್ಟರಿಗೆ ಸಿಕ್ಕ ಅಪವಾದವನ್ನು ಬದಿಗಿಟ್ಟು) ಭಾರತರತ್ನ ಪ್ರಶಸ್ತಿ ಪಂಡಿತ್ ಭೀಮ್ ಸೇನ್ ಜೋಶಿ ಯವರಿಗೆ ಸಿಕ್ಕ ಸಿಹಿ ಸಮಾಚಾರ ಬೆಳಗಿನ ಪ್ರಾಜಾವಾಣಿ ಯಲ್ಲಿ ನೋಡಿ ಅತೀವ ಆನಂದವಾಯಿತು. ಆದರೆ ಈ ಸುದ್ದಿ ಅಮೇರಿಕಾದ ಚುನಾವಣಾ ಸುದ್ದಿಯ ನಡುವೆ ಸಿಲುಕಿ, ಅದಕ್ಕೆ ಸಿಗಬೇಕಾದ ಮಹತ್ವ ಸಿಗದೆ (ಯಾವುದೇ ಆಂಗ್ಲ ಅಥವಾ ಕನ್ನಡ ಟಿ ವಿ ವಾಹಿನಿಗಳಲ್ಲಿ ಹಿಂದಿನ ರಾತ್ರಿ ಬಿತ್ತರವಾದಂತೆ ಕಂಡು ಬರಲಿಲ್ಲ) ಹೋದದ್ದಕ್ಕೆ ದುಖವಾಯಿತು. ಮಾಧ್ಯಮಗಳ ಮೇಲೆ ಸಿಟ್ಟು ಬಂತು (ಬಡವನ ಕೋಪ ದವಡೆಗೆ ಮೂಲ).ಆದರೆ ವಿಜಯ ಕರ್ನಾಟಕ ದಿನ ಪತ್ರಿಕೆಗೆ ಅಭಿನಂದನೆಗಳು ಮಹಾಪೂರವೆ ಸಲ್ಲಬೇಕು. ಮುಖಪುಟದ, ಮುಖ್ಯ ಭೂಮಿಕೆಯಲ್ಲಿ ಸುದ್ದಿ ಪ್ರಕಟವಾದದ್ದಲ್ಲದೆ, ಎರಡನೆ ಪುಟ ಪೂರ್ತಿ ಜೋಶಿ ಯವರಿಗೆ ಮೀಸಲಾಗಿತ್ತು. ಇದು ಮುಂದಿನ ದಿನ ಕೂಡ ಮುಂದುವರೆದಿರುವುದು ಸಂತಸಕರ ಸಂಗತಿ.

ಭೀಮ್ ಸೇನ್ ಜೋಶಿಯವರು ಕನ್ನಡಿಗರಿಗೆ ತಟ್ಟನೆ ಹೊಳೆಯುವುದೆಂದರೆ ಪುರಂದರ ದಾಸ ವಿರಚಿತ "ಭಾಗ್ಯದ ಲಕ್ಶ್ಮಿ ಬಾರಮ್ಮ" ದೇವರ ನಾಮವನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಡಿರುವುದು. ಇದು ಬಹಳಶ್ಟು ಜನರು ಶಂಕರ್ ನಾಗ್ ರವರ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಚಿತ್ರದಲ್ಲಿ ನೋಡಿರಬಹುದು/ಕೇಳಿರಬಹುದು. ನನ್ನ ತಿಳುವಳಿಕೆಯ ಪ್ರಕಾರ ಜೋಶಿಯವರು, ೧೯೯೦ ರಲ್ಲಿ ರಾಮಸೇವಾ ಮಂಡಲಿಯ ಸಂಗೀತೋತ್ಸವದಲ್ಲಿ ಹಿಂದೂಸ್ತಾನಿ ಶೈಲಿಯಲ್ಲಿ ಈ ದೇವರ ನಾಮವನ್ನು ಧೀರ್ಘವಾಗಿ ಪ್ರಸ್ತುತ ಪಡಿಸಿದ್ದಾರೆ. ಇದೇ ಸಮಯದಲ್ಲಿ ಶ್ರೀಪಾದರ "ಕಣ್ಗಳಿದ್ಯಾತಕೋ ಕಾವೇರಿ ರಂಗನ ನೋಡದ" ಕೀರ್ತನೆಯನ್ನೂ ಪ್ರಸ್ತುತ ಪಡಿಸಿದ್ದಾರೆ. ಇವುಗಳನ್ನು ಕೇಳಿದರೆ ಜೋಶಿಯವರ ಕಟ್ಟಾಭಿಮಾನಿಗಳಾಗುದರಲ್ಲಿ ಸಂಶಯವೇ ಇಲ್ಲ.

ಇನ್ನು ಕನ್ನಡ ಚಲನ ಚಿತ್ರ ರಂಗದಲ್ಲಿ ತಟ್ಟನೆ ನೆನಪಾಗುವುದು, ಸಂಧ್ಯಾರಾಗದ (ಇದು ಕನ್ನಡ ಕಾದಂಬರಿಕಾರ "ಅ ನ ಕೃ" ರವರ ಹೆಸರಾಂತ ಕಾದಂಬರಿ "ಸಂಧ್ಯಾರಾಗ" ವನ್ನು, ಎ ಸಿ ನರಸಿಂಹ ಮೂರ್ತಿ ಮತ್ತು ಎಸ್ ಕೆ ಭಗವಾನ್ ೧೯೬೬ ರಲ್ಲಿ ಚಲನಚಿತ್ರವಾಗಿಸಿದ್ದಾರೆ. ಇದಕ್ಕೆ ಜಿ ಕೆ ವೆಂಕಟೇಶ್ ಮತ್ತು ಬಾಲಮುರಳಿಕೃಷ್ಣ ರವ ಸಂಗೀತ ಸಂಯೋಜನೆಯಿದೆ) "ನಂಬಿದೆ ನಿನ್ನ ನಾದ ದೇವತೆ". ಪೂರ್ವಿ ಕಲ್ಯಾಣ ದಲ್ಲಿ ಪ್ರಸ್ತುತ ಪಡಿಸಿರುವ ಪುರಂದರದಾಸರ ಮತ್ತೊಂದು ಕೃತಿ. ಇದೇ ಚಿತ್ರದಲ್ಲಿ "ತೇಲಿಸು ಇಲ್ಲಾ ಮುಳುಗಿಸು", "ಕನ್ನಡತಿ ತಾಯೆ ಬಾ", "ಗುರುವಿನ ಗುಲಾಮನಾಗುವ ತನಕ" ಹಾಡುಗಳನ್ನೂ ತಮ್ಮ ಸಿರಿಕಂಠ ದಿಂದ ಹೊರಡಿಸಿದ್ದಾರೆ. ನಾನು ನೋಡಿರುವ ಸಂಗೀತಾಧಾರಿತ ಚಿತ್ರಗಳಲ್ಲಿ ಉಳಿದವಕ್ಕಿಂತ ಇದು ಅತ್ತ್ಯುತ್ತಮ ಚಿತ್ರ ಎಂದರೆ ತಪ್ಪಾಗಲಾರದು! ಕಾದಂಬರಿ ಆಧಾರಿತ ಚಿತ್ರಗಳ ಪೈಕಿಯಲ್ಲೂ ಇದು ಅತ್ಯುತ್ತಮ ಚಿತ್ರ.
http://in.youtube.com/watch?v=UkBca8f7q5Q ಇಲ್ಲಿ ಕೇಳಿ. ನಿಮ್ಮ ಕರ್ಣಾನಂದವಾಗುವುದರಲ್ಲಿ ಸಂಶಯವಿಲ್ಲ.

ಶ್ರೀಯುತರು ಹಿಂದಿಯಲ್ಲಿ "ಬಸಂತ್ ಬಹಾರ್" ಎಂಬ ಚಲನ ಚಿತ್ರದಲ್ಲಿ (ಇದು ಕನ್ನಡ ಕಾದಂಬರಿಕಾರ "ತ ರಾ ಸು" ರವರ "ಹಂಸಗೀತೆ" ಕಾದಂಬರಿಯನ್ನು ೧೯೫೬ ರಲ್ಲ್ಲಿ ಚಲನಚಿತ್ರವಾಗಿಸಿದ್ದು) "ಕೇತಕೀ ಗುಲಾಬ್ ಜೂಹಿ" ಎಂಬ ಹಾಡನ್ನು ಹಾಡಿದ್ದಾರೆ.
http://in.youtube.com/watch?v=GJAdhSnblRo ಇದನ್ನು ಒಮ್ಮೆ ಇಲ್ಲಿ ಕೇಳಿ. ನಿಮಗೆ ಹಿಂದೂಸ್ತಾನಿ ಸಂಗೀತದ ಮೇಲೆ ಆಸಕ್ತಿ ಇಲ್ಲದಿದ್ದರೂ, ನಿಮ್ಮ ಮನ ತಣಿಸುವ ಮಾಯಾ ಶಕ್ತಿಯಂತೂ ಇದೆ, ಈ ಹಾಡಿನಲ್ಲಿ.

ಜೋಶಿಯವರು ಹಲವು ಧ್ವನಿ ಸುರಳಿಗಳನ್ನು ಹೊರ ತಂದಿದ್ದಾರೆ. ಅದರಲ್ಲಿ ಕೆಲವು "ದಾಸರ ಪದಗಳು"/"ದಾಸವಾಣಿ", "ಎನ್ನ ಪಾಲಿಸೊ" ಇತ್ಯಾದಿ. ಈ ಧ್ವನಿ ಸುರಳಿಗಳಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ವಿರಚಿತ "ಇಂದು ಎನಗೆ ಶ್ರೀ ಗೋವಿಂದ" , ಹಲವು ಹರಿದಾಸರ ರಚನೆಗಳಾದ "ಸದಾ ಎನ್ನಾ ಹೃದಯದಲ್ಲಿ", "ತುಂಗಾ ತೀರದಿ ನಿಂತ ಸುಯತಿವರ", "ಕರುಣಾಕರನೀನೆಂಬುವದ್ಯಾತಕೊ?" , "ಎನ್ನ ಪಾಲಿಸೊ ಕರುಣಾಕರ", "ಕೈಲಾಸವಾಸ ಗೌರೀಶ ಈಶ", "ಕರುಣಿಸೋ ರಂಗಾ", "ಯಾದವ ನೀ ಬಾ", "ಭಾಗ್ಯದ ಲಕ್ಷ್ಮೀ ಬಾರಮ್ಮಾ", "ಕಣ್ಗಳಿದ್ಯಾತಕೋ?", "ಯಾಕೆ ಮೂಕನಾದೆಯೋ ಗುರುವೆ?", "ದಯಮಾಡೋ ರಂಗಾ" , "ಏಂದಿಗಾಹುದೋ ನಿನ್ನ ದರುಶನ?", ಇನ್ನೂ ಮುಂತಾದ ಕೃತಿಗಳು ಒಂದನನ್ನೊಂದು ಮೀರಿಸಿದಂತೆ ಮೂಡಿ ಬಂದಿವೆ.

ತಮ್ಮ ಒಂದು ಧ್ವನಿ ಸುರಳಿಯಲ್ಲಿ (ಹೆಸರು ನೆನಪಿಲ್ಲ), ಜ್ಞಾನ ಪೀಠ ಪ್ರಶಸ್ತಿ ವಿಜೇತ ವರಕವಿ ಬೇಂದ್ರೆ ಯವರ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಹಾಡಿರುವುದು ಮತ್ತೊಂದು ವಿಶೇಷ.

ಜೋಶಿಯವರ ಮತ್ತೊಂದು ವಿಶೇಷವೆಂದರೆ ಇನ್ನೊಬ್ಬ ಖ್ಯಾತ ಕರ್ನಾಟಕ ಸಂಗೀತಕಾರ ಬಾಲಮುರಳಿಕೄಷ್ಣರ ಜೊತೆ ಹಾಡಿರುವುದು. (ಹಿಂದೂಸ್ತಾನಿ-ಕರ್ನಾಟಕ ಜುಗಲ್ ಬಂಧಿ). ಈ ಕಾರ್ಯಕ್ರಮಕ್ಕೆ ಮೊದಲು ವೇದಿಕೆ ಯಾಗಿದ್ದು ಬಹುಷ: ದೂರದರ್ಶನದವರು ಎಂದೆನಿಸುತ್ತದೆ. ಈ ಜೋಡಿ ಬಹಳ ಜನಪ್ರಿಯ ಆಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ, ಒಂದು ಧ್ವನಿಸುರಳಿ ಕೂಡ ಹೊರಬಂದಿರುವುದು ಸಂತೋಷಕರ ಸಂಗತಿ. ಈ ಸುರಳಿಯಲ್ಲಿ ದರ್ಬಾರಿ ಕನ್ನಡ, ಭೈರವಿ, ಮಾಲಕೌಂಸ್ ರಾಗಗಳು ಮತ್ತು ಈ ರಾಗಾಧಾರಿತ ಕೃತಿಗಳು ಮೂಡಿ ಬಂದಿವೆ.

"ಹಿಂದೂಸ್ತಾನಿ ಮುಕುಟಮಣಿಗಳು" ಎಂಬ ಪುಸ್ತಕದಲ್ಲಿ ಡಾ ಕೆ ಶ್ರೀಕಂಠಯ್ಯನವರು, ಜೋಶಿ ಯವರ ಬಗ್ಗೆ ಬರೆದಿರುವ ಲೇಖನದ ಕೆಲವು ಸಾಲುಗಳು.

{ "ಕಚೇರಿಗಳಲ್ಲಿ ಜೋಶಿಯವರು ಗಳಿಸಿರುವ ಅಸಾಧಾರಣ ಜನಪ್ರಿಯತೆಗೆ ಅವರು ರೂಢಿಸಿಕೊಂಡಿರುವ ಕೆಲವು ಗುಣಗಳೇ ಕಾರಣ. ಸಾಮಾನ್ಯವಾಗಾವರು ಕಚೇರಿಗಳಿಗೆ ಆರಿಸಿಕೊಳ್ಳುವುದು ಸಂಮಿಶ್ರ ರಾಗಗಳು. ಕಂಡವರು ಕರುಬುವಷ್ಟರಮಟ್ಟಿಗೆ ಪರಿಪಕ್ವತೆಯನ್ನು ಸಾಧಿಸಿರುವ ಈ ಸಂಯೋಜಿತ ರಾಗಗಳ ಆಯ್ಕೆ ಅವರ ಯಶಸ್ಸಿನ ಒಂದು ಗುಟ್ಟು, ಯಮನ್ ಕಲ್ಯಾಣ್, ಶುದ್ಧ ಕಲ್ಯಾಣ್, ಪೂರಿಯ, ಪೂರಿಯ ಕಲ್ಯಾಣ್ (ಪೂರ್ವಿ ಕಲ್ಯಾಣಿ), ಮತ್ತು ಪೂರಿಯ ಧನಶ್ರೀ - ರಾಗಗಳನ್ನು ಹೃದ್ ಗತ ಮಾಡಿಕೊಡು ಅವುಗಳ ಮೇಲೆ ಪ್ರಭುತ್ವವನ್ನು ಸಂಪಾದಿಸಿರುವುದೇ ಆಗಿದೆ."

"ಪರಂಪರಾಗತ ರಚನೆಗಳಿದ್ದಾಗ್ಯೂ ಜೋಶಿಯವರ ತೋಡಿ, ಮಾಲಕೌಂಸ್, ಪೂರಿಯ ಕಲ್ಯಾಣಿ ಮತ್ತು ದರ್ಬಾರಿ ನಿರೂಪಣೆಗಳು ಭಾರತೀಯ ಸಂಗೀತದಲ್ಲಿ ಒಂದು ಹೊಸ ಆಯಕಟ್ಟನ್ನು ನೀಡಿವೆ." }

ಇವುಗಳಲ್ಲಿ ನಾನು, ಶ್ರೀಯುತರು ರಾಜಸ್ಥಾನದ ಯಾವುದೋ ದರ್ಬಾರ್ ಹಾಲ್ ನಲ್ಲಿ ಹಾಡಿರುವ ಪೂರ್ವಿ ಕಲ್ಯಾಣಿ ರಾಗ ವನ್ನು ಧ್ವನಿ ಸುರುಳಿಯಲ್ಲಿ ಕೇಳಿ ಮೈಮರೆತು ಹೋದೆ ಎಂದರೆ ಸ್ವಲ್ಪವೂ ಅತಿಶಯೋಕ್ತಿಯಿಲ್ಲ. ಜೋಶಿಯವರು ಹಾಡಿರುವ, ಅವುಗಳಲ್ಲಿ ನಾನು ಕೇಳಿರುವುದರಲ್ಲಿ ಇದು ನನಗೆ ಅತ್ಯಂತ ಪ್ರಿಯವಾದದ್ದು. ಇವರ ತೋಡಿ ರಾಗದ ಆಲಾಪನೆ ಕೂಡ ನನಗೆ ಬಹಳ ಇಷ್ಟವಾದದ್ದು.

ಕೊನೆಯದಾಗಿ, ಭೀಮ್ ಸೇನ್ ಜೋಶಿಯವರ ಸಿರಿಕಂಠದಿಂದ, ಹಿಂದೂಸ್ತಾನಿ ಕಾಫಿ ರಾಗದಲ್ಲಿರುವ ಪುರಂದರ ದಾಸ ವಿರಚಿತ "ಜಗದೋದ್ಧಾರನ ಆಡಿಸಿದಳೆ ಯಶೋಧೆ" ಕೀರ್ತನೆಯನ್ನು ಕೇಳಬೇಕೆಂಬುದು ಜಿಜ್ಞಾಸೆ.

ನಿಮ್ಮ ಅಭಿಪ್ರಾಯಗಳೆನು? ಕೆಳಗೆ ಬರೆದು ತಿಳಿಸಿ.
ಅಕ್ಷರ ದೋಷಗಳಿದ್ದರೆ ಕ್ಷಮಿಸಿ, ತಿಳಿಸಿ, ತಿದ್ದಿಕೊಳ್ಳುವೆ!

ಬುಧವಾರ, ನವೆಂಬರ್ 05, 2008

ಚಲನಚಿತ್ರಗಳ ಬಗ್ಗೆ ಚಕಾರ...

ಇತ್ತೀಚೆಗೆ ನಾನು ನೋಡಿದ ಮೂರು ಚಿತ್ರಗಳ ವಿಮರ್ಶೆ.

ಪಯಣ.. ಚಿತ್ರಮಂದಿರದಿಂದ ಪ್ರೇಕ್ಷಕನ ಪಲಾಯನ...

ನಾನು ಡಾ ವಿಠ್ಠಲ್ ರಾವ್ ಅಲ್ಲಾ! ಹೀಗೆ ಗಟ್ಟಿಯಾಗಿ ಕಿರುಚುವುದೊರೊಂದಿಗೆ ರವಿಶಂಕರ್ ರವರ ಪಾತ್ರ ಬೆಳ್ಳಿತೆರೆಗೆ ಪರಿಚಯವಾಗುತ್ತದೆ. ಹೌದು ಇದು ನಾವೆಲ್ಲಾ ಮೆಚ್ಚಿರುವ ಡಾ ವಿಠ್ಠಲ್ ರಾವ್ ಆಗಿ ಕಿರುತೆರೆಯಲ್ಲಿ/’ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ಅತ್ಯುತ್ತಮ ಅಭಿನಯ ನೀಡಿ ರಂಜಿಸಿದ್ದ ರವಿಶಂಕರ್ ನಟನೆಯ ಮೊದಲೆನೆಯ ಚಿತ್ರ ’ಪಯಣ’ದ ವಿಮರ್ಶೆ. ಹಲವಾರು ಪತ್ರಿಕೆಗಳಲ್ಲಿ ಉತ್ತಮ ಪ್ರತಿಕ್ರೆಯೆ ಗಿಟ್ಟಿಸಿಕೊಂಡಿರುವ ಈ ಚಿತ್ರವನ್ನು ಬಹಳ ಕಾತರದಿಂದ ನೋಡಲು ಹೋದೆ.ಹಿಂದೆಂದೂ ಕನ್ನಡ ಚಿತ್ರಗಳನ್ನು ಪ್ರದರ್ಶಿಸದ (ಅಕಸ್ಮಾತ್ ಪ್ರದರ್ಶಿಸಿದ್ದರೆ ನನ್ನ ಗಮನಕ್ಕಂತೂ ಬಂದಿಲ್ಲ) ’ಅಭಿನಯ್’ ಎಂಬ ಉತ್ತಮ ಚಿತ್ರಮಂದಿರದಲ್ಲಿ ಈ ಚಿತ್ರವನ್ನು ಪ್ರದರ್ಶಿಸುತ್ತಿರುವುದು ಬಹಳ ಮೆಚ್ಚುಗೆಯ ವಿಚಾರವಾಗಿತ್ತು.

ಕಥೆ: ನಾಯಕ ಕಾರ್ ಚಾಲಕ. ಪೆದ್ದು ಪೆದ್ದಾಗಿ ಏನೇನೊ ಕನಸು ಕಾಣುವುದು. ಆ ಕನಸನ್ನು ಎಲ್ಲರಿಗೂ ಹೇಳಿ ತಲೆ ಕೊರೆಯುವುದು. ವಿಮಾನ ನಿಲ್ದಾಣದಿಂದ ಕರೆತರಬೇಕಾದ ಹುಡುಗಿಯನ್ನೇ ತನ್ನ ಕನಸಿನ ರಾಜಕುಮಾರಿ ಎಂದು ಕಲ್ಪಿಸಿಕೊಳ್ಳುವುದು. ಆವಳಿಗೆ ಕರ್ನಾಟಕವನ್ನು ತನ್ನ ಕಾರಿನಲ್ಲಿ ತೋರಿಸಲು ಕರೆದೊಯ್ಯುವುದು. ಹೀಗೆ ಸಾಗುತ್ತದೆ. ಮತ್ತದೇ ಅತೀ ಸಾಧಾರಣ ಪ್ರೇಮ ಕಥೆ. ಜೊತೆಗೆ ಸ್ವಲ್ಪ ತಾಯಿ - ಭಾವಾವೇಶವುಳ್ಳ ಸನ್ನಿವೇಶಗಳು. ಚಿತ್ರ ಪ್ರೇಕ್ಷಕರ ಊಹೆಗಳಿಂದ ಆಚೀಚೆ ಹೋಗದೆ ಸಾಗುತ್ತದೆ.

ನಟನೆ: ನಾಯಕ ರವಿಶಂಕರ್ ರವರು ತಮ್ಮ ವಿಠ್ಠಲ್ ರಾವ್ ಪಾತ್ರದ ನೆರಳಿನಿಂದ ಹೊರ ಬರುವುದಕ್ಕೆ ಬಹಳ ಪ್ರಯತ್ನಿಸಿ, ಸೋತಿದ್ದಾರೆ. ಚಿತ್ರದಲ್ಲಿ ಬರುವ ವಿಠ್ಠಲ್ ರಾವ್ ಲಕ್ಷಣ ಸ್ವಭಾವ ಹೊಂದುವ ಸಂಭಾಶಣೆಗಳು ಮಾತ್ರ ಜನರ ಮೆಚ್ಚುಗೆ ಗಳಿಸುತ್ತವೆ. ನಟನೆ ಸಾಧಾರಣ ಎನ್ನಬಹುದು. ನಟಿಸುವಾಗ ಕ್ಯಾಮರಾವನ್ನೇ ದಿಟ್ಟಿಸಿ ನೋಡುತ್ತಾ ಇದ್ದಾರೇನೋ ಅನ್ನಿಸುತ್ತದೆ. ಮೊದಲನೆ ಚಿತ್ರವಾದ ಕಾರಣ ಇರಬಹುದು. ಇನ್ನು ನಾಯಕಿ ರಮಣೀತು ಚೌಧರಿ ನಟನೆಗೆ ಬಹಳ ಮಹತ್ವ ವಿಲ್ಲ. ರಂಗಾಯಣ ರಘು ಉಳಿದವರಿಗಿಂತ ಮೇಲು. ಶರತ್ ಬಾಬು ಪೋಷಕ ಪಾತ್ರದಲ್ಲಿ ಮತ್ತೆ ಸಾಧಾರಣ ನಟನೆ.

ಸಂಭಾಷಣೆ: ಇನ್ನು ಸಂಭಾಷಣೆಯಂತೂ ಕನ್ನಡ ಬಲ್ಲದವರೇ ಮೆಚ್ಚಬೇಕು. ಪ್ರೀತಿ, ಪ್ರೇಮ, ಕನಸು, ಹೃದಯ, ಗೀಚು ಇತ್ಯಾದಿ ಹಳಸಿದ (ಚಲನಚಿತ್ರಗಳಲ್ಲಿ ತುಂಬಾ ಬಳಕೆಯಲ್ಲಿರುವ ಪದಗಳಾದ್ದರಿಂದ ಹೀಗೆಂದೆ) ಪದಗಳನ್ನಿಟ್ಟುಕೊಂಡೂ ಸತ್ವವಿಲ್ಲದ ಸಂಭಾಷಣೆ ಬರೆಯುವುದು ಇತ್ತೀಚಿನ ಚಿತ್ರಗಳಲ್ಲಿ ಸಾಧಾರಣ.

ಹಾಸ್ಯ: ಮಂಡ್ಯ ರಮೇಶ್ ಮತ್ತು ಬುಲೆಟ್ ಪ್ರಕಾಶ್ ಇವರುಗಳದ್ದು ಅಬ್ಬರದ ಕೂಗಾಟದ ಹಾಸ್ಯ (ಅಸಹ್ಯ). ಆಗಲೆ ಹೇಳಿದಂತೆ ರಂಗಾಯಣ ರಘು ಪರವಾಗಿಲ್ಲ. ಚಿತ್ರದಲ್ಲಿ ಹಾಸ್ಯಕ್ಕೆ ಮೀಸಲು ಸಮಯ ಕಡಿಮೆ.

ನಿರ್ದೇಶನ: ಇದು ಕಿರಣ್ ಗೋವಿಯವರ ಚೊಚ್ಚಲ ನಿರ್ದೇಶನವೆ? ಉತ್ತಮ ನಿರ್ದೇಶಕರಾಗಲು ಇನ್ನೂ ಬಹಳ ದುಡಿತ ಬೇಕೆನ್ನಿಸುತ್ತದೆ.

ಸಂಗೀತ/ಸಾಹಿತ್ಯ: ವಿ ಹರಿಕೃಷ್ಣ ಸಂಗೀತ. ಒಂದೆರಡು ಹಾಡುಗಳು ಕೇಳಬಹುದು. ಮತ್ತದೆ ಸೋನು ನಿಗಮ್ ಸಿರಿಕಂಠ ದಲ್ಲಿ ’ಮೋಡದೆ ಒಳಗೆ’ ಹಾಡು ಚೆನ್ನಾಗಿದೆ. ಎಲ್ಲಾ ಹಾಡುಗಳಿಗೂ ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯವಿದೆ.

ಛಾಯಗ್ರಹಣ, ಇತರೆ ಆಕರ್ಷಣೆಗಳು : ಈ ಚಿತ್ರದ ದೊಡ್ದ ಆಕರ್ಷಣೆ, ಕರ್ನಾಟಕದ ಹಲವು ಪ್ರಾವಾಸಿ ಸ್ಥಳಗಳನ್ನು ತೋರಿಸಿರುವುದು. ಭರಚುಕ್ಕಿ ಜಲಪಾತ, ಗೋಪಾಲಸ್ವಾಮಿ ಬೆಟ್ಟ, ತಲಕಾಡು, ಬಾದಾಮಿ ಈ ಸ್ಥಳಗಳನ್ನು ಹೆಸರು ಸಮೇತ ಚಿತ್ರದಲ್ಲಿ ತೋರಿಸಿದ್ದಾರೆ. ಛಾಯಾಗ್ರಹಣ ಇನ್ನೂ ಸುಧಾರಿಸಬಹುದಿತ್ತು.

ಈ ಚಿತ್ರದ ಬಗ್ಗೆ ಇದಕ್ಕಿಂತ ಹೆಚ್ಚು ಹೇಳಲು ಇನ್ನೇನಿಲ್ಲ.

ವಂಶಿ,

ಈ ಚಿತ್ರದ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಬರೆದುಬಿಡುತ್ತೇನೆ. ಮತ್ತದೇ ಮಚ್ಚು ಹೊಡೆತ, ತಾಯಿ - ಭಾವಾತಿರೇಕವುಳ್ಳ, ದುರ್ಬಲ ಕಥೆ, ವ್ಯರ್ಥ ಸಂಭಾಷಣೆಯುಳ್ಳ ಚಿತ್ರ. ಈ ಚಿತ್ರಕ್ಕೆ ಕಥೆ ೩ ಬಾರಿ ತಿರಸ್ಕ್ರುತಗೊಂಡು ನಾಲ್ಕನೇ ಬಾರಿ ರಾಘಣ್ಣನವರು ಒಪ್ಪಿದ್ದಂತೆ. ಇನ್ನು ಆ ಮೂರು ಕಥೆಗಳು ಇನ್ನೆಷ್ಟು ಕೆಟ್ಟದಾಗಿರಬಹುದು ಎಂಬುವುದೇ ಹಾಸ್ಯ. ಚಿತ್ರದಲ್ಲಿ ಹಾಸ್ಯಕ್ಕೆ ಜಾಗ ಇಲ್ಲ. ಮರೆತಿದ್ದೆ, ಕೋಮಲ್ ಹಾಸ್ಯನಟನಾಗಿ ಇದ್ದಾರೆ ಅಷ್ಟೆ. ನಿಖಿತ ನೋಡಲು ಎಷ್ಟು ಚೆನ್ನಾಗಿದ್ದಾರೋ, ಅವರ ನಟನೆ ಅದಕ್ಕೆ ತದ್ವಿರುದ್ಧ. ವಂಶಿ ಚಿತ್ರ ಇನ್ನೂ ಚಿತ್ರಮಂದಿರಗಳಿಂದ ಪಲಾಯನವಾಗಿಲ್ಲದಿದ್ದರೆ ಪುನೀತ್ ಮತ್ತು ತಾಯಿಯ ಪಾತ್ರದಲ್ಲಿ ನಟಿಸಿರುವ ಲಕ್ಷ್ಮಿ ಯವರುಗಳ ನಟನೆಯೇ ಕಾರಣ. ಕನ್ನಡಿಗ ಗಾಯಕ ರಾಜೇಶ್ ಕೃಷ್ಣನ್ ಮತ್ತು ಹರಿಣಿ ಹಾಡಿರುವ ’ಅಮಲು ಅಮಲು’ ಹಾಡು ಅತ್ಯುತ್ತಮ. ಅಣ್ನಾವ್ರು ಹಾಡಿರುವ ತಾಯಿ ತಾಯಿ ಮತ್ತು ಪುನೀತ್ ಹಾಡಿರುವ ಜೊತೆ ಜೊತೆಯಲಿ ಹಾಡುಗಳು ಉತ್ತಮ. ಪುನೀತ್ ರವರ ನೃತ್ಯ ಮತ್ತು ಹೊಡೆದಾಟದ ಸನ್ನಿವೇಶಗಳು ಅವರ ಅಭಿಮಾನಿಗಳಿಗೆ ರಸದೌತಣ ಉಣಿಸಬಹುದು. ಕೊನೆಗೆ ಕೆಲವು ಪ್ರಶ್ನೆಗಳು ಮನದಲ್ಲಿ ಕಾಡುತ್ತವೆ. ಮಿಲನ ಎಂಬ ಅತ್ಯುತ್ತಮ ಚಿತ್ರ ಕೊಟ್ಟ ಪ್ರಕಾಶ್ ವಂಶಿಯಲ್ಲಿ ಸೋತದ್ದೇಕೆ? ಪುನೀತ್ ರವರಿಗೆ ಮಚ್ಚು ಕೊಚ್ಚು ಬೇಕಾಗಿತ್ತೆ?

ಬುದ್ಧಿವಂತ, ಎಲ್ಲರಿಗಾಗಿ

ಇನ್ನೂ ಸಂಕ್ಷಿಪ್ತವಾಗಿ, ಉಪೇಂದ್ರ ರವರ ಗತ ವೈಭವ ಮರುಕಳಿಸಿಲ್ಲ. ಇತ್ತೀಚೆಗೆ ಗಲ್ಲಾಪೆಟ್ಟಿಗೆಯಲ್ಲಿ ಸೋಲನ್ನೆ ಉಣ್ಣುತ್ತಿರುವ ಉಪ್ಪಿಗೆ ಸ್ವಲ್ಪ ಗೆಲುವಿನ ರುಚಿ ತೋರಿಸಿರಬಹುದು. ಕಥೆಗೆ ಅಷ್ಟು ಮಹತ್ವವಿಲ್ಲ. ಚಿತ್ರದ ಅರ್ಧ ಭಾಗದಲ್ಲಿ ನಮ್ಮ ಗತ ವೈಭವದ ಉಪ್ಪಿ (ಎ - ಉಪೇಂದ್ರ - ಪ್ರೀತ್ಸೆ -ರಕ್ತ ಕಣೀರು ಗಳ ಕಾಲದ ಉಪ್ಪಿ) ಕಾಣಿಸಿಕೊಳ್ಳುತ್ತಾರೆ. ಚುರುಕು ಸಂಭಾಷಣೆಗಳಿಂದ ಚಪ್ಪಾಳೆ ಶಿಳ್ಳೆಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರದಲ್ಲಿ ಲಕ್ಷ್ಮಿ ಚೊಕ್ಕವಾಗಿ ಕಾಣಿಸಿಕೊಳ್ಳುತ್ತಾರೆ. ಐದೂ ಜನ ನಾಯಕಿಯರೂ ಪರವಾಗಿಲ್ಲ. ನಾಯಕಿಯರ ಸೌಂದರ್ಯ ನಟನೆಯನ್ನು ಮೀರಿಸಿದೆ. ಕೆಲವು ಹಾಡುಗಳು ಜನಪ್ರಿಯ, ಆದರೆ ಯಾವುದೂ ಮತ್ತೆ ಮತ್ತೆ ಕೇಳಬೇಕೆನಿಸುವುದಿಲ್ಲ. ರವಿವರ್ಮನ ಹಾಡನ್ನು ಕೆಡಿಸಿ ಆಗಲೇ ಬಹಳಷ್ಟು ಜನರಿಂದ ಉಗಿಸಿಕೊಂಡಿರುವುದರಿಂದ ನಾನೇನೂ ಜಾಸ್ತಿ ಹೇಳುವುದಿಲ್ಲ.(ಇಲ್ಲಿ ಬಹಳಷ್ಟು ಜನಕ್ಕೆ ಭಿನ್ನಾಭಿಪ್ರಾಯ ಇರಬಹುದು.. ಹಾಡಿಗೆ ಸಂಗೀತವಷ್ಟೇ ಮುಖ್ಯವಲ್ಲ. ಸಾಹಿತ್ಯ ಕೂಡ. ಉತ್ತಮ ಸಾಹಿತ್ಯವನ್ನು ಕೆಟ್ಟದಾಗಿ ಉಚ್ಛಾರಣೆ ಮಾಡುವುದಂತೂ ಅಕ್ಷಮ್ಯ ಅಪರಾಧ). ಕೊಟ್ಟ ಕಾಸಿಗಷ್ಟೇ ಮನರಂಜಿಸುವ ಚಿತ್ರ.

ಈ ಚಿತ್ರಗಳ ಬಗ್ಗೆ ನಿಮ್ಮ ಅನಿಸಿಕೆ ನನ್ನದಕ್ಕಿಂತ ವಿಭಿನ್ನವಾದುದೆ? ಅಥವಾ ನಿಮ್ಮ ಅನಿಸಿಕೆಗಳಿಗೆ ಸಾಮೀಪ್ಯ ಇದೆಯೆ? ಕೆಳಗೆ ಬರೆಯಿರಿ!